ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೪

ಅಬ್ರಾಹಂ ಲಿಂಕನ್ ಅಮೇರಿಕಾ ಕಂಡ ಪ್ರಭಾವಿ ಅಧ್ಯಕ್ಷರ ಪಟ್ಟಿಯಲ್ಲಿ ಬಹುಷಃ ಮೊದಲೈದು ಹೆಸರುಗಳಲ್ಲಿ ಖಂಡಿತಾ ನಿಲ್ಲುತ್ತಾರೆ. ಜಾರ್ಜ್ ವಾಷಿಂಗ್ಟನ್ ಬಳಿಕ ಇಡೀ ಅಮೇರಿಕಾವನ್ನು ಅಷ್ಟರಮಟ್ಟಿಗೆ ಒಗ್ಗೂಡಿಸಲು ಸಾಧ್ಯವಾದದ್ದು ಬಹುಷಃ ಲಿಂಕನ್ನರಿಗೆ ಮಾತ್ರ ಅನ್ನಿಸುತ್ತೆ. ದೇಶ ಹುಟ್ಟಿ ಅರವತ್ತು ವರ್ಷ ಕಳೆದರೂ, ಜನಾಂಗೀಯ ದ್ವೇಷದ ಮತ್ತು ಅಂತಃಕಲಹದಲ್ಲಿ ಬೇಯುತ್ತಿದ್ದ ಅಮೇರಿಕಾವನ್ನು ಶಾಂತಗೊಳಿಸಬೇಕಾದರೆ ಲಿಂಕನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಲಿಂಕನ್ ಅಧ್ಯಕ್ಷರಾಗಿದ್ದ 1861 ರಿಂದ 1865 ವರೆಗಿನ ಆ ನಾಲ್ಕು ವರ್ಷಗಳು, ಅಮೇರಿಕಕ್ಕೆ ಬರೇ ಒಬ್ಬ ಅಧ್ಯಕ್ಷ ಮಾತ್ರ ಸಿಗಲಿಲ್ಲ, ಆ ದೇಶಕ್ಕೆ ಒಬ್ಬ ನೈತಿಕ ಗುರು ಕೂಡಾ ದೊರಕಿದ. ಅಮಾನುಷ ವರ್ಣಭೇದ ನೀತಿ ಮತ್ತು ದೇಶದಲ್ಲಿ ನಡೆಯುತ್ತಿದ್ದ ಅಂತಃಯುದ್ಧದಿಂದ ಆ ಅಮೇರಿಕಾವನ್ನು ಪಾರುಮಾಡಬೇಕಾದರೆ, ಲಿಂಕನ್ ತನ್ನ ಜೀವವನ್ನೇ ತೇಯ್ದ. ಇನ್ನೊಂದು ಸಲ ಆಯ್ಕೆಯಾಗುವ ಎಲ್ಲಾ ಅರ್ಹತೆಯಿದ್ದ ಆತ, ತನ್ನ ಮೊದಲನೇ ಕಾಲಾವಧಿಯನ್ನೇ ಮುಗಿಸಲಾಗಲಿಲ್ಲವೆಂಬುದು ಖೇದದ ವಿಚಾರ. ಆತನಿಗೆ ಅಧ್ಯಕ್ಷ ಪಟ್ಟ ಸಿಗುವುದಕ್ಕಿಂತಲೂ ಹೆಚ್ಚಾಗಿ, ಅಮೇರಿಕಾಕ್ಕೆ ಅವನಂತಹ ಇನ್ನೊಬ್ಬ ಅಧ್ಯಕ್ಷ ಸಿಗುವ ಅಗತ್ಯವಿತ್ತು.

ಸ್ವಭಾವದಲ್ಲಿ ನಮ್ಮ ಗಾಂಧಿಗೆ ಹೋಲಿಸಬಹುದಾದ ಲಿಂಕನ್ ಮಿತ ಮತ್ತು ಮೃದುಭಾಷಿಯಾಗಿದ್ದರೂ, ಆಗಾಗ ಮಾತಿನ ಚಾಟಿಬೀಸಿದ ಉದಾಹರಣೆಗಳು ಬಹಳಷ್ಟಿವೆ. ಅಂತಹ ವ್ಯಕ್ತಿತ್ವದಿಂದ ಬಂದ ಮಾತುಗಳು ಬರೀ ಅವಮಾನವನ್ನು ಮಾತ್ರ ಕೊಡುತ್ತಿರಲಿಲ್ಲ. ಒಂದೊಳ್ಳೆ ನೈತಿಕತೆಯ ಪಾಠವನ್ನೂ ಕಲಿಸುವಂತಿದ್ದವು. ಒಂದು ಉದಾಹರಣೆ ಇಲ್ಲಿ ನೋಡಿ:

ಒಮ್ಮೆ ಈತನ ಆಫೀಸಿಗೆ ಬ್ರಿಟನ್ನಿನ ರಾಯಭಾರಿ ಬಂದ. ದಿನದ ಮೊದಲ ಮೀಟಿಂಗ್ ಅದು. ಲಿಂಕನ್ ಆಗಷ್ಟೇ ಬೆಳಗಿನ ಉಪಹಾರ ಮುಗಿಸಿ, ತನ್ನ ಶೂ ಅನ್ನು ಪಾಲಿಷ್ ಮಾಡಿಕೊಳ್ಳುತ್ತಿದ್ದ. ಅಮೇರಿಕಾದ ಅಧ್ಯಕ್ಷನಿಗೆ ಮನೆಯಲ್ಲಿ ಹತ್ತಾರು ಕೆಲಸದವರಿದ್ದೂ, ಶೂ ಪಾಲೀಷ್ ತಾನೇ ಮಾಡಿಕೊಳ್ಳುತ್ತಿದ್ದನ್ನು ಕಂಡ ರಾಯಭಾರಿ, ಆಶ್ಚರ್ಯಚಕಿತನಾಗಿ ‘ಓಹ್! ಮಿ.ಲಿಂಕನ್, ನೀವು ಶೂ ಬೇರೆ ಪಾಲಿಷ್ ಮಾಡ್ತಿರೋ!? ಅದೂ ನಿಮ್ಮದೇ ಶೂ ಸಹಾ!?’ ಎಂದ. ಮುಖದಲ್ಲಿ ಸಣ್ಣದೊಂದು ಕೊಂಕುನಗುವಿತ್ತು.

ಈ ರಾಯಭಾರಿ ಈ ರೀತಿಯ ಪ್ರಶ್ನೆ ಕೇಳಿ ರೇಗಿಸುತ್ತಿದ್ದದ್ದು ಇದೇನೂ ಮೊದಲಲ್ಲ. ಲಿಂಕನ್ ಬೆಳ್ಳಂಬೆಳಿಗ್ಗೆ ತನ್ನ ಚಿತ್ತ ಕೆಡಿಸಿಕೊಳ್ಳಲಿಚ್ಚಿಸದೆ ‘ಹೌದು. ನಾನು ನನ್ನದೇ ಶೂ ಪಾಲೀಷ್ ಮಾಡ್ತೀನಿ. ನೀವ್ಯಾರ ಶೂ ಪಾಲೀಶ್ ಮಾಡುತ್ತೀರಿ’ ಎಂದು ತನ್ನ ಕೆಲಸ ಮುಂದುವರಿಸಿದ.

ವ್ಯಾಕ್ಸ್ ಹಚ್ಚಿದ್ದ ಬ್ರಷ್, ಶೂ ಮೇಲೆ ಸರ್ಕ್ ಸರ್ಕ್ ಅಂತಾ ಓಡಾಡುತ್ತಿದ್ದಾ ಶಬ್ದ ಬಿಟ್ಟರೆ, ಅಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೩

ಜೂಲಿಯಸ್ ಹೆನ್ರಿ ಮಾರ್ಕ್ಸ್ ಎಂದರೆ ಎಲ್ಲರಿಗೂ ಪಕ್ಕನೆ ಹೆಸರು ಹೊಳಯಲಿಕ್ಕಿಲ್ಲ. ಆದೇ ಗ್ರೌಚೋ ಮಾರ್ಕ್ಸ್ ಅನ್ನಿ. ಕೆಲವರ ಕಿವಿಗಳಂತೂ ನಿಮಿರಿ ನಿಲ್ಲುತ್ತವೆ. ಅಮೇರಿಕನ್ ಹಾಸ್ಯಪ್ರಪಂಚದಲ್ಲಿ ಅವನದ್ದೊಂದು ಪ್ರಸಿದ್ಧ ಹೆಸರು. ರೇಡಿಯೋ ಮತ್ತು ದೂರದರ್ಶನ ವಿಭಾಗದಲ್ಲಿ ವಿಡಂಬನಾತ್ಮಕ ಕಾರ್ಯಕ್ರಮಗಳಿಗೆ ಗ್ರೌಚೋನ ಹೆಸರು ಅಜರಾಮರ. ತನ್ನ ‘ಯಾರ ಮುಲಾಜೂ ಇಲ್ಲ’ದ ಅಭಿಪ್ರಾಯಗಳಿಗೆ, ಚಾಟಿಯಂತಾ ಮಾತುಗಳಿಗೆ ಹಾಗೂ ತನ್ನನ್ನು ಎದುರುಹಾಕಿಕೊಂಡವರಿಗೆ ಅವನು ಕೊಡುವ ಮೊನಚು ಎದುರೇಟುಗಳಿಗೆ ಹೆಸರುವಾಸಿ. ತನ್ನ You bet your life ಕಾರ್ಯಕ್ರಮದ ಮೂಲಕ ಅಮೇರಿಕಾದ ಮನೆಮಾತಾದವ. ‘ಅವನ ಬಾಯಿಂದ ಬರುವ ಆ ಮೊನಚು ಹಾಸ್ಯಕ್ಕಾಗಿ ನಾನು ಅವನಿಂದ ಅವಮಾನಕ್ಕೊಳಗಾಗಲೂ ತಯಾರು’ ಎಂದು ಕೆಲವರು ಹೇಳಿದ್ದುಂಟು. ಬೌದ್ಧಿಕವಾಗಿ ಅಷ್ಟೂ ಮೇಲ್ಮಟ್ಟದ ಹಾಸ್ಯ ಆತನದ್ದು.

1970ರ ದಶಕದಲ್ಲಿ ದೂರದರ್ಶನ ಅಮೇರಿಕಾದ ಒಂದು ಸಾಮಾಜಿಕ ಪಿಡುಗು ಎನ್ನುವಷ್ಟರಮಟ್ಟಿಗೆ ಬೆಳೆದಿತ್ತು. ಸಂಸಾರದ ಎಲ್ಲರೂ ಟೀವಿಗೇ ಅಂಟಿಕೂರುತ್ತಿದ್ದರಂತೆ. ಯಾರೋ ಒಮ್ಮೆ ಒಂದು ಟೀವಿ ಸಂದರ್ಶನದಲ್ಲಿ ನಮ್ಮ ಚಾನೆಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ “ನನ್ನ ಪ್ರಕಾರ ನಿಮ್ಮ ಚಾನೆಲ್ ತುಂಬಾ ಶೈಕ್ಷಣಿಕ ಮಹತ್ವವುಳ್ಳದ್ದು. ಪ್ರತಿಬಾರಿಯೂ ನಮ್ಮ ಮನೆಯಲ್ಲಿ ಯಾರಾದ್ರೂ ನಿಮ್ಮ ಚಾನೆಲ್ ಹಾಕಿದ ಕೂಡಲೇ, ನಾನು ಲೈಬ್ರರಿಗೆ ಹೋಗಿ ಒಂದು ಪುಸ್ತಕ ತೆಗೆದು ಓದುತ್ತಾ ಕೂರುತ್ತೀನಿ. ಹೀಗಾಗಿ ಶೈಕ್ಷಣಿಕವಾಗಿ ಟೀವಿ ನನಗೆ ತುಂಬಾ ಸಹಾಯಕ” ಎಂದು ಸಂದರ್ಶಕನ ಮುಖ ಕೆಂಪುಮಾಡಿದ್ದವ.

ಇಂತಹ ಗ್ರೌಚೋನ ಹಿಂದೆ ಒಬ್ಬ ಮರಿಲೇಖಕ ತನ್ನ ಪುಸ್ತಕದ ಎರಡನೇ ಮುದ್ರಣಕ್ಕೆ ಬೆನ್ನುಡಿ ಬರೆಸಲು ಹಿಂದೆಬಿದ್ದಿದ್ದ. ಗ್ರೌಚೋ ಇಂತಹ ಕೆಲಸಗಳಿಂದ ದೂರವೇ ಇದ್ದವ. ಮತ್ತೆ ಮತ್ತೆ ಒತ್ತಾಯ ಮಾಡಿದ ಮೇಲೆ, ‘ನಿನ್ನ ಪುಸ್ತಕ ಕೊಡು. ನೋಡುತ್ತೇನೆ’ ಎಂದು ತೆಗೆದುಕೊಂಡಿದ್ದ. ಹಾಗೂ ಅದರ ಬಗ್ಗೆ ಮರೆತೇಬಿಟ್ಟಿದ್ದ. ಎರಡು ವಾರ ಕಳೆದನಂತರ ಯಾವುದೋ ಪಾರ್ಟಿಯಲ್ಲಿ ಆ ಲೇಖಕ ಮತ್ತೆ ಎಡತಾಕಿದ. ನಾಲ್ಕು ಪೆಗ್ ಏರಿಸಿದ್ದ ಆ ಲೇಖಕನ ಅಂತರಾತ್ಮ ಸ್ವಲ್ಪಸ್ವಲ್ಪವೇ ಮಾತನಾಡಲು ಅದಾಗಲೇ ಪ್ರಾರಂಭಿಸಿಯಾಗಿತ್ತು. ಅದರ ಜೊತೆಗೆ ಮೊದಲ ಮುದ್ರಣ ಪೂರ್ತಿಯಾಗಿ ಮಾರಾಟವಾಗಿದ್ದ ನಶೆಯೂ ಏರಿತ್ತು. ಗ್ರೌಚೋನನ್ನು ಕಂಡವನೇ “ಸಾರ್! ನಿಮಗೆ ಸ್ವಲ್ಪವೂ ಟೈಮ್-ಸೆನ್ಸೆ ಇಲ್ಲವಲ್ಲ ಸಾರ್!! ಪುಸ್ತಕ ಕೊಟ್ಟು ಎರಡು ವಾರವಾಯ್ತು. ನನ್ನ ಹಿನ್ನುಡಿ ಸಾರ್! ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಈ ವರ್ಷದ ಬೆಸ್ಟ್ ಸೆಲ್ಲರ್ ಸಾರ್ ಆ ಪುಸ್ತಕ” ಅಂತಾ ಜೋರಾಗಿ ರಾಗವೆಳೆದ. ಅಕ್ಕಪಕ್ಕದವರು ಇವರತ್ತ ನೋಡಲಾರಂಭಿಸಿದರು.

ಇಂತಹ ಸಾವಿರ ಸನ್ನಿವೇಶಗಳನ್ನು ಎದುರಿಸಿದ್ದ ಗ್ರೌಚೋ ಏನೂ ತಲ್ಲಣಗೊಳ್ಳದೇ “ಮಾರಾಯಾ! ನಿನ್ನ ಪುಸ್ತಕ ಕೈಗೆತ್ತಿಕೊಂಡಾಗಲಿಂದಾ….ಕೆಳಗಿಡುವವರೆಗೆ ನನಗೆ (ಅದನ್ನು ನೋಡಿಯೇ) ನಕ್ಕೂ ನಕ್ಕೂ ಸುಸ್ತಾಯಿತು. ಖಂಡಿತಾ ಯಾವತ್ತಾದರೊಂದು ದಿನ ಅದನ್ನು ಓದುವ ಸಾಹಸ ಮಾಡುತ್ತೇನೆ.” ಎಂದು ಮುಂದೆ ಹೋದ.

ಅಲ್ಲೊಂದು ಮೂಲೆಯಲ್ಲಿ ಯಾರಿಗೋ ಆ ಜೋಕು ತಕ್ಷಣವೇ ಅರ್ಥವಾಗಿ, ಅವರು ಗೊಳ್ಳೆಂದು ನಕ್ಕಿದ್ದು ಬಿಟ್ಟರೆ, ಇಡೀ ಕೋಣೆಯಲ್ಲಿ ಸುಮಾರು ಮೂರ್ನಾಲ್ಕು ಸೆಕೆಂಡು ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು. ಆಮೇಲೆ ಎಲ್ಲರೂ ಬಿದ್ದು ಬಿದ್ದು ನಕ್ಕರು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೨

ಜಗಳ ಅಥವಾ ವಾದ ಮಾಡಿ ಎದುರಾಳಿಯನ್ನು ಮಣಿಸುವುದು ಬೇರೆ. ಎರಡೇ ಮಾತಿನಲ್ಲಿ ಎದುರಾಳಿ ಮತ್ತೆ ಉಸಿರೆತ್ತದಂತೆ ಮಾಡುವುದು ಬೇರೆ. ಮೊದಲನೆಯದು ಪ್ರತಿಭೆ, ಎರಡನೆಯದು ಕಲೆ. ಅಂತಹ ಕಲಾಕಾರರಲ್ಲಿ ಚರ್ಚಿಲ್ ಬಹುಷಃ ಮುಖ್ಯ ಹೆಸರು. ಆದರೆ ಇಂತಹ ಕಲಾಕಾರರಿಗೂ ಮಣ್ಣುಮುಕ್ಕಿಸಬಲ್ಲ ಅತಿಕಲಾಕಾರರಿಗೇನೂ ಜಗತ್ತಿನಲ್ಲಿ ಕಮ್ಮಿಯಿಲ್ಲ. ನಾನು ಹಿಂದೊಮ್ಮೆ ಹೇಳಿದ್ದೆ, ಇಲ್ಲಿ ಚರ್ಚಿಲ್ ಕುರಿತ ವಿಷಯಗಳು ಪದೇ ಪದೇ ಪ್ರಸ್ತಾಪವಾಗಬಹುದು ಅಂತಾ. ಇವತ್ತಿನ ವಿಷಯ ಮತ್ತೆ ಅವರದ್ದೇ. ತನ್ನ ಮಿತ್ರರು ಹಾಗೂ ಶತ್ರುಗಳಿಂದ ಸಮಾನವಾಗಿ ದ್ವೇಷಿಸ್ಪಡುತ್ತಿದ್ದ ಚರ್ಚಿಲ್ ನಮಗಾಗಿ ಬಹಳಷ್ಟು ಕಥೆಗಳನ್ನು ಬಿಟ್ಟು ಹೋಗಿದ್ದಾರೆ 🙂

ಒಮ್ಮೆ ಕಾರ್ಯಕ್ರಮವೊಂದರಲ್ಲಿ ಯಥಾಪ್ರಕಾರ ಕುಡಿದು ಹೊರಟಿದ್ದ ಚರ್ಚಿಲ್ಲರಿಗೆ, ಮೆಟ್ಟಿಲ ಬಳಿ ಅವರ ‘ಪರಮಸ್ನೇಹಿತ’ ಜಾರ್ಜ್ ಬರ್ನಾರ್ಡ್ ಷಾ ಸಿಕ್ಕಿಬಿಟ್ಟರು. ಬರ್ನಾರ್ಡ್ ಮೆಟ್ಟಿಲೇರಿ ಮೇಲಿನ ಮಹಡಿಗೆ ಹೊರಟಿದ್ದರೆ, ಚರ್ಚಿಲ್ ಇಳಿದು ಕೆಳಗೆ ಹೊರಟವರು. ಆ ಹಳೆಯ ಕಟ್ಟಡದ ಹಳೆಯ ಮಾದರಿಯ ಮೆಟ್ಟಿಲುಗಳಲ್ಲಿ ಒಂದೇ ಬಾರಿಗೆ ಇಬ್ಬರು ಆರಾಮಾಗಿ ಒಡಾಡುವಷ್ಟು ಜಾಗವಿರಲಿಲ್ಲ. ಒಬ್ಬರನ್ನೊಬ್ಬರು ತಾಕಿಕೊಂಡೇ ಓಡಾಡಬೇಕಿತ್ತು. ನಮ್ಮ ಚರ್ಚಿಲ್ ಸಾಹೇಬರು ಮೊದಲೇ ದಾರ್ಷ್ಟ್ಯದ ಪ್ರತಿರೂಪ. ಬದಿಗೆ ಸರಿದು ದಾರಿ ಬಿಡಲು ಸಿದ್ಧವಿರಲಿಲ್ಲ. ಅದರ ಮೇಲೆ ‘ಪರಮಾತ್ಮನ’ ಕೃಪೆ ಬೇರೆ ಆಗಿತ್ತು. ಅವರ ಬಾಯಿಯ ಮೂಲಕ ಪರಮಾತ್ಮ ನುಡಿದೇ ಬಿಟ್ಟ. ಸಧ್ಯ ಬರ್ನಾರ್ಡ್ ಷಾ ಅವರ ಮುಖದ ಮೇಲಲ್ಲ, ತಮ್ಮ ಹಿಂದಿದ್ದ ಸಂಸದ ಸ್ನೇಹಿತ ಡೇವ್ ಮೂಲಕ. ‘ಡೇವ್, ನಾನು ನಾಯಿಗಳಿಗೆ ದಾರಿಬಿಡುವುದಿಲ್ಲ ಎಂದು ಇಲ್ಲಿ ಕೆಲವರಿಗೆ ಗೊತ್ತಿಲ್ಲವೆನ್ನಿಸುತ್ತದೆ’ ಎಂದರು.

ಬೇರೆ ಯಾರಾದರೂ ಆಗಿದ್ದರೆ ಕಪಾಳಕ್ಕೆರಡು ಬಿಡುತ್ತಿದ್ದರೇನೋ. ಆದರೆ ಇಲ್ಲಿದ್ದದ್ದು ಮಾತಿನ ಕಲಾಕಾರರು. ಅದರಲ್ಲೂ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ. ಚರ್ಚಿಲ್ಲರ ಮುಖದ ಕಳೆ ನೋಡಿದವರೇ, ಹೆಚ್ಚೇನೂ ಕೋಪಿಸಿಕೊಳ್ಳದೇ, ಮೆಟ್ಟಿಲಲ್ಲೇ ಬದಿಗೆ ಸರಿದು ನಿಲ್ಲುತ್ತಾ ‘ಪರವಾಗಿಲ್ಲ ಡೇವ್, ನಾನು ನಾಯಿಗಳಿಗ ಸದಾ ಜಾಗ ಬಿಟ್ಟುಕೊಡುತ್ತೇನೆ’ ಎಂದರು.

ರತ್ನಗಂಬಳಿ ಹಾಸಿದ್ದ ಆ ಮೆಟ್ಟಿಲಮೇಲೂ ಸೂಜಿ ಬಿದ್ದರೆ ಕೇಳುವಷ್ಟು ನಿಶ್ಯಬ್ದ ಅಲ್ಲಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೧

ಇವತ್ತಿನ ಅಂಕಣ ಬರೀ ಏಟು-ಎದಿರೇಟಿನದ್ದು ಮಾತ್ರವಲ್ಲ. ಸಣ್ಣದೊಂದು ಸಾಮಾನ್ಯಜ್ಞಾನದ ವಿಷಯವೂ ಇದರಲ್ಲಿ ಅಡಗಿದೆ. ನಿಮ್ಮ ಆಸಕ್ತಿಗನುಗುಣವಾಗಿ ಹೆಕ್ಕಿಕೊಳ್ಳಿ.

ಇಂಗ್ಲೆಂಡಿನ ಕೆಂಟ್ ಎಂಬ ಕೌಂಟಿಯಲ್ಲಿ ಸ್ಯಾಂಡ್ವಿಚ್ ಎಂಬುದೊಂದು ಬಂದರು ಪಟ್ಟಣವಿದೆ. ಈ ಹೆಸರು ‘ಮರಳಮೇಲಿನ ವ್ಯಾಪಾರಕೇಂದ್ರ’ ಎಂಬರ್ಥದ ಹಳೆಯದೊಂದು ಸ್ಕ್ಯಾಂಡಿನೇವಿಯನ್ ಪದದಿಂದ ಬಂದದ್ದಂತೆ. ನಿಮಗೆ ಗೊತ್ತಿರುವಂತೆ ಇಂಗ್ಲೆಂಡಿನ ಕುಲೀನಮನೆತನಗಳಿಗೆ ತಮ್ಮದೇ ಆದ ಒಂದು ಹೆಸರಿಡುವ ಪದ್ದತಿಯಿರುತ್ತದೆ. ಡ್ಯೂಕ್, ಬ್ಯಾರನ್, ಕೌಂಟ್, ವಿಸ್ಕೌಂಟ್, ಅರ್ಲ್, ಮಾರ್ಕೀಸ್ ಮುಂತಾದ ಹೆಸರುಗಳು ನಿಮಗೆ ಪರಿಚಿತವಾಗಿರಬಹುದು. ಅಲ್ಲಿನ ಶ್ರೀಮಂತವರ್ಗ ಈ ಪದವಿಯನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡು ಡ್ಯೂಕ್ ಆಫ್ ಕಾರ್ನ್ವಾಲ್, ವಿಸ್ಕಂಟ್ ವೇಯ್’ಮೌತ್, ಬ್ಯಾರನ್ ಡಡ್ಲೀ, ಅರ್ಲ್ ಆಫ್ ಪೋರ್ಟ್ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಇದು ನೈಟ್ ಪದವಿಯಂತೆ ಮಾಡಿದ ಯಾವುದೋ ಮಹಾನ್ ಕೆಲಸಕ್ಕೆ ಗೌರವಸೂಚಕವಾಗಿ ಬಂದದ್ದಲ್ಲ. ಇದೊಂದು ಮೇಲ್ವರ್ಗದ ಜನರ ನಾಮಕರಣ ಪದ್ದತಿಯಷ್ಟೇ. ಇದೆಲ್ಲಾ ಪ್ರಾರಂಭವಾದಾಗ ಆ ಮನೆತನದ ಹಿರಿಯರು ಏನೋ ಘನಾಂಧಾರಿ ಕೆಲಸ ಮಾಡಿದ್ದಿರಬಹುದು. ಆದರೆ ಆಮೇಲೆ ಅದು ವಂಶದಲ್ಲಿ ಹರಿದು ಬಂದದ್ದಷ್ಟೇ. ನಮ್ಮಲ್ಲಿ (ಬರೀ ಉದಾಹರಣೆಗೆ) ಸಾಹುಕಾರ್ ಜಾನಕಿ, ರಾವ್ ಬಹದ್ದೂರ್ ರಂಗರಾವ್, ಜಮೀನ್ದಾರ್ ಅಂತೆಲ್ಲಾ ಸೇರಿಸಿಕೊಳ್ಳುವಂತೆ.

ಇಂತದ್ದೊಂದು ಮನೆತನಕ್ಕೆ ಸೇರಿದವರು ‘ಅರ್ಲ್ ಆಫ್ ಸ್ಯಾಂಡ್ವಿಚ್’ಗಳು. ಈ ಮನೆತನದ ಮೂರನೇ ತಲೆಮಾರಿನ ಮಹತ್ವದ ವ್ಯಕ್ತಿ ‘ಜಾನ್ ಮೊಂಟಾಗು’. ಈತನನ್ನು ಬ್ರಿಟೀಷ್ ಪದ್ದತಿಯ ಪ್ರಕಾರ ‘ನಾಲ್ಕನೇ ಅರ್ಲ್ ಆಫ್ ಸ್ಯಾಂಡ್ವಿಚ್’ ಎಂದೂ ಕರೆಯಲಾಗುತ್ತಿತ್ತು. 1729ರಲ್ಲಿ, ತನ್ನ ಹತ್ತನೇ ವಯಸ್ಸಿಗೇ ಸ್ಯಾಂಡ್ವಿಚ್ ಮನೆತನದ ಮುಖ್ಯಸ್ಥನೂ ಆದಂತವನು ಇವನು. ಶ್ರೀಮಂತ ಮನೆತನದವನಾದ್ದರಿಂದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ವಿದ್ಯಾಭ್ಯಾಸ. ತದನಂತರ ಇಡೀ ಯೂರೋಪ್ ಸುತ್ತಿ, ಈಜಿಪ್ಟಿನವರೆಗೂ ತಿರುಗಾಡುವ ಅವಕಾಶ. ಅದೆಲ್ಲಾ ಮುಗಿದ ಮೇಲೆ ಹೌಸ್ ಆಫ್ ಲಾರ್ಡ್ಸಿಗೆ ಪ್ರವೇಶ. ಬಿಡಿ ಪೀಠಿಕೆ ಸಾಕು. ಕೆಲ ಕಥೆಗಳ ಪ್ರಕಾರ, ನಾವು ಇವತ್ತು ಏನು ಎರಡು ಬ್ರೆಡ್ ಚೂರುಗಳ ನಡುವೆ ಮಾಂಸದ ತುಣುಕು ಸೇರಿಸಿ ತಿನ್ನುತ್ತೇವೆ, ಅದಕ್ಕೆ ‘ಸ್ಯಾಂಡ್ವಿಚ್’ ಎಂಬ ಹೆಸರು ಬರಲು ಈತನೇ ಕಾರಣ. ತನ್ನ ಬಿಡುವಿಲ್ಲದ ತಿರುಗಾಟ ಮತ್ತು ಜೂಜಿನ ಹವ್ಯಾಸದ ಮಡುವೆ ಊಟ ತಿನ್ನಲೂ ಸಮಯ ಸಿಗದೇ, ಈತನೇ ಕಂಡುಹಿಡಿದ ತಿನಿಸಿದಂತೆ. ನಿಜ, ಬೇಕಾದ್ರೆ ಇವನ ವಿಕಿಪೀಡಿಯಾ ಪೇಜ್ ನೋಡಿ.

ಈ ಜಾನ್ ಮೊಂಟಾಗು, ಮಹಾಚಾಣಾಕ್ಷಮತಿ, ಮತ್ತು ಎದುರಾಳಿಯ ತಲೆತಿರುಗಿಸಿ ಬೀಳಿಸುವಷ್ಟು ಮಾತಿನಮಲ್ಲ. ಆದರೆ, ಇಂತವನನ್ನೂ ಒಮ್ಮೆ ಸ್ಯಾಮುಯೆಲ್ ಫುಟ್ ಎಂಬಾತ ಸಕ್ಕತ್ತಾಗಿ ಮಾತಿನ ಚಕಮಕಿಯಲ್ಲಿ ಸಿಕ್ಕಿಹಾಕಿಸಿದ ಘಟನೆ ಇಲ್ಲಿದೆ ನೋಡಿ. ಹೇಳಿ ಕೇಳಿ ಸ್ಯಾಮುಯೆಲ್ ಫುಟ್ ನಾಟಕಕಾರ ಹಾಗೂ ತನ್ನ ಹಾಸ್ಯ ಪ್ರವೃತ್ತಿಗೆ ಹೆಸರಾದವ. ಕೆಲ ಮೂಲಗಳ ಪ್ರಕಾರ, ಈತನಿಗೂ ನಮ್ಮ ಅರ್ಲ್’ಗೂ ಅಷ್ಟಕ್ಕಷ್ಟೇ. ಸ್ಯಾಮುಯೆಲ್ ಸದಾ ಸರ್ಕಾರದ ಬಗ್ಗೆ ತನ್ನ ಟೀಕೆಗೆ ಹೆಸರಾದವ. ಹೆಚ್ಚಿನ ಶ್ರೀಮಂತವರ್ಗದವರೇ ತುಂಬಿದ್ದ ಅಂದಿನ ಪಾರ್ಲಿಮೆಂಟನ್ನು ಸ್ಯಾಮುಯೆಲ್ ‘ಅದೊಂದು ಬಂಗಾರದ ಹಕ್ಕಿಗಳ ವಜ್ರದ ಪಂಜರ. ಅದರೊಳಗಿರುವ ಹಕ್ಕಿಗಳಿಗೆ ಹೊರಜಗತ್ತಿನ ಅರಿವೇ ಇಲ್ಲ’ ಎಂದು ಜರಿದಿದ್ದ.

ಒಮ್ಮೆ ಯಾರೋ ಒಬ್ಬ ಸಂಸದನ ಮನೆಯಲ್ಲಿ ಒಂದು ಔತಣದ ವ್ಯವಸ್ಥೆಯಾಗಿತ್ತು. ಎಲ್ಲಾ ಲಾರ್ಡ್’ಗಳೂ ಸೇರಿದ್ದರು. ಸ್ಯಾಮುಯೆಲ್ ಸ್ವಲ್ಪ ತಡವಾಗಿ ಬಂದ. ‘ಓಹ್! ನೀನಿನ್ನೂ ಜೀವಂತವಾಗಿದ್ದೀಯಾ ಸ್ಯಾಮ್!?’ ಎಂದ ಅರ್ಲ್ ಆಫ್ ಸ್ಯಾಂಡ್ವಿಚ್. ‘ನಿಮ್ಮ ದಯೆ ಮೈಲಾರ್ಡ್’ ಎಂದ ಸ್ಯಾಮುಯೆಲ್ ತನ್ನ ವೈನ್ ಗ್ಲಾಸನ್ನೆತ್ತಿಕೊಂಡ. ‘ಸರ್ಕಾರದ ಬಗ್ಗೆ ಬಹಳ ಮಾತಾಡ್ತೀಯಂತೆ! ನೋಡ್ತಾ ಇರು, ನೀನು ಸಧ್ಯದಲ್ಲೇ ಒಂದೋ ಗಲ್ಲಿಗೇರುತ್ತೀಯ ಅಥ್ವಾ ಸಿಫಿಲಿಸ್ಸಿನಂತಹ ಗುಪ್ತರೋಗ ಬಂದು ಸಾಯುತ್ತೀಯ’ ಎಂದು ಮೂದಲಿಸಿದ.

ಸ್ಯಾಮ್ ಗಲಿಬಿಲಿಗೊಳ್ಳಲೇ ಇಲ್ಲ. ‘ಎಲ್ಲರೂ ಒಂದು ದಿನ ಸಾಯಲೇಬೇಕು. ಅದರ ಬಗ್ಗೆ ನಾನು ಹೆದರುವುದಿಲ್ಲ. ಇನ್ನು ನಾನು ಗಲ್ಲಿಗೇರುತ್ತೀನೋ ಅಥವಾ ಗುಪ್ತರೋಗಕ್ಕೆ ಬಲಿಯಾಗುತ್ತೇನೋ ಎಂಬುದು, ನಾನು ನಿಮ್ಮ ಸಿದ್ಧಾಂತಗಳನ್ನು ಅಪ್ಪಿಕೊಳ್ಳುತ್ತೇನೋ ಅಥವಾ ನಿಮ್ಮ ಪ್ರೇಯಸಿಯನ್ನು ಅಪ್ಪಿಕೊಳ್ಳುತ್ತೇನೋ ಎಂಬುದರ ಮೇಲೆ ನಿರ್ಧಾರವಾಗಲಿದೆ, ಮೈಲಾರ್ಡ್’ ಎಂದು ಒಂದು ತುಂಟನಗುಬೀರುತ್ತಾ ವೈನ್ ಹೀರಿದ.

ಅರ್ಲ್’ಮುಖದಲ್ಲಿ ಬರೀ ಒಣನಗೆಯಿತ್ತು. ಸ್ಯಾಮುಯೆಲ್ ವೈನ್ ಹೀರುತ್ತಿದ್ದ ಶಬ್ದ ಬಿಟ್ಟರೆ, ಆ ಕೋಣೆಯಲ್ಲಿ ಒಂದು ಸಣ್ಣ ಸೂಜಿ ಬಿದ್ದರೂ ಜೋರಾಗಿಯೇ ಕೇಳುವಷ್ಟು ಮೌನವಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೧೦

ನಮ್ಮದು ಶಾಂತಿಪ್ರಿಯ ದೇಶವಾದರೂ, ನಮ್ಮ ನೆರೆಹೊರೆಯ ಸ್ನೇಹಿತರು ಎಲ್ಲಾಬಾರಿಯೂ ಶಾಂತಿಪ್ರಿಯರೇನಾಗಿರಲಿಲ್ಲ. 1947-48ರಿಂದಲೂ ನಮಗೆ ತಲೆನೋವುಗಳ ಸರಮಾಲೆಯೇ ಸಿಕ್ಕಿದ್ದು. 1962ರಲ್ಲಿ ಚೀನಾದೊಂದಿಗೆ ಸಿನೋ-ಇಂಡಿಯನ್ ಯುದ್ಧ ಮುಗಿಸಿದ ಬಳಲಿ ಬೆಂಡಾಗಿದ್ದ ಬೆನ್ನಲ್ಲೇ, ಸಮಯ ಸಾಧಕ ಪಾಕಿಸ್ತಾನ 1965ರ ಆಗಸ್ಟಿನಲ್ಲಿ ಕಾಶ್ಮೀರದಲ್ಲಿ ಸುಮಾರು 30,000 ಸೈನಿಕರನ್ನು ಕಾಶ್ಮೀರಿ ನಾಗರೀಕರ ವೇಶದಲ್ಲಿ LOCಯ ಒಳಗೆ ನುಗ್ಗಿಸಿತು. ತಕ್ಷಣವೇ ಎತ್ತೆಚ್ಚ ಭಾರತದ ಸೈನ್ಯ ಕೊಟ್ಟ ಹೊಡೆತಕ್ಕೆ, ಹದಿನೈದೇ ದಿನದಲ್ಲಿ ಪಾಕಿಸ್ತಾನ ಬಾಲ ಮುದುರಿ ವಾಪಾಸಾಯಿತು. ಸುಮಾರು 2000 ಚದರಕಿಲೋಮೀಟರಿನಷ್ಟು ಪಾಕಿಸ್ತಾನದ ಜಾಗವನ್ನೂ ಭಾರತ ಆಕ್ರಮಿಸಿಕೊಂಡಿತು. ಎರಡನೇ ಮಹಾಯುದ್ಧದ ಬಳಿಕ, ಅತ್ಯಂತ ಹೆಚ್ಚು ಟ್ಯಾಂಕರುಗಳು ಬಳಕೆಯಾದ ಯುದ್ಧ 1965ರದ್ದು. ಎರಡೂ ದೇಶಗಳಿಗೆ ಬಹಳವೇ ಹಾನಿಯುಂಟುಮಾಡಿದ ಯುದ್ಧವದು.

ಯುದ್ಧ ಮುಗಿದ ಸಮಯದಲ್ಲಿ, ಎರಡೂ ದೇಶಗಳ ನಡುವಿನ ಶಾಂತಿ ಮಾತುಕತೆಗೆ, ಮಧ್ಯಸ್ಥಿಕೆ ವಹಿಸಿದ್ದು ಅಂದಿನ ಸೋವಿಯತ್ ರಷ್ಯಾದ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್. ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಇಬ್ಬರನ್ನು ತಾಷ್ಕೆಂಟಿಗೆ ಬರಹೇಳಿದರು ಅಯೂಬ್ ಖಾನ್ ಆರೂವರೆ ಅಡಿ ಎತ್ತರದ ಭಾರೀ ಮನುಷ್ಯ. ನಮ್ಮ ಶಾಸ್ತ್ರಿಗಳು ಐದೂಕಾಲು ಅಡಿಯ ವಾಮನಮೂರ್ತಿ. ತಾಷ್ಕೆಂಟಿಗೆ ಹೊರಟುನಿಂತಿದ್ದ ಶಾಸ್ತ್ರಿಗಳನ್ನು ಪ್ರಧಾನಿ ನಿವಾಸದೆದುರು ಪತ್ರಕರ್ತರು ಸೌಂಡ್ ಬೈಟಿಗಾಗಿ ತಡಕಾಡಿದಾಗ ಯಾರೋ ಒಬ್ಬ ಕಿಡಿಗೇಡಿ ಪತ್ರಕರ್ತ, ‘ಶಾಸ್ತ್ರಿಗಳೇ, ಯುದ್ಧ ಗೆದ್ದಿದ್ದು ಸಂತೋಷವೇ. ಆದರೆ ನಮ್ಮ ಉಳಿದ ಬೇಡಿಕೆಗಳನ್ನು ಅವರು ಪುರಸ್ಕರಿಸುವಂತೆ ಮಾಡಲು ಯಾವ ಅಸ್ತ್ರ ಪ್ರಯೋಗಿಸಲಿದ್ದೀರಿ!? ಯಾವ ರೀತಿ ಅವರೊಂದಿಗೆ ಮಾತನಾಡಲಿದ್ದೀರಿ?’ ಎಂದು ಕೇಳಿದ.

ಶಾಸ್ತ್ರೀಜಿಯವರ ಕಡೆಯಿಂದ ಒಂದೇಕ್ಷಣದಲ್ಲಿ ಉತ್ತರ ಬುಲ್ಲೆಟ್ಟಿನಂತೆ ತೂರಿ ಬಂತು. “ಕೈಸೆ ಬಾತ್ ಕರೇಂಗೇ ಮತಲಬ್!? ಹಮ್ ಸರ್ ಉಠಾ ಕೆ ಬಾತ್ ಕರೇಂಗೆ. ಔರ್ ವೋಹ್ ಸರ್ ಝುಕಾ ಕೆ” (ಹೇಗೆ ಮಾತನಾಡುತ್ತೇನೆಂದರೆ ಏನರ್ಥ!? ನಾನು ಸಂಪೂರ್ಣವಿಶ್ವಾಸದಿಂದ ತಲೆಯೆತ್ತಿ ಮಾತನಾಡುತ್ತೇನೆ. ಆವನು ತಲೆತಗ್ಗಿಸಿ ನನ್ನ ಮಾತು ಕೇಳುತ್ತಾ ಮಾತನಾಡುತ್ತಾನೆ).

ಆ ಪುಟ್ಟಜೀವದ ಅದಮ್ಯ ಆತ್ಮವಿಶ್ವಾಸದ ಮಾತು ಕೇಳಿ, ದೆಹಲಿಯ ಜನವರಿಯ ಚಳಿಯಲಿ ಗಡಗಡ ನಡುಗುತ್ತಿದ್ದ ಪತ್ರಕರ್ತರ ಗುಂಪಿನ ನಡುವೆ, ಒಂದು ಸಣ್ಣ ಸೂಜಿಬಿದ್ದರೂ ಕೇಳುವಷ್ಟು ನಿಶ್ಯಬ್ದವಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೯

ಈ ಸರಣಿಯಲ್ಲಿ ಒದಗಿಬರುವ ಹೆಚ್ಚಿನ ಕಥೆಗಳು ಒಂದೋ ರಾಜಕೀಯ ನಾಯಕರದ್ದು ಅಥವಾ ಲೇಖಕರದ್ದು. ಎರಡೂ ಸಹ ಪ್ರಖರ ವಾಗ್ಮಿಗಳ ಲೋಕ. ಪದಗಳೊಂದಿಗೆ ಆಟವಾಡುವವರ ಜಗತ್ತು. ಆದರೆ ಪದಸಂಪತ್ತಿನ ಜೊತೆ ಚತುರತೆಯೂ ಮುಖ್ಯ. ಸಿಕ್ಕಿಹಾಕಿಕೊಂಡಿರುವ ಪೇಚಿನಿಂದ ಹೊರಬರುವುದರೊಂದಿಗೆ ಎದುರಾಳಿಯನ್ನು ಗಪ್-ಚುಪಾಗಿಸುವುದು ಒಂದು ಕಲೆಯೇ ಸರಿ. ಸ್ವಲ್ಪ ಹೆಚ್ಚುಕಮ್ಮಿಯಾದರೂ, ನಮಗೇ ಡಬಲ್ ಪೇಚು. ಒಂದುರೀತಿಯಲ್ಲಿ ಮುಳ್ಳಿನಮೇಲೆ ಬಿದ್ದಿರುವ ಬಟ್ಟೆಯನ್ನು ಬಿಡಿಸಿದಂತೆ.

ಇವತ್ತಿನ ಪ್ರಸಂಗ ಅಮೇರಿಕನ್ ಲೇಖಕ ಹಾಗೂ ಚಿತ್ರಕಥೆಗಾರ ‘ಟ್ರೂಮನ್ ಕಪೋಟಿ’ಯದ್ದು. ಟ್ರೂಮನ್ ಬಹುಮುಖ ಪ್ರತಿಭೆ. ಅವನ ‘ಬ್ರೇಕ್ಫಾಸ್ಟ್ ಅಟ್ ಟಿಪನೀಸ್’, ‘ಇನ್ ಕೋಲ್ಡ್ ಬ್ಲಡ್’ ಕಥೆಗಳು ಮನಮೋಹಕ ಹಾಗೂ ರೋಮಾಂಚಕ. ಟ್ರೂಮನ್ನನ ಸುಮಾರು 20ಕ್ಕೂ ಹೆಚ್ಚು ಕಥೆ/ನೀಳ್ಗತೆಗಳು ಚಲನಚಿತ್ರ ಅಥವಾ ನಾಟಕಗಳಾಗಿ ನಿರ್ಮಾಣವಾಗಿವೆ. ಇದರ ಜೊತೆಗೊಡಗೂಡಿ ಟ್ರೂಮನ್ ತಾನೊಬ್ಬ ಸಲಿಂಗಿಯೆಂದು ಮುಕ್ತವಾಗಿಯೇ ಹೇಳಿಕೊಳ್ಳುತ್ತಿದ್ದ. ಆದರೂ ಯಾವುದೇ ‘ಸಲಿಂಗಿಗಳ ಹಕ್ಕೊತ್ತಾಯ’ದ ಸಭೆ, ಪರೇಡುಗಳಲ್ಲಿ ಭಾಗವಹಿಸದೇ ಅವುಗಳಿಂದ ದೂರವಿದ್ದ. ಅವುಗಳೆಲ್ಲಾ ಬರೀ ಬೂಟಾಟಿಕೆಯೆಂದು ಜರಿಯುತ್ತಿದ್ದ ಟ್ರೂಮನ್ನನನ್ನು ಸಲಿಂಗಿಗಳೂ ಇಷ್ಟಪಡುತ್ತಿರಲಿಲ್ಲ, ಬೇರೆ ಜನರೂ ಇಷ್ಟಪಡುತ್ತಿರಲಿಲ್ಲ. ಎಲ್ಲರಿಂದಲೂ ಸಮಾನರೀತಿಯಿಂದ ದ್ವೇಷಿಸಲ್ಪಡುತ್ತಿದ್ದ ಟ್ರೂಮನ್ ಒಬ್ಬ ವರ್ಣರಂಜಿತ ವ್ಯಕ್ತಿತ್ವದವ.

ಟ್ರೂಮನ್ ತನ್ನ ‘ಇನ್ ಕೋಲ್ಡ್ ಬ್ಲಡ್’ ಪುಸ್ತಕ ಬಿಡುಗಡೆ ಸಮಯದಲ್ಲಿ, ಚಿಕಾಗೋದಲ್ಲೊಂದು ಕಾರ್ಯಕ್ರಮ ಮುಗಿಸಿ ಹೊರಬಂದಾಗ, ತನ್ನನ್ನು ಮುತ್ತಿಕೊಂಡ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿದ್ದ. ಅವನನ್ನು (ಮತ್ತವನ ಸಲಿಂಗಾಕರ್ಷಣೆಯನ್ನು) ಗೇಲಿ ಮಾಡಲೋಸುಗ ಕುಡುಕನೊಬ್ಬ, ಸಾರ್ವಜನಿಕವಾಗಿ ತನ್ನ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸುತ್ತಾ ‘ಹೇಯ್ ಟ್ರೂಮನ್!! ಹೇಗಿದ್ದರೂ ಹಸ್ತಾಕ್ಷರ ನೀಡುತ್ತಿದ್ದೀಯ. ನನ್ನ ಬಳಿ ನಿನ್ನ ಯಾವುದೇ ಪುಸ್ತಕವಿಲ್ಲ. ಆದರೆ ನೀನಿಷ್ಟಪಡುವ ‘ಇದು’ ಇದೆ. ಇದರ ಮೇಲೊಂದು ಸಹಿ ಹಾಕು’ ಎಂದ.

ಟ್ರೂಮನ್ ಅವನೆಡೆಗೆ ಮತ್ತು ‘ಅದರೆಡೆಗೆ’ ನೋಡಿ, ‘ಅದರಮೇಲೆ ನನ್ನಿಡೀ ಸಹಿಯನ್ನು ಹಾಕುವುದಕ್ಕೆ ಆಗುವುದು ಅಸಾಧ್ಯ. ಹೆಚ್ಚೆಂದರೆ ನನ್ನ ಇನಿಷಿಯಲ್ ಬರೆಯಬಲ್ಲೆ, ಅಷ್ಟೇ’ ಎಂದ.

ಕುಡುಕನಿಗೆ ಅರ್ಥವಾಯ್ತು. ಮೂತಿಯನ್ನು ಕೆಂಪಾಗಿಸಿಕೊಂಡು ಝಿಪ್ ಎಳೆದು ಮುಂದೆ ಹೋದ. ಉಳಿದವರಿಗೆ ಅರ್ಥವಾಗಲು ಸ್ವಲ್ಪ ಹೊತ್ತು ಬೇಕಾಯ್ತು. ಆದರೆ ಅರ್ಥವಾದ ನಂತರ, ಟ್ರೂಮನ್ನನ ಮಾತಿನ ಚಾಟಿಯೇಟಿಗೆ ದಂಗಾಗಿ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಲ್ಲಿ ನಿಜಕ್ಕೂ ಸೂಜಿ ಬಿದ್ದರೆ ಕೇಳುವಷ್ಟು ನಿಶ್ಯಬ್ಧವಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೮

ಇವತ್ತು ಶಿಕ್ಷಕರ ದಿನಾಚರಣೆ. ಅಂದಮೇಲೆ ಈ ಅಂಕಣದಲ್ಲೂ ಅವರನ್ನೊಮ್ಮೆ ನೆನಸಿಕೊಳ್ಳಬೇಕಲ್ಲವೇ. ಶಿಕ್ಷಕರು ಎಂದಕೂಡಲೇ ನಮಗೆ ಥಟ್ಟನೇ ನೆನಪಾಗುವುದೇ ಡಾ| ಸರ್ವೇಪಲ್ಲಿ ರಾಧಾಕೃಷ್ಣನ್. ಅತ್ಯುತ್ತಮ ವಾಗ್ಮಿಯಾಗಿದ್ದ ನಮ್ಮ ಮೊದಲ ಉಪರಾಷ್ಟ್ರಪತಿ ಹಾಗು ಎರಡನೇ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ತಮ್ಮ ರಾಜಕೀಯಕ್ಕೆ ಬಹಳ ತಡವಾಗಿ ಕಾಲಿಟ್ಟವರು. ರಾಜಕೀಯ ಜೀವನದಲ್ಲಿ ಯಾರನ್ನೂ ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ನೋಯಿಸಿದವರಲ್ಲ. ಖಡಕ್ ಆದರೂ ಮಿತಭಾಷಿ, ಹಿತನುಡಿ, ಸದಾ ‘ಸರಿ’ಯಾಗಿದ್ದಂತ ವ್ಯಕ್ತಿತ್ವ. ಬಹುಷಃ ತಮ್ಮ ವೃತ್ತಿಜೀವನದಲ್ಲಿ ಯಾವುದೇ ವಿವಾದವಿಲ್ಲದೇ ನಡೆದುಕೊಂಡ ಸ್ವಲ್ಪವೇ ರಾಜಕಾರಣಿ/ರಾಷ್ಟ್ರಪತಿಗಳಲ್ಲಿ, ಡಾ| ರಾಧಾಕೃಷ್ಣನ್ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.

ಇಂತಹ ಮಿತಭಾಷಿ ರಾಧಾಕೃಷ್ಣನ್ ಒಮ್ಮೆ ಹರಿತನಾಲಿಗೆಯ ಚರ್ಚಿಲ್ ಅವರನ್ನು ಭೇಟಿಯಾಗುವ ಸಂಧರ್ಭ ಒಂದಗಿಬಂತು. ಅದೊಂದು ಬ್ರಿಟೀಷ್ ಸರ್ಕಾರೀ ಔತಣ. ಚರ್ಚಿಲ್’ರಿಗೆ ಭಾರತೀಯರ ಮೇಲಿದ್ದ ಆದರ, ಗೌರವ ಸ್ವಲ್ಪ ಕಡಿಮೆಯೇ. ಅದಕ್ಕೆ ತದ್ವಿರುದ್ದವಾಗಿ ರಾಧಾಕೃಷ್ಣನ್ ಅವರಿಗೆ ಭಾರತೀಯ ವಿಚಾರಧಾರೆ, ತತ್ವಜ್ಞಾನ, ಆಚರಣೆ ಎಲ್ಲವೂ ಗೌರವಪೂರ್ವ. ಜೀವನವಿಡೀ ಅದನ್ನೇ ಭೋಧಿಸಿದವರು ಹಾಗೂ ಅನುಸರಿಸಿದವರು. ಇಂಗ್ಳೀಷರ ಔತಣಕ್ಕೂ ಅವರು ಕಚ್ಚೆಪಂಚೆ ಧರಿಸಿಯೇ ಹೋಗಿದ್ದರು. ಚರ್ಚಿಲರಿಗೆ ಇವರ ಪಕ್ಕದಲ್ಲೇ ಕುಳಿತು ಚರ್ಚಿಸುವ ತವಕ. ಇವರೊಂದಿಗೆ ಮಾತನಾಡುತ್ತಾ ಭಾರತೀಯರ ಬಗ್ಗೆ, ಅವರ ಮೂಡಸಂಪ್ರದಾಯ ಆಚರಣೆಗಳ ಬಗ್ಗೆ ಏನೇನೋ ಹೇಳುತ್ತಲೇ ಇದ್ದ. ನಮ್ಮ ‘ಮೇಷ್ಟ್ರು’ ತಾಳ್ಮೆಯಿಂದ ಕೇಳಿಸಿಕೊಂಡೇ ಕೆಲ ಉತ್ತರಗಳನ್ನೂ ಕೊಡುತ್ತಿದ್ದರು.

ಅಷ್ಟರಲ್ಲಿ ಔತಣಕೂಟದ ಮುಖ್ಯ ಊಟ ಪ್ರಾರಂಭವಾಗುವ ಘಂಟೆ ಬಾರಿಸಲಾಯಿತು. ಪರಿಚಾರಕರು ಊಟದ ಟೇಬಲ್ಲಿನ ಮೇಲೆ ಚಮಚ, ಫೋರ್ಕು, ಚಾಕುಗಳನ್ನಿಡಲು ಪ್ರಾರಂಭಿಸಿದರು. ಎಷ್ಟಂದರೂ ಬ್ರಿಟೀಷ್ ಔತಣ, ಅದರಲ್ಲೂ ಸರ್ಕಾರೀ ಔತಣ ಬೇರೆ. ಅಂದಮೇಲೆ ಫಾರ್ಮಾಲಿಟಿಗಳನ್ನು ಪಕ್ಕಾ ಆಗಿ ಅನುಸರಿಸಬೇಕಲ್ಲವೇ. ಹಾಗಾಗಿ ಬಲಕ್ಕೆ ಮೂರು ಚಮಚಗಳು, ಎಡಕ್ಕೆ ಎರಡು ಫೋರ್ಕು, ಎರಡು ಚಾಕುಗಳು ಎಲ್ಲವನ್ನೂ ನೀಟಾಗಿ ಜೋಡಿಸಿಡಲಾಯ್ತು. ಸೂಪ್ ತಂದಿಟ್ಟಾಯ್ತು. ರಾಧಾಕೃಷ್ಣನ್ ಸೂಪ್ ನಿರಾಕರಿಸಿ ಮುಂದಿನ ಐಟಮ್ ತಂದಿಡಲು ಹೇಳಿದರು. ಸಲಾಡ್ ತಂದಿಡಲಾಯ್ತು. ಚರ್ಚಿಲ್ ಸಲಾಡ್ ಫೋರ್ಕ್ ಕೈಗೆತ್ತಿಕೊಂಡರೆ, ರಾಧಾಕೃಷ್ಣನ್ ಕೈಯಿಂದಲೇ ಕ್ಯಾರಟ್ ಚೂರನ್ನು ಕೈಗೆತ್ತಿಕೊಂಡು ತಿನ್ನಲಾರಂಭಿಸಿದರು. ನಕ್ಕ ಚರ್ಚಿಲ್ ‘ನೋಡಿ ಇದಕ್ಕೇ ನಾನು ಭಾರತೀಯರ ಬಗ್ಗೆ ಕಿಚಾಯಿಸುವುದು. ಸ್ವಚ್ಚತೆಯ ಬಗ್ಗೆ ಅಸಡ್ಡೆ ಅವರಿಗೆ. ಫೋರ್ಕ್ ಉಪಯೋಗಿಸುವುದರ ಬದಲು, ಎಲ್ಲೆಲ್ಲೋ ಉಪಯೋಗಿಸಿದ ಕೈಯನ್ನು ತಿನ್ನಲು ಉಪಯೋಗಿಸುತ್ತಾರೆ. ಎಷ್ಟು ಅನ್’ಹೈಜೀನಿಕ್!!’ ಎಂದ.

ಸ್ವಲ್ಪವೂ ವಿಚಲಿತರಾಗದ ರಾಧಾಕೃಷ್ಣನ್, ಚರ್ಚಿಲರೆಡೆಗೆ ಹಾಗೂ ಇತರರೆಡೆಗೆ ನೋಡುತ್ತಾ ‘ಕಡೇ ಪಕ್ಷ ನನ್ನ ಕೈ ಎಲ್ಲೆಲ್ಲಿ ಉಪಯೋಗಿಸಿದ್ದೇನೆ ಎಂಬ ಅರಿವು ನನಗಿದೆ. ಹಾಗೂ ಊಟಕ್ಕೆ ಮುಂಚೆ ತೊಳೆದಿದ್ದೇನೆ ಎಂಬ ಗ್ಯಾರಂಟಿಯೂ ನನಗಿದೆ. ನನ್ನ ಕೈಯ ಮೂಲಕ ಬೇರೆಯವರ್ಯಾರೂ ಎಂದಿಗೂ ಏನನ್ನೂ ತಿಂದಿರಲು ಸಾಧ್ಯವೇ ಇಲ್ಲ ಎಂಬುದೂ ನನಗೆ ನೂರಕ್ಕೆ ನೂರು ಗ್ಯಾರಂಟಿಯಿದೆ. ಅಂದಮೇಲೆ ಫೋರ್ಕಿಗಿಂತ ಕೈಯೇ ಹೆಚ್ಚು ಹೈಜೀನಿಕ್ ಅಲ್ಲವೇ?’ ಎಂದು ಕ್ಯಾರಟ್ ಮುಗಿಸಿದರು.

ಚರ್ಚಿಲ್ ಗಂಟಲಲ್ಲಿ ಸಲಾಡ್ ಸಿಕ್ಕಿಕೊಂಡು, ಮುಂದಿನ ಸ್ವಲ್ಪ ಕಾಲ ಮಾತನಾಡಲಾಗದೇ, ಸೂಜಿಯೇನು..ಇಡೀ ಸ್ಟೀಲ್ ಫ್ಯಾಕ್ಟರಿಯೇ ಕುಸಿದೂ ಬಿದ್ದರೂ ಮಾತಾನಾಡಲಾಗದಂತೆ, ಅಲ್ಲಿ ಮೌನವಿತ್ತು. ಯಾರೋ ‘ಸುರ್ರ್ರ್..’ ಎಂದು ಸೂಪ್ ಎಳೆದು ಮೌನಭಂಗ ಮಾಡಿದರಂತೆ.

ಎಲ್ಲರಿಗೂ ಶಿಕ್ಷರರ ದಿನಾಚರಣೆಯ ಶುಭಾಶಯಗಳು

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೭

ಅಸೂಯೆ, ಮತ್ತು ಅಹಂಕಾರ ಇವೆರಡು ಇದ್ದಲ್ಲಿ ಸಮರಗಳಿಗೇನು ಬರ ಅಲ್ವಾ? ಆದರೆ, ಜಗಳ ಆಡುವ ಜನರು ಸಭ್ಯರಾಗಿದ್ದರೆ ಅವರು ದೈಹಿಕಸಮರಕ್ಕಿಳಿಯದೇ, ಮಾತಿನ ಸಮರದಲ್ಲಿ ಒಬ್ಬರನ್ನೊಬ್ಬರು ಮಣ್ಣುಮುಕ್ಕಿಸುವುದುಂಟು. ಇವತ್ತಿನ ಘಟನೆ ಕ್ರೀಡಾಜಗತ್ತಿನಿಂದ. ಗಂಟೆಗಟ್ಟಲೇ ದೇಹದಂಡಿಸಿ, ಕ್ರೀಡಾ ಮೈದಾನದಲ್ಲಿ ಒಬ್ಬರನ್ನೊಬ್ಬರು ಗೆಲ್ಲಲು ಪರಿಶ್ರಮಿಸುವ ಕ್ರೀಡಾಪಟುಗಳಲ್ಲಿ, ಅನೇಕ ಉತ್ತಮ ವಾಗ್ಮಿಗಳೂ, ಚಟಾಕಿಹಾರಿಸಿ ಚಾಟಿಯೇಟು ನೀಡುವವರೂ ಬಹಳಷ್ಟುಮಂದಿ ಬಂದು ಹೋಗಿದ್ದಾರೆ. ನವಜೋತ್ಸಿಂಗ್ ಸಿದ್ಧು ಅವರನ್ನೂ ಈ ಪಟ್ಟಿಗೆ ಸೇರಿಸಿ, ಕೆಲವರು ಕುಚೋದ್ಯ ಮಾಡುವುದುಂಟು 🙂

ಕ್ರೀಡೆ ಎಂದಕೂಡಲೇ ನಮ್ಮ ದೇಶದ ಜನರಿಗೆ ಕನವರಿಕೆ ಬರುವುದೇ ಕ್ರಿಕೆಟ್ಟಿನದು. ಅದಕ್ಕೆ ಸರಿಯಾಗಿ ಕ್ರಿಕೆಟ್ಟು ‘ಸಭ್ಯರ ಆಟ, ಜಂಟಲ್ಮೆನ್ಸ್ ಗೇಮ್’ ಎಂದೆಲ್ಲಾ ಅನ್ನುವುದುಂಟು. ಹಾಗಿದ್ದಮೇಲೆ ‘ಕ್ರಿಕೆಟ್ಟಿನಲ್ಲಿ ನಡೆದ ಕೆಲ ಪ್ರಸಂಗಗಳೂ ಸಭ್ಯಹಾಸ್ಯದ್ದೇ ಆಗಿರಬೇಕಲ್ಲವೇ?’ ಎಂದು ಹುಡುಕಿದ ನನಗೆ ದೊಡ್ಡದೊಂದು ಪಟ್ಟಿಯೇ ಸಿಕ್ಕಿತು. ಅದರಲ್ಲೊಂದು ಆಯ್ದ ಕಥೆ ಇಲ್ಲಿದೆ.

ಆಸ್ಟೇಲಿಯ ಕ್ರಿಕೆಟ್ ತಂಡ. ಈ ಹೆಸರು ಹೇಳಿದಕೂಡಲೇ ನಮಗೆ ನೆನಪಿಗೆ ಬರುವುದು ಅಲ್ಲಿಯ ಮನಮೋಹಕಶೈಲಿಯ ಆಟಗಾರರು, ಅವರ ಜಿಗುಟು ಛಲ ಮತ್ತು ಮೈದಾನದಲ್ಲಿ ಅವರುಗಳು ಪಾತ್ರಗಳಾದ ಹಲವಾರು ವಾಗ್ಯುದ್ದಗಳು (ಕ್ರಿಕೆಟ್ ಭಾಷೆಯಲ್ಲಿ ಇದಕ್ಕೆ ಸ್ಲೆಡ್ಜಿಂಗ್ ಎಂದೂ ಕರೆಯುತ್ತಾರೆ). ಆಸ್ಟ್ರೇಲಿಯನ್ನರಲ್ಲಿ ಸ್ಲೆಡ್ಗಿಂಗಿನದ್ದೊಂದು ಪರಂಪರೆಯೇ ನಡೆದು ಬಂದಿದೆ. ಅದಕ್ಕೋಸ್ಕರವೇ ಅವರ ತಂಡದಲ್ಲೊಬ್ಬ ಕೋಚ್ ಇರುತ್ತಾನೇನೋ ಎನ್ನುವಷ್ಟರ ಮಟ್ಟಿಗೆ ಕಥೆಗಳು ನಡೆದಿವೆ.

ಇಂತಿರ್ಪ ಆಸ್ಟ್ರೇಲಿಯಾದ ಸುಂದರ ಮೊಗದ ಆಟಗಾರ ಮಾರ್ಕ್ ವಾ, 2001ರಲ್ಲಿ ಇಂಗ್ಲೆಂಡ್ ಪ್ರವಾಸದ ತಂಡದಲ್ಲಿದ್ದ. ಆ ಸರಣಿಯ ಟೆಸ್ಟ್ ಮ್ಯಾಚ್ ಒಂದಕ್ಕೆ, ಇಂಗ್ಲೆಂಡಿನ ತಂಡದಲ್ಲಿ, ಇಂಗ್ಲೆಂಡಿಗೇ ಆಶ್ಚರ್ಯವಾಗುವಂತೆ ಜಿಮ್ಮಿ ಆರ್ಮಂಡ್ ಎಂಬೊಬ್ಬ ಅಷ್ಟೇನೂ ಹೆಸರುವಾಸಿಯಲ್ಲದ, ಕೌಂಟಿಮಟ್ಟದ, ಹೊಸ ಬೌಲರ್ ಒಬ್ಬನನ್ನು ಸೇರಿಸಲಾಗಿತ್ತು. ಸಿಗರೇಟು ಮತ್ತು ಬಿಯರಿನ ಆಸಕ್ತ ಜಿಮ್ಮಿ, ಕ್ರಿಕೆಟ್ ಆಟಗಾರರ ಮೈಕಟ್ಟಿಗೆಲ್ಲಾ ಹೋಲಿಸಿದರೆ ಸ್ವಲ್ಪ ದಡೂತಿಯಾಗೇ ಇದ್ದ. ಜಿಮ್ಮಿಯ ಮೊದಲ ಪಂದ್ಯ. ಹೊಸಾ ಆಟಗಾರನೊಬ್ಬ ಕ್ರೀಸಿಗೆ, ಅದರಲ್ಲೂ ಅಂತರರಾಷ್ಟ್ರೀಯಮಟ್ಟದ ಪಂದ್ಯದಲ್ಲಿ ಮೊದಲಬಾರಿಗೆ ಕ್ರೀಸಿಗೆ ಇಳಿದಾಗ, ಆಸ್ಟ್ರೇಲಿಯಾದ ತಂಡಗಳು ಸ್ಲೆಡ್ಜಿಂಗ್ ತಂತ್ರವನ್ನು ಸದಾ ಅನುಸರಿಸಿವೆ. ಜಿಮ್ಮಿ ಕ್ರೀಸಿಗೆ ಬಂದಿಳಿದಾಗ, ಅಲ್ಲೇ ಸಿಲ್ಲಿ ಪಾಯಿಂಟಿನಲ್ಲಿ ನಿಂತಿದ್ದ ಮಾರ್ಕ್ ವಾ “ಇಲ್ಲೇನು ಮಾಡ್ತಾ ಇದ್ದೀಯಪ್ಪಾ ನೀನು!? ನಿನ್ನ ಟ್ರಾಕ್ ರೆಕಾರ್ಡ್ ನೋಡಿದ್ರೆ ಖಂಡಿತಾ ನೀನು ಇಂಗ್ಲೆಂಡಿನ ರಾಷ್ಟ್ರೀಯ ತಂಡಕ್ಕೆ ಆಡುವಷ್ಟು ಒಳ್ಳೆಯ ಆಟಗಾರನಂತೂ ಅಲ್ಲ” ಅಂತಾ ತಾನಿದ್ದ ಸಿಲ್ಲಿ ಪಾಯಿಂಟಿನಿಂದ ಒಂದು ‘ಸಿಲ್ಲಿ ಪಾಯಿಂಟ್’ ಹಾರಿಸಿ ಕಿಚಾಯಿಸಿದ.

ಅಷ್ಟರಲ್ಲಿ ನುಗ್ಗಿ ಬಂದ ಬಾಲನ್ನು ರಕ್ಷಣಾತ್ಮಕವಾಗಿ ಆಡಿ, ಸಿಲ್ಲಿ ಮಿಡ್-ಆಗ್ ಕಡೆ ಕಳುಹಿಸಿದ ಜಿಮ್ಮಿ, ಕ್ರೀಸಿನಲ್ಲೇ ಎದ್ದುನಿಂತು, ಮಾರ್ಕನೆಡೆಗೆ ನೋಡುತ್ತಾ “ಇರಬಹುದೇನೋ!! ಆದರೆ, ನಿನಗೆ ಹೋಲಿಸಿದರೆ ನಾನೆಷ್ಟೋ ವಾಸಿ. ಕಡೇಪಕ್ಷ ನನ್ನಿಡೀ ಕುಟುಂಬದಲ್ಲಿ ನಾನೇ ಬೆಸ್ಟ್ ಆಟಗಾರ” ಎಂದ 😛

ಮೂರೂವರೆ ಸಾವಿರ ಜನ ಸೇರಿದ್ದ ಸ್ಟೇಡಿಯಮ್ಮಿನ ಆ ಗಲಾಟೆಯ ನಡುವೆಯೂ, ಪಿಚ್ಚಿನ ಮೇಲೆ ಸೂಜಿ ಬಿದ್ದರೂ ಕೇಳುವಷ್ಟು ಮೌನವಿತ್ತು.

*ಮಾರ್ಕ್ ವಾ ಇನ್ನೂ ತನ್ನ ಕ್ರಿಕೆಟ್ ಜೀವನದಲ್ಲಿ ನರಳಿ, ಹೊರಳುತ್ತಿದ್ದಾಗ, ಅವನ ಅವಳಿ ತಮ್ಮ ಸ್ಟೀವ್ ವಾ, ಅಂದಿನ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದ 🙂

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೬

ಇವತ್ತಿನ ಮಾತಿನ ಸಮರ ಜಗತ್ತಿನ ಅತೀದೊಡ್ಡ ಶೀತಲ ಸಮರ ನಡೆಯುತ್ತಿದ್ದ ಕಾಲದ್ದು. ಅಂದರೆ 1953-62ರ ಕಾಲಘಟ್ಟದ್ದು. ಅಮೇರಿಕಾ ಮತ್ತು ಸೋವಿಯತ್ ರಷ್ಯಾ ದೇಶಗಳು ಒಬ್ಬರನ್ನೊಬ್ಬರು ಎಲ್ಲ ರೀತಿಯಲ್ಲೂ ಮೀರಿಸಲು ರಣತಂತ್ರಗಳನ್ನು ಹೊಸೆಯುತ್ತಿದ್ದ ಕಾಲ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ಯಾವುದೇ ದೇಶದಲ್ಲಿ, ಯಾವುದೇ ವಿಷಯದ ಮೀಟಿಂಗು ನಡೆಯಲಿ, ಆ ವೇದಿಕೆಯಲ್ಲಿ ಈ ಎರಡೂ ದೇಶದ ಅಧಿಕಾರಿಗಳು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯದೆ ಬಿಡುತ್ತಿರಲಿಲ್ಲ. ಎರಡೂ ದೇಶಗಳ ಅವತ್ತಿನ ಮುಖಂಡರು ಪ್ರಚಂಡ ರಾಜಕಾರಣಿಗಳು. ರಾಜತಾಂತ್ರಿಕತೆಯೆ ನಿಪುಣರಷ್ಟೇ ಅಲ್ಲದೆ, ಮಾತಿನ ಚತುರರೂ ಸಹ. ಭಾಷಣಕ್ಕೆ ನಿಂತರೆ, ಮಾತಿನ ಮೋಡಿಯಿಂದ ಸೇರಿರುವ ಜನರನ್ನೇ ಉದ್ವೇಗಕ್ಕೇರಿಸಿ, ಅಲ್ಲೇ ಒಂದು ಯುದ್ಧ ಮಾಡಿಸಿಬಿಡುವಷ್ಟು ಮಾತಿನ ಮಲ್ಲರು.

ಇಂತಿರ್ಪ್ಪ ಸಮಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಕರೆದಾಗ, ಅಮೇರಿಕಾದ ಅಧ್ಯಕ್ಷರಾದ ಡ್ವೈಟ್.ಡಿ.ಐಸೆನ್ಹೋವರ್ ಸ್ವತಃ ಬರುತ್ತಿದ್ದಾರೆಂದು ತಿಳಿದ ರಷ್ಯಾದ ಅಧ್ಯಕ್ಷ ನಿಕಿತಾ ಕೃಶ್ಚೇವ್, ರಷ್ಯಾ ಪರವಾಗಿ ನಿಯೋಗವನ್ನು ಕಳುಹಿಸುವುದರ ಬದಲಿಗೆ ತಾನೇ ಹೋಗಲು ನಿರ್ಧರಿಸಿದರು. ಇಡೀ ವಿಶ್ವವೇ ಈ ಸಭೆಯನ್ನು ಹದ್ದಿನಕಣ್ಣಿನಿಂದ ಗಮನಿಸುತ್ತಿತ್ತು. ಯಾರು ಯಾರಿಗೆ ಸೂಕ್ಷ್ಮವಾಗಿ ತಿವಿಯುತ್ತಾರೆ ಎಂಬುದನ್ನು ಮರುದಿನದ ಹೆಡ್-ಲೈನ್ ಮಾಡಲು ಪತ್ರಿಕಾಗಣ ಕಾದುನೋಡುತ್ತಿತ್ತು. ಐಸೆನ್ಹೋವರ್ ತಮ್ಮ ಭಾಷಣದಲ್ಲಿ ಅಮೇರಿಕಾದ ಹೆಮ್ಮೆಯನ್ನು ಸಾರುತ್ತಾ, Why America is the greatest country on earth ಎಂಬುದೊಂದು ಭಾಷಣವನ್ನೂ ಮಾಡಿದರು. ಸಭೆಯತುಂಬೆಲ್ಲಾ ಕರತಾಡನ.

ಅವತ್ತು ಸಂಜೆ ಐಸೆನ್ಹೋವರ್ ಮತ್ತು ಕೃಶ್ಚೇವ್ ಭೇಟಿ ನಿಗದಿಯಾಗಿತ್ತು. ಉಭಯಕುಶಲೋಪರಿ, ಫೋಟೋಗಳೆಲ್ಲ ನಡೆದ ನಂತರ ಮಾತುಕತೆಗೆ ಕೂತಾಯಿತು. ಮೊದಲ ಮಾತಿನ ಬಗ್ಗೆ ಇಬ್ಬರೂ ಯೋಚಿಸುತ್ತಿರುವಾಗಲೇ ಕೃಶ್ಚೇವ್ ‘ನಿಮ್ಮದೆಂತಹಾ ಸುಳ್ಳು ಭಾಷಣ ಮಾರಾಯ್ರೆ, ಮಧ್ಯಾಹ್ನದ್ದು?’ ಅಂದರು. ಐಸೆನ್ಹೂವರ್ ವಿಚಲಿತರಾಗದೇ ‘ಸುಳ್ಳೇನೂ ಇಲ್ಲ. ನಿರ್ಭಯದಿಂದ ಸತ್ಯವನ್ನು ಮಾತನಾಡುವವರನ್ನು ಕಂಡರೆ ರಷ್ಯಾದವರೆಲ್ಲರಿಗೂ ಅಸೂಯೆಯಿರಬೇಕು’ ಎಂದರು. ಕೃಶ್ಚೇವ್ ಕೇಳಿಸಿಕೊಳ್ಳುತ್ತಲೇ ಇದ್ದ. ‘ಅಮೇರಿಕದಲ್ಲಿರುವಷ್ಟು ವ್ಯಕ್ತಿ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ಈ ದೇಶದಲ್ಲಿ ಒಬ್ಬ ನಾಗರೀಕ ಬೇಕಾದರೆ ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರಿನಲ್ಲಿ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಬಹುದು. ಅವನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಅವನಿಗಿದೆ. ಅವನನ್ನೇನೂ ಬಂಧಿಸಲಾಗುವುದಿಲ್ಲ ಅಥವಾ ವಿಚಾರಣೆಗೊಳಪಡಿಸಲಾಗುವುದಿಲ್ಲ. ಅಷ್ಟೇ ಏಕೆ, ಅವನ ನಸೀಬಿಗೆ ತಕ್ಕಂತೆ ಅವನಿಗೊಂದು ಫ್ಯಾನ್ ಕ್ಲಬ್ಬು, ಬೆಂಬಲಿಗರೂ ಹುಟ್ಟಿಕೊಳ್ಳಬಹುದು. ಅಷ್ಟರಮಟ್ಟಿಗಿನ ಸ್ವಾತಂತ್ರ್ಯ ಅಮೇರಿಕದಲ್ಲಿದೆ. ರಷ್ಯಾದಲ್ಲಿರುವ ಮಾನವ ಹಕ್ಕುಗಳ ಸ್ಥಿತಿ ನಮ್ಮಲ್ಲಿಲ್ಲ. ನಮ್ಮದು ಪ್ರಜಾಪ್ರಭುತ್ವ’ ಎಂದು ಹೆಮ್ಮೆಯ ನಗೆ ಬೀರಿದ ಐಸೆನ್ಹೂವರ್.

ಕೃಶ್ಚೇವ್ ತನ್ನ ಕಾಫಿ ಹೀರುತ್ತಾ ‘ನೋಡಿ ಮಿ.ಅಧ್ಯಕ್ಷರೇ. ಮಾನವ ಹಕ್ಕುಗಳ ವಿಷಯಕ್ಕೆ ಬಂದರೆ ಇಂತಹುದೇ…..ಬಹುಷಃ ಇದಕ್ಕಿಂತಾ ಒಳ್ಳೆಯ ಪರಿಸ್ಥಿತಿ ನಮ್ಮ ರಷ್ಯಾದಲ್ಲಿದೆ’ ಎಂದ. ಐಸೆನ್ಹೂವರ್ರಿಗೆ ಆಶ್ವರ್ಯ! ಹುಬ್ಬೇರಿಸಿ ವ್ಯಂಗ್ಯ ನಗುಬೀರುತ್ತಾ ‘ಇಷ್ಟರಮಟ್ಟಿಗಿನ ಸ್ವಾತಂತ್ರ್ಯ ನಿಮ್ಮ ದೇಶದಲ್ಲಿ ಬಂದ ದಿನ, ಜಗತ್ತು ಖಂಡಿತಾ ಒಳ್ಳೆಯ ದಿನಗಳನ್ನು ನೋಡುತ್ತದೆ. ಜೋಕ್ ಸಾಕು’ ಎಂದ.

ಕೃಶ್ಚೇವ್ ಅದಕ್ಕೆ ‘ನೋಡಿ ನನಗೆ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿಮ್ಮಷ್ಟು ಗೊತ್ತಿಲ್ಲ. ಆದರೆ, ನಮ್ಮಲ್ಲಿ ಆಗಲೇ ನೀವು ಹೇಳಿದಕ್ಕಿಂತಾ ಒಳ್ಳೆಯ ಪರಿಸ್ಥಿತಿ ಇದೆ. ಬೇಕಾದರೆ ನಾನು ನಿರೂಪಿಸಿ ತೋರಿಸುತ್ತೇನೆ. ನನ್ನೂರು ಮಾಸ್ಕೋದ ರೆಡ್ ಸ್ಕ್ವೇರಿನಲ್ಲಿ ಯಾರಾದರೂ ನಿಂತು ‘ಅಮೇರಿಕಾದ ಅಧ್ಯಕ್ಷ ಒಬ್ಬ ಮುಠ್ಠಾಳ’ ಎಂದು ಕೂಗಿದರೆ, ಬಂಧನ, ವಿಚಾರಣೆ ಆಗುವುದು ಹಾಗಿರಲಿ. ಅವನಿಗೊಂದು ಸೋವಿಯತ್ ರಷ್ಯಾದ ಗೌರವಾನ್ವಿತ ಮೆಡಲ್ ಸಿಕ್ಕಿದರೂ ಸಿಗಬಹುದು. ನಿಮ್ಮ ದೇಶದಲ್ಲಿ ಹೀಗಾಗುವುದು ಸಾಧ್ಯವುಂಟೇ’ ಎನ್ನುತ್ತಾ ಕಾಫಿ ಹೀರುವುದ ಮುಂದುವರೆಸಿದ.

ಕೃಶ್ಚೇವ್ ಕಾಫಿ ಹೀರುವ ಸದ್ದು ಬಿಟ್ಟರೆ ಆ ರೂಮಿನಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು.

ಸೂಜಿ ಬಿದ್ದರೂ ಕೇಳುವಷ್ಟೂ ಮೌನ (ಪಿನ್ ಡ್ರಾಪ್ ಸೈಲೆನ್ಸ್) ಅಂದ್ರೇನು ಗೊತ್ತಾ? – ೫

ಸಾಹಿತ್ಯ ಹಾಗೂ ಭಾಷೆ ಒಲಿದುಬಂದಿರುವ ಇಬ್ಬರ ಮಧ್ಯೆ ನಡೆಯುವ ಜಗಳವೂ ಸಹ ಕೇಳಲು/ನೋಡಲು ಚೆಂದ. ಪದಲಾಲಿತ್ಯ ಮತ್ತು ಪದಪಾಂಡಿತ್ಯದಲ್ಲೇ ಒಬ್ಬರ ಕಾಲನ್ನು ಇನ್ನೊಬ್ಬರು, ಘನತೆ ಮೀರದಂತೆ, ಎಳೆಯುವ ಪರಿಯೇ ವಿಸ್ಮಯದ ಗೂಡು.

ಬ್ರಿಟನ್ನಿನ ಪೂರ್ವ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಮತ್ತು ಐರಿಷ್ ನಾಟಕಕಾರ ಹಾಗೂ ಲಂಡನ್ ಸ್ಕೂಲ್ ಆಫ್ ಎಕಾನಿಮಿಕ್ಸ್’ನ ಸಂಸ್ಥಾಪಕರಲ್ಲೊಬ್ಬರಾದ ಜಾರ್ಜ್ ಬರ್ನಾರ್ಡ್ ಷಾ ನಡುವಿನ ವೈಮನಸ್ಯ, ಜಗತ್ಪ್ರಸಿದ್ಧ. ಯಾವಾಗಲೂ ಕಚ್ಚಾಡುತ್ತಲೆ ಇದ್ದರು. ಅವರ ಕಚ್ಚಾಟದ ಸಣ್ಣ ತುಣುಕಿನಲ್ಲೂ ಏನೋ ಒಂಥರ ಮಜಾ. ಕೇಳಿಸಿಕೊಂಡವನಿಗೆ, ಯಾರು ಯಾರ ಕಾಲೆಳೆದರು!? ಎಂಬುದೇ ಅರ್ಥವಾಗದ ಪ್ರಕರಣಗಳವು. ಇವರಿಬ್ಬರ ಮಧ್ಯೆ ನಡೆದಿರುವ ಇಂತಹ ‘ಪದ ಯುದ್ಧ (war of words)’ ಪ್ರಕರಣಗಳು ಈ ಮಾಲಿಕೆಯಲ್ಲಿ ಪದೇ ಪದೇ ಉಲ್ಲೇಖಗೊಂಡರೆ ಅಚ್ಚರಿಯಿಲ್ಲ. ಅವುಗಳಲ್ಲೊಂದು ಇಲ್ಲಿದೆ.

ಒಮ್ಮೆ ಬರ್ನಾರ್ಡ್ ಷಾ ಲಂಡನ್ನಿನಲ್ಲಿ ಪ್ರದರ್ಶನಗೊಳ್ಳಲಿರುವ, ತಮ್ಮದೊಂದು ಹೊಸಾ ನಾಟಕಕ್ಕೆ (ಬಹುಷಃ ಪಿಗ್ಮೇಲಿಯನ್ ಇರಬೇಕು, Pygmalion) ಚರ್ಚಿಲ್ ಅವರನ್ನು ಆಹ್ವಾನಿಸುತ್ತಾ, ಒಂದು ಪತ್ರ ಬರೆದರು. ಆಗಿನ್ನೂ ಚರ್ಚಿಲ್ ಪ್ರಧನಿಯೇನೂ ಆಗಿರಲಿಲ್ಲ. ಸಂಸದರಾಗಿದ್ದರಷ್ಟೇ. ಪತ್ರ ಹೀಗಿತ್ತು “ಮಿ. ಚರ್ಚಿಲ್, ನನ್ನ ಹೊಸಾ ನಾಟಕದ ಮೊದಲ ಶೋ’ಗೆ ನಿಮ್ಮನ್ನು ಆಹ್ವಾನಿಸುತ್ತಾ, ಈ ಪತ್ರದೊಂದಿಗೆ ಎರಡು ಟಿಕೇಟುಗಳನ್ನು ಲಗತ್ತಿಸಿದ್ದೇನೆ. ಬೇಕಾದರೆ, ನಿಮ್ಮ ಸ್ನೇಹಿತರೊಬ್ಬರನ್ನೂ ಕರೆತರಬಹುದು……….ನಿಮಗ್ಯಾರಾದರೂ ‘ಸ್ನೇಹಿತರು’ ಅಂತಾ ಇದ್ದರೆ…. 😛 😛 ”

ಉತ್ತರವಾಗಿ ಚರ್ಚಿಲರ ಪತ್ರ, ಷಾ ಕೈಸೇರಿತು. ಚರ್ಚಿಲರಿಂದ ಖಡಕ್ ಉತ್ತರವನ್ನೇ ನಿರೀಕ್ಷಿಸಿದ್ದ ಷಾ ತಮ್ಮ ಆಫೀಸಿನ ಬಾಗಿಲೆಳೆದುಕೊಂಡು, ಲಕೋಟೆ ತೆರೆದರು. ಚರ್ಚಿಲರ ಟೈಪ್-ರೈಟರಿನಿಂದ ಹೊರಟ ಉತ್ತರ ಹೀಗಿತ್ತು “ಮಿ.ಷಾ, ನಿಮ್ಮ ಪತ್ರ ಮತ್ತು ಟಿಕೇಟಿಗೆ ಧನ್ಯವಾದ. ಮೊದಲ ಶೋಗೆ ಬರುವುದು ಕಷ್ಟವಾಗಬಹುದು ಎನ್ನಿಸುತ್ತಿದೆ. ಆದರೆ ಎರಡನೇ ದಿನದ ಶೋಗೆ ಖಂಡಿತಾ ಬರುತ್ತೇನೆ…….ನಿಮ್ಮ ನಾಟಕ ಎರಡನೇ ಶೋವರೆಗೂ ಉಳಿದಿದ್ದರೆ… 😛 😛 ”

ಆ ಕೋಣೆಯಲ್ಲಿದ್ದ ಗಡಿಯಾರದ ಟಿಕ್-ಟಿಕ್ ಶಬ್ದವೊಂದನ್ನು ಬಿಟ್ಟರೆ, ಸೂಜಿ ಕೂಡಾ ಬಿದ್ದರೆ ಸ್ಪಷ್ಟವಾಗಿ ಕೇಳುವಷ್ಟು ಮೌನವಿತ್ತು. ಷಾ ಮುಖದಲ್ಲಿ ಸಣ್ಣದೊಂದು ಮುಗುಳ್ನಗೆಯಿತ್ತು.