ಇವತ್ತಿನ ನಿಂದಾಸ್ತುತಿ ನಮ್ಮ ರಾಜ್ಯದ ದಾಸಪ್ಪನವರದ್ದು. ದಾಸಪ್ಪನವ್ರು ಗೊತ್ತಿಲ್ವೇ!? ಹೇಳ್ತೀನಿ ಕೇಳಿ. ದಾಸಪ್ಪನವರು ಹುಟ್ಟಿದ್ದು ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಚೀಕಲಪರವಿಯಲ್ಲಿ, 1682ರಲ್ಲಿ. ತಂದೆ ಶ್ರೀನಿವಾಸಪ್ಪ ಮತ್ತು ತಾಯಿ ಕೂಸಮ್ಮ. ಕಡುಬಡತನದ ಬ್ರಾಹ್ಮಣ ಕುಟುಂಬ. ಚಿಕ್ಕವಯಸ್ಸಿನಲ್ಲೇ ಮನೆಬಿಟ್ಟು, ದೇಶಸುತ್ತಿ ಕಾಶಿಯಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸವನ್ನು ಪಡೆದುಬಂದು, ಹುಟ್ಟೂರಿನಲ್ಲೇ ನೆಲೆಸುತ್ತಾರೆ. ಹದಿನಾರನೆಯ ವಯಸ್ಸಿನಲ್ಲಿ ಅರಳಮ್ಮ ಎನ್ನುವವರನ್ನು ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕರಿಸುತ್ತಾರೆ. ಬಡತನದ ಕಾರಣದಿಂದ ಇಲ್ಲಿ ಸಂಸಾರನಡೆಸಲಾಗದೇ, ಮರಳಿ ವಾರಣಾಸಿಗೆ ತೆರಳಿದರು ಅಂತಾ ಕಥೆಗಳು ಹೇಳುತ್ತವೆ.
ಒಂದು ದಿನ ಕನಸಿನಲ್ಲಿ ಪುರಂದರದಾಸರು ಕಾಣಿಸಿಕೊಂಡು “ಹರಿದಾಸ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗು” ಎಂದು ಹೇಳಿದರೆಂದೂ, “ವಿಜಯ ವಿಟ್ಟಲ” ಎಂಬ ಅಂಕಿತನಾಮವನ್ನೂ ಅವರೇ ಕೊಟ್ಟರೆಂದೂ ದಾಸಪ್ಪನವರು ಹೇಳಿಕೊಳ್ಳುತ್ತಾರೆ. ಹೀಗೆ ನಮ್ಮ ದಾಸಪ್ಪನವರು, ವಿಜಯದಾಸರಾದರು. ಹರಿದಾಸರಾಗಿ, ಮಧ್ವಾಚಾರ್ಯರ ತತ್ವಗಳನ್ನು ಭೋದಿಸುತ್ತಾ, ಕರ್ನಾಟಕ ಸಂಗೀತಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅನರ್ಘ್ತವಾಗ ಕೊಡುಗೆಗಳನ್ನು ನೀಡಿದರು. ಸುಮಾರು 25,000ಕ್ಕೂ ಹೆಚ್ಚು ಸುಳಾದಿ, ಉಗಾಭೋಗ ಮತ್ತು ಕೀರ್ತನೆಗಳನ್ನು ವಿಜಯದಾಸರು ರಚಿಸಿದ್ದಾರೆ. ವಿಶೇಷವಾಗಿ ಪಂಚರತ್ನ ಸುಳಾದಿಗಳಲ್ಲಿ ವಿಜಯದಾಸರದ್ದು ಎತ್ತಿದ ಕೈ.
ದಾಸಪಂಥದ ಪ್ರಮುಖರಾದ ಹೆಳವನಕಟ್ಟೆ ಗಿರಿಯಮ್ಮ, ಜಗನ್ನಾಥ ದಾಸರು, ಪ್ರಸನ್ನ ವೆಂಕಟದಾಸರ ಸಮಕಾಲೀನರಾದ ವಿಜಯದಾಸರ ಪ್ರಮುಖ ಶಿಷ್ಯರಲ್ಲಿ ಗೋಪಾಲದಾಸರ ಹೆಸರು ಮುಂಚೂಣಿಯಲ್ಲಿರುತ್ತದೆ.
“ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ”, “ಹರಿ ಸರ್ವೊತ್ತಮ ವಾಯು ಜೀವೊತ್ತಮ”, “ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ” ಮುಂತಾದ ದಾಸರಪದಗಳಿಂದ ನಮ್ಮ ನಡುವೆ ಸದಾ ನೆನಪಿನಲ್ಲುಳಿಯುವ ವಿಜಯದಾಸರು ಶ್ರೀನಿವಾಸನ ದರ್ಶನಕ್ಕೆಂದು ತಿರುಪತಿಗೆ ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ತಿರುಪತಿಯ ವೆಂಕಟೇಶನನ್ನು ತರಾಟೆಗೆ ತೆಗೆದುಕೊಳ್ಳುವ ಕುತೂಹಲಕಾರೀ ನಿಂದಾಸ್ತುತಿ ಇಲ್ಲಿದೆ.
ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
(ಸುಳಾದಿ – ಸಾಮಾನ್ಯವಾಗಿ ಕರ್ನಾಟಕ ಸಂಗೀತದಲ್ಲಿ, ರಚನೆಯೊಂದನ್ನು ಹಾಡುವಾಗ, ಇಡೀ ಹಾಡಿನಲ್ಲಿ ಒಂದೇ ರಾಗ ಮತ್ತು ಒಂದೇ ತಾಳ ಇರುವುದು ಸಾಮಾನ್ಯ. ಆದರೆ ಸುಳಾದಿಗಳಲ್ಲಿ ರಾಗವೊಂದೇ ಇದ್ದು, ತಾಳಗಳು ಬದಲಾಗುತ್ತಾ ಸಾಗುತ್ತವೆ. ಕೆಲವೊಮ್ಮೆ ರಾಗಗಳೂ ಬದಲಾಗುವುದುಂಟು. ಸುಳಾದಿಗಳನ್ನು ಹಾಡಲು ಸಂಗೀತದಲ್ಲಿ ಉನ್ನತ ಪಾಂಡಿತ್ಯ ಅತ್ಯಗತ್ಯ. ಸುಳಾದಿಗಳ ಬಗ್ಗೆಯೇ ಒಂದಿಡೀ ಲೇಖನವನ್ನೇ ಬೇರೆಯಾಗಿ ಬರೆಯಬಹುದು)