ಧರ್ಮಮಂಥನ – ೨
ಧರ್ಮ ಎಂದರೇನು? ಹಿಂದೂಗೂ ಧರ್ಮಕ್ಕೂ ಏನು ಸಂಬಂಧ? ಹಿಂದುತ್ವ, ಹಿಂದೂಯಿಸಂ, ಹಿಂದೂಧರ್ಮ ಇವೆಲ್ಲಾ ಒಂದೇನಾ?…..ಎಂಬ ಜಿಜ್ಞಾಸೆ
ಧರ್ಮ ಎಂದರೇನು? ಹಿಂದೂಗೂ ಧರ್ಮಕ್ಕೂ ಏನು ಸಂಬಂಧ? ಹಿಂದುತ್ವ, ಹಿಂದೂಯಿಸಂ, ಹಿಂದೂಧರ್ಮ ಇವೆಲ್ಲಾ ಒಂದೇನಾ?…..ಎಂಬ ಜಿಜ್ಞಾಸೆ
ಧರ್ಮ ಎಂದರೇನು? ಹಿಂದೂಗೂ ಧರ್ಮಕ್ಕೂ ಏನು ಸಂಬಂಧ? ಹಿಂದುತ್ವ, ಹಿಂದೂಯಿಸಂ, ಹಿಂದೂಧರ್ಮ ಇವೆಲ್ಲಾ ಒಂದೇನಾ?…..ಎಂಬ ಜಿಜ್ಞಾಸೆ
ಈ ಸರಣಿ ಯಾಕೆ ಬರೀತಿದ್ದೀನಿ ಅಂತಾ ಮುಂದೆ ಹೇಳ್ತೀನಿ. ಈಗ ಸದ್ಯಕ್ಕೆ ಈ ಸಣ್ಣ ಸಣ್ಣ ತುಣುಕುಗಳನ್ನು ಓದೋಣ.
(*****)
ಪ್ರಕೃತಿಯೊಂದಿಗೆ ಬೆಳೆದು ಬದುಕುವುದೂ ಹಿಂದೂ ಧರ್ಮದ ಮುಖ್ಯ ನಿಯಮಗಳಲ್ಲೊಂದು. ಇದೇ ಕಾರಣಕ್ಕೆ ನಮಗೆ ಕಾಲಿಲ್ಲದೇ ನಡೆಯುವ, ಒಂದೇ ಒಂದು ಹೊಡೆತದಲ್ಲಿ ಮನುಷ್ಯರನ್ನು ಕೊಲ್ಲಬಲ್ಲ ಹಾವಿನಲ್ಲಿ ನಮಗೆ ದೇವರು ಕಂಡಿದ್ದು. ನಮ್ಮಷ್ಟೇ ಬುದ್ಧಿಮತ್ತೆ ಹೊಂದಿದ್ದ ಕೋತಿಗಳಲ್ಲಿ ನಮಗೆ ದೇವರು ಕಂಡಿದ್ದು. ಅಷ್ಟು ದೊಡ್ದದೇಹವಿದ್ದ ಆನೆಯೂ ದೇವರಾಗಿ ಕಂಡಿದ್ದು, ಕರಡಿಯೂ ಪೂಜ್ಯವಾಗಿದ್ದು, ಮನೆಗೆ ಸಾವಿರ ರೀತಿಯಲ್ಲಿ ಸಹಾಯಕವಾಗಿದ್ದ ದನ ಕೂಡಾ ದೇವರ ಸಮಾನವಾಗಿದ್ದು. ನಾನಿಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡುತ್ತಿದ್ದೇನೆಯೇ ಹೊರತು, ಪುರಾಣ ಪುಣ್ಯಕಥೆಗಳ ಕೋನದಿಂದಲ್ಲ. ಅನಾಸ್ತಿಕನಾದ ನನಗೆ, ಈ ಚರ್ಚೆಗೆ, ಹಿರಣ್ಯಕಶಿಪು ಇದ್ದನೋ ಇಲ್ಲವೋ ಎಂಬುದರ ಅಗತ್ಯವಿಲ್ಲ, ಕಾಮಧೇನು ಎಂಬ ಹಸುವಿತ್ತೋ ಅನ್ನೋದೂ ಬೇಡ, ಇಂದ್ರ ವಜ್ರಾಯುಧಗಳ ಕಥೆಯೂ ಬೇಡ. ನಾನು ಕ್ರಿಪೂ 7000ದಿಂದ ಕ್ರಿಶ 100ರವರೆಗೆ ಅಸ್ತಿತ್ವದಲ್ಲಿದ್ದ ಮನುಷ್ಯಕುಲದ ಜೀವನದಲ್ಲಿ ಏನೇನಾಗಿರಬಹುದು ಎಂಬುದರ ಆಧಾರದ ಮೇಲಷ್ಟೇ ಧರ್ಮವನ್ನು ಅವಲೋಕಿಸುತ್ತಿರುವುದು. ನನ್ನ ಪ್ರಕಾರ ಇಂದ್ರನೂ ಇಲ್ಲ, ಅವನಿಗೆ ವಜ್ರಾಯುಧವೂ ಇಲ್ಲ. ಅವೆಲ್ಲಾ (ಹಿರಣ್ಯಕಶಿಪು, ಕಾಮಧೇನು, ಕಲ್ಪವೃಕ್ಷ, ಇಂದ್ರ ಎಲ್ಲವೂ) ಬೇರೆ ಬೇರೆ ಪಾಠಗಳನ್ನು ಕಲಿಯಲು ಬೇಕಾಗುವ ಸಿಂಬಾಲಿಸಂಗಳು.
ಆದರೆ ಶಿಲಾಯುಗದ ಕಾಲದಿಂದಲೂ ಮಿಂಚು ನೆಲಕ್ಕೆ ಬಡಿದಾಗಲೆಲ್ಲಾ ಆದ ಅನಾಹುತಗಳನ್ನೆಲ್ಲಾ ನೋಡಿದ ಮನುಷ್ಯನಿಗೆ ಅಲ್ಲಿ ನಡೆದ ಆ ಹಠಾತ್ ವಿದ್ಯಮಾನಕ್ಕೆ ಒಂದು ಕಾರಣ ಬೇಕಲ್ಲ. ಆಗ ಹುಟ್ಟಿದ್ದೇ ಆ ವಜ್ರಾಯುಧ. ಮಿಂಚೇ ವಜ್ರಾಯುಧ. ಅದನ್ನು ಮುಟ್ಟಿದಾಗಲೆಲ್ಲಾ (ಅಂದರೆ ಸಿಡಿಲು ಮನುಷ್ಯನೊಬ್ಬನಿಗೆ ಬಡಿದಾಗಲೆಲ್ಲಾ) ಜನ ಸತ್ತದ್ದು ನೋಡಿ, ಅದರ ಶಕ್ತಿಯ ಅಗಾಧತೆಯೆಡೆಗೆ ಭಯವೂ, ಗೌರವವೂ ಮೂಡಿತು. ಹೀಗಿದ್ದ ವಜ್ರಾಯುಧವನ್ನು ಬಳಸಲು ಸಾಮಾನ್ಯರಿಗೆ ಸಾಧ್ಯವೇ? ಇದು ದೇವರೇ ಬಳಸುತ್ತಿರುವ ಆಯುಧ. ಅದೂ ಎಂತಾ ದೇವರು!? ಮಿಂಚಿನಿಂದ ಬೆಂಕಿ ಹುಟ್ಟಿದೆ. ಮಿಂಚಿನಿಂದ ಬೆಳಕು ಹುಟ್ಟಿದೆ. ಮಿಂಚಿನಿಂದ ನೀರು ಅಲ್ಲೋಲಕಲ್ಲೋಲವಾಗಿದೆ. ಹಾಗಿದ್ದಮೇಲೆ ಇದನ್ನು ಬಳಸುವವ ಈ ಎಲ್ಲದಕ್ಕೂ ಒಡೆಯ, ಅಂದರೆ ನಮ್ಮ ಬುಡಕಟ್ಟಿನ ನಾಯಕನಿದ್ದಂತೆ ಅವ ದೇವರುಗಳ ನಾಯಕ. ಆ ಒಡೆಯನೇ ಇಂದ್ರನಾದ. (ಇದು ಹಿಂದೂ ಪುರಾಣದಲ್ಲಿ ಮಾತ್ರವಲ್ಲ, ಗ್ರೀಕರ ಝಿಯಸ್’ನ ಆಯುಧವೂ ಈ ಮಿಂಚೇ.) Anyway, ವಿಷಯಾಂತರವಾಯ್ತು. ಏನು ಮಾತಾಡ್ತಿದ್ವಿ!?
ಹಾ! ನಮಗೆ ಎಲ್ಲದರಲ್ಲೂ ದೇವರುಗಳು ಕಂಡರು. ಕಂಡರು ಅನ್ನುವುದಕ್ಕಿಂತಾ, ನಮಗೆ ಎಲ್ಲವೂ ದೇವರೇ ಆಯ್ತು. ಊಟವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಊಟ ದೇವರು (ಅನ್ನಪೂರ್ಣೆ). ನೀರಿಲ್ಲದೇ ಬರಗಾಲ ಬಂದಾಗ ಜನ ಸತ್ತರು, ಅಂದ ಮೇಲೆ ನೀರು ದೇವರು (ವರುಣ). ಬೆಂಕಿಯಿದ್ದರೂ ಕಷ್ಟ, ಇಲ್ಲದಿದ್ದರೇ ಕಷ್ಟ. ಅಂದಮೇಲೆ ಅದೂ ನಮ್ಮ ಅಸ್ತಿತ್ವಕ್ಕೆ ಮುಖ್ಯ. ಅಲ್ಲಿಗೆ ಅದೂ ದೇವರು (ಅಗ್ನಿ). ನೀರಿನಡಿಯಿದ್ದಾಗ ಉಸಿರುಗಟ್ಟಿ ಸತ್ತರು ಅಂದಮೇಲೆ ಗಾಳಿಯಂತೂ ಮಹಾನ್ ಮುಖ್ಯ ದೇವರು (ವಾಯು). ದನವಿಲ್ಲದಿದ್ದರೆ ಸಗಣಿಯಿಲ್ಲ, ಹಾಲಿಲ್ಲ, ಇನ್ನೊಂದಿಲ್ಲ, ಅಂದಮೇಲೆ ದನ ಗೋಮಾತೆಯಾದ್ಲು. ಹೀಗೆ ಬೆಳೆದದ್ದು ನಮ್ಮ ಸಾಮಾನ್ಯ ಜನರ ದೇವರ ಕಲ್ಪನೆ. ಈ ರೀತಿ ನಾವು ಒಂದಕ್ಕಿಂತಾ ಹೆಚ್ಚಿನದರಲ್ಲಿ ದೇವರನ್ನು ಕಂಡೆವು. ಹಾಗೂ ಎಲ್ಲರೂ ನಮಗೆ ಪೂಜ್ಯರಾದರು. ಈ ರೀತಿ ನಾವು ಒಂದಕ್ಕಿಂತಾ ಹೆಚ್ಚು ದೇವರುಗಳನ್ನ ಕಂಡುಕೊಂಡೆವು.
ಈ ಪ್ರಕ್ರಿಯೆಯ ಬೈ-ಪ್ರಾಡಕ್ಟೇ ತಾಳ್ಮೆ, ಸಹನೆ, ಸಹಿಷ್ಣುತೆ ಹಾಗೂ ಸಹಬಾಳ್ವೆ. ಹೇಗೆ ಅಂತೀರಾ? ಅಗ್ನಿಯನ್ನೇ ದೇವರು ಅಂತಾ ಭಾವಿಸಿದ್ದ ಬುಡಕಟ್ಟೊಂದು, ನೀರನ್ನೇ ದೇವರೆಂದು ಭಾವಿಸಿದ್ದ ಬುಡಕಟ್ಟನ್ನು ಸಂಧಿಸಿದ ದಿನವನ್ನು ಊಹಿಸಿಕೊಳ್ಳಿ. ಅವತ್ತು ಖಂಡಿತಾ ಹೊಡೆಬಡಿದಾಟಗಳಾಗಿರಬಹುದು. ಗೆದ್ದವನ ದೇವರೇ ಅಂತಿಮ ಅಂತ ನಿಯಮವೂ ಆಗಿದ್ದರಬಹುದು. (ಹಾಗೆಯೇ ಹೊಡೆದಾಟ ಆಗದೆಯೂ ಇದ್ದಿರಬಹುದು). ಹಾಗೂ ಪರಸ್ಪರ ತಮ್ಮ ತಮ್ಮ ದೇವರ ಬಗ್ಗೆ ಮಾತನಾಡುವಾಗ ನೀರಿನ ಬುಡಕಟ್ಟಿನವರು, ಅಗ್ನಿಯ ಬುಡಕಟ್ಟಿನವರ ದೇವರ ಮೇಲೆ ತಮ್ಮ ದೇವರನ್ನು ಚೆಲ್ಲಿ “ನೋಡಿ ನಿಮ್ಮ ದೇವರನ್ನು ಕೊಂದೆವು” ಎಂದಿದ್ದರಬಹುದು. ಮರುದಿನ ಅಗ್ನಿಯ ಪಾರ್ಟಿಗಳು, ನೀರಿನ ದೇವರನ್ನು ಒಂದು ಪಾತ್ರೆಯಲ್ಲಿಟ್ಟು ಕುದಿಸಿ ಆವಿಯಾಗಿಸಿ “ನೋಡಿ ನಿಮ್ಮ ದೇವರನ್ನು ನಾಪತ್ತೆ ಮಾಡಿದೆವು” ಎಂದಿದ್ದರಬಹುದು. ಇಬ್ಬರಿಗೂ ಆಶ್ಚರ್ಯ!!! ಇಬ್ಬರಿಗೂ “ಓಹೋ ಈ ಎರಡು ದೇವರೂ ಸಮಬಲರು. ಹಾಗೂ ನಮಗೆ ಇಬ್ಬರದ್ದೂ ಅಗತ್ಯವಿದೆ” ಎಂದು ನಂಬಿ ಬುಡಕಟ್ಟುಗಳು ಎರಡೂ ದೇವರನ್ನು ಜೊತೆಜೊತೆಗೆ ಆರಾಧಿಸಿ ಮುಂದುವರಿವೆ. ಈ ಪ್ರಕ್ರಿಯೆ ಒಂದು ದಿನದಲ್ಲೂ ನಡೆದಿರಬಹುದು, ಅಥವಾ ಸಾವಿರ ವರ್ಷಗಳೂ ತೆಗೆದುಕೊಂಡಿರಬಹುದು. ಆದರೆ ಕೊನೆಯಲ್ಲಿ “ಒಂದಕ್ಕಿಂತಾ ಹೆಚ್ಚು ದೇವರನ್ನು ನಂಬುವುದರಿಂದ ತೊಂದರೆಯಂತೂ ಇಲ್ಲ. ಇದ್ದರೆ ಉಪಯೋಗ ಮಾತ್ರವಷ್ಟೇ” ಎಂಬುದೇ ಎಲ್ಲರ ಕೊನೆಯ ಅಭಿಪ್ರಾಯ.
ಹೀಗೆ ಹಿಂದೂ ಧರ್ಮದ ಒಂದು ಮುಖ್ಯ ಗುಣವಾದ ಬಹುಸಂಸ್ಕೃತಿತ್ವ (ನಾನದನ್ನ ಪ್ರಕೃತಿಯ ಆರಾಧನೆ ಅಂತಾ ಕರೆಯಲಿಚ್ಚಿಸುತ್ತೇನೆ) ಚಾಲ್ತಿಗೆ ಬಂತು. ಇಲ್ಲೂ ಕೂಡಾ ಕೆಲ ರಿಲೀಜಿಯನ್ ಮನಸ್ಥಿತಿಗಳು ಇದನ್ನು polytheism, ಅಂದರೆ ಬಹುದೇವೋಪಾಸನೆ, ಅಂತಾ ಬರೆಯುತ್ತಾರೆ. ಅದು ತಪ್ಪು. ನಾವು ಬಹುದೇವರನ್ನು ಉಪಾಸಿಸುತ್ತಿಲ್ಲ. ನಮ್ಮದು pluralistic, ಅಂದರೆ ಬಹುಸಂಸ್ಕೃತಿತ್ವದ ನಾಗರೀಕತೆ. ಅಂದರೆ ಅಂತಿಮ ಸತ್ಯವನ್ನು ಬೇರೆ ಬೇರೆ ರೀತಿಗಳಿಂದಾ ಕಂಡುಕೊಳ್ಳಬಹುದು ಎಂಬುದನ್ನು ಪ್ರತಿಪಾದಿಸಿ, ನಿರೂಪಿಸಿಕೊಂಡ ಬಹುಸಂಸ್ಕೃತಿಗಳ ಆಗರ ಭಾರತ.
ಜನಪದರು, ಅಂದರೆ ಸಾಮಾನ್ಯಜನರು, ಈ ರೀತಿಕಂಡುಕೊಂಡಿದ್ದನ್ನ, ಆಧ್ಯಾತ್ಮಿಕ ಶೋಧಕರು ಒಂದು ಚೌಕಟ್ಟಿನಲ್ಲಿ ಬರೆದರು. ಅದನ್ನು ಚರ್ಚಿಸಿ, ಹಲವಾರು ತಲೆಮಾರುಗಳ ಕಾಲ ಮಂಥಿಸಿ ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಎಂದರು.
ಅಲ್ಲಿಗೆ,
(೧) ನಾವು ಬಹುದೇವೋಪಾಸಕರಲ್ಲ. ಬಹುಸಂಸ್ಕೃತಿತ್ವರು. We are not polytheists. We are pluralists.
(೨) ಈ ಬಹುಸಂಸ್ಕೃತಿತ್ವ ನಮಗೆ ಸಹಸ್ರ ವರ್ಷಗಳ ಹಿಂದೆ ನಮ್ಮತರದಲ್ಲದ ನಂಬಿಕೆಗಳೆಡೆಗೆ ಸಹಿಷ್ಣುತೆಯನ್ನ ಕಲಿಸಿಯಾಗಿದೆ. ಹಾಗೂ ಆ ಬೇರೆ ಬೇರೆ ನಂಬಿಕೆಗಳನ್ನು ಚರ್ಚೆ ಹಾಗೂ ಮಂಥನಗಳ ಮೂಲಕ ಪರಿಹರಿಸಿಕೊಳ್ಳಬಹುದೆಂಬ ಸತ್ಯವನ್ನೂ ಪ್ರತಿಪಾದಿಸಿ, ನಿರೂಪಿಸಿ ತೋರಿಸಿಯಾಗಿದೆ.