ದಿನಕ್ಕೊಂದು ವಿಷಯ – ೧೬
ಭಾರತ ಬಾಂಗ್ಲಾದೊಳಗೋ…ಬಾಂಗ್ಲಾ ಭಾರತದೊಳಗೋ…ಬಾಂಗ್ಲಾ ಭಾರತವೆರಡೂ #51ರೊಳಗೋ!!?
ಕನಕದಾಸರ ಕೀರ್ತನೆಯಾದ ‘ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ’ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ಈ ಕೀರ್ತನೆಯನ್ನು ಸರಿಯಾಗಿ ಕೇಳಿಸಿಕೊಂಡವರು ಖಂಡಿತಾ ಅದರಲ್ಲಿನ ತತ್ವಕ್ಕೆ ಮಾರುಹೋಗಿರುತ್ತಾರೆ. ಹಾಗೆಯೇ ‘ಚಂದ್ರಮುಖಿ-ಪ್ರಾಣಸಖಿ’ ಚಿತ್ರದ ‘ಮನಸೇ ಓ ಮನಸೇ…’ ಹಾಡು ಕೇಳಿದವರು ಖಂಡಿತಾ ಅದರಲ್ಲಿನ ದ್ವಂದ್ವ ಹಾಗೂ ಗೊಂದಲಕ್ಕೆ ಈಡಾಗಿರುತ್ತಾರೆ. ಈ ಒಂದರೊಳಗೊಂದಿರುವುದರ ಗೊಂದಲ ಎಲ್ಲಾಕಡೆಯೂ ಇರುತ್ತದೆ. ಬಹುಷಃ ಮನುಷ್ಯ ಇದ್ದಲ್ಲಿ ಗೊಂದಲಗಳು ಸಹಜ. ಬುದ್ಧಿ ಇದ್ದಲ್ಲಿ ಕೂಡಾ ಗೊಂದಲ ಸಹಜ. ಗೊಂದಲವೆನ್ನುವುದು ನಮ್ಮ ಬೆಳವಣಿಗೆಯ ಸಂಕೇತ. ಅದಿರಬೇಕು. ಆದರೆ ಅದನ್ನು ಪರಿಹರಿಸಿಕೊಳ್ಳುವ ಪ್ರಯತ್ನವೂ ಇರಬೇಕು. ಪರಿಹಾರವಿಲ್ಲದ ಗೊಂದಲವೆಂಬುದು, ಮನೆಯ ಮುಂದೆ ಬೆಳೆದ ಹಾಸುಂಬೆಯಂತೆ. ಅದರಿಂದಾಗಿ ಜಾರಿಬೀಳುವ ಅವಕಾಶಗಳೇ ಹೆಚ್ಚು.
ಈ ಗೊಂದಲಗಳಲ್ಲಿ ಹೆಚ್ಚಿನವು ಮನುಷ್ಯ ನಿರ್ಮಿತ. ದಿನನಿತ್ಯದ ಜೀವನದಲ್ಲಿ ನಾವು ನಮ್ಮ ಆಸೆ, ದುರಾಸೆಗೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲಗಳನ್ನು ನೋಡುತ್ತೇವೆ, ಕೇಳುತ್ತೇವೆ. ಭಾರತದೊಂದಿಗೆ ಪಾಕಿಸ್ಥಾನದ, ಚೀನಾದ ಸರಹದ್ದಿನ ಗೊಂದಲ, ನಮ್ಮ ಹಾಗೂ ಪಕ್ಕದ ರಾಜ್ಯಗಳ ನೀರಿನ ಹಂಚಿಕೆ ಗೊಂದಲ, ಕೋಮು ಸೌಹಾರ್ದದವರಿಗೆ, ಮೋದಿ ಒಳ್ಳೆಯವನೋ? ಕೆಟ್ಟವನೋ? ಎಂಬ ಗೊಂದಲ ಇತ್ಯಾದಿ ಇತ್ಯಾದಿ. ಇವತ್ತಿನ ವಿಷಯ ಮನುಷ್ಯನ ದುರಾಸೆಗೆ ಸಂಬಂದಪಟ್ಟ ಇಂತಹುದೇ ಒಂದು ಗೊಂದಲದ ಸಣ್ಣ ಎಳೆ.
ತುಂಡು ಭೂಮಿಗಾಗಿ ಜಗಳಕಾಯುವವರನ್ನು ನಮ್ಮಲ್ಲಿ ಎಷ್ಟು ಜನ ನೋಡಿಲ್ಲ ಹೇಳಿ. ಈ ಭೂಮಿಯ ಜಗಳಗಳು ತಾರಕಕ್ಕೇರಿ, ಅದಕ್ಕೆ ಉತ್ತರಗಳು ಸಿಗದೇ ‘ಹೇಗಿದೆಯೋ ಹಾಗೇ ಇರಲಿ’ ಎಂಬ ಸ್ಟೇ ಆರ್ಡರುಗಳು ಬಂದ ಕಥೆಗಳನ್ನು ನೀವು ಕೇಳಿಯೇ ಇರುತ್ತೀರಿ. ಎರಡು ದೇಶಗಳ ಮಧ್ಯೆ ಇಂತಾ ಜಗಳಗಳಾದಾಗ ಇವು ಬಗೆಹರಿಯುವುದೇ ಇಲ್ಲ. ‘ಇಷ್ಟು ನನ್ನದು, ಇದಿಷ್ಟು ನಿನ್ನದು’ ಎಂದು ಗೆರೆ ಎಳೆದುಕೊಂಡು ಜಗಳಕಾಯುತ್ತಾರೆ. ಆದರೆ, ಒಬ್ಬನ ಭೂಮಿಯೊಳಗೇ, ಇನ್ನೊಬ್ಬನಿಗೆ ಸೇರಿದ ಭೂಮಿಯಿದ್ದರೆ!? ಇನ್ನೊಮ್ಮೆ ಓದಿ, ನಾನು ಒಬ್ಬನ ಭೂಮಿಯ ಪಕ್ಕ ಇನ್ನೊಬ್ಬನ ಭೂಮಿಯಿರುವುದರ ಬಗ್ಗೆ ಹೇಳುತ್ತಿಲ್ಲ. ಒಬ್ಬನ ಭೂಮಿಯ ಒಳಗೆ ಇನ್ನೊಬ್ಬನ ಭೂಮಿ…….ಹೌದು ಈ ರೀತಿಯ ಬಹಳಷ್ಟು ಜಾಗಗಳು ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಇವೆ. ಕನ್ನಡದಲ್ಲಿ ಬಹುಷಃ ಇದನ್ನು ‘ಅಂತಕ್ಷೇತ್ರ’ ಎಂದು ಅನುವಾದಿಸಬಹುದೇನೋ (ಯಾರಿಗಾದರೂ ಸರಿಯಾದ ಕನ್ನಡ ಪದ ಗೊತ್ತಿದ್ದಲ್ಲಿ ತಿಳಿಸಿ ಪುಣ್ಯಕಟ್ಟಿಕೊಳ್ಳಿ). ಇಂಗ್ಳೀಷಿನಲ್ಲಿ ಇವನ್ನು ಎನ್ಕ್ಲೇವ್ (enclave) ಎಂದು ಕರೆಯುತ್ತಾರೆ.
‘ಎನ್ಕ್ಲೇವ್’ನ ಅರ್ಥ ಹೀಗಿದೆ ‘ಒಂದು ರಾಜ್ಯ/ರಾಷ್ಟ್ರದ ಯಾವುದೇ ಭಾಗವನ್ನು, ಇನ್ನೊಂದು ರಾಜ್ಯ/ರಾಷ್ಟ್ರ ಸಂಪೂರ್ಣವಾಗಿ ಆವರಿಸಿಕೊಂಡಿರುವ ಪ್ರದೇಶ’. ಸಂಪೂರ್ಣವಾಗಿ ಆವರಿಸಿಕೊಳ್ಳುವುದು ಎಂದರೆ, ಆ ‘ಎನ್ಕ್ಲೇವ್’ನ ಯಾವುದೇ ಭಾಗದಿಂದ ಹೊರಹೋಗುವಾಗ ನೀವು ಇನ್ನೊಂದು ರಾಜ್ಯ/ರಾಷ್ಟ್ರ ಮೂಲಕವೇ ಹೋಗಬೇಕು. ಈ ಅಂತಕ್ಷೇತ್ರಗಳ ಲೆಕ್ಕಾಚಾರದಲ್ಲಿ ‘ಪ್ರತಿಕೂಲ ಅಂತಕ್ಷೇತ್ರ’ ಎಂಬ ಲೆಕ್ಕಾಚಾರವೂ ಇದೆ. ಪ್ರತಿಕೂಲ ಅಂತಕ್ಷೇತ್ರಎಂದರೆ ‘A ಯ ಒಳಗಿರುವ, B ಎಂಬ ಎನ್ಕ್ಲೇವಿವ ಒಳಗಿರುವ C ಎಂಬ ಎನ್ಕ್ಲೇವ್, ಹಾಗೂ ಈ C ಎನ್ಕ್ಲೇವ್ Aಗೆ ಸೇರಿದ್ದು’. ಹಾಗೆಯೇ ‘ಬಾಹ್ಯಕ್ಷೇತ್ರ’ (exclave) ಎಂಬ ಪದಬಳಕೆಯೂ ಇದೆ. ಎಕ್ಸ್ಕ್ಲೇವ್ ಎಂದರೆ ‘A ಗೆ ಸೇರಿದ, ಆದರೆ A ಯೊಂದಿಗೆ ಯಾವ ಗಡಿಯೂ ಇಲ್ಲದ, B ಎಂಬ ಇನ್ನೊಂದು ಜಾಗದ ಒಳಗಿರುವ ಪ್ರದೇಶ’. ಎನ್ಕ್ಲೇವುಗಳು ಎಕ್ಲೇವುಗಳಾಗುವುದೂ ಸಾಧ್ಯವಿದೆ. ಪೂರಾ ತಲೆಕೆಡ್ತಾ ಇದೆ ಅನ್ಸುತ್ತಾ? ಕೆಳಗಿರುವ ಚಿತ್ರ 1 ನೋಡಿ, ಎಲ್ಲವೂ ಅರ್ಥವಾಗುತ್ತೆ.
ಈ ಚಿತ್ರದಲ್ಲಿ:
(1) Aಗೆ ಮೂರು excalveಗಳಿವೆ. A1, A2 ಹಾಗೂ A3. ಇವು A ಎಂಬ ತಾಯ್ನಾಡಿನಿಂದ ಬೇರ್ಪಟ್ಟು, ಬೇರೆ ಪ್ರಾಂತ್ಯದ ಒಳಗೆ ಸೇರಿಕೊಂಡಿವೆ. Aಯೊಂದಿಗೆ ಯಾವುದೇ ಗಡಿಬಾಗ ಹೊಂದಿಕೊಂಡಿಲ್ಲ.
(2) A1 ಮತ್ತು A2 ಸಂಪೂರ್ಣವಾಗಿ exclaveಗಳು. ಆದರೆ A3 ಪ್ರದೇಶ Bಯ enclave ಕೂಡಾ ಹೌದು, ಯಾಕೆಂದರೆ ಅದು Bಯಿಂದ ಸಂಪೂರ್ಣವಾಗಿ ಸುತ್ತುವರಿಯಲ್ಪಟ್ಟಿದೆ.
(3) A ಸ್ವತಃ E ಎಂಬ enclave ಅನ್ನೂ, A4 ಮತ್ತು A5 ಎಂಬ counter-enclave ಅನ್ನೂ ಹೊಂದಿದೆ. ಇವನ್ನು ಎರಡನೇ ಕ್ರಮದ ಅಂತಕ್ಷೇತ್ರ (Second order enclave) ಎಂದೂ ಕರೆಯುತ್ತಾರೆ. ಹಾಗೂ E1 ಎಂಬ counter-counter-enclave ಅನ್ನೂ ಹೊಂದಿದೆ. E1 ಅನ್ನು ಮೂರನೇ ಕ್ರಮದ ಅಂತಕ್ಷೇತ್ರ (Third order enclave) ಎಂದು ಕರೆಯುತ್ತಾರೆ.
(4) D ಕೂಡಾ ಎಂದು enclave. D ಪ್ರಾಂತೀಯವಾಗಿ ಯಾವುದೇ ರೀತಿಯಲ್ಲಿ ವಿಭಾಗಿಸಲ್ಪಟ್ಟಿಲ್ಲವಾದ್ದರಿಂದ ಅದನ್ನು enclaved territory ಎಂದು ಕರೆಯುತ್ತಾರೆ.
ಎನ್ಕ್ಲೇವುಗಳು ಸೃಷ್ಟಿಯಾಗಲು ಜಗತ್ತಿನಾದ್ಯಂತ ಹಲವಾರು ಕಾರಣಗಳು ಇವೆ. ಸಾಂಸ್ಕೃತಿಕ, ಜನಾಂಗೀಯ, ತಾತ್ಕಾಲಿಕ ಕಾರಣಗಳಿಗಾಗಿ ಇವು ಸೃಷ್ಟಿಯಾಗಿವೆ. ಕ್ಯಾಥೋಲಿಕರ ಪುಣ್ಯಭೂಮಿ ವ್ಯಾಟಿಕನ್ ಸಹ ಒಂದು ಎನ್ಕ್ಲೇವ್. ಇಟಲಿಯ ರೋಮ್ ಪಟ್ಟಣದೊಳಗಡೆ ಇರುವ ವ್ಯಾಟಿಕನ್, ಒಂದು ಪುಟ್ಟ ದೇಶ ಕೂಡಾ ಹೌದು (ಜಗತ್ತಿನ ಅತೀ ಚಿಕ್ಕದೇಶ). ಇದೊಂದೇ ಅಲ್ಲದೆ, ಇಟಲಿ ದೇಶದ ಒಳಗೇ ಇರುವ ‘ಸ್ಯಾನ್ ಮರೀನೋ’, ಹಾಗೂ ದಕ್ಷಿಣ ಆಪ್ರಿಕಾದ ಒಳಗಿರುವ ‘ಲೆಸೋತೋ’ ಕೂಡಾ ಪ್ರಸಿದ್ಧ ‘ಎನ್ಕ್ಲೇವ್’ಗಳು. ಹಾಗೆಯೇ ಎರಡನೇ ಕ್ರಮದ ಎನ್ಕ್ಲೇವುಗಳಿಗೆ ಪ್ರಸಿದ್ಧ ಉದಾಹರಣೆಗಳು ಡಚ್ ಮುನಿಸಿಪಾಲಿಟಿಯ ಬಾರ್ಲೆ-ನಸ್ಸಾಉ ಪ್ರಾಂತ್ಯದಲ್ಲಿ ಬೆಲ್ಜಿಯಂ ಮುನಿಸಿಪಾಲಿಟಿಗೆ ಸೇರಿದ ಏಳು ಪ್ರಾಂತ್ಯಗಳು. ಎರಡನೇ ಮಹಾಯುದ್ಧದ ನಂತರ ಯೂರೋಪಿನಲ್ಲಿ ಅಸಂಖ್ಯಾತ ಅಂತಕ್ಷೇತ್ರಗಳು ಸೃಷ್ಟಿಯಾಗಿವೆ. ಇಲ್ಲೇ ನಾನಿರುವ ‘ಸಂಯುಕ್ತ ಅರಬ್ ಎಮಿರೇಟ್ಸ್’ನಲ್ಲಿರುವ ಒಮಾನಿಗೆ ಸೇರಿದ ‘ಮಧಾ’ ಪ್ರಾಂತ್ಯದೊಳಗಿರುವ ಸಂ.ಅ.ಎ.ಗೆ ಸೇರಿದ ‘ನಹ್ವಾ’ ಪ್ರಾಂತ್ಯ ಕೂಡಾ ಒಂದು ಎರಡನೇ ದರ್ಜೆಯ ಎನ್ಕ್ಲೇವ್.
ಜಗತ್ತಿನಲ್ಲಿ ಬೇಕಾದಷ್ಟು ಮೊದಲ ಕ್ರಮದ ಹಾಗೂ ಎರಡನೇ ಕ್ರಮದ ‘ಎನ್ಕ್ಲೇವ್’ಗಳಿವೆ. ಆದರೆ ಮೂರನೆ ಕ್ರಮದ ಎನ್ಕ್ಲೇವ್ ಇರುವುದು ಒಂದೇ ಒಂದು. ಅದೂ ಕೂಡಾ ನಮ್ಮ ಭಾರತದಲ್ಲೇ ಇದೆ. ಗೊತ್ತಿದೆಯಾ!!!!
ಜಮೀನ್ದಾರಿ ಪದ್ದತಿಯ ಅಡಿಯಲ್ಲಿದ್ದ ಭೂಮಿ ಹರಿದು ಹಂಚಿ ಹೋಗಿ, ಅದೇ ಸಮಯದಲ್ಲಿ ದೇಶಗಳು ಬೇರೆ ಬೇರೆಯಾದಾಗ ಸೃಷ್ಟಿಯಾಗಿರುವ ಎನ್ಕ್ಲೇವುಗಳ ಸರಮಾಲೆಯೇ ಭಾರತ ಹಾಗು ಬಾಂಗ್ಲಾದೇಶದಲ್ಲಿ ಇವೆ. ಅದರಲ್ಲೂ ಹೆಚ್ಚಿನವುಗಳು ತುಂಬಿರುವುದು ಬಂಗಾಳದ ‘ಕೂಚ್ ಬೆಹಾರ್’ ಜಿಲ್ಲೆಯಲ್ಲಿ. ನೆರೆಯ ಬಾಂಗ್ಲಾದೇಶಕ್ಕೆ ಅಂಟಿಕೊಂಡೇ ಇರುವ ಕೂಚ್ ಬೆಹಾರ್ ತನ್ನ ಪುರಾತನ ಅರಮನೆಗೆ ಹಾಗೂ ಮದನ್ ಮೋಹನ್ ದೇವಾಲಯಕ್ಕೆ ಪ್ರಸಿದ್ಧ. 1947ರಲ್ಲಿ ಬ್ರಿಟೀಷ್ ಭಾರತ ಹಾಗೂ ಬಂಗಾಳದ ವಿಭಜನೆ ನಡೆದಾಗ ಸೃಷ್ಟಿಯಾದ ಎರಡನೇ ಕ್ರಮದ ಎನ್ಕ್ಲೇವುಗಳಿಗೆ ಲೆಕ್ಕವೇ ಇಲ್ಲ. ಅದರೊಟ್ಟಿಗೇ ಇಲ್ಲೊಂದು, ಜಗತ್ತಿನಲ್ಲೇ ಏಕೈಕ ಮೂರನೇ ಕ್ರಮದ ಅಂತಕ್ಷೇತ್ರ ಕೂಡಾ ಸೃಷ್ಟಿಯಾಯಿತು. ಇದೇನೂ ಸಾವಿರಾರು ಎಕರೆಯಷ್ಟು ವಿಸ್ತಾರದ ಭೂಮಿಯಲ್ಲ. ಬರೇ 7000ಚದರ ಮೀಟರ್ನಷ್ಟು ವಿಸ್ತಾರದ ಭೂಮಿಯಷ್ಟೇ. ‘ದಹಾಲ ಖಗ್ರಾಬಾರಿ (ಸಂಖ್ಯೆ 51)’ ಎಂಬ ಭೂಮಿಯ ತುಂಡೇ ಈ ಅಪರೂಪದ third order enclave (ಚಿತ್ರ 2 ಮತ್ತು 3). ಈ ಭೂಮಿಯ ಒಡೆಯ ಒಬ್ಬ ಬಾಂಗ್ಲಾದೇಶೀ ರೈತ. ಆತ ವಾಸವಾಗಿರುವುದು ಇಲ್ಲೇ ಈ ಜಾಗಕ್ಕೇ ಹತ್ತಿರವಿರುವ ಬಾಂಗ್ಲಾದೇಶಕ್ಕೆ ಸೇರಿದ ಎರಡನೇ ಕ್ರಮದ ಎನ್ಕ್ಲೇವಿನ ಒಂದು ಹಳ್ಳಿಯಲ್ಲಿ (ಸ್ವತಃ ಈ ಹಳ್ಳಿ ಕೂಡಾ ಭಾರತದ ಪ್ರದೇಶದೊಳಗಿದೆ 🙂 ) ಅಂದರೆ ಈ ದಹಾಲ ಖಗ್ರಬಾರಿ ಎನ್ನುವ ಜಾಗದಲ್ಲಿ ನೀವು ನಿಂತರೆ, ನೀವು ‘ಭಾರತದೊಳಗಿರುವ ಬಾಂಗ್ಲಾದೇಶದ ಒಳಗಿರುವ ಭಾರತದ ಭೂಮಿಯಲ್ಲಿರುವ ಭಾಗ್ಲಾದೇಶದ ಒಳಗಿರುವ ಭಾರತ’ದಲ್ಲಿ ನಿಂತಂತಾಗುತ್ತದೆ (ಚಿತ್ರ 4).
ಇಲ್ಲಿನ ಜನರಿಗೆ ಆ ಸಂಕೀರ್ಣ ಪರಿಸ್ಥಿತಿಯಿಂದಾಗಿ ಇಲ್ಲದ ತಲೇನೋವು. ವೀಸಾ ನಿಯಮಗಳ ಕ್ಲಿಷ್ಟತೆ ಹಾಗು ಅರ್ಥವಾಗದ ರೂಲ್ಸುಗಳ ಮಧ್ಯೆ ಇಲ್ಲಿರುವ ಜನ ದಿನಾ ಬವಣೆ ಪಡುತ್ತಾರೆ. ಈ ಎನ್ಕ್ಲೇವುಗಳ ಕೀಟಲೆಯಿಂದಾಗಿ ಇವರಿಗೆ ಪಾಸ್ಪೋರ್ಟುಗಳೂ ಲಭ್ಯವಿಲ್ಲ. ಪಾಸ್ಪೋರ್ಟು ಇಲ್ಲದೆ ಮೇಲೆ ವೀಸಾ ಕೂಡ ಇಲ್ಲ. ಆದರೆ ಇಲ್ಲಿರುವ ಜನರಲ್ಲಿ ಹೆಚ್ಚಿನರೆಲ್ಲಾ ರೈತರು ಹಾಗೂ ಬಡತನ ರೇಖೆಗಿಂತಾ ಕೆಳಗಿರುವರು. ಅವರಿಗೆ ವೀಸಾ, ಪಾಸ್ಪೋರ್ಟುಗಳ ಅವಶ್ಯಕತೆಯಾಗಲೀ ಅದರ ಹೆಸರಿನ ಅರ್ಥವಾಗಲೀ ಅರಿಯದೆ ಸಧ್ಯಕ್ಕೆ ಅದ್ಯಾವುದೂ ನಮಗೆ ಬೇಡ ಎಂದು ಆರಾಮಾಗಿದ್ದಾರೆ. ಆದರೆ ಪಾಪ, ಆಗೀಗ ಇಲ್ಲಿ ಗಡಿ ಅತಿಕ್ರಮಣದ ಬಗ್ಗೆ ಕಿರಿಕ್ಕುಗಳು ನಡೆದು, ಪೋಲೀಸು, ಸೈನ್ಯ ಹಾಗೂ ನಾಗರೀಕರ ನಡುವ ಜಟಾಪಟಿಗಳು, ಗಾಳಿಯಲ್ಲಿ ಗುಂಡುಹಾರಿಸುವಿಕೆ ನಡೆಯುತ್ತಲೇ ಇರುತ್ತವೆ.
ಕೊಸರು:
‘ಸರ್ವೇ ಜನಾ ಸುಖಿನೋ ಭವಂತು’ ಅನ್ನೋ ಸಂಸ್ಕೃತ ಶ್ಲೋಕ ಇಲ್ಲೇಕೋ ಅರ್ಥ ತಪ್ಪುತ್ತಾ ಇದೆ. ಈ ಸರ್ವೇ ಡಿಪಾರ್ಟ್ಮೇಂನವರು ಮಾಡಿದ ತರಲೆ ಕೆಲ್ಸಕ್ಕೆ, ಎರಡೂ ಸರ್ಕಾರಗಳು (ಹಾಗೂ ಅಸಂಖ್ಯಾತ ರಾಜ್ಯಸರ್ಕಾರ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು) ಈಗಲೂ ಕಾಲು ಕೆರೆದುಕೊಂಡು ಕಾದಾಡ್ತಾ ಇವೆ 🙂 ಹಾಗಾಗಿ ಇಲ್ಲಿ ‘Survey ಜನರಿಂದಾಗಿ ಸುಖೀ No ಭವಂತು’ ಅಂತಾ ಆಗಿದೆ.
#ದಿನಕ್ಕೊಂದು_ವಿಷಯ, #Enclave, #Dahala_Khagrabari_#_51