ಸ್ನೇಹಿತರಲ್ಲೊಂದು ಅರಿಕೆ – 15ನೇ ಏಪ್ರಿಲ್ 2020

ಎಲ್ಲರಿಗೂ ನಮಸ್ಕಾರ,

ಕೆಲ ಕ್ಷುಲ್ಲಕ ಕಾರಣಗಳಿಂದಾಗಿ ಸ್ವಲ್ಪಕಾಲ ಫೇಸ್ಬುಕ್ಕಿನಿಂದ ಹೊರಬಂದಿದ್ದೇನೆ. ಕೆಲದಿನಗಳ ಹಿಂದೆ ನನ್ನ ವಿರುದ್ಧ ಕೆಲ ಏಕದೇವೋಪಾಸಕರ ಯಥಾಪ್ರಕಾರದ ಅನ್ಯಧರ್ಮದ್ವೇಷದ ಪೋಸ್ಟುಗಳನ್ನು ನೀವು ನೋಡಿರಬಹುದು. ಅವರ ಈ ಕೆಲಸಗಳು ಹೊಸದೇನೂ ಅಲ್ಲ. ಎಲ್ಲೂ ಯಾರಿಗೂ ಕಾಣದಿರುವ ಧರ್ಮದ್ವೇಷ, ಈ ಏಕದೇವೋಪಾಸಕರಿಗೆ ಕಂಡುಬರುತ್ತಪ್ಪ. ಅದ್ಯಾವನೋ ಕಾರ್ಟೂನಿಷ್ಟ್ ಕೃಷ್ಣಪ್ಪನಿಗೆ ಬೈದದ್ದೂ, ಇವರಿಗೆ ಕೃಷ್ಣನಿಗೇ ಬೈದಂತೆ ಅನಿಸಿದರೆ ಅದ್ಯಾರ ತಪ್ಪು ಮಾರಾಯ್ರೆ! ದೇವರ ಹೆಸರನ್ನೇ ಇಟ್ಟುಕೋ ಅಂತಾ ಹೇಳಿದವರ್ಯಾರು ಈ ಕೃಷ್ಣಪ್ಪನಿಗೆ? ಒಟ್ಟಿನಲ್ಲಿ ಈ ಮುಟ್ಟಿದರೆ ಮುನಿಗಳಿಗೆ ನನ್ನ ಫೇಸ್ಬುಕ್ ಪೋಸ್ಟುಗಳನ್ನು ಓದಲಿಕ್ಕೆ ಕಷ್ಟವಂತೆ. ಅದೂ ಇವರ ವರಸೆಯೆಂತದ್ದು! ಯಾರಿಗೂ ತಾರ್ಕಿಕವಾಗಿ ಮಾತಾಡುವ ಕ್ಷಮತೆಯೇ ಇಲ್ಲ. ಬಾಯಿತೆಗೆದರೆ ಸೀದಾ ಕತ್ತುಕುಯ್ಯುವ ಮಾತೇ ಮಾರಾಯ್ರೆ!!

ಇನ್ನೂ ಮಜವೆಂದರೆ ಕೆಲವರು ಬಂದು ಕ್ಷಮೆ ಕೇಳು ಎಂದರು. ಆದರೆ ಯಾರಲ್ಲಿ ಅಂತಾ ಕ್ಷಮೆ ಕೇಳುವುದು? ಇವರನ್ನೆಲ್ಲಾ ಗುತ್ತಿಗೆ ತೆಗೆದುಕೊಂಡಿರುವವರು ಯಾರು? ನಿಮ್ಮಲ್ಲಿ ಕ್ಷಮೆ ಕೇಳಲೇ ಎಂದರೆ, ನನ್ನನ್ನಲ್ಲ ಎಲ್ಲರನ್ನೂ ಕೇಳು ಅಂತಾರೆ. ಯಾರಿಗೂ ಸಹ ನಾನು ಯಾರಲ್ಲಿ ಕ್ಷಮೆ ಕೇಳಬೇಕು ಎಂಬ ಸ್ಪಷ್ಟತೆಯಿಲ್ಲ. ಯಾಕೆ ಕೇಳಬೇಕು ಎನ್ನುವ ಸ್ಪಷ್ಟತೆಯಂತೂ ಮೊದಲೇ ಇಲ್ಲ. ಹೇಗೆ ಕೇಳಬೇಕು ಎಂಬುದು ಗೊತ್ತಿಲ್ಲ. ಆದರೆ ಪೋಲೀಸರಿಗೆ ಹಿಡಿದುಕೊಡಬೇಕೆಂಬ ಉಮೇದಿದೆ. ಹೇಗೆ ಹಿಡುದುಕೊಡುತ್ತೀರಿ, ನನ್ನ ಮೇಲೆ ನಿಮ್ಮ ಬಳಿ ಏನು ಆರೋಪವಿದೆ, ಅದಕ್ಕೆ ಯಾವ ಸಾಕ್ಷಿಯಿದೆ ಅಂತಾ ಕೇಳಿದರೆ ಅದ್ಯಾವುದೋ ಹಳೆಯ ಒಂದೆರಡು ಸ್ಕ್ರೀನ್ಶಾಟುಗಳನ್ನು ಹಿಡಿದುಕೊಂಡು ಒಂದೇಸಮನೆ ಅಳುತ್ತಿದ್ದಾರೆ.

ಅದಕ್ಕೇ ಅವರ ಕಷ್ಟಗಳನ್ನು ಕಡಿಮೆಮಾಡಲಿಕ್ಕೆ ಸಧ್ಯಕ್ಕೆ ಫೇಸ್ಬುಕ್ಕನ್ನು ಸ್ಥಗಿತಗೊಳಿಸಿದ್ದೇನೆ. ಪಾಪ ಯಾಕೆ ಅವರಿಗೆ ಮತ್ತವರ ದೇವರಿಗೆ ಕಷ್ಟ!

ನಿಮ್ಮೆಲ್ಲರ ಹಾರೈಕೆಯಿಂದ ನಾನು ಕ್ಷೇಮವಾಗಿದ್ದೇವೆ. ಯಾವ ಗಾಬರಿಯೂ ಬೇಡ. ನಮ್ಮ ಮಾತುಕಥೆ ಇಲ್ಲೇ ಈ ಬ್ಲಾಗಿನಲ್ಲಿ ನಡೆಯಲಿ.