“ಜಾಳುಜಾಳಾದ ಜೀವನಕ್ಕೆ ದಿಕ್ಕುತೋರಿಸುವ ಜಾರ್ಜಿಯಾದ ಮಾರ್ಗಸೂಚಿಗಳು”

ಒಂದ್ಸಲ ಮಂಗಳೂರು ಏರ್ಪೋರ್ಟಿಂದ ನಾನು ದುಬೈಗೆ ಹೊರಡುವವನಿದ್ದೆ. ಸಂಜೆ 8ಕ್ಕೆ ಫ್ಲೈಟು. ಮಧ್ಯಾಹ್ನ ಒಂದಕ್ಕೇ ಶೃಂಗೇರಿಯ ಮನೆಬಿಟ್ವಿ. ನಾಲ್ಕೂವರೆಗೆಲ್ಲಾ ಏರ್ಪೋರ್ಟಿಗೆ ನನ್ನ ಬಿಟ್ಟು, ಅಪ್ಪ ಅಮ್ಮ ಪೂರ್ತಿ ಕತ್ತಲಾಗುವ ಮೊದಲು ವಾಪಾಸು ಶೃಂಗೇರಿ ತಲುಪಿಕೊಳ್ಳಬಹುದು ಅನ್ನೋ ಲೆಕ್ಕ. ಶೃಂಗೇರಿ ಬಿಟ್ಟು ಸುಮಾರು ಹದಿನೈದು ಕಿಲೋಮೀಟರ್ ಹೋಗಿರಬಹುದು, ಮನೆಯಿಂದ ತಂಗಿ ಕಾಲ್ ಮಾಡಿದ್ಲು. “ಅಣ್ಣಾ ನಿನ್ ಪಾಸ್ಪೋರ್ಟ್ ಇಲ್ಲೇ ಬಿಟ್ ಹೋಗಿದ್ಯಲ್ಲೋ!” ಅಂತಾ. ಟಿಕೇಟಾದ್ರೆ ಫೋನಲ್ಲಿರುತ್ತೆ, ಲಗೇಜ್ ಬಿಟ್ಟು ಹೋದ್ರೆ ಮುಂದಿನ ಸಲ ಬಂದಾಗ ತಗೊಂಡು ಹೋಗಬಹುದು. ಪಾಸ್ಪೋರ್ಟೇ ಬಿಟ್ಟು ಹೋದ್ರೆ!! ಸಧ್ಯ ತನಿಕೋಡು ಹತ್ರದಲ್ಲಿ ಫಾರೆಸ್ಟ್ ಚೆಕ್ಪೋಸ್ಟ್ ಇರೋದ್ರಿಂದ ಅಲ್ಲೊಂದು ನೆಟ್ವರ್ಕ್ ಟವರ್ ಹಾಕಿದ್ದಾರೆ. ನಮ್ ಕಾಲ್ ಕನೆಕ್ಟ್ ಆಯ್ತು. ಇಲ್ಲಾಂದ್ರೆ ಕೆರೆಕಟ್ಟೆಯೋ ಇಲ್ಲಾಂದ್ರೆ ಮಾಳವೋ ತಲುಪಿದ ಮೇಲೆ ತಂಗಿ ನನಗೆ ಕಾಲ್ ಮಾಡಬೇಕಿತ್ತು. ಅಲ್ಲಿಂದಾ ವಾಪಾಸ್ ಬಂದು ನಾನು ಪಾಸ್ಪೋರ್ಟ್ ತಗಂಡು ಮತ್ತೆ ಹೋಗಿ ಫ್ಲೈಟ್ ಹತ್ತಬೇಕಾಗಿತ್ತು. ಅವಸ್ಥೆಯಲ್ಲಾ!! ನಮ್ಮಪ್ಪ ಒಂದ್ಸಲ ನನ್ಕಡೆ ನೋಡಿ “ಅಲ್ಲಾ ಮಾರೇನೇ….ಪಾಸ್ಪೋರ್ಟೇ ಮರೆತು ಹೊರಟಿದ್ಯಲ್ಲ. ಎಂತಾ ಕತೆ ನಿಂದು!? ಮತ್ತೆಂತಾ ದೇಶ-ಜಗತ್ತು ತಿರುಗಿರದು ನೀನು. ಅದಿಲ್ದೆ ಫ್ಲೈಟು ಹತ್ತಕ್ಕಾಗುತ್ತೆನಾ? ಚೆಕ್ ಮಾಡ್ಕಂಡು ಹೊರಡದಲಾ! ಎಲ್ಲೆಲ್ಲಿ ಎಂತೆಂತಾ ಬಿಟ್ಬಂದಿಯಾ ಎಂತದಾ!! ಯಾರಾದ್ರೂ ಈ ಕಥೆ ಕೇಳಿರೆ ಮುಕ್ಳೀಲಿಬಾಯಲ್ಲಿ ನಗಾಡಲ್ಲಾನಾ ಮಾರೇನೇ! ಆಚೆಸಲ ಬಂದಾಗ ಟವಲ್ ಬಿಟ್ ಹೋಗಿದ್ದಿ, ಹೋದ್ಸಲ ಬಂದಾಗ ಬ್ರಷ್ ಬಿಟ್ ಹೋಗಿಯ, ಈ ಸಲ ಪಾಸ್ಪೋರ್ಟ್. ಮುಂದಿನ ಸಲ ಇನ್ನೆಂತದಾ!” ಅಂತಾ ಫುಲ್ ಕೊಯ್ ಅಂದ್ರು. ಅವತ್ತಿಂದಾ ಇವತ್ತಿನವರೆಗೂ ಅಪ್ಪ ನನ್ನ “ಮರೆಯೋ ವಿಚಾರದಲ್ಲಿ” ಕಾಲೆಳೆಯೋದನ್ನ ಮರೆಯಲ್ಲ.
 
ಮರೆಯೋದು ಮನುಷ್ಯನ ಸ್ವಾಭಾವಿಕ ಗುಣಗಳಲ್ಲೊಂದು. “ಅಯ್ಯೋ ಮರೆತೋಗಿ ಬಿಟ್ರೆ!” ಅಂತಾ ನಾವು ಅದನ್ನ ನೆನಪಿಟ್ಟುಕೊಳ್ಳೋಕೆ ಮಾಡುವ ಹರಸಾಹಸಗಳು ಒಂದೆರಡಲ್ಲ. ಫೋನಲ್ಲಿ ಮೂರುಮೂರುತರಹದ ರಿಮೈಂಡರ್ ಆಪ್’ಗಳು, “ನನಗೆ ನೆನಪಿಸೇ” ಅಂತಾ ಹೆಂಡತಿಗೆ ಹೇಳೋದು (ಆಮೇಲೆ ಅವಳು ಮರೆತರೆ, ಅವಳಿಗೆ ಚೂಟಬಹುದಲ್ಲಾ 😉 ಅದಕ್ಕೆ), ಪೇಪರಲ್ಲಿ ಬರೆದಿಟ್ಕೊಳ್ಳೋದು ಹೀಗೇ ನಾನಾ ರೀತಿಯಲ್ಲಿ ಪ್ರಯತ್ನಿಸ್ತೀವಿ. ಆದರೆ ಒಂದ್ಸಲ ಯೋಚಿಸಿ, ಎಲ್ಲಾದ್ರೂ ಒಂದಿನ ಈ ಭೂಮಿಯಲ್ಲೇನಾದ್ರೂ ಹೆಚ್ಚುಕಮ್ಮಿಯಾಗಿ ಇಡೀ ಮನುಷ್ಯಕುಲವೇ 98% ನಾಶವಾಗಿ ಹೋದ್ರೆ!? ಹೆಂಗೆ ಮತ್ತೆ ವಾಪಾಸ್ ಭೂಮಿಯನ್ನ ಸರಿಮಾಡೋದು, ಹೆಂಗೆ ಹೊಸಾರೀತಿಯಲ್ಲಿ ನಾಗರೀಕತೆಯನ್ನು ಸೃಷ್ಟಿಸೋದು? ಅದೆಲ್ಲಾದ್ರೂ ಮರೆತೋಗಿ ಬಿಟ್ರೆ!!
 
ಅದಕ್ಕೇ, ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಜಾರ್ಜಿಯಾ ರಾಜ್ಯದ ಎಲ್ಬರ್ಟ್ ಕೌಂಟಿಯಲ್ಲಿ ಈ ರೀತಿಯೇನಾದ್ರೂ ಮನುಷ್ಯ ಸಂಕುಲವೇ ಅಳಿವಿನಂಚಿಗೆ ತಲುಪಿದ್ರೆ, ಮಾನವೀಯ ಮೌಲ್ಯಗಳನ್ನು ಮರೆಯದೇ, ನಾಗರೀಕತೆಯನ್ನು ಮರುಸೃಷ್ಟಿಸಲು ಸಹಾಯವಾಗುವಂಗೆ ಒಂದು ಹತ್ತು ರೂಲುಗಳನ್ನ ಯಾರೋ ಮಹಾನುಭಾವರು ಬರೆದಿಟ್ಟಿದ್ದಾರಂತೆ. ಅದೂ ಪೇಪರಲ್ಲಿ ಅಳಿಸಿಟ್ಟು ಅದನ್ನೆಲ್ಲಾದ್ರೂ ಯಾರಾದ್ರೂ ಪ್ಯಾಂಟ್ ಜೇಬಲ್ಲಿ ಮರೆತಿಟ್ಟು ವಾಷಿಂಗ್ ಮಷೀನಿಗೆ ಹಾಕಿಬಿಟ್ರೆ! ನಾವೆಷ್ಟು ಸಲ ಹಾಗೆ ಮಾಡಿಲ್ಲ 😉 ಅದಕ್ಕೇ ಹಂಗೆಲ್ಲಾ ಕಳೆದೋಗದಂತೆ ಈ ರೂಲುಗಳನ್ನ ದೊಡ್ಡ ಕಲ್ಲುಗಳಲ್ಲಿ, ಅದೂ ಸುಮಾರು ಇಪ್ಪತ್ತಡಿ ಎತ್ತರದ ನಾಲ್ಕು ಕಲ್ಲುಗಳಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಕೆತ್ತಿ, ಬ್ರಿಟನ್ನಿನ ‘ಸ್ಟೋನ್-ಹೆಂಝ್’ ತರಹಾ ನಿಲ್ಲಿಸಿಬಿಟ್ಟಿದ್ದಾರೆ. ಈ ನಾಲ್ಕೂ ಕಲ್ಲುಗಳ ನಡುವೆ ಒಂದು ನೇರವಾದ ಕಲ್ಲು ನೆಟ್ಟು, ಅದರ ಮೇಲೆ ಇನ್ನೊಂದು ಚಪ್ಪಡಿಯಿಟ್ಟು, ಆ ಚಪ್ಪಡಿ ಎಲ್ಲಾ ಕಲ್ಲುಗಳನ್ನೂ ಮೇಲಿನಿಂದ ಹಿಡಿದು ನಿಲ್ಲಿರುವ ರೀತಿಯಲ್ಲಿ ಈ ಇಡೀ ಸ್ಮಾರಕವನ್ನು ನಿರ್ಮಿಸಲಾಗಿದೆ.
 
ನಡುಗಂಬದ ಮೇಲಿರುವ ಚಪ್ಪಡಿಯ (capstoneನ) ನಾಲ್ಕೂ ಬದಿಯಲ್ಲಿ “Let these be guidestones to an age of reason” (ಈ ಸೂಚಿಗಳು, ಮುಂದಿನ ತರ್ಕಬದ್ಧ ಯುಗಕ್ಕೆ ಮಾರ್ಗದರ್ಶಿಯಾಗಿರಲಿ) ಅಂತಾ ಈಜಿಪ್ಷಿಯನ್ ಹೈರೋಗ್ಲಿಫಿಕ್ಸ್ (ಚಿತ್ರಲಿಪಿ), ಶಾಸ್ತ್ರೀಯ(classical) ಗ್ರೀಕ್, ಸಂಸ್ಕೃತ ಹಾಗೂ ಬ್ಯಾಬಿಲೋನಿಯನ್ ಕ್ಯೂನಿಫಾರ್ಮ್ ಭಾಷೆಗಳಲ್ಲಿ ಬರೆಯಲಾಗಿದೆ. ಚಿತ್ರ – ೧ ಇಡೀ ಸ್ಮಾರಕದ ರಚನೆಯನ್ನು ಚೆನ್ನಾಗಿ ವಿವರಿಸುತ್ತದೆ.
ff_guidestones3_f
 
ಮಾನವೀಯತೆ ಮತ್ತು ಮನುಕುಲದ ಭವಿಷ್ಯದ ಬಗ್ಗೆ ಮಾತನಾಡುವ ಈ ಕಲ್ಲಿನ ಸ್ಮಾರಕವನ್ನು “ಜಾರ್ಜಿಯಾದ ಮಾರ್ಗಸೂಚಿಗಳು” (Georgia Guidelines) ಎಂದೇ ಕರೆಯಲಾಗುತ್ತದೆ. ಈ 10 ಮಾರ್ಗಸೂಚಿಗಳು, ಮುಂದೆಂದಾದರೂ ನಮಗೆ ಇಡೀ ಮನುಕುಲವನ್ನು ಮತ್ತೀ ಪ್ರಪಂಚವನ್ನು ಮೊದಲಿನಿಂದಾ ಕಟ್ಟಲು ಅವಕಾಶ ಸಿಕ್ಕರೆ ಹೇಗೆ ಕಟ್ಟಬಹುದು ಮತ್ತು ಹೇಗೆ ಕಟ್ಟಬೇಕು ಅನ್ನುವುದರ ಬಗ್ಗೆ ವಿವರಿಸುತ್ತವೆ.
 
ಈ ನಾಲ್ಕೂಕಲ್ಲುಗಳ ಎರಡೂ ಬದಿಯಲ್ಲಿ, ಅಂದರೆ ಒಟ್ಟು ಎಂಟುಕಡೆಗಳಲ್ಲಿ, ಇಂದಿನ ಆಧುನಿಕ ಜಗತ್ತಿನ ಎಂಟು ಬೇರೆ ಬೇರೆ ಪ್ರಸಿದ್ಧ ಭಾಷೆಗಳಲ್ಲಿ ಈ ಹತ್ತೂ ನಿಯಮಾವಳಿಗಳನ್ನು ಕೆತ್ತಲಾಗಿದೆ. ಆ ಎಂಟು ಭಾಷೆಗಳು ಇಂಗ್ಳೀಷ್, ಸ್ಪಾನಿಷ್, ಸ್ವಾಹಿಲಿ, ಹಿಂದಿ, ಹೀಬ್ರೂ, ಅರಾಬಿಕ್, ಸಾಂಪ್ರದಾಯಿಕ ಚೈನೀಸ್ ಮತ್ತು ರಷ್ಯನ್. “ಏನೀ ಹತ್ತು ಮಾರ್ಗಸೂಚಿಗಳು ಮತ್ತು ಅವೇನನ್ನು ಹೇಳುತ್ತವೆ?” ಎಂಬ ಕುತುಹಲ ನಿಮಗಿದ್ದರೆ ಮುಂದೆ ಓದಿ:
 
ಸೂಚಿ 1) ಇಡೀ ಭೂಮಿಯ ಜನಸಂಖ್ಯೆ 5 ಬಿಲಿಯನ್ ದಾಟದಂತೆ ನೋಡಿಕೊಳ್ಳುತ್ತಾ, ಪ್ರಕೃತಿಯೊಂದಿಗೆ ಸಮತೋಲನ ಕಾಯ್ದುಕೊಳ್ಳಿ
ಸೂಚಿ 2) ಸಂತಾನೋತ್ಪತ್ತಿಯನ್ನು ವಿವೇಕದಿಂದ ಮುಂದುವರೆಸಿ – ವೈವಿಧ್ಯತೆ ಮತ್ತು ಆರೋಗ್ಯಕರ ಜನಾಂಗದ ಸೃಷ್ಟಿಯೆಡೆಗೆ ನಿಮ್ಮ ಗಮನವಿರಲಿ
ಸೂಚಿ 3) ಇಡೀ ಮಾನವಕುಲವನ್ನು ಒಂದೇ ಭಾಷೆಯಿಂದ ಒಗ್ಗೂಡಿಸಿ
ಸೂಚಿ 4) ಮಾನವ ಸಹಜ ಉತ್ಸಾಹ – ನಂಬಿಕೆ – ಸಂಪ್ರದಾಯಗಳೊಂದಿಗೆ ಕೂಡಿದ ತರ್ಕಸಹಿತ ಕಾರಣಗಳೊಂದಿಗೆ ನಿಮ್ಮ ಆಡಳಿತ ಮುಂದುವರೆಯಲಿ
ಸೂಚಿ 5) ದೇಶ ಮತ್ತು ನಾಗರೀಕರನ್ನು ನ್ಯಾಯೋಚಿತ ಕಾನೂನುಗಳು ಮತ್ತು ನಿಷ್ಪಕ್ಷಪಾತವಾದ ನ್ಯಾಯಾಲಯಗಳ ಮೂಲಕ ರಕ್ಷಿಸಿ
ಸೂಚಿ 6) ಆಯಾ ದೇಶಗಳ ಆಡಳಿತ ಸಂಪೂರ್ಣವಾಗಿ ಅವುಗಳ ಆಂತರಿಕ ವಿಷಯವಾಗಿರಲಿ, ಬಾಹ್ಯ (ಅಂತರಾಷ್ಟ್ರೀಯ) ವಿವಾದಗಳನ್ನು ಅಂತರಾಷ್ಟ್ರೀಯ ನಾಯಾಲಯದಲ್ಲಿ ಬಗೆಹರಿಸಿಕೊಳ್ಳಲಿ
ಸೂಚಿ 7) ಸಣ್ಣ-ಪುಟ್ಟ ವಿಷಯಗಳಿಗೂ ಚಿಲ್ಲರೆ ಕಾನೂನುಗಳನ್ನು ರೂಪಿಸುವುದನ್ನು ಬಿಡಿ. ಆಡಳಿತದಲ್ಲಿ ಅನುಪಯುಕ್ತ ಅಧಿಕಾರಿಗಳು ಅಥವಾ ಸ್ಥಾನಮಾನಗಳನ್ನು ಸೃಷ್ಟಿಸದಿರಿ
ಸೂಚಿ 8) ಎಲ್ಲಾ ನಾಗರೀಕರಿಗೂ ವೈಯಕ್ತಿಕ ಹಕ್ಕುಗಳನ್ನು ಮಾತ್ರವಲ್ಲ ಕೆಲ ಸಾಮಾಜಿಕ ಕರ್ತವ್ಯಗಳನ್ನೂ ರೂಪಿಸಿ. ಈ ಹಕ್ಕು-ಕರ್ತವ್ಯಗಳು ಸಮತೋಲನದಲ್ಲಿರಲಿ.
ಸೂಚಿ 9) ಸತ್ಯ – ಸೌಂದರ್ಯ – ಪ್ರೀತಿ – ಹಾಗೂ ಅನಂತದೊಂದಿಗೆ ಸಾಮರಸ್ಯವನ್ನು ಬಯಸುವ ಮನೋಭಾವಗಳನ್ನು ಪ್ರೋತ್ಸಾಹಗೊಳಿಸಿ
ಸೂಚಿ 10) ಈ ಭೂಮಿಯ ಮೇಲೆ ಕ್ಯಾನ್ಸರ್ ಆಗಬೇಡಿ. ಪ್ರಕೃತಿಗೆ ಜಾಗವನ್ನು ಬಿಡಿ (ಇನ್ನೊಮ್ಮೆ ಕೇಳಿಸಿಕೊಳ್ಳಿ) ಪ್ರಕೃತಿಗೆ ಜಾಗವನ್ನು ಬಿಡಿ
 
ಚಂದ ಉಂಟಲ್ಲಾ ನಿಯಮಾವಳಿಗಳು? ನಮ್ಮ ಇಂದಿನ ಜಗತ್ತಿನ ಸ್ವಲ್ಪಮಂಕಾದ ಪರಿಸ್ಥಿತಿ, ಮತ್ತದಕ್ಕೆ ಕಾರಣವಾಗಿರಬಹುದಾದ ಐತಿಹಾಸಿಕ ಅಂಶಗಳನ್ನು ಅವಲೋಕಿಸಿದಾಗ ಹೊಸಾ ಭೂಮಿ ಹೀಗೇ ಇದ್ದರೆ ಚಂದ ಅನಿಸುತ್ತದೆ ಅಲ್ಲವೇ.
 
ಅಂದಹಾಗೆ ಇದ್ದು ಬರೀ ಹತ್ತು ಸೂಚನೆಗಳನ್ನು ಬರೆದ ಸ್ಮಾರಕವಷ್ಟೇ ಅಲ್ಲ. ಇಡೀ ಸ್ಮಾರಕ ಒಂದು ಗಡಿಯಾರ, ಕ್ಯಾಲೆಂಡರ್ ಮತ್ತು ದಿಕ್ಸೂಚಿಯಾಗಿಯೂ ಕೆಲಸ ಮಾಡುತ್ತದೆ! ಹೇಗೆ ಅಂತಿರಾ?
 
(*) ಕ್ಯಾಲೆಂಡರ್ – ಇದನ್ನು ಎಲ್ಬರ್ಟ್ ಕೌಂಟಿಯ ಅತ್ಯಂತಎತ್ತರದ ಜಾಗದಲ್ಲಿ ಕಟ್ಟಿದ್ದಾರೆ. ಇಲ್ಲಿಂದ ಸೂರ್ಯನ ಪಶ್ಚಿಮ- ಪೂರ್ವ-ಪಶ್ಚಿಮ ವಾರ್ಷಿಕಚಲನವನ್ನು ಗಮನಿಸಬಹುದಾಗಿದೆ (ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿರೋ ಕೊಸರಿನಲ್ಲಿ). ಈ ಜಾರ್ಜಿಯಾದ ಮಾರ್ಗಸೂಚಿ ಸ್ಮಾರಕದ ಮಧ್ಯಕಂಬದಲ್ಲಿ ಸುಮಾರಿ ಐದಡಿ ಎತ್ತರದಲ್ಲಿ ಆಯತಾಕಾರದಲ್ಲಿ ಕೊರೆದಿರುವ ಜಾಗದ ಮೂಲಕ ನೀವು ಸೂರ್ಯ ಹುಟ್ಟುವ ಜಾಗವನ್ನು ನೋಡಿ ನೀವು ವರ್ಷದ ದಿನಗಳನ್ನು ಅಂದಾಜು ಹಾಕಬಹುದು. ಆಯತ ಸಂಕ್ರಾಂತಿ ಮತ್ತು ವಿಷುವತ್ ಸಂಕ್ರಾಂತಿಯ ದಿನಗಳಂದು ಈ ಕೊರೆತದ ನಟ್ಟ ನಡುಮಧ್ಯದಲ್ಲಿ ಸೂರ್ಯೋದಯವಾಗುತ್ತದೆ. ಇದನ್ನು ಚಿತ್ರ – ೨ ಮತ್ತು ಚಿತ್ರ – ೧ರಲ್ಲಿ 2 ಎಂಬ ಅಂಕಿಯಿರುವಲ್ಲಿ ತೋರಿಸಲಾಗಿದೆ.
Depositphotos_25902953_xl-2015-1600x1631
 
(*) ದಿಕ್ಸೂಚಿ – ಇದೇ ನಡುಗಂಬದಲ್ಲಿ ಸ್ವಲ್ಪ ಎತ್ತರದಲ್ಲಿ ಇನ್ನೊಂದು ರಂಧ್ರವನ್ನು ಕೊರೆದಿದ್ದಾರೆ. ಆ ರಂಧ್ರದ ಕೋನ ಹೇಗಿದೆಯೆಂದರೆ, ಅದರಮೂಲಕ ನೋಡಿದಾಗ ಧ್ರುವನಕ್ಷತ್ರ ನಿಮ್ಮ ಕಣ್ಣೆದುರಿಗೇ ಇರುತ್ತದೆ. ಇದರಿಂದ ನೀವು ದಿಕ್ಕುಗಳನ್ನು ಸರಿಯಾಗಿ ಗುರುತಿಸಿಕೊಳ್ಳಬಹುದು (ಚಿತ್ರ – ೧ರಲ್ಲಿ 3 ಎಂಬ ಅಂಕಿಯಿರುವಲ್ಲಿ).
 
(*) ಗಡಿಯಾರ – ಈ ನಡುಗಂಬದ ಮೇಲಿರುವ capstoneನಲ್ಲಿ(ಅಂದರೆ ನಾಲ್ಕೂ ಕಲ್ಲುಗಳನ್ನು ಹಿಡಿದಿಟ್ಟಿರುವ ಚಪ್ಪಡಿಯಲ್ಲಿ) ಕೊರೆದಿರುವ ಇನ್ನೊಂದು ರಂಧ್ರದ ಮೂಲಕ ಮಧ್ಯಾಹ್ನದ ಸೂರ್ಯ ಅಂದರೆ ನಡುಮಧ್ಯಾಹ್ನದ ಹನ್ನೆರಡು ಘಂಟೆಯ ಸೂರ್ಯ ಬೆಳಸಿನ ಸರಳೊಂದನ್ನು ತೋರಿಸಿ, ನಿಮಗೆ “ಸಮಯ ಈಗ ಹನ್ನೆರಡು ಘಂಟೆ” ಅಂತಾ ಹೇಳಿ ಮುಂದುವರೆಯುತ್ತಾನೆ (ಚಿತ್ರ – ೧ರಲ್ಲಿ 4 ಎಂಬ ಅಂಕಿಯಿರುವಲ್ಲಿ).
 
ಈ ಸ್ಮಾರಕದಿಂದ ಸ್ವಲ್ಪದೂರದಲ್ಲಿ ಇನ್ನೊಂದು ಕಲ್ಲನ್ನು ನೆಲಕ್ಕೆ ಹಾಸಿ, ಅದರಲ್ಲಿ ಈ ಸ್ಮಾರಕದ ರೂಪುರೇಷೆಗಳನ್ನೂ, ಅದು ಹೇಗೆ ಕೆಲಸ ಮಾಡುತ್ತದೆ ವಿವರಿಸಲಾಗಿದೆ. ಜೊತೆಗೇ “ಈ ಕಲ್ಲಿನ ಅಡಿಯಲ್ಲಿ ಆರಡಿ ಆಳದಲ್ಲಿ ಒಂದು ಟೈಂ ಕ್ಯಾಪ್ಸೂಲನ್ನು ______ ದಿನಾಂಕದಂದು ನೆಡಲಾಗಿದೆ. ಅದನ್ನು _______ ದಿನದಂದು ತೆರೆಯಬೇಕು” ಅಂತಲೂ ಬರೆಯಲಾಗಿದೆ. ಆದರೆ ದಿನಾಂಕಗಳಿರಬೇಕಾದ ಜಾಗಗಳೆರಡೂ ಖಾಲಿಯಿರುವುದರಿಂದ, ಇನ್ನೂ ಯಾವುದೇ ಟೈಂ ಕ್ಯಾಪ್ಸೂಲನ್ನು ಇಡಲಾಗಿಲ್ಲ ಎಂದು ತಿಳಿಯಲಾಗಿದೆ. ಒಂತರಾ ವಿಚಿತ್ರವಾಗಿದೆಯಲ್ಲಾ!?
 
ಭೂಕಂಪ, ಅಣುಬಾಂಬ್ ಸ್ಪೋಟದಂತಹಾ ಮಹಾಮಾರಿಗಳನ್ನೂ ತಡೆಯುವಷ್ಟು ಬಲಿಷ್ಟವಾದ ಈ ಸ್ಮಾರಕನ್ನು ಯಾರು ಕಟ್ಟಿಸಿದ್ದು, ಯಾವ ಕಾರಣಕ್ಕೆ ಕಟ್ಟಿಸಿದ್ದು ಎಂಬ ವಿಷಯವಿನ್ನೂ ಸಾರ್ವಜನಿಕವಾಗಿಲ್ಲ. ಖಾಸಗೀ ಸ್ವತ್ತಿನ ಜಾಗದಲ್ಲಿ ಕಟ್ಟಿರುವ ಇದನ್ನು ಸಧ್ಯಕ್ಕೆ ಎಲ್ಬರ್ಟ್ ಕೌಂಟಿಯ ಮುನಿಸಿಪಾಲಿಟಿ ನೋಡಿಕೊಳ್ಳುತ್ತಿದೆ. ಇದನ್ನು ನೋಡಲು ಯಾವುದೇ ಶುಲ್ಕವಿಲ್ಲ. ಆದರೆ ಇದನ್ನು ತಲುಪುದೇ ದೊಡ್ಡತಲೆಬ್ಯಾನೆ. ದುರ್ಗಮ ದಾರಿ ಅಂತಲ್ಲ, ಇಲ್ಲಿಗೆ ತಲುಪುವ ರಸ್ತೆಗಳೆಲ್ಲಾ ಚೆನ್ನಾಗಿಯೇ ಇವೆ. ಆದರೆ ಇದಕ್ಕೆ ಅತೀ ಹತ್ತಿರವಿರುವ ಮುಖ್ಯ ಹೆದ್ದಾರಿಯೇ 25ಮೈಲಿ ದೂರದಲ್ಲಿದೆ. ಜಾರ್ಜಿಯಾದ ರಾಜಧಾನಿ ಅಟ್ಲಾಂಟಕ್ಕೂ ಇಲ್ಲಿಗೂ 125ಮೈಲಿ ದೂರ! ಯಾರ ಕಣ್ಣಿಗೂ ದೊಡ್ಡದಾಗಿ ಕಾಣದ, ಯಾವ ಗಿನ್ನಿಸ್ ರೆಕಾರ್ಡಿನ ಹಂಗೀಗೂ ಬೀಳದ, “ಹಳ್ಳಿಗಳಲ್ಲೂ ಹಳ್ಳಿ”ಯಂತಹಾ ಜಾಗದಲ್ಲಿ ಕಟ್ಟಿರುವ ಈ ಸ್ಮಾರಕದ ಪ್ರಾರಂಭವೂ ಒಂದು ಕುತೂಹಲಕಾರೀ ಕಥೆ. ಬರೀ ಇತಿಹಾಸವಲ್ಲದೇ, ಇದರ ವರ್ತಮಾನವೂ ಸಹ ಸ್ವಲ್ಪ ಕಾಂಟ್ರವರ್ಸಿಯೇ. ಇಷ್ಟೊಳ್ಳೇ ಸಂದೇಶವಿರುವ ಈ ಸ್ಮಾರಕದ ವಿಚಾರದಲ್ಲೂ ಕಾಂಟ್ರವರ್ಸಿಯೇ? ಎಂತಾ ಅದು ಅಂತೆಲ್ಲಾ ಅದನ್ನೂ ಇಲ್ಲೇ ಬರೆದರೆ, ನೀವು ಓದಿ ಹೈರಾಣಾಗುವ ಸಾಧ್ಯತೆಯಿರುವುದರಿಂದ, ಅವನ್ನು ಬೇರೆಯದೇ ಲೇಖನದಲ್ಲಿ ಬರೆದು ಪ್ರಕಟಿಸುತ್ತೇನೆ.
 
 
ಕೊಸರು: ಸೂರ್ಯ ವರ್ಷವಿಡೀ ಒಂದೇ ಜಾಗದಲ್ಲಿ ಹುಟ್ಟುವುದಿಲ್ಲ. ಮಕರಸಂಕ್ರಮಣದ ನಂತರ ದಿನದಿಂದ ದಿನಕ್ಕೆ ಸೂರ್ಯಹುಟ್ಟುವ ಜಾಗ ಸ್ವಲ್ಪಸ್ವಲ್ಪವೇ ಎಡಕ್ಕೆ (ಅಂದರೆ ಈಶಾನ್ಯದೆಡೆಗೆ) ಜರುಗುತ್ತದೆ. ನಿಧಾನಕ್ಕೆ ಈ ಚಲನೆ ತನ್ನ ಉತ್ತುಂಗಕ್ಕೆ ತಲುಪಿ, ಮತ್ತೆ ನಂತರ ಕರ್ಕಾಟಕ ಸಂಕ್ರಮಣದ ದಿನ ಈ ಚಲನೆ ಪೂರ್ವದಿಂದ ಬಲಕ್ಕೆ (ಆಗ್ನೇಯಕ್ಕೆ) ಜರುಗಲಾರಂಭಿಸುತ್ತದೆ. ಇದು ಮಾತ್ರವಲ್ಲದೇ, ವರ್ಷವಿಡೀ ಸೂರ್ಯನ ಚಲನೆ ಒಂದೇ ಸಮನಾಗಿರುವುದಿಲ್ಲ. ಅಂದರೆ ಹೇಗೆ ಸೂರ್ಯ ದಿನವೂ ಒಂದೇ ಸಮಯಕ್ಕೆ ಹುಟ್ಟುವುದಿಲ್ಲವೋ, ಹಾಗೆಯೇ ದಿನದ ಒಂದು ನಿಯಮಿತ ಸಮಯದಲ್ಲಿ ಸೂರ್ಯ ವರ್ಷವಿಡೀ ಒಂದೇ ಜಾಗದಲ್ಲಿ ಇರುವುದಿಲ್ಲ. ನೀವು ಒಂದು ಕ್ಯಾಮರಾವನ್ನು ಒಂದೇ ಜಾಗದಲ್ಲಿ ನಿಲ್ಲಿಸಿಟ್ಟು, ದಿನದ ಒಂದು ನಿರ್ದಿಷ್ಟ ಸಮಯದಲ್ಲಿ (ಉದಾ: ಪ್ರತಿದಿನವೂ 10:30ಕ್ಕೆ) ದಿಗಂತವೂ ಫ್ರೇಮಿನಲ್ಲಿರುವಂತೆ ಸೂರ್ಯನದೊಂದು ಫೋಟೋ ತೆಗೆದು, 365 ಫೋಟೋಗಳ ಓವರ್-ಲ್ಯಾಪ್ ಮಾಡಿದರೆ, ಸೂರ್ಯ ಆಕಾಶದಲ್ಲಿ, ಚಿತ್ರ – ೩ರಲ್ಲಿದ್ದಂತೆ ಅಂಕೆ 8ರ ಆಕಾರದಲ್ಲಿ ಗೋಚರವಾಗುವುದನ್ನು ಕಾಣಬಹುದು. ಈ ವಿದ್ಯಮಾನಕ್ಕೆ “ಅನಲೆಮ್ಮಾ” (Analemma) ಎನ್ನುತ್ತಾರೆ. ಈ ‘ಅನಲೆಮ್ಮಾ’ ಭೂಮಿ ಗುಂಡಗಿರುವುದಕ್ಕೂ, ತನ್ನ ಅಕ್ಷದ ಮೇಲೆ 23.43 ಡಿಗ್ರೀ ವಾಲಿರುವುದಕ್ಕೂ ಪರೋಕ್ಷ ಸಾಕ್ಷಿ.
Analemma_Web

“ಅತಿಥಿ ದೇವೋಭವ ಅನ್ನುವ ನಾವು ಒಳ್ಳೆಯ ಅತಿಥಿಗಳಾಗೋಕೆ ಯಾಕೆ ಕಲಿತಿಲ್ಲ!?”

ಮೊನ್ನೆ ಬಾಲಿಯ ಹೋಟೆಲೊಂದರಲ್ಲಿ ತಂಗಿದ್ದ ಕುಟುಂಬವೊಂದು ಅಲ್ಲಿ ಸಿಕ್ಕಿದ್ದನ್ನೆಲ್ಲಾ ಬಾಚಿದ್ದಕ್ಕೆ, ಹೋಟೆಲಿನವರು ಹಿಡಿದು ಅವರ ಮರ್ಯಾದೆ ಮೂರುಕಾಸಿಗೆ ಹರಾಜಿಹಾಕಿದ್ದಕ್ಕೆ ಬೇಸರ ಮಾಡಿಕೊಂಡವರು ಬಹಳ ಜನರಿದ್ದಾರೆ. “ಮಾಡಿದ್ದು ತಪ್ಪಾಯ್ತು. ಅದಕ್ಕೆ ತಕ್ಕ ಮಾಡಿದ್ದಕ್ಕೆ ಹಣ ಕೊಡ್ತೀವಿ” ಅಂತಾ ಅವರು ಹೇಳಿದಮೇಲೂ ಅಷ್ಟೆಲ್ಲ ಹ್ಯುಮಿಲಿಯೇಟ್ ಮಾಡುವ ಅಗತ್ಯವೇನಿತ್ತು!” ಅಂತಾ ಕೇಳಿದವರನ್ನು ನೋಡಿದ್ದೇವೆ. ನನ್ನ ಅನಿಸಿಕೆಯ ಪ್ರಕಾರ ಇದರಲ್ಲಿ ಬೇಸರ ಮಾಡಿಕೊಳ್ಳುವ ಮಾತೇ ಇಲ್ಲ. ಹೋಟೆಲಿನವ ಮಾಡಿದ್ದು ನೂರಕ್ಕೆ ನೂರು ಸರಿ. ಆ ವಿಡಿಯೋದಲ್ಲಿ, ಹೋಟೆಲಿನವ ಆ ಮಟ್ಟಕ್ಕೆ ಇಳಿದು ಅವರನ್ನು ನಡುರಸ್ತೆಯಲ್ಲಿ ಮರ್ಯಾದೆ ತೆಗೆದದ್ದಕ್ಕೆ ಆ ಕುಟುಂಬ ಕದ್ದದ್ದು ಮಾತ್ರವಲ್ಲ, ಅವರ ಒರಟು ವರ್ತನೆ ಇನ್ನೂ ಮುಖ್ಯ ಕಾರಣ. ಅದರಲ್ಲಿ ನೋಡಬಹುದು, ಹೋಟೆಲಿನವ ಮತ್ತೆ ಮತ್ತೆ ಹೇಳುತ್ತಾನೆ “ಈಗ ಎಲ್ಲಿದೆ ನಿಮ್ಮ ಒರಟು ಧ್ವನಿಯ ಮಾತುಗಳು? ಆಡಿ ತೋರಿಸಿ ನೋಡುವಾ!” ಅಂತಾ. ಕಳ್ಳತನ ಮಾಡಿ, ಆಮೇಲೆ ಅದನ್ನು ಪ್ರಶ್ನಿಸಿದವರೆಡೆಗೆ ಧ್ವನಿಯೇರಿಸಿ ಮಾತನಾಡಿದರೆ ಯಾರಿಗಾದರೂ ಸಿಟ್ಟುಬರೋದು ಸಹಜವೇ.

RPG Enterprisesನ ಮಾಲೀಕ ಹರ್ಷ್ ಗೊಯೆಂಕಾ ಕೂಡಾ ಮೊನ್ನೆ ಒಂದು ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಸ್ವಿಟ್ಝರ್ಲ್ಯಾಂಡಿನ ಹೋಟೆಲೊಂದರಲ್ಲಿ ಅವರು ಚೆಕ್-ಇನ್ ಆದಾಗ “ಯೂ ಆರ್ ಫ್ರಂ ಇಂಡಿಯಾ? ಇಲ್ಲೊಂದಷ್ಟೂ ನಿಯಮಾವಳಿಗಳಿವೆ ಓದಿ” ಅಂತಾ ಪೇಜು ಕೊಟ್ಟರಂತೆ. ಅದೇನೂ ಎಲ್ಲಾ ಪ್ರವಾಸಿಗಲಿಗೆ ಇದ್ದ ನಿಯಮಗಳಲ್ಲ. ಭಾರತೀಯರಿಗೆ ಮಾತ್ರವೇ ಇದ್ದದ್ದು!!! (ಚಿತ್ರ ಕೆಳಗಿದೆ ನೋಡಿ). ಆ ನಿಯಮಾವಳಿಗಳ ಪ್ರಕಾರ ಭಾರತೀಯರು ಸಾಮಾನ್ಯವಾಗಿ ಕಾರಿಡಾರಿನಲ್ಲಿ ದೊಡ್ಡದಾಗಿ ಮಾತನಾಡುವವರು, ರೆಸ್ಟುರಾದಲ್ಲಿ ಬಫೆ ಬ್ರೇಕ್ಫಾಸ್ಟಿನಲ್ಲಿ ತಿಂಡಿಯನ್ನು ತಮ್ಮ ತಟ್ಟೆಗೆ ಹಾಕಿಕೊಳ್ಳುವಾಗ ಚಮಚ/ಸ್ಪಾಚುಲಾ ಬಳಸದೇ ತಮ್ಮ ಕೈಯನ್ನು ಬಳಸಿ ಹಾಕಿಕೊಳ್ಳುವವರು, ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನದ ಊಟಕ್ಕಿರಲಿ ಅಂತಾ ಡಬ್ಬಕ್ಕೆ ತುರುಕಿಕೊಳ್ಳುವವರು, ಚಮಚ ಕದಿಯುವವರು ಅಂತೆಲ್ಲಾ ಭಾವಿಸಿದಂತಿತ್ತು. ಮಿ.ಗೊಯಂಕಾ ಅದರಬಗ್ಗೆ ಪ್ರಶ್ನಿಸಿದಾಗ, “ನೀವು ಅಂತವರು ಅಂತಾ ನಾವು ಹೇಳ್ತಾ ಇಲ್ಲ. ನಮ್ಮಲ್ಲಿ ತಂಗಿದ ಹೆಚ್ಚಿನ ಭಾರತೀಯರ ಪ್ರವಾಸಿಗಳ ಜೊತೆಗಿನ ನಮ್ಮ ಅನುಭವ ಹಾಗಿದೆ. ಆದ್ದರಿಂದ ಮ್ಯಾನೇಜ್ಮೆಂಟ್ ಈ ಪಟ್ಟಿಯನ್ನು ಚೆಕ್-ಇನ್ ಮಾಡುವ ಎಲ್ಲಾ ಭಾರತೀಯರಿಗೂ ಕೊಡು ಅಂದಿದೆ” ಅಂತಾ ರಿಸೆಪ್ಷನಿಸ್ಟು ಅಂದನಂತೆ.

ಇವತ್ತು ಗೆಳೆಯ Rangaswamy Mookanahalli ಕೂಡಾ ಅಂತಹದ್ದೊಂದು ಅನುಭವ ಹಂಚಿಕೊಂಡರು. ನಾನು ಸ್ವತಃ ಭಾರತೀಯನಾಗಿ ಇಂತಹ ವರ್ತನೆಗಳನ್ನು ನೋಡಿದ್ದೇನೆ. ನಾನು ಗ್ರೀಸ್ ಪ್ರವಾಸದಲ್ಲಿದ್ದಾಗ ಅಥೆನ್ಸಿನಿಂದಾ ಸ್ಯಾಂಟೋರಿನಿಗೆ ಹೋಗುವ ಹಡಗಲ್ಲಿ ಭಾರತೀಯರ ಗುಂಪೊಂದು ಇಡೀ ಲೌಂಜ್ ಅನ್ನು ಗಬ್ಬೆಬ್ಬಿಸಿಟ್ಟಿತ್ತು. ತಮ್ಮ ಕುಟುಂಬಕ್ಕೇ ಇಡೀ ಜಾಗ ಬೇಕು ಅನ್ನೋ ಹಪಾಹಪಿಯಲ್ಲಿ, ಉಳಿದವರಿಗೆ ಕೂರಲುಬಿಡದಂತೆ ಸೀಟುಗಳ ಮೇಲೆಲ್ಲಾ ತಮ್ಮ ಲಗೇಜ್ ಇಟ್ಟು, ಕೂರಲು ಬಂದವರಿಗೆ “ಇಲ್ಲಿ ನಮ್ಮವರಿದ್ದಾರೆ” ಅಂತಾ ಹೇಳಿ ಹೇಳಿ ಓಡಿಸುತ್ತಿತ್ತು. ಓಡಿಸಿಯಾದ ಮೇಲೆ “ಭಗಾ ದಿಯಾ ಮೈನೇ ಚೂತ್ಯೇ ಕೋ” ಅನ್ನೋ ನಗು ಬೇರೆ. ಕೊನೆಗೆ ಬ್ರಿಟೀಷನೊಬ್ಬ ಹಡಗಿನ ಸಿಬ್ಬಂದಿಗೆ ಹೇಳಿ ಖಾಲಿ ಮಾಡಿಸಿ “I know you were lying, you Indian” ಅಂತಾ ಬುಸುಗುಟ್ಟಿದ. ಇನ್ನೊಮ್ಮೆ ಇಲ್ಲಿಂದಾ (ದುಬೈಯಿಂದಾ) ಬೆಂಗಳೂರಿಗೆ ಹೋಗುವ ಫ್ಲೈಟಿನಲ್ಲಿ ಒಂದಷ್ಟು ಜನ ಕನ್ನಡದವರೇ ಹುಡುಗರಲ್ಲಿ “ಏಯ್ ಬಾತ್ರೂಮಲ್ಲಿ ಕ್ರೀಮು ಪರ್ಫ್ಯೂಮಿದೆ ಕಣ್ರೋ. ಸರಿಯಾಗಿ ಹಾಕ್ಕೊಂಡು ಬಂದೆ. ನೀವೂ ಹೋಗ್ರೋ” ಅನ್ನುವವ ಒಬ್ಬ. ಇನ್ನೊಬ್ಬ “ನಾನು ಹಾಕ್ಕೊಂಡು ಬರ್ಲಿಲ್ಲ, ಬಾಟ್ಲಿಯನ್ನೇ ತಗಂಡು ಬಂದೆ” ಅಂದ!! ಅಥೆನ್ಸಿನ ಹಡಗಲ್ಲಾದ್ರೆ ಇಲ್ಲಿನ ಭಾಷೆ ಬರದವರು ಇದ್ರು ಅನ್ನಿ. ಇದು ಬೆಂಗಳೂರಿಗೇ ಹೋಗೋ ಫೈಟು. ಸ್ವಾಭಾವಿಕವಾಗಿಯೇ ಸಹಪ್ರಯಾಣಿಕರು ಕನ್ನಡದವರು ಇರ್ತಾರೆ ಅನ್ನೋ ಕನಿಷ್ಟ ಪರಿಜ್ಞಾನವೂ ಇಲ್ಲದೇ ಕನ್ನಡದಲ್ಲೇ ಕೂಗಾಡುತ್ತಿದ್ದವರು!! ಉಳಿದವರು ಹುಬ್ಬೇರಿಸಿ ಮುಖ ಮುಖ ನೋಡಿಕೊಂಡು ಅಸಹನೆಯಲ್ಲಿ ತಲೆಕೊಡವಿಕೊಂಡರು.

ಇದು ಬಾಲಿ, ಸ್ವಿಟ್ಝರ್ಲ್ಯಾಂಡ್, ಪ್ಯಾರಿಸ್ ಮಾತ್ರವಲ್ಲ. ಜಗತ್ತಿನೆಲ್ಲೆಡೆ ಭಾರತೀಯರೆಡೆಗೆ ಈ ತಾತ್ಸಾರ ಭಾವನೆಯಿದೆ. ಎಲ್ಲರೂ ಭಾರತೀಯರು ಹಾಗಲ್ಲ ಅನ್ನೋ ಮಾತು ಖಂಡಿತಾ ಒಪ್ಪುವಂತದ್ದು. ಹೋಟೆಲ್ಲೊಂದರಲ್ಲಿ ಒಬ್ಬ ಭಾರತೀಯನ ಕೆಟ್ಟವರ್ತನೆಯನ್ನು ಹೋಟಿಲ್ಲಿನ ಸಿಬ್ಬಂದಿಯ ಮನಸ್ಸಿನಿಂದ ತೆಗೆಯಲು ಮುಂದಿನ ಹತ್ತು ಭಾರತೀಯರು ಇರುವುದಕ್ಕಿಂತಾ ಒಳ್ಳೆಯವರಾಗಿ ವರ್ತಿಸಬೇಕಾಗುತ್ತದೆ. ಆದರೆ ಹತ್ತು ಭಾರತೀಯರು ಹೋಟೆಲೊಂದರಲ್ಲಿ ಒಳ್ಳೆಯರೀತಿಯಲ್ಲಿ ನೆನಪಿಟ್ಟುಕೊಳ್ಳುವಂತಾ ವರ್ತನೆ ತೋರಿಸುವ ಪ್ರಾಬಬಲಿಟಿ ತೀರಾ ಕಮ್ಮಿ. ಈ ಕಾರಣಕ್ಕೇ ಭಾರತೀಯರೆಂದರೆ ಹೊರದೇಶದ ವರ್ತಕರಿಗೆ ಅದೊಂದು “ಮರೆಯಲಾಗದ ಅನುಭೂತಿ”.

ಇದು ಬರೀ ಯೂರೋಪು ಅಥ್ವಾ ಅಮೇರಿಕಾದಲ್ಲಿ ಮಾತ್ರವಲ್ಲ. ಕತ್ತೆತ್ತಿದರೆ 70% ಭಾರತೀಯರೇ ಕಾಣಸಿಗುವ ದುಬೈಯಲ್ಲೂ ಇದೇ ಕಥೆ. ಸ್ವಲ್ಪ ಸಮಾಧಾನದ ವಿಷಯವೆಂದರೆ ಇಲ್ಲಿ ಭಾರತೀಯರಿಗೆಂದೇ ಟೂರು ಏರ್ಪಾಡು ಮಾಡುವ ಏಜೆನ್ಸಿಗಳಿವೆ. ಅವರು ಊಟಕ್ಕೆ ಉಳಿಯಕ್ಕೆ ಬುಕ್ ಮಾಡುವ ಹೋಟೆಲುಗಳೂ ಭಾರತೀಯರದ್ದೇ ಆಗಿರುತ್ತವೆ, ಅಥವಾ ಭಾರತೀಯರನ್ನು ಮ್ಯಾನೇಜ್ ಮಾಡಲು ತಿಳಿದಿರುವವರದ್ದೇ ಆಗಿರುತ್ತವೆ. ಆ ಹೋಟೆಲಿನವರಿಗೆ ಇವರ ಬುದ್ಧಿ ಗೊತ್ತಿರುವದಕ್ಕೋ ಏನೋ, ಡಬಲ್ ರೂಮಿನಲ್ಲೂ ಎರಡು ಟವಲ್ ಇಡುವುದಿಲ್ಲ, ಒಂದೇ ಇಟ್ಟಿರುತ್ತಾರೆ. ಹೋದರೆ ಬರೀ ಒಂದೇ ಹೋಗಲಿ ಅಂತಲೋ ಅಥವಾ ಬೇಕಾದರೆ ಕಾಲ್ ಮಾಡಿ ಇನ್ನೊಂದು ತರಿಸಿಕೊಳ್ಳಲಿ, ಲೆಕ್ಕವಿರುತ್ತೆ ಎಂಬ ಆಲೋಚನೆಯೋ ಹೋಟೆಲ್ ಮ್ಯಾನೇಜ್ಮೆಂಟಿನವರದ್ದು. ಆದರೆ ಇಲ್ಲಿನ ಮೆಟ್ರೋದಲ್ಲಿ, ರಸ್ತೆಯಲ್ಲಿ ಒಬ್ಬ ಭಾರತೀಯ ಟೂರಿಸ್ಟನ್ನು ಗುರುತಿಸುವುದು ತೀರಾ ಸುಲಭ. ಇಲ್ಲಿನ ಬಹಳಷ್ಟು ಪ್ರವಾಸಿತಾಣಗಳಲ್ಲಿ, ಮೆಟ್ರೋದಲ್ಲಿ ಮಕ್ಕಳ ಎತ್ತರ ನೋಡಿ ಟಿಕೇಟು ಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಅಲ್ಲೆಲ್ಲಾ “ನನ್ನ ಮಗ ಇನ್ನೂ ಯೂಕೇಜಿ. ಸ್ವಲ್ಪ ಉದ್ದ ಇದ್ದಾನೆ ಅಷ್ಟೇ” ಅಂತಾ ಜಗಳ ಮಾಡುವ ಜನ ನಿಮಗೆ ಕಂಡರೆ ಅವರ್ಯಾರು ಅಂತಾ ನಾನು ಹೇಳುವುದೇ ಬೇಡ. ದುಬೈಯ ಸ್ವಚ್ಚತೆಯನ್ನು ಮೆಚ್ಚುತ್ತಲೇ ಚಿಪ್ಸ್ ಪ್ಯಾಕೆಟ್ ಅನ್ನು ರಸ್ತೆಬದಿಗೆ ಎಸೆಯುವ, ಊಟಮಾಡಿ ಹೋಟೆಲಿಂದ ಹೊರಗೆಬಂದು ಬಾಯಿಗೆ ನೀರು ಹಾಕಿ ಮುಕ್ಕಳಿಸಿ ಪುಟ್ಫಾತ್ ಮೇಲೆ ಉಗಿಯುವ, ಮೂಗಿನಿಂದ ಸಹಸ್ರಾರದವರೆಗೆ ಸಿಂಬಳ ಏರುವಂತೆ ಎಳೆದು ಥೂ ಅಂತಾ ಉಗಿಯುವ ಪ್ರವಾಸಿಗರೆಲ್ಲಾ ಹೆಚ್ಚಾಗಿ ಒಂದೇ ದೇಶದಿಂದ ಬಂದವರಾಗಿರುತ್ತಾರೆ. ಜೀಬ್ರಾಕ್ರಾಸಿಂಗ್ ಅಲ್ಲೇ ಐವತ್ತು ಮೀಟರ್ ದೂರದಲ್ಲಿದ್ದರೂ, ಇಲ್ಲೇ ರಸ್ತೆಯ ಮೇಲೆ ಓಡುವವರೂ ಎಲ್ಲಿಯವರು ಅಂತೇನೂ ಸ್ಪೆಷಲ್ಲಾಗಿ ಹೇಳಬೇಕಿಲ್ಲ.

ನಮಗೆ ನಮ್ಮ ಜನಸಂಖ್ಯೆಯ ಕಾರಣದಿಂದಾಗಿ personal space ಅನ್ನೋ ಪರಿಕಲ್ಪನೆಯೇ ಇಲ್ಲ. ಭಾರತದಲ್ಲಿದ್ದಾಗ 8 ಜನ ನಿಲ್ಲಬಹುದಾದ ಲಿಫ್ಟಿನಲ್ಲಿ ಮೈಗೆ ಮೈಯಂಟಿಸಿಕೊಂಡು 10 ಜನ ನಿಂತೇ ಆಫೀಸಿಗೆ ಹೋಗುವ ನಾವು, ಬೇರೆ ದೇಶಕ್ಕೆ ಹೋದಾಗಲೂ ಲಿಫ್ಟಿನಲ್ಲಿ ಬೇರೆ ಯಾರಿದ್ದಾರೆ ಅನ್ನೋದನ್ನೂ ನೋಡದೇ ಎಲ್ಲರೂ ನುಗ್ಗುತ್ತೇವೆ. ಓಡುತ್ತಿರುವ ಮೆಟ್ರೋದಲ್ಲಿ, ನಿಂತ ವಿಮಾನಗಳಲ್ಲಿ, ಟಿಕೇಟಿನ ಸಾಲುಗಳಲ್ಲಿ, ಇನ್ನೊಬ್ಬರ ಮೈಗೆ ನಮ್ಮ ಮೈಯನ್ನೋ, ಬ್ಯಾಗನ್ನೋ ತಾಗಿಸಿಯೇ ನಿಲ್ಲುತ್ತೇವೆ. ನನ್ನ ಸಂತೋಷ, ದುಃಖ, ಅದ್ಯಾರದ್ದೋ ಬಗೆಗಿನ ತಿರಸ್ಕಾರ, ದುಮ್ಮಾನಗಳನ್ನು ಉಳಿದವರಿಗೆ ಕೇಳಿಸುವ ಅಗತ್ಯವಿಲ್ಲದಿದ್ದರೂ ಜೋರಾಗಿಯೇ ಮಾತನಾಡುತ್ತೇವೆ. ಫೋನ್ಕಾಲುಗಳದ್ದೂ ಅದೇ ಕಥೆ. ಲಿಫ್ಟುಗಳಲ್ಲಿ, ಕಾರಿಡಾರುಗಳಲ್ಲಿ ನಡೆಯುವಾಗ ಎದುರಾದವರೆಡೆಗೆಗೊಂದು ಸೌಜನ್ಯದ ನಗೆಯಾಗಲೀ, ಗುಡ್ಮಾರ್ನಿಂಗ್ ಗುಡೀವನಿಂಗ್ ಆಗಲೀ, ರಿಸೆಪ್ಷನ್/ಸೇಲ್ಸ್ ಟಿಲ್/ಟೋಲ್-ಗೇಟುಳಲ್ಲಿರುವ ಜನರೆಡೆಗೆ ಒಂದು ಥ್ಯಾಂಕ್ಸ್ ಆಗಲೀ ಹೇಳಲಾಗದಷ್ಟು ಬಡವರು ನಾವು. ಇದೇ ಅಭ್ಯಾಸಗಳನ್ನು ಬೇರೆಕಡೆ ಹೋದಾಗಲೂ ಮುಂದುವರೆಸುತ್ತೇವೆ. ಭಾರತದಲ್ಲಿ ಹೇಗೋ ಗೊತ್ತಿಲ್ಲ, ಬಹಳಷ್ಟು ದೇಶಗಳಲ್ಲಿ ರೆಸ್ಟೋರೆಂಟ್ ವೈಟರುಗಳಿಗೆ ಸಂಬಳ ಕಮ್ಮಿಯಿಟ್ಟು, ಗ್ರಾಹಕರಿಗೆ ಉತ್ತಮ ಸೇವೆ ಕೊಟ್ಟು ಅದಕ್ಕವರು ಟಿಪ್ಸ್ ಪಡೆಯುವ ವ್ಯವಸ್ಥೆಯಿದೆ. ಅದರ ಬಗ್ಗೆ ಕನಿಷ್ಟ ರೀಸರ್ಚ್ ಕೂಡಾ ಮಾಡದೇ ಆ ದೇಶಗಳಿಗೆ ಹೋಗಿ, ಅಲ್ಲಿ ಟಿಪ್ಸ್ ಇಡದೇ ಬರುವ ಭಾರತೀಯರೆಂದರೆ ಆ ವೈಟರುಗಳಿಗೂ ಅಷ್ಟಕ್ಕಷ್ಟೇ.

ಒಟ್ಟಿನಲ್ಲಿ ಭಾರತೀಯ ಪ್ರವಾಸಿಗಳೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನ ಸ್ವಲ್ಪ ಹುಳಿಮುಖ ಮಾಡುವುದು ಸಹಜ. ನಮ್ಮಜನರ ವರ್ತನೆಗಳ ಅನುಭವವಿರುವ ನನಗೆ ಅದರಲ್ಲೇನೂ ಆಶ್ಚರ್ಯವಿಲ್ಲ. ಭಾರತೀಯರೆಡೆಗಿರುವ ಇಂತಹದೊಂದು ಗ್ರಹಿಕೆಯನ್ನು ಕಡಿಮೆಮಾಡುವೆಡೆಗೆ ನನ್ನ ಕೈಲಾದಷ್ಟು ಪ್ರಯತ್ನವನ್ನಂತೂ ನಾನು ಮಾಡುತ್ತೇನೆ. ನನ್ನದಲ್ಲದ ಯಾವ ವಸ್ತುವನ್ನೂ ಮುಟ್ಟದ, ತೆಗೆದುಕೊಳ್ಳದ, ಪಡೆದ ಸೇವೆಗೊಂದು ಥ್ಯಾಂಕ್ಸ್ ಹೇಳುವ ಭಾರತೀಯರಾಗುವ ಮೂಲಕ ನಮ್ಮ ದೇಶಕ್ಕೂ ಹೆಮ್ಮೆ ತರೋಣ.

ಹೋಟೆಲ್ ರೂಮಿನಲ್ಲಿದ್ದ ಶಾಂಪೂ, ಸೋಪು, ಟೀಬ್ಯಾಗು ತೆಗೆದುಕೊಳ್ಳದೇ ಬಂದವರು ಇಡೀ ಜಗತ್ತಿನಲ್ಲೇ ಯಾರೂ ಇಲ್ಲ. ಎಲ್ಲಾದೇಶದವರೂ ಅದನ್ನು ಒಂದಲ್ಲೊಂದು ಕಡೆ ಮಾಡಿರುತ್ತಾರೆ. ಅದನ್ನು “ಕದಿಯೋದು” ಅನ್ನೋದೂ ಇಲ್ಲ. ಯಾಕಂದ್ರೆ ನೀವು ಬಳಸದಿದ್ದರೂ/ಅರ್ಧ ಬಳಸಿಟ್ಟರೂ ಅದು ಮತ್ತೆ ರಿಪ್ಲೇಸ್ ಆಗೇ ಆಗುತ್ತದೆ. ರೂಮಿನ ಮಿನಿಬಾರಿನಲ್ಲಿದ್ದ ಲೇಯ್ಸ್ ಚಿಪ್ಸ್ ಅಥವಾ ಚಾಕಲೇಟು ತಿಂದು, ಸಂಜೆ ಹೊರಗೆ ಹೋದಾಗ ಅದೇ ಬ್ರಾಂಡಿನ ತಿನಿಸುಗಳನ್ನು ವಾಪಾಸು ಇಟ್ಟು ನೂರಾರು ರೂಪಾಯಿ ಬಿಲ್ ತಪ್ಪಿಸಿಕೊಳ್ಳುವುದನ್ನೂ ನಾನು ತಪ್ಪು ಅನ್ನಲ್ಲ. ಆದರೆ ಹ್ಯಾಂಗರ್ರು, ಹೇರ್ ಡ್ರೈಯರ್, ಬಾತ್-ರೋಬ್, ಲೈಟುಗಳು ಇವನ್ನೆಲ್ಲಾ ತೆಗೆದುಕೊಂಡು ಬರೋದು ತೀರಾ ಅಕ್ಷಮ್ಯ. ಹಾಗೆಯೇ ಕಾಫಿಮೇಕರ್ ಹತ್ರ ಇಟ್ಟ ಚಮಚ, ಕಾಫಿ ಮಗ್ಗು, ಟೀವಿ ರಿಮೋಟಿನ ಸೆಲ್ಲು ಇವನ್ನೆಲ್ಲಾ ತೆಗೆದುಕೊಳ್ಳೋದು ಕಳ್ಳತನ ಅನ್ನೋದು ಸಾಯ್ಲಿ, ತೀರಾ ಚೀಪ್’ನೆಸ್. ಹೋಟೆಲ್ ರೂಮ್ ಬುಕಿಂಗ್ ಕಂಪೆನಿಯಾದ IXIGO, ಇಂತಹಾ ಗೊಂದಲ ನಿವಾರಿಸೋದಕ್ಕೆ, ಹೋಟೆಲ್ ರೂಮಿನಿಂದ ಏನನ್ನು ತೆಗೆದುಕೊಂಡು ಹೋಗಬಹುದು, ಯಾವುದನ್ನ ಮುಟ್ಟಬಾರದು ಅಂತಾ ಒಂದೊಳ್ಳೆಯ ವಿಡಿಯೋ ಮಾಡಿದ್ದಾರೆ, ನೋಡಿ.

ಕೊಸರು:

(*) ಭಾರತೀಯರ ಬಗ್ಗೆ ಮಾತ್ರ ಯಾಕೆ ಈ ರೀತಿ ಅಪವಾದ. ಪಾಕಿಗಳ ಬಗ್ಗೆ, ಬಾಂಗ್ಲಾಗಳ ಬಗ್ಗೆ ಯಾಕಿಲ್ಲ? ಅಂತಾ ನಿಮಗೆ ಅನುಮಾನ ಬಂದಿರಬಹುದು. ಈ ರೀತಿ ಅನುಭವ ಆತಿಥೇಯರಿಗೆ ಆಗಬೇಕಾದರೆ, ಜನ ಅಲ್ಲಿಗೆ ಪ್ರವಾಸಿಗಳಾಗಿ ಹೋಗಬೇಕು. ಪ್ರವಾಸಕ್ಕೆ ಹೋಗೋಕೆ ದುಡ್ಡು ಬೇಕು. ಪಾಕಿ/ಬಂಗಾಲಿಗಳ ಕೈಲಿ ಅಷ್ಟೆಲ್ಲಾ ದುಡ್ಡಿದ್ರೆ, ಊರಲ್ಲಿ ಎರಡಂತಸ್ತಿನ ಮನೆ ಕಟ್ತಾರೆ. ಆಮೇಲೆ ಪ್ರವಾಸ ಅದೂ ಇದೂ ಎಲ್ಲಾ. ಭಾರತೀಯರು ಹಾಗಲ್ಲ. ನಮ್ ಎಕಾನಮಿ ಸಕ್ಕಾತ್ತಾಗಿದೆ. ಈಗಂತೂ ನಮ್ ಹತ್ರ ದುಡ್ಡಿದೆ. ತಿರುಗ್ತೀವಿ. ಗಬ್ಬೆಬ್ಬಿಸ್ತಾ ಇದ್ದೀವಿ. ಅವರೆಲ್ಲಾ ನಾವು 1970ರಲ್ಲಿ ಹೇಗಿದ್ವೋ ಹಾಗಿದ್ದಾರೆ. ಅವರ ಬಳಿ ಅಷ್ಟೆಲ್ಲಾ disposable income ಬರಬೇಕಾದರೆ ಇನ್ನೂ ಕನಿಷ್ಟ ಇಪ್ಪತ್ತೈದು ವರ್ಷ ಬೇಕು. ಆಗ ಈ ಕಥೆಗಳು ಅವರ ಹೆಸರಲ್ಲೂ ಬರುತ್ವೆ 🙂 ಅವರೆಡೆಗೆ ನಗುವ ಮೊದಲು ನಾವು ಸುಧಾರಿಸಿಕೊಳ್ಳೋಣ. ನಾಳೆ ಪಾಕಿಯೊಬ್ಬ ಹೋಟೆಲಲ್ಲಿ ಏನೋ ಕದ್ದು ಸಿಕ್ಕಿಹಾಕಿಕೊಂಡಾಗ ಆ ಹೋಟೆಲಿವನರು “ಎಲ್ಲಿಂದಾ ಕಲಿತ್ಯಪ್ಪಾ ಇಂತಾ ಬುದ್ಧಿ” ಅಂದರೆ, ಆತ ನಮ್ಮ ಕಡೆ ಬೆರಳುತೋರಿಸದಂತಾಗಲಿ.

(*) ನನಗೆ ಇದೇ ರೀತಿ ಸ್ಟೀರಿಯೋಟಿಪಿಕಲ್ ಭಾವನೆ ಎಲ್ಲಾ ದೇಶದವರ ಮೇಲೂ ಇದೆ. ಬಂಗಾಲಿಗಳು ಜಿಪುಣರು, ಪಠಾಣರು ಕೊಳಕರು, ಬ್ರಿಟೀಷರು ಸಿಡುಕರು, ಅಮೇರಿಕನ್ನರು ಕೇರ್ಲೆಸ್ಸು ಹೀಗೇ ಬಹಳಷ್ಟು ನನ್ನ ಮನಸ್ಸಲ್ಲೂ ಇದೆ. ಆಗಾಗ ಅದನ್ನ ಒರೆಗೆ ಹಚ್ಚುತ್ತಿರುತ್ತೇನೆ. ಸರಿಪಡಿಸಿಕೊಳ್ಳುತ್ತೇನೆ. ಆದರೆ ನಾನು ವೈಟರುಗಳು ಮೊದಲ ಬಾರಿಗೆ ನನ್ನ ಟೇಬಲ್ಲಿಗೆ ಬಂದಾಗಲೇ ನಾನು “ನೋಡಪ್ಪಾ, ನೀವು ನೋಡಿದ ಉಳಿದ ಭಾರತೀಯರಂತೆ ನಾನಲ್ಲ. ನಿನಗೆ ಸಿಗುವ ಟಿಪ್ಸು ನಿನ್ನ ಸೇವೆಯ ಮೇಲೆ ನಿರ್ಧಾರವಾಗುತ್ತೆ. ನೆನಪಿಟ್ಕೋ” ಅಂತಾ ಬಾಯಿಬಿಟ್ಟು ಹೇಳಿಬಿಡುವುದುಂಟು. ಇದು ಯಾಕೆಂದರೆ, ನಾನು ಯೂಕೆನಲ್ಲಿದ್ದಾಗ ಈ ರೀತಿಯ “ಬ್ಲಡಿ ಇಂಡಿಯನ್” ಸ್ಟೀರಿಯೋಟೈಪನ್ನು ಬಹಳ ಅನುಭವಿಸಿದ್ದೇನೆ. ಅಲ್ಲಿನ ವೈಟರುಗಳು ಬ್ರಿಟೀಷ್ ಅಥವಾ ಪೋಲಿಷ್/ಆಫ್ರಿಕನ್ನರು. ಇಲ್ಲಿ ಮಧ್ಯಪ್ರಾಚ್ಯಕ್ಕೆ ಬಂದಮೇಲೆ ಇಲ್ಲಿ ಹೆಚ್ಚಿನ ಸರ್ವರುಗಳು ಫಿಲಿಪಿನೋಗಳು ಅಥವಾ ಪೂರ್ವ ಯೂರೋಪಿಯನ್ನರು. ಎರಡೂ ಕಡೆಯಲ್ಲಿ ವೈಟರುಗಳು “ಇವ ಇಂಡಿಯನ್. ಹಾಗಾಗಿ ಇವ ಟಿಪ್ಸ್ ಕೊಡೋದಿಲ್ಲ. ಕೊಟ್ಟರೂ ಜಾಸ್ತಿ ಕೊಡಲಿಕ್ಕಿಲ್ಲ” ಅನ್ನೋ ಭಾವನೆಯಲ್ಲಿರ್ತಾರೆ. ಹಾಗಾಗಿ ಅವರು ಕೊಡುವ ಸೇವೆಯೂ ಕೆಲವೊಮ್ಮೆ ಅಷ್ಟಕ್ಕಷ್ಟೇ ಇರುತ್ತದೆ. ಅವರ ಸೇವೆ ಬರೀ ಅಷ್ಟಷ್ಟೇ ಇದ್ದಾಗ ಟಿಪ್ಸ್ ಕೊಡೋಕೆ ನಿಮಗೂ ಮನಸ್ಸು ಬರಲ್ಲ. ಒಂದಿನ ನಾನಿಲ್ಲಿನ ಪಂಚತಾರಾ ಹೋಟೆಲೊಂದರಲ್ಲಿದ್ದೆ. ಅಲ್ಲಿನ ವೈಟರು ನನ್ನೊಂದಿಗೆ ನಡೆದುಕೊಂಡ ರೀತಿ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಯಾಕೆಂದರೆ ಉಳಿದವರೆಲ್ಲಾ ಕರೆದಕೂಡಲೇ ಬಂದು ಸರ್ವ್ ಮಾಡುತ್ತಿದ್ದವ ನಾನು ಕರೆದರೆ ಮಾತ್ರ ನಾಪತ್ತೆ. ಎರಡುಬಾರಿ ನಾನು ಕೇಳಿದ್ದೇ ಒಂದು, ಅವ ತಂದದ್ದೇ ಇನ್ನೊಂದು! ಕೊನೆಗೆ ಹೊರಡುವ ಮುನ್ನ, ಅವನನ್ನು ಮತ್ತು ಫ್ಲೋರ್ ಮ್ಯಾನೇಜರ್ ಇಬ್ಬರನ್ನೂ ಕರೆದು ಬಿಲ್ಲಿನ ಹಣ ಪಾವತಿ ಮಾಡಿ, ಜೇಬಿನಿಂದ ಐವತ್ತು ದಿರಹಂ ಹೊರಗೆ ತೆಗೆದು “ಈ ಹಣ ನಾನು ಇವನಿಗೆ ಟಿಪ್ಸ್ ಕೊಡಬೇಕು ಅಂತಲೇ ಇಟ್ಟುಕೊಂಡದ್ದು. ಆದರೆ ಇವನ ಸರ್ವೀಸು ನನಗಿಷ್ಟವಾಗಲಿಲ್ಲ. ಆದ್ದರಿಂದ ಈ ಟಿಪ್ಸು ಕೊಡುತ್ತಿಲ್ಲ FYI” ಅಂತ ಹೇಳಿ ಮರಳಿ ಜೇಬಿಗಿಟ್ಟೆ. ಅವತ್ತಿಂದ ಇವತ್ತಿನವರೆಗೂ ನಾನು ಹೊಸ ಹೋಟೆಲುಗಳಿಗೆ ಹೋದರೆ ಟಿಪ್ಸಿನ ವಿಚಾರ ಮೊದಲಿಗೇ ಹೇಳಿಬಿಡುತ್ತೇನೆ. ಕೆಲ ಹೋಟೆಲುಗಳಲ್ಲಿ ಸರ್ವೀಸ್ ಚಾರ್ಜ್ ಅಂತಾ ಮೊದಲೇ ಸೇರಿಸಿಬಿಟ್ಟಿರುತ್ತಾರೆ. ಅಂತಾಕಡೆ ನಾನು ಟಿಪ್ಸ್ ಕೊಡುವುದಿಲ್ಲ. ಸರ್ವೀಸ್ ಇಷ್ಟವಾಗಿಲ್ಲವೆಂದರೆ ಜಗಳ ಮಾಡಿ ಬಿಲ್ಲಿನಿಂದ ಸರ್ವೀಸ್ ಚಾರ್ಜ್ ತೆಗೆಸಿದ್ದೂ ಇದೆ.

ನನ್ನ ಹಾಗೂ ಯಾವ ಭಾರತೀಯರ ಬಗ್ಗೆಯೂ ಯಾರಿಗೂ ಕೆಟ್ಟ ಸ್ಟಿರಿಯೋಟೈಪು ಬರುವ ಹಾಗೆ ನಾನು ನಡೆದುಕೊಳ್ಳಲ್ಲ. ನೀವೂ ಪ್ರಯತ್ನಿಸುತ್ತೀರಿ ತಾನೇ?

#ರಾಘವಾಂಕಣ

Video credit and copyright: ixigo

“ಕರ್ನಾಟಕ ವಾತಾಪಿ, ತಂಜಾವೂರಿನ ಮುತ್ತುಸ್ವಾಮಿ ದೀಕ್ಷಿತರ ಕೃತಿಯಲ್ಲಿ ಸೇರಿ ಅಜರಾಮರವಾಗಿದ್ದು ಹೇಗೆ?”

ಕ್ರಿ.ಶ 597 ರಲ್ಲಿ ಚಾಲುಕ್ಯರಾಜ ಕೀರ್ತಿವರ್ಮನು ನಿಧನನಾದಾಗ, ಅವನ ಮಗ ಎರೆಯ ಇನ್ನೂ ಚಿಕ್ಕ ಹುಡುಗ. ಯುವರಾಜ ಹರೆಯಕ್ಕೆ ಬರುವತನಕ ಪಟ್ಟಾಭಿಷೇಕ ಮಾಡುವಂತಿರಲಿಲ್ಲ. ಆದ್ದರಿಂದ ಎರೆಯನ ಚಿಕ್ಕಪ್ಪ (ಕೀರ್ತಿವರ್ಮನ ತಮ್ಮ) ಮಂಗಳೇಶ, ಎರೆಯ ಆಡಳಿತಯೋಗ್ಯ ವಯಸ್ಸಿಗೆ ಬರುವತನಕ ರಾಜಪ್ರತಿನಿಧಿಯಾಗಿ, ಚಾಲುಕ್ಯ ರಾಜ್ಯದ ಆಡಳಿತವನ್ನು ವಹಿಸಿಕೊಂಡ. ಮಂಗಲೇಶ ಒಳ್ಳೆಯ ರಾಜನೇ ಆಗಿದ್ದರೂ, ಅವನಿಗೆ ರಾಜ್ಯಭಾರವನ್ನು ಎರೆಯನಿಗೆ ವಾಪಾಸು ವಹಿಸಿಕೊಡುವ ಮನಸ್ಸಿರಲಿಲ್ಲ. ಕ್ರಿ.ಶ 603ರಲ್ಲಿ ಎರೆಯನ ಬದಲು, ತನ್ನ ಮಗನನ್ನೇ ಯುವರಾಜನೆಂದು ಘೋಷಿಸಿ ತನ್ನ ವಂಶಕ್ಕೇ ರಾಜ್ಯಭಾರ ಸಿಗುವಂತೆ ತಂತ್ರಮಾಡುತ್ತಾನೆ.

ಇದರಿಂದ ಅತೃಪ್ತನಾದ ಎರೆಯ, ಬಾದಾಮಿಯಿಂದ ಹೊರಬಂದು ಇಂದಿನ ಕೋಲಾರದ ಬಳಿಯಿರುವ ಪ್ರದೇಶದಲ್ಲಿ ಬಲಿಷ್ಟರಾಗಿದ್ದ ‘ಬನ’ರೊಂದಿಗೆ ಸ್ನೇಹಬೆಳೆಸಿ, ಸುತ್ತಮುತ್ತಲ ಪಂಗಡಗಳೊಂದಿಗೆ ಮೈತ್ರಿಮಾಡಿಕೊಂಡು, ಸೈನ್ಯವನ್ನು ಸಂಘಟಿಸುತ್ತಾನೆ. ಹೀಗೆ ಕಟ್ಟಿದ ಸೈನ್ಯದೊಂದಿಗೆ ಎರೆಯ, ಮಂಗಳೇಶನ ಮೇಲೆ ಯುದ್ಧ ಘೋಷಿಸುತ್ತಾನೆ. ಮಂಗಳೇಶನ ಸೈನ್ಯಕ್ಕೂ, ಎರೆಯನ ಸೈನ್ಯಕ್ಕೂ ‘ಎಲಪಟ್ಟು ಸಿಂಬಿಗೆ’ (ಇಂದಿನ ಅನಂತಪುರ) ಎಂಬಲ್ಲಿ ಘೋರಯುದ್ಧ ನಡೆಯುತ್ತದೆ. ಹೀಗೆ ನಡೆದು ಮಂಗಳೇಶನ ಸಾವಿನೊಂದಿಗೆ ಅಂತ್ಯವಾದ ಯುದ್ಧದಲ್ಲಿ, ಎರೆಯ ವಿಜಯಿಶಾಲಿಯಾಗುತ್ತಾನೆ ಎಂದು ಪೆದ್ದವಡಗೂರು ಶಾಸನ ಹೇಳುತ್ತದೆ.

ಯುದ್ದದಲ್ಲಿ ಗೆದ್ದ ಎರೆಯ, ತನ್ನ ಸೈನ್ಯದೊಂದಿಗೆ ಪಟ್ಟದಕಲ್ಲು ತಲುಪುತ್ತಾನೆ. ತನ್ನ ಹೆಸರನ್ನು ಎರಡನೇ ಪುಲಿಕೇಶಿ (ಅಥವಾ ಇಮ್ಮಡಿ ಪುಲಕೇಶಿ) ಎಂದು ಬದಲಾಯಿಸಿಕೊಂಡು, ಕ್ರಿಶ 610ರಲ್ಲಿ, ಚಾಲುಕ್ಯ ರಾಜ್ಯದ ಸಿಂಹಾಸನವನ್ನೇರುತ್ತಾನೆ. ಪಟ್ಟಕ್ಕೆ ಬಂದಕೂಡಲೇ ಇಮ್ಮಡಿ ಪುಲಿಕೇಶಿಗೆ ಕಷ್ಟಕೋಟಲೆಗಳ ಸರಮಾಲೆಯೇ ಕಾದಿರುತ್ತದೆ. ಮಂಗಳೇಶನಿಗೆ ನಿಷ್ಠಾವಂತರಾಗಿದ್ದ ಗೋವಿಂದ ಮತ್ತು ಅಪ್ಪಾಯಿಕ ಎಂಬಿಬ್ಬ ರಾಷ್ಟ್ರಕೂಟರ ಸಾಮಂತರಾಜರು, ಮಂಗಳೇಶನ ಸಾವಿನ ಸುದ್ಧಿ ತಿಳಿದಕೂಡಲೇ ಚಾಲುಕ್ಯರಾಜ್ಯದ ಮೇಲೆ ಯುದ್ಧ ಘೋಷಿಸುತ್ತಾರೆ. ಭೀಮಾನದಿಯ ತಟದಲ್ಲಿ ಎದುರಾಳಿಗಳ ಸೈನ್ಯವನ್ನು ತಡೆದ, ಪುಲಿಕೇಶಿಯ ಸೈನ್ಯದ ಆರ್ಭಟಕ್ಕೆ ಎರಡೇ ವಾರದ ನಂತರ ಯುದ್ಧ ಭೂಮಿಯಲ್ಲಿ ನಿಲ್ಲಲಾಗದೆ ಅಪ್ಪಾಯಿಕ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ಕ್ರಿ.ಶ. 634ರ ಐಹೊಳೆ ಶಾಸನದ ಹೇಳುವಂತೆ, ಈ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿ ಐಹೊಳೆಯಲ್ಲಿ ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.

ಇಲ್ಲಿಂದ ಮುಂದಿನ ಒಂಬತ್ತುವರ್ಷ ಚಾಲುಕ್ಯ ಸಾಮ್ರಾಜ್ಯದ ಸುವರ್ಣಯುಗ. ಇಮ್ಮಡಿ ಪುಲಿಕೇಶಿ ದಖನ್ ಪ್ರಸ್ಥಭೂಮಿಯಲ್ಲಿದ್ದ ಎಲ್ಲಾ ರಾಜರನ್ನೂ ಸೋಲಿಸಿದ್ದಲ್ಲದೇ, ದಕ್ಷಿಣದಲ್ಲಿದಲ್ಲೂ ತನ್ನ ರಾಜ್ಯವನ್ನು ವಿಸ್ತರಿಸಿದ. ಪಶ್ಚಿಮ ಕರಾವಳಿಯಲ್ಲಿ ಆಳುಪರು, ಬನವಾಸಿಯ ಕದಂಬರು, ಕೊಂಕಣದಲ್ಲಿ ಮೌರ್ಯರು, ಇನ್ನೂ ಉತ್ತರಕ್ಕೆ ಮಾಳ್ವದಲ್ಲಿ ಗುರ್ಜರರು, ಪೂರ್ವಕ್ಕೆ ವಿಷ್ಣುಕುಂಡಿನಿಯರು, ಲಾಟರನ್ನೂ ಸಾಮಂತರನ್ನಾಗಿಸಿಕೊಂಡ. ಇಮ್ಮಡಿ ಪುಲಿಕೇಶಿಯ ಅತೀಮುಖ್ಯ ವಿಜಯಗಳಲ್ಲಿ ದಕ್ಷಿಣದ ಪಲ್ಲವರ ಮೇಲಿನ ವಿಜಯ ನೆನಪಿಡುವಂತದ್ದು. ಅಂದಿನ ಕಾಲಕ್ಕೆ, ಸೋಲಿಸಲೇ ಅಸಾಧ್ಯವಾದ ಸೈನ್ಯ ಎಂದು ಹೆಸರು ಪಡೆದಿದ್ದ ಪಲ್ಲವರ ಸೈನ್ಯವನ್ನು, ಅವರ ರಾಜ ‘ಒಂದನೆಯ ಮಹೇಂದ್ರವರ್ಮ’ನನ್ನು ಪಲ್ಲವರ ರಾಜಧಾನಿಗೆ 25 ಕಿ.ಮೀ ದೂರದಲ್ಲಿದ್ದ ‘ಪುಲ್ಲಲೂರ್’ನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದನು. ಪುಲಿಕೇಶಿ ಗಂಗ ವಂಶದ’ದುರ್ವಿನಿತ’ ಹಾಗೂ ‘ಪಾಂಡ್ಯನ್ ಜಯಂತವರಾಮನ್ ರಾಜ’ನ ಸಹಾಯದೊಂದಿಗೆ ಪಲ್ಲವರ ರಾಜಧಾನಿ ‘ಕಂಚೀಪುರ’ಕ್ಕೆ ಮುತ್ತಿಗೆ ಹಾಕುತ್ತಾನೆ. ಮಹೇಂದ್ರವರ್ಮ ತನ್ನ ರಾಜಧಾನಿಯನ್ನು ಉಳಿಸಿಕೊಂಡರೂ ಉತ್ತರದ ಪ್ರಾಂತ್ಯವನ್ನು ಪುಲಿಕೇಶಿಗೆ ಸಮರ್ಪಿಸುತ್ತಾನೆ. ಹೀಗೆ ದಕ್ಷಿಣದ ಅತೀದೊಡ್ಡ ಏಕರಾಜ ಸಾಮ್ರಾಜ್ಯ ಸ್ಥಾಪಿಸಿದ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಚೀನಾದ ಯಾತ್ರಿಕ/ಇತಿಹಾಸಕಾರ ಹ್ಯುಯೆನ್-ತ್ಸಾಂಗ್, ಪರ್ಶಿಯಾದ ಇತಿಹಾಸಕಾರ ತಬರಿ ಮುಂತಾದವರು ಭೇಟಿಕೊಟ್ಟು ರಾಜ್ಯಭಾರದ ಬಗ್ಗೆ ಅಗಾಧ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ.

ಇಮ್ಮಡಿ ಪುಲಿಕೇಶಿಯ ರಾಜ್ಯಭಾರದ ಅತೀಮುಖ್ಯ ಘಟನೆಯೆಂದರೆ ಗುರ್ಜರ, ಮಾಳ್ವರನ್ನು ಸೋಲಿಸಿ ಉತ್ತರಕ್ಕೂ ತನ್ನ ಸಾಮ್ರಾಜ್ಯ ವಿಸ್ತರಣೆಮಾಡುವಾಗ, ಆಗಿನ ಕನ್ನೌಜದ ಮಹಾರಾಜನಾಗಿದ್ದ ಹರ್ಷವರ್ಧನನೊಡನೆ ನಡೆದ ಯುದ್ಧ. ವಿಂಧ್ಯದ ಉತ್ತರದಿಂದ ಹಿಡಿದು ಹಿಮಾಚಲದವರೆಗೂ ರಾಜ್ಯಭಾರ ಮಾಡುತ್ತಿದ್ದ, ಇಡೀ ಜೀವನದಲ್ಲೇ ಒಂದೇ ಒಂದು ಯುದ್ಧ ಸೋಲದ, ‘ಉತ್ತರಪಥೇಶ್ವರ’ ಎಂದೇ ಬಿರುದು ಪಡೆದಿದ್ದ ಹರ್ಷವರ್ಧನ, ಇಮ್ಮಡಿ ಪುಲಿಕೇಶಿಯ ಉತ್ತರದ ಭಾಗದ ಸಾಮ್ರಾಜ್ಯ ವಿಸ್ತರಣೆಗೆ ಕಡಿವಾಣ ಹಾಕಲು ನಿರ್ಧರಿಸುತ್ತಾನೆ. ನರ್ಮದಾ ನದಿಯ ತಟದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾಗುತ್ತವೆ. ಎಂಟುವಾರಗಳ ಕಾಲ ನಡೆದ ಜಿಗುಟುಯುದ್ಧದ ನಂತರ, ಪುಲಿಕೇಶಿಗಿಂತಾ ಮೂರುಪಟ್ಟು ದೊಡ್ಡ ಸೈನ್ಯವಿದ್ದರೂ, ತನ್ನ ಅತೀಶಕ್ತಿಶಾಲಿ ಗಜಪಡೆಯಲ್ಲೇ ಹೆಚ್ಚು ನಷ್ಟವನ್ನನುಭವಿಸಿದ ಹರ್ಷವರ್ಧನ, ಯುದ್ದದಲ್ಲಿ ಗೆಲ್ಲಲಾಗದೇ ಶಾಂತಿಸಂಧಾನಕ್ಕೆ ಮುಂದಾಗುತ್ತಾನೆ. ಇಮ್ಮಡಿ ಪುಲಿಕೇಶಿಗೆ ‘ಪರಮೇಶ್ವರ’, ‘ಸತ್ಯಾಶ್ರಯ’, ‘ಪೃಥ್ವೀವಲ್ಲಭ’ ಎಂಬ ಬಿರುದುಗಳನ್ನು ಸಮರ್ಪಿಸಿದುದ್ದಲ್ಲದೇ, ಇಮ್ಮಡಿ ಪುಲಿಕೇಶಿಯನ್ನು ತನ್ನ ದಕ್ಷಿಣದ ಸಮಬಲನೆಂದು ಸ್ಚೀಕರಿಸಿ ಆತನಿಗೆ ‘ದಕ್ಷಿಣಪಥೇಶ್ವರ’ ಎಂಬ ಬಿರುದನ್ನು ಕೊಡುತ್ತಾನೆ. ಹಾಗೂ ನರ್ಮದಾ ನದಿಯನ್ನು ಉತ್ತರದ ಹರ್ಷವರ್ಧನನ ಸಾಮ್ರಾಜ್ಯಕ್ಕೂ, ದಕ್ಷಿಣದ ಚಾಲುಕ್ಯ ಸಾಮ್ರಾಜ್ಯಕ್ಕೂ ಗಡಿಯೆಂದು ನಿರ್ಧರಿಸಿ ಹರ್ಷವರ್ಧನ ಕನ್ನೌಜಿಗೆ ಮರಳುತ್ತಾನೆ. ಈ ಯುದ್ಧ, ಇಂಗ್ಳೀಷಿನ “This is what happens when an unstoppable force meets an immovable object” ಎಂಬ ಜಾಣ್ನುಡಿಗೆ ಒಂದೊಳ್ಳೆಯ ಉದಾಹರಣೆ.

Chalukya

ಕಾಂಚೀಪುರವನ್ನು ಗೆಲ್ಲದ, ಚುಕ್ಕಿಯೊಂದು ಇಮ್ಮಡಿ ಪುಲಿಕೇಶಿಯ ಮನಸ್ಸಲ್ಲೇ ಉಳಿದಿತ್ತು. ಹಾಗಾಗಿ ವಯಸ್ಸಾಗಿ ನೇಪಥ್ಯಕ್ಕೆ ಸರಿಯುವ ಮುನ್ನ ಇನ್ನೊಮ್ಮೆ ಪಲ್ಲವರ ಮೇಲೆ ಯುದ್ಧ ಸಾರಲು ನಿರ್ಧರಿಸಿದ ಪುಲಿಕೇಶಿ, ರಥವನ್ನೇರಿಯೇ ಬಿಟ್ಟ. ಆದರೆ ಈ ಬಾರಿ ಪಲ್ಲವರ ರಾಜ ಒಂದನೇ ನರಸಿಂಹವರ್ಮ, ಪುಲಿಕೇಶಿಯ ವಿಜಯಗಳ ಸರಮಾಲೆಗೆ ಕಡಿವಾಣ ಹಾಕುತ್ತಾನೆ. ಇಮ್ಮಡಿ ಪುಲಿಕೇಶಿಯ ಮರಣದೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ. ಯುದ್ದವನ್ನು ಗೆದ್ದ ಉತ್ಸಾಹದಲ್ಲಿ ನರಸಿಂಹವರ್ಮ ಚಾಲುಕ್ಯ್ರರ ರಾಜಧಾನಿ ಬಾದಾಮಿಯವರೆಗೂ ಸೈನ್ಯವನ್ನು ಕೊಂಡೊಯ್ದು, ಸಂಪತ್ತಲ್ಲವನ್ನೂ ಕಂಚಿಗೆ ಸಾಗಿಸುತ್ತಾನೆ. ಚಾಲುಕ್ಯರ ರಾಜಧಾನಿ “ಬಾದಾಮಿ” ಪಲ್ಲವರ ಮುಂದಿನ 13 ವರ್ಷಗಳ ರಾಜ್ಯಭಾರದಲ್ಲಿ “ವಾತಾಪಿಕೊಂಡ”ವಾಯ್ತು. (ಬಾದಾಮಿಯ ಮೂಲಹೆಸರು ವಾತಾಪಿ). ಹೀಗೆ, ಒಬ್ಬ ಮಹಾರಾಜನನ್ನು ಸೋಲಿಸಲು ಒಂದನೆಯ ನರಸಿಂಹವರ್ಮನಂತಹ ಇನ್ನೊಬ್ಬ ಮಹಾಯೋಧನೇ ಬರಬೇಕಾಯ್ತು. ದಕ್ಷಿಣದ ಮಹಾನ್ ಸಾಮ್ರಾಜ್ಯವೊಂದು ಹೀಗೆ ಕೊನೆಗೊಂಡಿತು.

ಇಮ್ಮಡಿ ಪುಲಿಕೇಶಿಗೆ ಚಂದ್ರಾದಿತ್ಯ, ಆದಿತ್ಯವರ್ಮ, ವಿಕ್ರಮಾದಿತ್ಯ, ಜಯಸಿಂಹ, ಅಂಬರ ಎಂಬ ಐದು ಜನ ಮಕ್ಕಳು. ತಮ್ಮ ತಮ್ಮಲ್ಲೇ ಕಚ್ಚಾಡಿ, ರಾಜ್ಯವನ್ನು ವಿಂಗಡಿಸಿಕೊಂಡು, ಪಲ್ಲವರಿಗೆ ಸಾಮಂತರಾಗಿ, ಸಣ್ಣ ಸಣ್ಣ ಭಾಗಗಳನ್ನು ಆಳುತ್ತಿದ್ದರು. ಇವರಲ್ಲಿ ಮೂರನೆಯವನಾದ ಮೊದಲನೇ ವಿಕ್ರಮಾದಿತ್ಯ, ಇವರ ಜಗಳಗಳಿಂದ ರೋಸಿಹೋಗಿ, ತನ್ನದೇ ಸೋದರರ ಮೇಲೆ ಯುದ್ಧಮಾಡಿ ಸೋಲಿಸಿ ಆಮೇಲೆ ಅವರನ್ನು ಮನ್ನಿಸಿ, ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. 642ರಲ್ಲಿ ತನ್ನನ್ನು ರಾಜನೆಂದು ಘೋಷಿಸಿಕೊಂಡು, ಪಲ್ಲವರನ್ನು ಒದ್ದೋಡಿಸಿ ಚಾಲುಕ್ಯ ಸಾಮ್ರಾಜ್ಯವನ್ನು ಪುನರ್ಸ್ಥಾಪಿಸಿದನು. ಆತನ 13 ವರ್ಷದ ಆಡಳಿತದಲ್ಲಿ ಹಾಗೂ ಇವನ ಮಗನಾದ ಎರಡನೆಯ ವಿಕ್ರಮಾದಿತ್ಯ ಆಳ್ವಿಕೆಯಲ್ಲಿ ಚಾಲುಕ್ಯ ಸಾಮ್ರಾಜ್ಯ ಸಂಪೂರ್ಣವಾಗಿ ಪುನರ್ನಿರ್ಮಾಣವಾಗಿ, ಮತ್ತೆ ಇಮ್ಮಡಿ ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ ಮೇರು ಸ್ಥಿತಿಗೆ ತಲುಪಿತು.

ಇಷ್ಟೆಲ್ಲಾ ಕಥೆ ಯಾಕೆ ಹೇಳಿದೆ ಅಂದರೆ, ಒಂದನೆಯ ನರಸಿಂಹವರ್ಮ ವಾತಾಪಿಯಿಂದ ಸಂಪತ್ತನ್ನು ಕಂಚಿಗೆ ಸಾಗಿಸುವಾಗ, ಆ ಯುದ್ದದ ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದ್ದ ತನ್ನ ಸೈನ್ಯಾಧಿಕಾರಿ ಪರಂಜ್ಯೋತಿಗೆ, ಖಜಾನೆಯ ಕಾಲುಭಾಗದಷ್ಟು ದೊಡ್ಡ ಉಡುಗೊರೆಯನ್ನೇ ಕೊಡುತ್ತಾನೆ. ಇದರಲ್ಲಿ ಚಾಲುಕ್ಯರ ಅರಮನೆಯಲ್ಲಿದ್ದ, ಚಾಲುಕ್ಯರಾಜರ ಅತ್ಯಂತ ಪ್ರೀತಿಯ ದೊಡ್ಡದೊಂದು ಗಣಪತಿಯ ಮೂರ್ತಿಯೂ ಇರುತ್ತದೆ. ತನ್ನ ರಾಜ್ಯಕ್ಕೆ ಮರಳಿದ ಪರಂಜ್ಯೋತಿ, ತನ್ನೂರಾದ, ತಿರುಚೆಂಕಾಟಂಕುಡಿಯಲ್ಲಿ ಈ ಗಣಪತಿಗೊಂದು ದೇವಸ್ಥಾನಕಟ್ಟಿ, ಅದನ್ನು ಆದರದಿಂದ ನೋಡಿಕೊಳ್ಳುತ್ತಾನೆ. ಹೀಗೆ ಬಾದಾಮಿಯಿಂದ ಅಂದರೆ ಅಂದಿನ ವಾತಾಪಿಯಿಂದ, ಕಂಚಿಗೆ ತಲುಪಿದ ಈ ಗಣಪತಿಯೇ, ಮುತ್ತುಸ್ವಾಮಿ ದೀಕ್ಷಿತರ ಕೃತಿ “ವಾತಾಪಿ ಗಣಪತಿಂ ಭಜೇ…”ಯಲ್ಲಿ ಮೂಡಿಬಂದಿರುವುದು! 🙂

ಇದನ್ನೇ ಹೇಳಬೇಕು ಅಂತಾ ಈ ಹರಿಕಥೆ. ಈಗ ಎಲ್ಲರೂ “ವಾತಾಪಿ ಗಣಪತಿಂ ಭಜೇ….” ಎಂದು ಹಾಡುತ್ತಾ ಮುಂದಿನ ಕೆಲಸ ನೋಡಿಕೊಳ್ಳಿ 🙂

ಕೆಲ ವಿಶೇಷ ಮಾಹಿತಿಗಳು:

(1) ಈ ವಾತಾಪಿ ಗಣಪತಿ ದೇವಸ್ಥಾನ ಇವತ್ತು ತಮಿಳ್ನಾಡಿನ ನಾಗಪಟ್ಟಿನಂ ಜಿಲ್ಲೆಯ ಉತ್ರಪತೀಸ್ವರಸ್ವಾಮಿ ದೇವಸ್ಥಾನದ ಆವರಣದಲ್ಲೇ ಇದೆ. ಆ ಉತ್ರಪತೀಸ್ವರಸ್ವಾಮಿ ದೇವಸ್ಥನವನ್ನೂ ಪರಂಜ್ಯೋತಿಯೇ ಕಟ್ಟಿಸಿದ್ದು. ಇದು ಈಶ್ವರನ ದೇವಸ್ಥಾನವೇ ಆದರೂ, ಪರಂಜ್ಯೋತಿಯ ಪ್ರೀತಿಯ ದೇವ, ಗಣೇಶನ ಬಿಂಬಗಳಿಗೆ ಪ್ರಸಿದ್ಧ.

ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿರುವ ಗಣೇಶ, ತನ್ನ ಯಥಾಪ್ರಸಿದ್ಧ ಆನೆಯ ಮುಖದಲ್ಲಿರದೆ, ಮಾನವ ಮುಖದಲ್ಲೇ ಇರೋದು ಒಂದು ವಿಶೇಷ.

(2) ಈ ಮಹಾಸೈನ್ಯಾಧಿಪತಿ ಪರಂಜ್ಯೋತಿ, ಮುಂದೆ ತನ್ನ ಕ್ಷತ್ರಿಯಾಭ್ಯಾಸಗಳನ್ನೆಲ್ಲಾ ತ್ಯಜಿಸಿ, ಜೀವನವನ್ನೇ ಬದಲಾಯಿಸಿಕೊಂಡು ‘ಸಿರುತೊಂದಾರ್’ ಎಂಬ ಹೆಸರಿನ ನಾಯನಾರ್ ಸಂತನಾಗಿ, ತನ್ನ ಜೀವನವನ್ನು ಅಲ್ಲೇ ಕಳೆಯುತ್ತಾನೆ. ನಾಯನಾರ್’ಗಳು ಹಾಗೂ ಆಳ್ವಾರ್’ಗಳು, ಎಂಟನೇ ಶತಮಾನದಲ್ಲಿ ದಕ್ಷಿಣಭಾರತದಲ್ಲಿ ‘ಭಕ್ತಿ ಚಳುವಳಿಗೆ’ ನಾಂದಿ ಹಾಡಿದ ಮಹಾಪುರುಷರು. ಆ 63 ನಾಯನಾರ್’ಗಳಲ್ಲಿ ಈ ಪರಂಜ್ಯೋತಿಯೂ ಒಬ್ಬ! ಜೀವನ ಎಷ್ಟು ವಿಚಿತ್ರ ನೋಡಿ!! ಪರಂಜ್ಯೋತಿಯಿಂದ….ಸಿರುತೊಂದಾರ್!!!

(3) ಎರೆಯ ಎಂಬುವವ ಇಮ್ಮಡಿ ಪುಲಿಕೇಶಿಯಾದರೆ, ಮೊದಲನೆಯ ಪುಲಿಕೇಶಿ ಯಾರು ಎಂಬ ಅನುಮಾನ ನಿಮಗಿದ್ದರೆ:

ಮೊದಲನೇ ಪುಲಿಕೇಶಿ ಎರೆಯನ ಅಜ್ಜ. ಅಂದರೆ ಕೀರ್ತಿವರ್ಮನ ಅಪ್ಪ. ಮಂಗಳೇಶನ ಮಹಾಕೂಟ ಶಾಸನ ಹಾಗೂ ರವಿಕೀರ್ತಿಯ ಐಹೊಳೆ ಶಾಸನದ ಪ್ರಕಾರ ಚಾಲುಕ್ಯರ ಮೂಲ ಪುರುಷ ಕ್ರಿ.ಶ 500ರಲ್ಲಿ ರಾಜ್ಯಭಾರ ಆರಂಭಿಸಿದ ಜಯಸಿಂಹನೇ ಆದರೂ, ಕ್ರಿ.ಶ 540ರಲ್ಲಿ ರಾಜನಾದ ಜಯಸಿಂಹನ ಮೊಮ್ಮಗ ಪುಲಿಕೇಶಿಯೇ ಚಾಲುಕ್ಯ ಸಂತತಿಯ ಮೊದಲ ಸ್ವತಂತ್ರ ರಾಜ. ಬಾದಾಮಿಯಿಂದ ರಾಜ್ಯಭಾರ ಮಾಡಿದ ಈತನ ಕೂದಲು ಬಹುಷಃ ಕೆಂಚು ಬಣ್ಣಕ್ಕಿದ್ದಿರಿಂದ (blonde) ಪುಲಿಕೇಶಿ (ಅಂದರೆ ಹುಲಿಯಂತಾ ಕೂದಲಿರುವವನು) ಎಂಬ ಹೆಸರು ಬಂದಿರಬಹುದೇ ಎಂಬುದು ನನ್ನ ಅನುಮಾನ.

ಈ ಲೇಖನದಲ್ಲಿರುವ ಹೆಚ್ಚಿನ ಐತಿಹಾಸಿಕ ಸತ್ಯಗಳ ಬಗ್ಗೆ ನನ್ನ ಗಮನ ಸೆಳೆದದ್ದು, ಪಕ್ಕಾ ಬೆಂಗಳೂರು ಹುಡುಗ, ಟ್ವಿಟರ್ ಗೆಳೆಯ ಆದಿತ್ಯ ಕುಲಕರ್ಣಿ. ಅವರ ಟ್ವೀಟುಗಳ ಸರಮಾಲೆಯನ್ನೇ, ಅಲ್ಪಸ್ವಲ್ಪ ಸೇರ್ಪಡೆಗಳೊಂದಿಗೆ ಲೇಖನಸ್ವರೂಪದಲ್ಲಿ ಬರೆದಿದ್ದೇನೆ. ಈ ಇಡೀ ಲೇಖನ Aditya Kulkarni ಅವರಿಗೆ ಸೇರಬೇಕಾದದ್ದು.

#ರಾಘವಾಂಕಣ