ಚೈನಾದ ಒಂದೂರಲ್ಲಿ ಜಾತ್ರೆ ನಡೆಯುತ್ತಿತ್ತು. ಆ ದಿನದ ಸಂಜೆಯ ಕಾರ್ಯಕ್ರಮ ಒಬ್ಬ ಝೆನ್ ಗುರುವಿನ ಭಾಷಣ.
ಜೀವನದ ಸಾರ್ಥಕತೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಮಾತನಾಡಿದ ಗುರು, “ನನಗ್ಗೊತ್ತು. ನಿಮ್ಮಲ್ಲಿ ನಾನು ಮಾತನಾಡಿದ್ದರ ಬಗ್ಗೆ ಇನ್ನೂ ಸಂದೇಹ ಅಥವಾ ಗೊಂದಲಗಳಿರಬಹುದು. ಯಾವಾಗ ಬೇಕಾದರೂ ನನ್ನ ಆಶ್ರಮಕ್ಕೆ ಬನ್ನಿ. ಅವನ್ನು ಪರಿಹರಿಸುವ” ಎಂದ.
ಈ ಭಾಷಣವನ್ನು ಕೇಳಿಸ್ಕೊಳ್ಳುತ್ತಿದ್ದ ಮನಃಶಾಸ್ತ್ರಜ್ಞನೊಬ್ಬ, ಕಾರ್ಯಕ್ರಮ ಮುಗಿದ ನಂತರ ಗುರುವನ್ನು ಹಿಂಬಾಲಿಸಿ, ಮಾರ್ಗಮಧ್ಯದಲ್ಲಿ ಅವನನ್ನು ಸೇರಿದ. ಒಟ್ಟಿಗೆ ನಡೆಯುತ್ತಾ ಕೆಲ ವಿಷಯಗಳನ್ನು ಚರ್ಚಿಸಿ, ಕೊನೆಗೆ ಮನಃಶಾಸ್ತ್ರಜ್ಞ ಕೇಳಿದ “ನನ್ನದೊಂದು ಕೊನೆಯ ಪ್ರಶ್ನೆಯಿದೆ. ನಾನೊಬ್ಬ ಮನಃಶಾಸ್ತ್ರಜ್ಞ. ನಾನು ಓದಿರುವ ಶಾಸ್ತ್ರ ನನಗೆ ರೋಗಿಗಳ ತೊಂದರೆಗಳ ಬಗ್ಗೆ ತಿಳಿಸುತ್ತದೆ. ಉಳಿದ ಕೆಲ ವಿಷಯಗಳನ್ನು ನಾನು ಅವರನ್ನು ಪ್ರಶ್ನಿಸಿ ತಿಳಿದುಕೊಳ್ಳುತ್ತೇನೆ. ಇದರಿಂದ ನನಗೆ ಅವರ ಖಾಯಿಲೆಗಳನ್ನು ಗುಣಪಡಿಸಲು ಸಹಾಯಕವಾಗುತ್ತದೆ. ಆದರೆ ನಿಮ್ಮ ದಾರಿ ಬೇರೆಯೇ ಎಂದೆನಿಸುತ್ತದೆ ನನಗೆ. ನೀವು ಹೇಗೆ ಅವರ ತೊಂದರೆಗಳನ್ನು ಬಗೆಹರಿಸುತ್ತೀರಾ? ಹೇಗೆ ಉತ್ತರಿಸುತ್ತೀರಾ”
ಝೆನ್ ಗುರು ನಿಧಾನದನಿಯಲ್ಲಿ ಹೇಳಿದ “ತೊಂದರೆಗೆ ಪರಿಹಾರ ನನ್ನ ಉತ್ತರದಲ್ಲಿರುವುದಿಲ್ಲ. ಆದರೆ ನಾನು ನನ್ನ ಬಳಿ ಬಂದವರನ್ನು ಅವರು ಪ್ರಶ್ನೆಗಳನ್ನೇ ಕೇಳಲಾಗದ ಸ್ಥಿತಿಗೆ ಕೊಂಡೊಯ್ಯುತ್ತೇನೆ ಅಷ್ಟೇ. ಸಮಸ್ಯೆಗಳಿಗೆ ಸಮಾಧಾನ ಅವಕ್ಕೆ ಉತ್ತರವಲ್ಲ……ಆ ಪ್ರಶ್ನೆಗಳೇ ಇಲ್ಲದಿರುವುದು, ಅಷ್ಟೇ”
ಮನಃಶಾಸ್ತ್ರಜ್ಞನಿಗೆ ಹೊಸದೊಂದು ಹೊಳಹು ಹೊಳೆಯಿತು. ನಕ್ಕು ನಮಸ್ಕರಿಸಿ ಮುಂದುವರೆದ.