ಕರ್ನಾಟಕದಾ ಇತಿಹಾಸದಲೀ…ಹೊಲಸಿನ ಯುಗದಾ ಕತೆಯನ್ನು, ಹಾಡುವೆ ಕೇಳಿ….ನಾ ಹಾಡುವೆ ಕೇಳಿ :)

ಮತದಾರ ತಾನು ಎಂತಹ ನಿಸ್ಸಹಾಯಕ ಸ್ಥಿತಿಯಲ್ಲಿದ್ದೀನಿ ಎಂಬುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರುವುದು ಬಿ.ಜೆ.ಪಿ ಯ ಹೊಲಸು ರಾಜಕಾರಣದಿಂದಲೇ ಹೊರತು, ಸ್ವಂತ ಬಲದಿಂದಲ್ಲ. ಕರ್ನಾಟಕದಲ್ಲಿ ಸ್ವಂತ ಬಲದಿಂದ ಕಾಂಗ್ರೆಸ್ಸಿಗೆ ಗೆಲ್ಲುವ ಶಕ್ತಿಯೂ ಇಲ್ಲ, ಅದನ್ನು ಮುನ್ನೆಡೆಸುವ ವರ್ಚಸ್ವೀ ನಾಯಕನೂ ಅದರಲ್ಲಿ ಇಲ್ಲ. ಇರೋ ಕೆಟ್ಟ ಆಯ್ಕೆಗಳಲ್ಲಿ ಬಹುಷಃ ಕಡಿಮೆ ಕೆಟ್ಟ ಆಯ್ಕೆ ಮಾಡಿದದ್ದೇವೆ. ಜನರ ನೆನೆಪಿನ ಶಕ್ತಿ ಕಡಿಮೆಯಾದ್ದರಿಂದ, ಮತದಾರ ಕಾಂಗ್ರೆಸ್ಸಿನ ಬೀಜವಿಲ್ಲದ ಆಡಳಿತ ಮರೆತು, ಹೋರಿಬೀಜದ ಬಿ.ಜೆ.ಪಿಯನ್ನು ಬದಿಗೊತ್ತಿದ್ದಾರೆ. (ಮನಸ್ಸೋ ಇಚ್ಚೆ ರಾಜಕಾರಣ ಮಾಡಿದ್ದರಿಂದ ಹೋರಿಯ ಉದಾಹರಣೆ ಅಷ್ಟೆ, ಬೇರೆ ಯಾವ ಯೋಚನೆಗಳೂ ನಿಮ್ಮ ಮನದತ್ತ ಸುಳಿಯದಿರಲಿ). ಇತ್ತ ಸಿದ್ದರಾಮಯ್ಯನಂತಾ ವ್ಯಕ್ತಿತ್ವವೇ ಇಲ್ಲದ ಮುಖ್ಯಮಂತ್ರಿಯನ್ನು ಊಹಿಸಿಕೊಳ್ಳುವುದಕ್ಕೂ ಅಸಾದ್ಯ. ಅತ್ತ ಸುಧಾರಣಾ ರಾಜಕಾರಣ  ಮಾಡಿದ ಸಿ.ಟಿ.ರವಿ, ಜೀವರಾಜ್, ಅಪ್ಪಚ್ಚು ರಂಜನ್ ರಂತಹ ಅಭ್ಯರ್ಥಿಗಳು ಬೇರೆಯವರು ಮಾಡಿದ ಕಚಡಾ ಕೆಲಸಕ್ಕೆ ಬೆಲೆ ತೆರುವಂತಾಗಿದೆ.

ಯಡಿಯೂರಪ್ಪ ತಾನು ಮುಳುಗೋದಲ್ದೆ, ತನ್ನೊಟ್ಟಿಗೆ ಬಿ.ಜೆ.ಪಿಯ ಎರಡನೇ ಸುತ್ತಿನ ಅವಕಾಶದ ಆಸೆಗಳು ಹಾಗೂ ಶೋಭಕ್ಕನಂತಾ ಒಳ್ಳೆ ನಾಯಕಿಯನ್ನೂ ಮುಳುಗಿಸಿಬಿಟ್ಟ. ಯೆಡ್ಡಿಯ ಈ ‘ಸಿಪಾಯಿದಂಗೆ’ಯ ಒಂದೇ ಸಂತೋಷದ ಸಂಗತಿ ಅಂದರೆ, ರೇಣುಕಾಚಾರ್ಯನಂತಹ ಬೆನ್ನೆಲುಬಿಲ್ಲದ ರಾಜಕಾರಣಿಯನ್ನು ಸೋಲುವಂತೆ ಮಾಡಿದ್ದು (ಪಾಪ ರೇಣುಗೆ ಮುತ್ತು ಕೊಟ್ಟು ಸಮಾಧಾನ ಮಾಡ್ಸೋಣ ಅಂದ್ರೆ, ಜಯಕ್ಕ ಬೇರೆ ಬಿಗ್ ಬಾಸ್ ನಲ್ಲಿ ಬಿಝಿ…ತ್ಚು ತ್ಚು ತ್ಚು)

ಮುಂದಿನ ಸೂಕ್ಷ್ಮ ರಾಜಕಾರಣ ನಡೆಗಳು:
೧) ಇನ್ನೊಂದು ವರ್ಷ ಕರ್ನಾಟಕಕ್ಕೆ ಕೇಂದ್ರದಿಂದ ಸವಲತ್ತೋ ಸವಲತ್ತು. ೨೦೧೩-೧೪ ಕನ್ನಡಿಗರಿಗೆ ಸುವರ್ಣವರ್ಷ. ಬಹುಶಃ ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿಕ್ಕೆ ಪಕ್ವವಾದ ಸಮಯ 🙂
೨) ಮುಂದಿನ ಲೋಕಸಭಾ ಚುನಾವಣೆಯ ಸಮಯಕ್ಕೆ ಮತದಾರರನ್ನು ಓಲೈಸಲು, ಇನ್ನೂ ಸ್ವಲ್ಪ ಜಾಸ್ತಿ ಅನುದಾನ ಕೇಂದ್ರದಿಂದ ಬಂದರೂ ಆಶ್ಚರ್ಯವೇನಿಲ್ಲ
೩) ಮುಂದಿನ ಕೇಂದ್ರ ಚುನಾವಣೆಯಲ್ಲಿ ಮತ್ತೇನಾದರೂ ಯು.ಪಿ.ಎ ಚುಕ್ಕಾಣಿ ಹಿಡಿದರೆ (ಬಹಳವೇ ದೂರದ ಸಾದ್ಯತೆ), ಅಥವಾ ದೇವರೇನಾದ್ರೂ ನಿದ್ದೆ ಗಿದ್ದೆ ಮಾಡಿ ಕಾಂಗ್ರೆಸ್ಸಿಗೇ ಬಹುಮತ ಸಿಕ್ಕಿಬಿಟ್ಟರೆ, ನಮಗೆ ಇನ್ನೂ ಸ್ವಲ್ಪ ದಿನ ನೆಮ್ಮದಿ. ಆದರೆ ದೇಶ ಅಧೋಗತಿ ಹಿಡಿಯುವದಂತೂ ನಿಶ್ಚಿತ 😦
೩) ಆದರೆ, ೨೦೧೪ರಲ್ಲಿ ಕೇಂದ್ರದಲ್ಲಿ ಏನಾದರೂ ಬಿ.ಜೆ.ಪಿ ಅದಿಕಾರಕ್ಕೆ ಬಂದರೆ, ಮತ್ತದೇ ಹಳೇ ಹಣೆಬರಹ ನಮ್ಮದು.

ನಮ್ಮ ಕರ್ಮ. ೧೯೯೨ರಿಂದಲೂ ಕರ್ನಾಟಕಕ್ಕೆ ಕೇಂದ್ರದ ಆಡಳಿತ ಪಕ್ಷ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲೇ ಇಲ್ಲ. ಈ ಬಾರಿಯೂ ಅದನ್ನೇ ಮತ್ತೆ ಉಣಬಡಿಸಿದ್ದಾನೆ ಮತದಾರ. ಬೆಂಗಳೂರಿನ ೩೨ ಲಕ್ಷ ‘ಅ’ಮತದಾರರು ಮೇ ೪ ರಂದು ಹೊರಬಂದಿದ್ದರೆ, ಸಮೀಕರಣ ಸ್ವಲ್ಪ ಬದಲಾಗುತ್ತಿತ್ತೇನೋ (ಬೆಂಗಳೂರು ಒಂದು ಉಪಮೆ ಮಾತ್ರ, ಈ ಮಾತು ಎಲ್ಲಾ ಚುನಾವಣಾ ಕ್ಷೇತ್ರಗಳಿಗೂ ಅನ್ವಯವಾಗುವಂತದ್ದು). ಆದರೆ, ಚುನಾವಣೆ ಆಗಿ ಹೋಗಿದೆ. ಪಲಿತಾಂಶ ನಮ್ಮ ಮುಂದಿದೆ. ನೋಡೋಣ ನಮ್ಮ ಭವಿಷ್ಯ ಹೇಗೆ ರೂಪುಗೊಳ್ಳುತ್ತದೆಂದು? ಆಶಾವಾದವೇ best ವಾದ. ಆಶಯಿಸುವಂತ್ತಿದ್ದರೆ ಒಳ್ಳೆಯದನ್ನೇ ಆಶಿಸೋಣ, ಏನಂತೀರ?