ಬಿಸಿ ಬಿಸಿ ಸರ್ವರುಗಳೂ, ಅವನ್ನು ತಂಪಾಗಿಸುವ ಕೂಲ್ ಕೂಲ್ ಐಡಿಯಾಗಳೂ

ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು.

ಮೇಲ್ನೋಟಕ್ಕೆ ಕಾಮಿಡಿಯಾಗಿ ಕಾಣುವ ಈ ಲೇಖನ ನಿಜಕ್ಕೂ ಸತ್ಯದ ಅಂಶಗಳಿಂದ ಕೂಡಿದೆ. ಆದರೆ ಅವರು ಅದನ್ನು ಬರೆದ ರೀತಿ ಹಾಸ್ಯಾಸ್ಪದವಾಗಿ, ತಪ್ಪುಮಾಹಿತಿಗಳಿಂದ ಕೂಡಿ ಅರ್ಧಸತ್ಯವಾಗಿದೆ ಅಷ್ಟೇ. ಅವರು “ಸಣ್ಣ ಈಮೇಲ್’ಗಳನ್ನು ಕಳುಹಿಸಿ, ಮೊಬೈಲ್ ಚಾರ್ಜ್ ಆದಮೇಲೆ ಸ್ವಿಚ್ ಆಫ್ ಮಾಡಿ, ಬಳಸದೇ ಇರೋ ಆಪ್’ಗಳನ್ನು ಫೋನಿನಿಂದ ಅಳಿಸಿ, ಸಾಮಾಜಿಕ ತಾಣದಲ್ಲಿ ಅನಗತ್ಯ ಚರ್ಚೆ ಮಾಡಬೇಡಿ” ಅಂತೆಲ್ಲಾ ಬರೆದಿರೋದು ಮಾತ್ರ ಪೂರ್ತಿ ಕಾಮಿಡಿಯೇ ಆಗಿದೆ.

ವಿಷಯಕ್ಕೆ ಬರೋಣ. ನಾವು ಬಳಸುವ ಪ್ರತಿಯೊಂದು ವೆಬ್ಸೈಟು, ಅಂತರ್ಜಾಲ ಸೇವೆಗಳು (ಈಮೇಲ್, ಶಾಪಿಂಗ್, ಚಾಟ್) ಮತ್ತು ಸಾಮಾಜಿಕ ತಾಣಗಳು ದೊಡ್ಡಮಟ್ಟದ ಡೇಟಾಸೆಂಟರುಗಳನ್ನು ಬಳಸುತ್ತವೆ. ಸಾವಿರಾರು ಸರ್ವರುಗಳ ಈ ಬೃಹತ್ ಡೇಟಾಸೆಂಟರುಗಳಲ್ಲಿ ಸರ್ವರುಗಳು ಬಳಸುವ ವಿದ್ಯುತ್ ದೊಡ್ಡಮಟ್ಟದ್ದೇ. ಈ ಸರ್ವರುಗಳು ನಮ್ಮ ನಿಮ್ಮ ಕಂಪ್ಯೂಟರುಗಳಂತೆ ಸಾವಿರಾರು ಸಣ್ಣಸಣ್ಣಕೆಲಸಗಳನ್ನು ಮಾಡುವವಲ್ಲ. ಅವು ತಮಗೆ ಕೊಟ್ಟ ಕೆಲವೇ ಕೆಲವು ಕೆಲಸಗಳನ್ನು ಮತ್ತೆ ಮತ್ತೆ ಶರವೇಗದಲ್ಲಿ ಮುಗಿಸುವಂತವು. ಈ ಶರವೇಗದ ಸರದಾರರು ತಮ್ಮ ಕ್ಷಮತೆಯ 80-90% ಎಫಿಷೆಯೆನ್ಸಿ ಲೆವೆಲ್ಲಿನಲ್ಲಿ ಕೆಲಸ ಮಾಡುವಾಗ ವಿಪರೀತ ಬಿಸಿಯಾಗುತ್ತವೆ. ಹಾಗಾಗಿ ಈ ಸರ್ವರುಗಳು ಬಳಸುವ ಶಕ್ತಿಗಿಂತಲೂ ಮೂರುಪಟ್ಟು ಹೆಚ್ಚು ವಿದ್ಯುತ್ಚಕ್ತಿ, ಈ ಡೇಟಾಸೆಂಟರುಗಳನ್ನು ತಣ್ಣಗಿಡುವುದಕ್ಕೇ ಖರ್ಚಾಗುತ್ತದೆ. ಸಾವಿರಾರು ಟನ್ ಕ್ಷಮತೆಯ ದೈತ್ಯಾಕಾರದ ಏರ್ಕಂಡೀಷನರುಗಳು ಡೇಟಾಸೆಂಟರುಗಳನ್ನು ಹದಿಮೂರದಿನಾಲ್ಕು ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸದಾ ತಣ್ಣಗಿಡುತ್ತವೆ. ಸರ್ವರುಗಳ ಮೇಲೆ ಹೆಚ್ಚೆಚ್ಚು ಕೆಲಸ ಬಿದ್ದಷ್ಟೂ ಉದಾಹರಣೆಗೆ ಭಾರತದಲ್ಲಿ ಸರ್ಕಾರ ಬಿದ್ದ ದಿನ, ಕಿಮ್ ಕರ್ದಾಷಿಯಾನಳ ತೊಡೆಸಂಧಿಯೊಂದು ಸಾರ್ವಜನಿಕವಾಗಿ ಕಂಡದಿನ, ಫ್ಲಿಪ್ಕಾರ್ಟ್-ಅಮೆಜಾನ್’ಗಳಲ್ಲಿ ಸೂಪರ್ ಸೇಲ್ ನಡೆವ ದಿನ, ಟ್ರಂಪ್ ಮೆಕ್ಸಿಕೋ ಬಗ್ಗೆ ಏನಾದರೂ ಹೇಳಿದ ದಿನ ಜನ ಸಾಮಾಜಿಕ ತಾಣಗಳಲ್ಲಿ ಮುಗಿಬಿದ್ದಾಗ, ಈ ಸರ್ವರುಗಳು ಅಕ್ಷರಷಃ ಅಂಡಿಗೆ ಬೆಂಕಿಬಿದ್ದಂಗೆ ಕೆಲಸ ಮಾಡುತ್ತಿರುತ್ತವೆ. ಇದನ್ನೇ ಸ್ವಲ್ಪ ದೊಡ್ಡಮಟ್ಟದಲ್ಲಿ ನೋಡಿದಾಗ, ಆ ಲೇಖನದಲ್ಲಿ ಹೇಳಿದಂಗೆ ದೊಡ್ಡ ಈಮೇಲುಗಳು, ದೊಡ್ಡ ಅಟ್ಯಾಚ್ಮೆಂಟುಗಳನ್ನು ಕಳಿಸಿದಾಗ, ಇನ್ಸ್ಟಾಗ್ರಾಂಗೆ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ, ನಾನೀ ಆರ್ಟಿಕಲ್ ಬರೆದಾಗ, ಅದನ್ನು ನೀವು ಓದಿ ಕಮೆಂಟು ಮಾಡಿದಾಗ, ಶೇರ್ ಮಾಡಿದಾಗಲೆಲ್ಲಾ ಸ್ವಲ್ಪಸ್ವಲ್ಪವೇ ಕೆಲಸ ಹೆಚ್ಚಾಗಿ ಸರ್ವರುಗಳು ಒಂದಂಶ ಬಿಸಿಯಾಗುತ್ತವೆ. ಅವನ್ನು ತಣ್ಣಗಾಗಿಸುವ ಏರ್ಕಂಡೀಷನರ್ಗಳ ಮೇಲೂ ಒಂದಂಶ ಕೆಲಸ ಹೆಚ್ಚಾಗುತ್ತದೆ. ಅವನ್ನು ನಡೆಸುವ ಜನರೇಟರುಗಳು, ಅಥವಾ ವಿದ್ಯುತ್ ಒದಗಿಸುವ ಗ್ರಿಡ್ ಅವುಗಳೆಡೆಗೆ ಹೆಚ್ಚು ಶಕ್ತಿ ಹರಿಸುತ್ತಾ ಸಣ್ಣಗೆ ಒಂದುಸಲ ಹೂಂಕರಿಸುತ್ತದೆ. ಈ ಹೂಂಕಾರದಲ್ಲಿ ಇಂಗಾಲವೊಂದಷ್ಟು ವಾತಾವರಣ ಸೇರುತ್ತದೆ. ಇದು ಆ ಲೇಖನದ ಮೂಲೋದ್ದೇಶ.

ಆದರೆ ನಿಜಕ್ಕೂ ಕಥೆ ಹೀಗೆಲ್ಲಾ ಇದೆಯೇ? 2012ರ ಒಂದು ಅಂದಾಜಿನ ಪ್ರಕಾರ 2025ಕ್ಕೆ ಜಗತ್ತಿನಲ್ಲಿ ಉತ್ಪಾದನೆಯಾದ ಐದನೇ ಒಂದು ಭಾಗ ವಿದ್ಯುತ್ಶಕ್ತಿ ಈ ರೀತಿಯ ಡೇಟಾ ಸೆಂಟರುಗಳನ್ನು ತಣ್ಣಗಿಡುವುದಕ್ಕೇ ಬೇಕಾಗುತ್ತದೆ ಅಂತಾ ಹೇಳಲಾಗಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಈ ರಂಗದಲ್ಲಿ ಅದ್ವಿತೀಯ ಬದಲಾವಣೆಗಳಾಗಿವೆ. 2017ರಿಂದೀಚೆಗೆ ಡೇಟಾಸೆಂಟರ್ ಮ್ಯಾನೇಜ್ಮೆಂಟ್ ಕಂಪನಿಗಳು ತಮ್ಮ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇಕಡಾ 17%ಕಡಿಮೆ ಮಾಡಿವೆ! ಹೇಗೆ ಅಂತೀರಾ? ಇಲ್ಲಿ ನಡೆದಿರುವ ಕೆಲ ತಾಂತ್ರಿಕಬೆಳವಣಿಗೆಗಳನ್ನು ನೋಡೋಣ ಬನ್ನಿ:

(೧) ತಂತ್ರಜ್ಞಾನ ಜಗತ್ತಿನ ದೈತ್ಯ ಗೂಗಲ್ ಇವತ್ತಿಗೂ ಜಗತ್ತಿನ ಕೆಲ ಅತೀದೊಡ್ಡ ಡೇಟಾಸೆಂಟರುಗಳನ್ನು ಹೊಂದಿದೆ. ತನ್ನ ಹತ್ತು ಹಲವು ಸೇವೆಗಳಿಗೆ ಮಾತ್ರವಲ್ಲದೇ, ಬೇರೆ ಕಂಪನಿಗಳ ದತ್ತಾಂಶವನ್ನೂ ತನ್ನ ಡೇಟಾಸೆಂಟರುಗಳಲ್ಲಿ ಕಾಪಿಡುತ್ತದೆ. ಮೊತ್ತಮೊದಲಿಗೆ ಗೂಗಲ್ ತಂದ ಬದಲಾವಣೆಯೇನೆಂದರೆ, ಕಡಿಮೆ ಬಾಡಿಗೆಗೆ ಜಾಗ ಸಿಗುತ್ತದೆ ಎಂಬ ಕಾರಣಕ್ಕೆ ಅರಿಝೋನಾ, ನೆವಾಡಾದಂತಹ ಮರುಭೂಮಿ ರಾಜ್ಯಗಳಲ್ಲಿ ಸ್ಥಾಪಿಸಿದ್ದ ತನ್ನ ಡೇಟಾಸೆಂಟರುಗಳನ್ನು ತಂಪಾದ ಹವಾಮಾನವಿರುವ ಜಾಗಗಳಿಗೆ ಬದಲಾಯಿಸಿದ್ದು. ಇಲ್ಲಿ ನೈಸರ್ಗಿಕವಾಗಿಯೇ ಹವಾಮಾನ ತಂಪಿರುವುದರಿಂದ ನೀವು ಆ ತಂಪುಗಾಳಿಯನ್ನೇ ಬಳಸಿ aircooled ಡೇಟಾಸೆಂಟರುಗಳ ಪರಿಕಲ್ಪನೆ ರೂಪಿಸಿದ್ದು. ಯಾವಾಗ ಬರೀ aircooling ಸಾಕಾಗುವುದಿಲ್ಲ ಎಂದೆನಿಸಿತೋ ಆಗ ನೀರನ್ನು ಉಪಯೋಗಿಸಿ watercooled ಡೇಟಾಸೆಂಟರುಗಳನ್ನಾಗಿ ಪರಿವರ್ತಿಸಿದ್ದು. ಇದಾದ ಆರೇತಿಂಗಳಿಗೆ ನೀರನ್ನು ಬಳಸಿ ತಂಪುಮಾಡುವಾಗ ಅದೇನೂ ತಾಜಾನೀರಾಗಬೇಕಿಲ್ಲ ಎಂಬುದನ್ನರಿತು, ಆ ಡೇಟಾಸೆಂಟರುಗಳಿರುವ ಊರುಗಳ ಅಕ್ಕಪಕ್ಕದ ಮುನಿಸಿಪಲ್ ಕೌನ್ಸಿಲುಗಳೊಂದಿಗೆ ಮಾತುಕಥೆಯಾಡಿ, ಆ ಊರು/ನಗರಗಳ ಕೊಳಚೆನೀರನ್ನೇ ಬಳಸಿ ಡೇಟಾಸೆಂಟರುಗಳನ್ನು ತಂಪಾಗಿಟ್ಟಿದ್ದು. ಇದಾದ ಮೇಲೆ, ತನ್ನೆಲ್ಲಾ ಕಚೇರಿಗಳಿಗೆ ಬರುವ ವಿದ್ಯುತ್ತನ್ನು ಸೌರ, ವಾಯು ಮತ್ತು ಜಲಸಂಪನ್ಮೂಲಗಳನ್ನೇ ಬಳಸಿ ವಿದ್ಯುತ್ ತಯಾರಿಸುವ ಕಂಪನಿಗಳಿಂದ ಮಾತ್ರವೇ ಕೊಳ್ಳಲಾರಂಭಿಸಿದ್ದು. ಈ ಮೇಲಿನ ಉಪಾಯಗಳಿಂದಾಗಿ ಉಳಿಸಿದಷ್ಟೇ ವಿದ್ಯುತ್ ಅನ್ನು ಬಳಸಿ, ಜೊತೆಗೆ ತನ್ನೆಲ್ಲಾ ಆಫೀಸುಗಳ ಮೇಲೆ ಸೋಲಾರ್ ಪ್ಯಾನೆಲ್ ಕೂರಿಸಿ ಅದರಿಂದ ಬಂದ ವಿದ್ಯುತ್ ಬಳಸಿ, ಉಪಯೋಗಿಸಿಕೊಂಡ ಆ ಕೊಳಚೆ ನೀರನ್ನೂ ಶುದ್ಧೀಕರಿಸಿ, ನೀರನ್ನೂ ಅದರಜೊತೆಗೆ ಸ್ವಲ್ಪಮಟ್ಟಿನ ವಿದ್ಯುತ್ತನ್ನೂ ಅದೇ ನಗರಗಳಿಗೆ ಮರಳಿ ಕೊಟ್ಟು, ಗೂಗಲ್ ಕೇವಲ ಕಾರ್ಬನ್ ನ್ಯೂಟ್ರಲ್ ಆಗಿದ್ದು ಮಾತ್ರವಲ್ಲದೆ, ಜಗತ್ತಿನ ಮೊದಲ ಕಾರ್ಬನ್ ನೆಗೆಟಿವ್ ಕಂಪನಿಯೂ ಆಯ್ತು. ಈಗ ಗೂಗಲ್ ತನ್ನ ಡೇಟಾಸೆಂಟರುಗಳನ್ನು ನೋಡಿಕೊಳ್ಳಲು ಡೀಪ್-ಮೈಂಡ್ ಎಂಬ ಕೃತಕಬುದ್ಧಿಮತ್ತೆಯನ್ನೂ ಅಭಿವೃದ್ಧಿಪಡಿಸಿದೆ. ಡೀಪ್-ಮೈಂಡ್ ಇಡೀ ಡೇಟಾಸೆಂಟರಿನಲ್ಲಿ ಎಲ್ಲಾ ಕಡೆಗೂ ಅನಗತ್ಯವಾಗಿ ತಂಪುಗಾಳಿ ತಳ್ಳದೇ, ಯಾವಾಗ ಯಾವ ಸರ್ವರಿನ ಮೇಲೆ ಲೋಡ್ ಹೆಚ್ಚಾಗಿ ಅದು ಬಿಸಿಯಾಗುತ್ತದೆ ಎಂದೆನಿಸುತ್ತದೆಯೋ ಆಗ ಮಾತ್ರ ಅಲ್ಲಿಗೆ ತಂಪುಗಾಳಿಹರಿಸುವ ಮೂಲಕ, ಮತ್ತಷ್ಟು ಅನಗತ್ಯ ವಿದ್ಯುತ್ ಬಳಕೆಯನ್ನು ಕಡಿತಗೊಳಿಸುತ್ತದೆ. ಎಂಟುವರ್ಷದಲ್ಲಿ ಗೂಗಲ್ಲಿನ ಡೇಟಾಸೆಂಟರುಗಳು 350% ಬೆಳೆದಿವೆ, ಆದರೆ ಒಟ್ಟು ಬಳಸುತ್ತಿದ್ದ ವಿದ್ಯುತ್ತಿನಲ್ಲಿ 50% ಕಡಿಮೆಯಾಗಿದೆ.

(೨) ಗೂಗಲ್ಲಿನ ಉಪಾಯಗಳ ಎಳೆಯನ್ನೇ ಮುಂದಿನ ಹಂತಕ್ಕೆ ಕೊಂಡೊಯ್ದ ಐಬಿಎಮ್, ಫೇಸ್ಬುಕ್, ಅಮೆಝಾನ್, ಟ್ವಿಟರುಗಳೂ ತಂತಮ್ಮ ಡೇಟಾಸೆಂಟರುಗಳನ್ನು ಸ್ವೀಡನ್, ನಾರ್ವೆ, ಫಿನ್ಲೆಂಡ್, ಐರ್ಲೆಂಡುಗಳಿಗೆ ಸ್ಥಳಾಂತರಿಸಿದವು. ಈ ದೇಶಗಳ ವಿದ್ಯುತ್ 90ರಿಂದ 100% ಸ್ವಚ್ಚ ರೀತಿಯಲ್ಲಿ ಅಂದರೆ ಪರಿಸರಕೆ ಅತ್ಯಂತ ಕಡಿಮೆ ಅಥವಾ ಯಾವುದೆ ಹಾನಿಯಿಲ್ಲದೇ ತಯಾರಾಗುತ್ತದೆ.

(೩) ಕೆಲ ಕಂಪನಿಗಳು ಸಮುದ್ರಮಧ್ಯದಲ್ಲಿ ಕೆಲಸಮಾಡದೇ ಡೀಫಂಕ್ಟ್ ಆಗಿರುವ ಆಯಿಲ್-ರಿಗ್’ಗಳನ್ನು ಬಾಡಿಗೆಗೆ ಪಡೆದು, ಅಲ್ಲಿ ವೈರ್ಲೆಸ್ ಡೇಟಾಸೆಂಟರುಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನೇ ಪಂಪ್ ಮಾಡಿ ಕೂಲಿಂಗಿಗೆ ಬಳಸಲಾರಂಭಿಸಿದರು. ಆದರೆ ಈ ರಿಗ್’ಗಳು ಅಂತರರಾಷ್ಟ್ರೀಯ ಸಮುದ್ರದಲ್ಲಿರುವುದರಿಂದ, ಅವುಗಳಲ್ಲಿರುವ ಡೇಟಾ ಯಾವ ದೇಶದ ಸುಪರ್ದಿಗೂ ಸೇರದೇ, ಯಾರು ಬೇಕಾದರೂ ಎಂತಹ ಡೇಟಾವನ್ನು ಕೂಡಾ ಸಂಗ್ರಹಿಸಿಡಬಹುದಾದ ಕಾನೂನು ತೊಡಕುಂಟಾಗುವುದನ್ನು ಅರಿತ ಕೆಲಸ CIA ಈ ಯೋಜನೆಗಳಿಗೆ ತಣ್ಣೀರೆರಚಿತು.

(೩) ಮೈಕ್ರೋಸಾಫ್ಟು ತನ್ನ ಪ್ರಾಜೆಕ್ಟ್ ನಾಟ್ವಿಕ್ ಎಂಬ ಯೋಜನೆಯಡಿಯಲ್ಲಿ ಹಡಗುಗಳಲ್ಲಿ ಸರಕುಸಾಗಿಸಲು ಉಪಯೋಗಿಸುವ ಶಿಪ್ಪಿಂಗ್ ಕಂಟೈನರುಗಳನ್ನು ಒಂದಕ್ಕೊಂದು ವೆಲ್ಡ್ ಮಾಡಿ, ದೊಡ್ಡದೊಂದು ಲೋಹದ ಬಾಕ್ಸ್ ಮಾಡಿ, ಅದರಲ್ಲಿ ಸರ್ವರುಗಳನ್ನು ಒಪ್ಪವಾಗಿ ಜೋಡಿಸಿ, ಇಡೀ ಬಾಕ್ಸನ್ನೇ ಸ್ಕಾಟ್ಲೆಂಡಿನ ಹತ್ತಿರದಲ್ಲಿ, ತಣ್ಣಗಿನ ಸಮುದ್ರದಡಿಯಲ್ಲಿ ಮುಳುಗಿಸಿಟ್ಟಿದೆ. ಯಾವುದೇ ಎಸಿಯ ಅಗತ್ಯವಿಲ್ಲದೇ, ಸರ್ವರುಗಳು ಸಮರ್ಥವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಐದು ವರ್ಷ ಇದನ್ನು ಅಧ್ಯಯನ ಮಾಡಿ, ಮುಂದಿನ ವರ್ಷಗಳಲ್ಲಿ ದೊಡ್ಡ ರೂಪದಲ್ಲಿ ಪ್ರಾರಂಭಿಸುವ ಇರಾದೆ ಮೈಕ್ರೋಸಾಫ್ಟ್’ಗಿದೆ.

(೪) ನಾರ್ವೆಯ ಗ್ರೀನ್ ಮೌಂಟೆನ್ ಎಂಬ ಕಂಪನಿಯ ಹೊಸಾ DC1-Stavanger ಡೇಟಾಸೆಂಟರ್ NATOದ ಹಳೆಯದೊಂದು ಶಸ್ತ್ರಾಸ್ತ್ರ ಸಂಗ್ರಹಣಾ ಬಂಕರಿನಲ್ಲಿದೆ. ನೆಲದಡಿಯಲ್ಲಿ ಅಣುಬಾಂಬಿನ ಸ್ಪೋಟದಿಂದಲೂ ರಕ್ಷಣೆಸಿಗುವಷ್ಟು ಗಟ್ಟಿಯಾಗಿ NATO ಇದನ್ನು ಕಟ್ಟಿರುವುದರಿಂದ, ಇಲ್ಲಿರುವ ಸರ್ವರುಗಳು ಸದಾ ಕ್ಷೇಮ. ಬಂಕರಿನ ಪಕ್ಕದಲ್ಲಿಯೇ ಹರಿಯುತ್ತಿರುವ ಫ್ಯೋರ್ದ್ (Fjord – ಬೆಟ್ಟಗಳ ನಡುವಿನಲ್ಲಿ ಒಂದಾನೊಂದುಕಾಲದಲ್ಲಿ ಹಿಮನದಿಯಿದ್ದ ತಗ್ಗುಪ್ರದೇಶದಲ್ಲಿ ನುಗ್ಗಿರುವ ಸಮುದ್ರ. ನಾರ್ವೆ, ಫಿನ್ಯಾಂಡುಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ) ಒಂದರಿಂದ ಗುರುತ್ವಬಲವನ್ನುಪಯೋಗಿಸಿಕೊಂಡು 6-10 ಡಿಗೀ ಸೆಂಟಿಗ್ರೇಡಿನಷ್ಟು ತಣ್ಣಗಿನ ನೀರನ್ನು ಡೇಟಾಸೆಂಟರಿನ ಸುತ್ತಲೂ ಹರಿಸಿ, ಅದನ್ನು ತಂಪಾಗಿಸಿ, ಮತ್ತೆ ನೀರನ್ನು ಮರಳಿ ಫ್ಯೋರ್ದಿಗೇ ಕೊಟ್ಟು, ಪುಗಸಟ್ಟೆ ಕೆಲಸ ಮಾಡಿಸಿಕೊಂಡಿದ್ದಾರೆ. ಜೊತೆಗೇ ಇಡೀ ಡೇಟಾಸೆಂಟರನ್ನು ಗಾಳಿಯಾಡದಂತೆ ಏರ್-ಟೈಟ್ ಮಾಡಿ ಆಮ್ಲಜನಕದ ಕೊರತೆಯುಂಟಾಗುವಂತೆ ಮಾಡಿರುವುದರಿಂದ ಅಲ್ಲಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೇ ಇಲ್ಲ. ಇದರಿಂದ ಬೆಂಕಿ ನಂದಿಸುವ ಸಿಸ್ಟಮಿನ ಮೇಲಿನ ಲಕ್ಷಾಂತರ ಡಾಲರ್ ಹೂಡಿಕೆಯೂ ಉಳಿದಿದೆ.

(೫) ದೊಡ್ಡಕಂಪನಿಗಳಿಗೇನೋ ದೊಡ್ಡ ಸರ್ವರ್’ಗಳು ಬೇಕು. ಈ ಸರ್ವರುಗಳು ಒಂದೊಂದೂ ಸಹ 75-150 ವ್ಯಾಟ್’ನಷ್ಟು ವಿದ್ಯುತ್ ಕುಡಿಯುತ್ತವೆ. ಕಂಪನಿ ಸಣ್ಣದಿದ್ದರೆ, ಅದರ ಡೇಟಾಸೆಂಟರುಗಳ ಸರ್ವರುಗಳೂ ಸಣ್ಣದಾಗುವಂತಿದ್ದರೆ? ಹೆಚ್-ಪಿ/ಇಂಟೆಲ್ಲಿನ ದೊಡ್ಡ ಸರ್ವರ್ ಬದಲು ರಾಸ್ಪ್ಬೆರ್ರಿ-ಪೈ ಕೂರಿಸುವಂತಾದರೆ? ರಾಸ್ಪ್ಬೆರ್ರಿ-ಪೈ ಎಂಬುವು ಸಣ್ಣ ಸಿಂಗಲ್-ಬೋರ್ಡ್ ಕಂಪ್ಯೂಟರ್ಗಳು. ಇವು ಬರೇ 3 ವ್ಯಾಟ್ ವಿದ್ಯುತ್ತಿನಲ್ಲಿ, ನಿಮ್ಮದೊಂದು ಲ್ಯಾಪ್ಟಾಪ್ ಅಥವಾ ಪಿಸಿ ಮಾಡುವಷ್ಟೇ ಕೆಲಸ ಕೆಲಸಮಾಡಬಲ್ಲವು. ಸಣ್ಣಕಂಪನಿಗಳಿಗೆ ಸರ್ವರುಗಳನ್ನೂ ಇದೇ ರೀತಿ ಬಳಸಲು ಸಾಧ್ಯವಾದರೆ!? PC Extreme ಎಂಬ ಕಂಪನಿ ಈ ನಿಟ್ಟಿನಲ್ಲೂ ಹೆಜ್ಜೆಯಿಟ್ಟಿದೆ. ಸಣ್ಣಮಟ್ಟಿನ ಯಶಸ್ಸನ್ನೂ ಸಾಧಿಸಿದೆ.

(೬) ಉತ್ತರದ್ರುವದ ಬಳಿಯ ದೇಶವಾದ ಸ್ವೀಡನ್ನಿನ ಡಿಜಿಪ್ಲೆಕ್ಸ್ ಎಂಬ ಕಂಪನಿ ಈ ಡೇಟಾಸೆಂಟರಿನ ವ್ಯವಹಾರದ ಮಾದರಿ(business model)ಯನ್ನೇ ಉಲ್ಟಾ ಮಾಡಿ, ಸರ್ವರುಗಳು ಉತ್ಪಾದಿಸುವ ಶಾಖವನ್ನು ‘ಸಮಸ್ಯೆ’ ಎಂದು ಪರಿಗಣಿಸದೇ, ಆ ಶಾಖವನ್ನು ಅಕ್ಕಪಕ್ಕದ ಕಾಲೋನಿಯ ಮನೆಗಳನ್ನು ಬೆಚ್ಚಗಿಡಲು ಮಾರುತ್ತಿದೆ. ಗ್ರಿಡ್’ನಿಂದ ದುಬಾರಿ ವಿದ್ಯುತ್ ಬಳಸಿ ಮನೆಯನ್ನು ಬೆಚ್ಚಗಿಡುವ ಬದಲು, ಹತ್ತರಷ್ಟು ಕಮ್ಮಿಬೆಲೆಯಲ್ಲಿ ಸಿಗುತ್ತಿರುವ ಬಿಸಿಗಾಳಿಯನ್ನೇ ಬಳಸಿ, ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಡಿಜಿಪ್ಲೆಕ್ಸ್ 2020ಕ್ಕೆ ಸುಮಾರು 10,000 ಮನೆಗಳಿಗೆ ಶಾಖ ಒದಗಿಸುವ ಯೋಜನೆ ಹೊಂದಿದೆ.

ಹೀಗೆ ವಿಜ್ಞಾನ ಇವತ್ತು ನಾವಂದುಕೊಂಡದ್ದಕಿಂತಲೂ ವೇಗವಾಗಿ ನಮ್ಮ ಬದುಕನ್ನು ಸುಂದರವಾಗಿಸುತ್ತಿದೆ. ಹೌದು ನಮ್ಮಂತಹಾ ಸಾಮಾನ್ಯರು ಚಾರ್ಜಿಗೆ ಹಾಕಿದ ಫೋನು 100% ಚಾರ್ಜ್ ಆದರೂ ತೆಗೆಯುವುದಿಲ್ಲ. ಅದರಿಂದ ಸಣ್ಣದೊಂದು ಮೊತ್ತದ ವಿದ್ಯುತ್ ಪೋಲಾಗುವುದು ಹೌದು. ಅದರಿಂದ ಪರಿಸರಕ್ಕೆ ಎಲ್ಲೋ ಒಂದು ಕಡೆ ಹಾನಿಯಾಗುವುದೂ ಹೌದು. ಆದರೆ ಅದೇ ಸಮಯಕ್ಕೆ ವಿಶ್ವದಾದ್ಯಂತ ಈ ಟೆಕ್ ಕಂಪನಿಗಳು ನಮ್ಮ ಅರಿವಿಗೆ ಬಾರದಂತೆಯೇ ಎಷ್ಟೋ ಹೊಸಹೊಸ ವಿಧಾನಗಳಿಂದ ವಿದ್ಯುತ್ ಉಳಿಸುತ್ತಿದ್ದಾರೆ. ನಿಧಾನಕ್ಕೆ ಈ ವಿಧಾನಗಳೇ ನಮ್ಮ ನಿಮ್ಮ ಮನೆಗೂ ಬಂದಿಳಿಯುತ್ತೆ. ನಾನು ಮತ್ತು ನೀವೂ ಸಹ ಸಂಪೂರ್ಣ ಸ್ವಚ್ಚ ವಿದ್ಯುತ್ (ಅಂದರೆ ವಾಯು, ಸೌರ ಅಥವಾ ಜಲಮೂಲಗಳಿಂದಷ್ಟೇ ಉತ್ಪನ್ನವಾದ ಹಾಗೂ ಪರಿಸರಕ್ಕೆ ಯಾವ ಹಾನಿಯನ್ನೂ ಮಾಡದ) ಮಾತ್ರವೇ ಬಳಸುವ ನಿರ್ಧಾರ ಮಾಡಿದರೂ, ನಮ್ಮ ನಾಳೆಗಳು ಮತ್ತಷ್ಟು ಸುಂದರವಾಗಲು ಸಾಧ್ಯ.

ಆದರೆ ಇದಕ್ಕೆ ತಕ್ಕನಾಗಿ ನಮ್ಮ ಸರ್ಕಾರಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಮೊನ್ನೆ ಒಂದು ಲೇಖನ ಓದಿದೆ. ಅಮೇರಿಕ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ ನಗರ ‘ಲೂಸಿಡ್ ಎನರ್ಜಿ’ ಎಂಬ ಕಂಪನಿಯೊಂದಿಗೆ ಕೈಜೋಡಿಸಿ ತನ್ನ ನೀರುಸರಬರಾಜು ಮತ್ತು ಕೊಳಚೆ ಜಾಲದ ಪೈಪುಗಳನ್ನು ಲೂಸಿಡ್ ಎನರ್ಜಿ ಕಂಪನಿಯ ಪೈಪುಗಳೊಂದಿಗೆ ಬದಲಾಯಿಸಿತು. ಇಡೀ ನಗರದ್ದಲ್ಲ, ಪ್ರಯೋಗಾತ್ಮಕವಾಗಿ ನಗರದ ಒಂದು ಭಾಗದಲ್ಲಿ ಸಧ್ಯಕ್ಕೆ ಹೊಸಾ ಪೈಪುಗಳನ್ನು ಅಳವಡಿಸಲಾಗಿದೆ. ಈ ಪೈಪುಗಳಲ್ಲಿ ಏನು ವಿಶೇಷ ಅಂತೀರಾ? 44 ಇಂಚಿನ ಈ ಪೈಪುಗಳನ್ನು ಸ್ವಲ್ಪವೇ ಸ್ವಲ್ಪ ಅಂದರೆ ಕನಿಷ್ಟ 2 ಡಿಗ್ರೀ ಓಟದ ಇಳಿಜಾರಿನಲ್ಲಿ ಅಳವಡಿಸಿದರೂ ಸಾಕು. ಇದರೊಳಗೆ ಅಷ್ಟಷ್ಟು ಅಡಿ ದೂರದಲ್ಲಿ ಜೋಡಿಸಿರುವ ಟರ್ಬೈನುಗಳು ವಿದ್ಯುತ್ಚಕ್ತಿಯನ್ನು ಉತ್ಪಾದಿಸುತ್ತವೆ!! ಹೆಂಗೆ ಐಡಿಯಾ!? ನೀರನ್ನು ಎಲ್ಲೂ ಪಂಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹರಿಫು ಹೋಗುವ ನೀರಿನ ಓಟವನ್ನೇ ಬಳಸಿಕೊಂಡು ಹತ್ತು ಮೀಟರ್ ಓಟದಲ್ಲಿ ಒಂದು ವ್ಯಾಟ್ ವಿದ್ಯುತ್ ಉತ್ಪಾದನೆಯಾದರೂ ಲಾಭವೇ! ಯೋಚನಾಲಹರಿಯಲ್ಲಿ ಬಂದ ಈ ಸಣ್ಣದೊಂದು ಬದಲಾವಣೆ, ಸಧ್ಯಕ್ಕೆ 150 ಮನೆಗಳಿಗೆ ವಿದ್ಯುತ್ ಒದಗಿಸುತ್ತಿದೆ. ಸಂಪೂರ್ಣ ಸ್ವಚ್ಚ ವಿದ್ಯುತ್. ಗಾಳಿಯಿಲ್ಲ ಅಂತಾ ಟರ್ಬೈನ್ ನಿಲ್ಲುವ ಹೆದರಿಕೆಯಿಲ್ಲ, ಬರಗಾಲ ಬಂತು ಅಂತಾ ಅಣೆಕಟ್ಟು ಖಾಲಿಯಾಗುವ ತಲೆಬಿಸಿಯಿಲ್ಲ. ಮನೆಗಳಿಗೆ ನೀರು ಹೋದಾಗಲೆಲ್ಲಾ, ಮನೆಗಳಿಂದ ಕೊಳಚೆನೀರು ಹೊರಬಂದಲ್ಲೆಲ್ಲಾ ವಿದ್ಯುತ್ ಉತ್ಪಾದನೆ!

ಹೀಗೆ ಸರ್ಕಾರ-ಖಾಸಗೀ ಸಂಸ್ಥೆಗಳು-ಸಾರ್ವಜನಿಕರು ಸೇರಿದರೆ ಪರಿಸರವನ್ನು ಸ್ವಚ್ಚವಾಗಿಸುವುದು ದೊಡ್ಡ ವಿಷಯವೇನಲ್ಲ. ಅದಕ್ಕೊಬ್ಬ ನಾಯಕನ ಸಂಕಲ್ಪ, ಸೃಜನಶೀಲ ಪ್ರತಿಭೆಯೊಂದರ ಪ್ರಚೋದನೆ, ಜೊತೆಗೆ ಜನರ ಕೊಡುಗೆಯಿದ್ದರೆ ಸಾಕು.

(ಈಗ ಇದಕ್ಕೆ ಕಮೆಂಟು ಮಾಡಿದರೆ, ಶೇರ್ ಮಾಡಿದರೆೆ ಅಲ್ಲೆಲ್ಲೋ ವರ್ಡ್ಪ್ರೆಸ್ಸಿನ ಸರ್ವರ್ ಮೇಲೆ ಹೊರೆಬೀಳುತ್ತೆ ಅಂತಾ ಅಂಜಬೇಡಿ. ನೀವು ಏನು ಮಾಡದೇ ಇದ್ದರೂ ಅಲ್ಲಿ ಅಷ್ಟೇ ವಿದ್ಯುತ್ ಬಳಕೆಯಾಗುತ್ತಿರುತ್ತದೆ. ಹಾಗಾಗಿ ಯಾವ ಅಂಜಿಕೆಯೂ ಇಲ್ಲದೇ ಕಮೆಂಟು ಮಾಡಿ, ಶೇರ್ ಮಾಡಿ 🙂 )

ಹೆಣ್ಣು ‘ರಸಭರಿತ’ವಾದಾಗ

ದೆಹಲಿಯಲ್ಲಿ ಕೆಲಸಮಾಡುವಾಗ ಒಬ್ಳು ಒಡಿಸ್ಸಿ ಹುಡ್ಗಿ ನಮ್ಮಾಫೀನ ಆಫೀಸ್ ಸರ್ವೀಸಸ್ ಡೀಪಾರ್ಟ್ಮೆಂಟಿನಲ್ಲಿದ್ಲು. ನಾನು ಕೆಲಸಕ್ಕೆ ಸೇರಿದ ಮೊದಲ ದಿನ ಬಂದು, ನನ್ನ ನಾಯಿಬೆಲ್ಟು (ಐಡಿ ಕಾರ್ಡು ಕಣ್ರೀ), ಆಕ್ಸೆಸ್ ಕಾರ್ಡು, ಮೊಬೈಲ್ ಫೋನು, ಕಾರ್ ಪಾರ್ಕಿಂಗ್ ಸ್ಟಿಕ್ಕರು ಎಲ್ಲಾ ಕೊಡೋಕೆ ಬಂದಿದ್ಲು. ಆಕೆಯ ಹೆಸರೇನು ನೋಡೋಣ ಅಂತಾ ಹಾಗೇ ಸ್ವಾಭಾವಿಕವಾಗಿ ಅವಳ ಕತ್ತಿನಲ್ಲಿ ನೇತಾಡ್ತಿದ್ದ ಐಡಿಕಾರ್ಡಿನ ಮೇಲೆ ಕಣ್ಣಾಡಿಸಿದೆ. ಎದೆ ಧಸಕ್ಕಂತು!

ಯಾಕಂದ್ರೆ ಅವಳ ಹೆಸರು “ರಸಭರಿತ” ಅಂತಾ ಇತ್ತು!!

ಕಣ್ಣುಜ್ಜಿ ನೋಡ್ಕಂಡೆ. ಆ ಕಾರ್ಡು ಇದ್ದ ಜಾಗ, ಆ ಹೆಸರು ಎರಡೂ ನೋಡಿ, ತಲೆಯಲ್ಲಿ ಏನೇನೋ ಈಕ್ವೇಷನ್ನುಗಳೆಲ್ಲಾ ಕ್ರಿಯೇಟ್ ಆಗಿ ಮೈಯೆಲ್ಲಾ ಗಡಗಡ ಅಂತು. “ಇದೆಂತಾ ಹೆಸರು!? ರಸಭರಿತ ಅಂತೆ! ರಸಭರಿತವೇ ಇರಬಹುದು. ಹಾಗಂತಾ ಅದನ್ನ ಹೇಳ್ಕಂಡು ತಿರುಗಾಡ್ಬೇಕಾ!? ಯಾವ ಅಪ್ಪ ಅಮ್ಮ ಇಂತಾ ಹೆಸರಿಡ್ತಾರೆ!? ಇದೇನಾದ್ರೂ ಆಫೀಸಿಗೋಸ್ಕರ ಅಂತಾ ಇವ್ಳೇ ಇಟ್ಕಂಡ ಹೆಸ್ರಾ? ಎಂತಾ ಕಂಪನಿ ಸೇರ್ಕಂಡುಬಿಟ್ನಪ್ಪಾ! ಇಲ್ಲೇನಾದ್ರೂ ಮನುಷ್ಯರ ಹೆಸರಿನ ಬದಲು ಅನ್ವರ್ಥನಾಮಗಳನ್ನೇನಾದ್ರೂ ಪ್ರಿಂಟ್ ಮಾಡೋ ಅಭ್ಯಾಸವಿದ್ಯಾ!? ಈಗೆಲ್ಲಾ ಇಂತ ಇನಿಷಿಯೇಟಿವ್ಗಳನ್ನ ಕೂಲ್ ಅಂತಾ ಬೇರೆ ಕರೀತಾರೆ” ಅಂತೆಲ್ಲಾ ಸರಸರನೆ ಆಲೋಚನೆಗಳು ಓಡಿದ್ವು. ಅನ್ವರ್ಥನಾಮದ ಗಾಬರಿಯಲ್ಲೇ “ನನ್ನ ಕಾರ್ಡಿನಲ್ಲಿನಾದ್ರೂ ನನ್ನ ಹೆಸರು “ಸಿಳ್ಳೇಕ್ಯಾತ” ಅಂತ್ಲೋ, ನಾನು ಕಪ್ಪಗೆ ಉದ್ದಕ್ಕೆ ಇದ್ದದ್ದರಿಂದ “ಕರಿಬಾಳೆಕಾಯಿ” ಅಂತ್ಲೋ, “ಕಾಳಿಂಗನ್ಹಾವು” ಅಂತೇನಾದ್ರೂ ಪ್ರಿಂಟಾಗಿದ್ಯಾ!?” ಅಂತಾ ಚೆಕ್ ಮಾಡ್ದೆ. ಇಲ್ಲ..ರಾಘವೇಂದ್ರ ಅಂತಲೇ ಇತ್ತು. ಸಮಾಧಾನವೂ ಆಯ್ತು.

ನನ್ನ ಗಡಿಬಿಡಿ ನೋಡಿ ಮಿಸ್.ರಸಭರಿತ “ಕ್ಯಾ ಹುವಾ! ಆಲ್ ವೆಲ್? ಯುವರ್ ನೇಮ್ ಈಸ್ ಪ್ರಿಂಟೆಡ್ ರಾಂಗ್? ಶುಡ್ ಇಟ್ ಬಿ ರಾಘವನ್?” ಅಂದ್ಳು. ಸ್ವಲ್ಪ ಸುಧಾರಿಸಿಕೊಂಡು “ಇಲ್ಲಾ ತಾಯಿ. ಸರ್ಯಾಗಿಯೇ ಪ್ರಿಂಟಾಗಿದೆ. ಥ್ಯಾಂಕ್ಯೂ ಥ್ಯಾಂಕ್ಯೂ. ನಿಮ್ಮನ್ನ ಮೊದಲ ಸಲ ನೋಡಿದ್ದು ನಾನು. ಅಂಡ್ ಯೂ ಆರ್…” ಅಂತಾ ಕೈ ಚಾಚಿದೆ.

“ಓಹ್ ಸ್ಸಾರಿ! ಐ ಆಮ್ ಸಬರಿತಾ. ಯೂ ಆಲ್ರೆಡೀ ನೋ ಐ ವರ್ಕ್ ವಿತ್ ಆಫೀಸ್ ಸರ್ವೀಸಸ್. ನೈಸ್ ಮೀಟಿಂಗ್ ಯೂ. ಕಾಲ್ ಮಿ ಆನ್ 2308 ಇಫ್ ಯೂ ನೀಡ್ ಎನಿಥಿಂಗ್” ಅಂದು ಕೈಕುಲುಕಿ ಹೋದ್ಳು.

ಮೆದುಳಲ್ಲೆಲ್ಲೋ ಒಂದ್ಕಡೆ “ಓಹ್..ಸಬರಿತಾ..ಆರ್ ಎ ಸಬರಿತಾ…R A SABARITA…ಸಧ್ಯ” ಅಂತಾ ನಿಟ್ಟುಸಿರೂ ಕೇಳ್ತು. ಇನೊಂದ್ಕಡೆಯಿಂದಾ “ಥತ್….ಕೊಳಕು ನನ್ಮಗ್ನೇ! ಸಬರಿತಾ ಅನ್ನೋದನ್ನ ರಸಭರಿತ ಅಂತಾ ಏನೇನೋ ಯೋಚಿಸಿಬಿಟ್ಯಲ್ಲೋ…ಫಟಾರ್!” ಅಂತ ಶಬ್ದ ಬಂತು. ತಲೆ ಮುಟ್ಟಿ ನೋಡಿಕೊಂಡೆ. “ಅಯ್ಯೋ! ನನ್ ತಪ್ಪೇನಿದೆ ಇದ್ರಲ್ಲಿ!? ಎಲ್ಲಾ “ಇಂಗ್ಳೀಷಿನ ತಪ್ಪು” ಅಂತಾ ಸಮಾಧಾನ ಮಾಡ್ಕೊಳ್ತಾ ಅಲ್ಲೇ ತಲೆ ನೀವಿಕೊಂಡೆ”

#ದೇವ್ರಾಣೆ_ನಿಜ

ನಿಂದಾಸ್ತುತಿ – 3

ಇವತ್ತಿನ ನಿಂದಾಸ್ತುತಿ ನಮ್ಮ ರಾಜ್ಯದ ದಾಸಪ್ಪನವರದ್ದು. ದಾಸಪ್ಪನವ್ರು ಗೊತ್ತಿಲ್ವೇ!? ಹೇಳ್ತೀನಿ ಕೇಳಿ. ದಾಸಪ್ಪನವರು ಹುಟ್ಟಿದ್ದು ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಚೀಕಲಪರವಿಯಲ್ಲಿ, 1682ರಲ್ಲಿ. ತಂದೆ ಶ್ರೀನಿವಾಸಪ್ಪ ಮತ್ತು ತಾಯಿ ಕೂಸಮ್ಮ. ಕಡುಬಡತನದ ಬ್ರಾಹ್ಮಣ ಕುಟುಂಬ. ಚಿಕ್ಕವಯಸ್ಸಿನಲ್ಲೇ ಮನೆಬಿಟ್ಟು, ದೇಶಸುತ್ತಿ ಕಾಶಿಯಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸವನ್ನು ಪಡೆದುಬಂದು, ಹುಟ್ಟೂರಿನಲ್ಲೇ ನೆಲೆಸುತ್ತಾರೆ. ಹದಿನಾರನೆಯ ವಯಸ್ಸಿನಲ್ಲಿ ಅರಳಮ್ಮ ಎನ್ನುವವರನ್ನು ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕರಿಸುತ್ತಾರೆ. ಬಡತನದ ಕಾರಣದಿಂದ ಇಲ್ಲಿ ಸಂಸಾರನಡೆಸಲಾಗದೇ, ಮರಳಿ ವಾರಣಾಸಿಗೆ ತೆರಳಿದರು ಅಂತಾ ಕಥೆಗಳು ಹೇಳುತ್ತವೆ.

ಒಂದು ದಿನ ಕನಸಿನಲ್ಲಿ ಪುರಂದರದಾಸರು ಕಾಣಿಸಿಕೊಂಡು “ಹರಿದಾಸ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗು” ಎಂದು ಹೇಳಿದರೆಂದೂ, “ವಿಜಯ ವಿಟ್ಟಲ” ಎಂಬ ಅಂಕಿತನಾಮವನ್ನೂ ಅವರೇ ಕೊಟ್ಟರೆಂದೂ ದಾಸಪ್ಪನವರು ಹೇಳಿಕೊಳ್ಳುತ್ತಾರೆ. ಹೀಗೆ ನಮ್ಮ ದಾಸಪ್ಪನವರು, ವಿಜಯದಾಸರಾದರು. ಹರಿದಾಸರಾಗಿ, ಮಧ್ವಾಚಾರ್ಯರ ತತ್ವಗಳನ್ನು ಭೋದಿಸುತ್ತಾ, ಕರ್ನಾಟಕ ಸಂಗೀತಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅನರ್ಘ್ತವಾಗ ಕೊಡುಗೆಗಳನ್ನು ನೀಡಿದರು. ಸುಮಾರು 25,000ಕ್ಕೂ ಹೆಚ್ಚು ಸುಳಾದಿ, ಉಗಾಭೋಗ ಮತ್ತು ಕೀರ್ತನೆಗಳನ್ನು ವಿಜಯದಾಸರು ರಚಿಸಿದ್ದಾರೆ. ವಿಶೇಷವಾಗಿ ಪಂಚರತ್ನ ಸುಳಾದಿಗಳಲ್ಲಿ ವಿಜಯದಾಸರದ್ದು ಎತ್ತಿದ ಕೈ.

ದಾಸಪಂಥದ ಪ್ರಮುಖರಾದ ಹೆಳವನಕಟ್ಟೆ ಗಿರಿಯಮ್ಮ, ಜಗನ್ನಾಥ ದಾಸರು, ಪ್ರಸನ್ನ ವೆಂಕಟದಾಸರ ಸಮಕಾಲೀನರಾದ ವಿಜಯದಾಸರ ಪ್ರಮುಖ ಶಿಷ್ಯರಲ್ಲಿ ಗೋಪಾಲದಾಸರ ಹೆಸರು ಮುಂಚೂಣಿಯಲ್ಲಿರುತ್ತದೆ.

“ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ”, “ಹರಿ ಸರ್ವೊತ್ತಮ ವಾಯು ಜೀವೊತ್ತಮ”, “ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ” ಮುಂತಾದ ದಾಸರಪದಗಳಿಂದ ನಮ್ಮ ನಡುವೆ ಸದಾ ನೆನಪಿನಲ್ಲುಳಿಯುವ ವಿಜಯದಾಸರು ಶ್ರೀನಿವಾಸನ ದರ್ಶನಕ್ಕೆಂದು ತಿರುಪತಿಗೆ ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ತಿರುಪತಿಯ ವೆಂಕಟೇಶನನ್ನು ತರಾಟೆಗೆ ತೆಗೆದುಕೊಳ್ಳುವ ಕುತೂಹಲಕಾರೀ ನಿಂದಾಸ್ತುತಿ ಇಲ್ಲಿದೆ.

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

(ಸುಳಾದಿ – ಸಾಮಾನ್ಯವಾಗಿ ಕರ್ನಾಟಕ ಸಂಗೀತದಲ್ಲಿ, ರಚನೆಯೊಂದನ್ನು ಹಾಡುವಾಗ, ಇಡೀ ಹಾಡಿನಲ್ಲಿ ಒಂದೇ ರಾಗ ಮತ್ತು ಒಂದೇ ತಾಳ ಇರುವುದು ಸಾಮಾನ್ಯ. ಆದರೆ ಸುಳಾದಿಗಳಲ್ಲಿ ರಾಗವೊಂದೇ ಇದ್ದು, ತಾಳಗಳು ಬದಲಾಗುತ್ತಾ ಸಾಗುತ್ತವೆ. ಕೆಲವೊಮ್ಮೆ ರಾಗಗಳೂ ಬದಲಾಗುವುದುಂಟು. ಸುಳಾದಿಗಳನ್ನು ಹಾಡಲು ಸಂಗೀತದಲ್ಲಿ ಉನ್ನತ ಪಾಂಡಿತ್ಯ ಅತ್ಯಗತ್ಯ. ಸುಳಾದಿಗಳ ಬಗ್ಗೆಯೇ ಒಂದಿಡೀ ಲೇಖನವನ್ನೇ ಬೇರೆಯಾಗಿ ಬರೆಯಬಹುದು)

ನಿಂದಾಸ್ತುತಿ – 2

ನಿಂದಾಸ್ತುತಿಯಲ್ಲಿ ಇವತ್ತು ತೆಲುಗಿನ ಒಂದು ಕೃತಿ.

ಭದ್ರಾಚಲ ರಾಮದಾಸು, ಹದಿನೇಳನೇ ಶತಮಾನದಲ್ಲಿ ಇಂದಿನ ಆಂಧ್ರದ ಭದ್ರಾಚಲದ ಹತ್ತಿರವಿರುವ ನೆಲಕೊಂಡಪಲ್ಲಿಯಲ್ಲಿ ಜೀವಿಸಿದ್ದ ವಾಕ್ಗೇಯಕಾರರು. ಭಕ್ತಿಪಂಥದ ಹೆಚ್ಚಿನ ದಾಸರಂತೆ, ರಾಮದಾಸರೂ ಸಹ ವಿಷ್ಣುವಿನ ಅವತಾರಗಳ ಭಕ್ತರು. ರಾಮಾವತಾರ ಅವರ ನೆಚ್ಚಿನ ವಿಷ್ಣುರೂಪ. ಅವರ ಒಂದೆರಡು ಕೀರ್ತನೆಗಳನ್ನು ಬಿಟ್ಟರೆ ಉಳಿದೆಲ್ಲವೂ ರಾಮನನ್ನೇ ಸ್ತುತಿಸುವಂತವು.

ರಾಮದಾಸರ ಮೂಲ ಹೆಸರು ಕಂಚರ್ಲಾ ಗೋಪಣ್ಣ. 1620-1680ರ ನಡುವೆ ಜೀವಿಸಿದ ಗೋಪಣ್ಣರು, ವೃತಿಯಲ್ಲಿ ತಹಸೀಲ್ದಾರ್. ಕುತುಬ್ ಶಾಹಿ ಸುಲ್ತಾನರಿಗೆ ‘ಪಲ್ವಾಂಚನ ಪರಗಣ’ದ ಹಳ್ಳಿಗಳಿಂದ ರಾಜಸ್ವ ಸಂಗ್ರಹಣೆ ಮಾಡುತ್ತಲೇ ತಮ್ಮ ರಾಮಭಕ್ತಿ ಮುಂದುವರಿಸಿದವರು. ಶಿಥಿಲಾವಸ್ಥೆಯಲ್ಲಿದ್ದ ಭದ್ರಾಚಲದ ಸೀತಾರಾಮ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ ಮಹಾನುಭಾವ.

ರಾಮನ ಮೇಲೆ ಸಾವಿರಾರು ಕೀರ್ತನೆಗಳನ್ನು ಬರೆದಿದ್ದಾರೆ ಎನ್ನಲಾಗುತ್ತದೆಯಾದರೂ, ಲಭ್ಯವಿರುವ ಕೀರ್ತನೆಗಳ ಸಂಖ್ಯೆ ತೀರಾ ಕಮ್ಮಿ. ಕರ್ನಾಟಕ ಸಂಗೀತಕ್ಕೆ ಮಹಾನ್ ಕೊಡುಗೆ ನೀಡಿದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು, ಕ್ಷೇತ್ರಯ್ಯನವರ ಮಟ್ಟದಲ್ಲೇ ಗುರುತಿಸಬಹುದಾದ ಮಹಾನ್ ಚೇತನ, ಭದ್ರಾಚಲ ರಾಮದಾಸು.

ಐವತ್ತರ ದಶಕದಲ್ಲಿ, ರಾಮದಾಸರ ಕೀರ್ತನೆಗಳಿಗೆ ಮತ್ತೆ ಜೀವತುಂಬಿದವರು ‘ಸಂಗೀತ ಕಲಾನಿಧಿ’ ಡಾ. ಬಾಲಮುರಳಿಕೃಷ್ಣ. ಅವರ ಕಂಠಸಿರಿಯಲ್ಲಿ ಪ್ರಸಿದ್ಧವಾದ ರಾಮದಾಸರ ಕೃತಿಗಳಲ್ಲೊಂದು “ಫಲುಕೇ ಬಂಗಾರಮಾಯಿನಾ”. ಇದನ್ನು ನೂರಕ್ಕೆ ನೂರು ನಿಂದಾಸ್ತುತಿ ಎನ್ನಲಾಗದಿದ್ದರೂ, ಭಗವಂತನ್ನು ಪ್ರಶ್ನಿಸುವ, ದಯನೀಯವಾಗಿ ಬೇಡಿಕೊಳ್ಳುವ toneನಿಂದ, ನಿಂದಾಸ್ತುತಿಯೊಳಗೇ ವರ್ಗೀಕರಿಸಬಹುದೆಂಬ assumptionನೊಂದಿಗೆ………

*ವಾಕ್ಗೇಯಕಾರ = ಕೀರ್ತನೆ ರಚಿಸುವುದು ಮಾತ್ರವಲ್ಲದೇ, ಅದಕ್ಕೆ ಸಂಗೀತ ರೂಪವನ್ನೂ ಸೇರಿಸುವವ. (ವಾಕ್=ಪದ/ಮಾತು, ಗೇಯ=ಹಾಡು/ಹಾಡುವಿಕೆ, ಗೇಯಕಾರ=ಹಾಡುಗಾರ)

ಪಲುಕೇ ಬಂಗಾರಮಾಯೆನಾ,
ಕೋದಂಡಪಾಣಿ ಪಲುಕೇ ಬಂಗಾರಮಾಯೆನಾ

ಪಲುಕೇ ಬಂಗಾರಮಾಯೆ ಪಿಲಚಿನಾ ಪಲುಕವೇಮಿ
ಕಲಲೋ ನೀ ನಾಮಸ್ಮರಣ ಮರುವ ಚಕ್ಕನಿ ತಂಡ್ರೀ ||ಪಲುಕೇ||

ಎಂತ ವೇಡಿನಗಾನಿ ಸುಂತೈನ ದಯರಾದು
ಪಂತಮು ಸೇಯ ನೇನೆಂತಟಿವಾಡನು ತಂಡ್ರೀ ||ಪಲುಕೇ||

ಇರವುಗ ಇಸುಕಲೋನ ಪೊರಲಿನ ಉಡುತ ಭಕ್ತಿಕಿ
ಕರುಣಿಂಚಿ ಬ್ರೋಚಿತಿವನಿ ನೆರ ನಮ್ಮಿತಿನಿ ತಂಡ್ರೀ ||ಪಲುಕೇ||

ರಾತಿ ನಾತಿಗ ಚೇಸಿ ಭೂತಲಮುನ
ಪ್ರಖ್ಯಾತಿ ಚೆಂದಿತಿವನಿ ಪ್ರೀತಿತೋ ನಮ್ಮಿತಿ ತಂಡ್ರೀ ||ಪಲುಕೇ||

ಶರಣಾಗತತ್ರಾಣ ಬಿರುದಾಂಕಿತುಡವುಕಾದಾ
ಕರುಣಿಂಚು ಭದ್ರಾಚಲ ವರರಾಮದಾಸ ಪೋಷ ||ಪಲುಕೇ||

(ಚರಣಗಳನ್ನು ಇಲ್ಲಿರುವ ಪಾಳಿಯಲ್ಲಲ್ಲದೇ, ಬೇರೆ ಬೇರೆ ಪಾಳಿಯಲ್ಲೂ ಕಲಾವಿದರು ಹಾಡಿರುವುದುಂಟು)

ಇದರ ಪಲ್ಲವಿಯಲ್ಲಿ ರಾಮದಾಸರು “ಏನು ರಾಮ, ನಿನ್ನ ಮಾತುಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಯುಳ್ಳದಾಗಿಬಿಟ್ಟವಾ (ಬಂಗಾರದಷ್ಟೂ ಅಪರೂಪವಾಗಿಬಿಟ್ಟವಾ)? ನಾನೆಷ್ಟು
ಕರೆದರೂ, ಮಾತನಾಡಿಸಿದರೂ, ಕೇಳಿಕೊಂಡರೂ ಮಾತೇ ಆಡುತ್ತಿಲ್ಲ ನೀನು” ಅಂತಾ ಕೇಳ್ತಾರೆ. ಸಾಮಾನ್ಯರಾದ ನಾವು ಪರಸ್ಪರ “ಏನಪ್ಪಾ, ಸುಮ್ಮನಾಗಿಬಿಟ್ಟಿದ್ದೀಯಾ! ಮಾತೇ ಇಲ್ಲ!! ಮಾತನಾಡಿದರೆ ಮುತ್ತು ಉದುರುತ್ತಾ?” ಅಂತ ಕೇಳಿದಹಾಗೆ, ಭದ್ರಾಚಲರು ರಾಮನನ್ನು ಮೆಲ್ಲಗೆ ತಿವಿಯುತ್ತಾರೆ.

ಮುಂದುವರೆಯುತ್ತಾ ರಾಮನ ಲೀಲೆಗಳನ್ನು ಮೆಲುಕುಹಾಕುತ್ತಾ “ಅಳಿಲಿನ ಸೇವೆಗೇ ಮರುಳಾದವ ನೀನು (ಅಂತಾ ಲೋಕ ಹೇಳುತ್ತೆ). ಆದರೂ ನನ್ನ ಮಾತು ನಿನಗೆ ಕೇಳುತ್ತಿಲ್ಲ. ಕಲ್ಲಾಗಿದ್ದ ಅಹಲ್ಯೆಗೆ ಮುಕ್ತಿ ಕೊಡಿಸಿದೆ ನೀನು ಅಂತ ಜನ ಹೊಗಳುತ್ತಾರೆ. ನನ್ನ ಮಾತು ಕೇಳದಷ್ಟೂ ನೀನು ಕಲ್ಲಾಗಿದ್ದೀಯಲ್ಲಾ. ಅದೆಷ್ಟು ಬೇಡಿಕೊಂಡರೂ ನಿನಗೆ ದಯೆಯೇ ಇಲ್ಲವಲ್ಲಾ! ನಿನಗೆ ‘ಶರಣಾಗತ ತ್ರಾಣ’ ಅಂತಾ ಬಿರುದುಬೇರೆ ಕೊಟ್ಟಿದ್ದಾರೆ. ನಾನಿಷ್ಟು ನಿನ್ನ ವಶವಾದರೂ ನನ್ನೊಂದಿಗೆ ಮಾತನಾಡದ ನಿನ್ನ ಆ ಬಿರುದುಗಳು, ನಿನ್ನ ಆ ದಯೆಯ ಕಥೆಗಳನ್ನ ಹೇಗೆ ನಂಬಲಿ?” ಅಂತಾ ಪ್ರಶ್ನಿಸುತ್ತಾರೆ.

ಒಟ್ಟಿನಲ್ಲಿ ಅವನ ಶರಣಾಗತಿಯ ಮಂತ್ರಪಠಿಸುತ್ತಲೇ, ಮಾತು ಬಂಗಾರವಾಯಿತೇನು? ಅಂತಾ ಕೇಳುತ್ತಾ ರಾಮನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ.

ನಿಂದಾಸ್ತುತಿ – 1

ದೇವರನ್ನು ಎರಡು ರೀತಿಯಿಂದ ಒಲಿಸಿಕೊಳ್ಳಬಹುದು. ಹೊಗಳಿಕೆಯಿಂದ, ಭಕ್ತಿಯ ಭಜನೆ, ಪ್ರಾರ್ಥನೆ, ಧ್ಯಾನದಿಂದ ಒಲಿಸಿಕೊಳ್ಳಲು ಪ್ರಯತ್ನಿಸಬಹುದು. ಇನ್ನೊಂದು ನಿಂದಾ ಸ್ತುತಿಯಿಂದ ಭಗವಂತನನ್ನು ಒಲಿಸಲು ಪ್ರಯತ್ನಿಸಬಹುದು. ಭಕ್ತಿಪಂಥದಲ್ಲಿ ಭಕ್ತಿಸ್ತುತಿಯ ಸಂಖ್ಯೆಯೇ ಹೆಚ್ಚಾಗಿದರೂ ಸಹ, ನಿಂದಾಸ್ತುತಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಹಾಗಂತಾ ನಿಂದಾಸ್ತುತಿಯೇನು ವೈದಿಕರ ಇಡುಗಂಟಲ್ಲ. ಜಿನಸಾಹಿತ್ಯದಲ್ಲೂ, ವಚನಸಾಹಿತ್ಯದಲ್ಲೂ, ಜನಪದ ಸಾಹಿತ್ಯದಲ್ಲೂ ಸಹ ದೇವರನ್ನು ನಿಂದಿಸುತ್ತಲೇ ಬೇಡಿಕೊಳ್ಳುವ ಪರಿಪಾಠ ಬೇಕಾದಷ್ಟಿದೆ.

ದೇವರನ್ನು ಬರೀ ಸರ್ವಶಕ್ತ ಭಗವಂತನನ್ನಾಗಿ ನೋಡದೇ, ಕ್ರಿಶ್ಚಿಯಾನಿಟಿಯ #blasphemy ಎಂಬ ಪರಿಕಲ್ಪನೆಯ ಹಂಗಿಲ್ಲದೇ, ದೇವರು ನನ್ನ ಪಕ್ಕದಲ್ಲೇ ಕೂತ ಸ್ನೇಹಿತನನ್ನಾಗಿ ನೋಡುವ ಭಾಗ್ಯ ಹಿಂದೂಗಳಿಗೆ, ಹಳೆಯ ಗ್ರೀಕರಿಗೆ ಬಿಟ್ಟರೆ ಬೇರಾವ ರಿಲೀಜಿಯನ್ನಿಗೂ ಇಲ್ಲ. ಅಮ್ಮ ಮಾಡಿದ ದೋಸೆ ಚೆಂದವಿದ್ದಾಗ ಅಮ್ಮನಿಗೆ ಹೊಗಳಿ, ಚಟ್ನಿ ಖಾರವಿದ್ದಾಗ “ಎಂತದೇ ಅಮ್ಮಾ, ಇಷ್ಟ್ ಖಾರ ಮಾಡಿದ್ದೀ? ಹೆಂಗ್ ತಿನ್ನೂದು ಇದನ್ನ. ಎಷ್ಟು ಹೇಳಿದ್ರೂ ಕೇಳಲ್ಲ. ನನ್ನ ಸಾಯ್ಸೋಕೇ ಪ್ಲಾನ್ ಹಾಕಿದ್ದೀಯಾ ನೀನು” ಅಂತಾ ಬೈದು, ಆಮೇಲೆ ನೀರು ಕುಡಿದು ಅಮ್ಮನನ್ನ ತಬ್ಬಿಕೊಳ್ಳೋ ಮಗುವಿನಂತೆ, ನಮ್ಮ ಭಕ್ತ-ದೇವರ ನಡುವಿನ ಸಂಬಂಧ.

ನಿಂದಾಸ್ತುತಿಗಳಲ್ಲಿ ಹೆಸರೇ ಹೇಳುವಂತೆ ದೇವರ ನಿಂದನೆ ನಡೆಯುತ್ತದೆ. ಆದರೆ ನಮ್ಮ ದಾಸರು ಅದೆಷ್ಟು ಚಂದವಾಗಿ ಬೈಯುತಾರೆ ಅಂದರೆ ದೇವನನ್ನು ಬೈದರೂ ಮುದ್ದುಗರೆಯುವಂತಿರುತ್ತದೆ. “ನಿನ್ನ ಸೇವಕ ನಾನು” ಅಂತಾ ಹೇಳುತ್ತಲೇ, “ನನ್ನ ಸೇವಕ ನೀನು” ಅನ್ನುತ್ತಾ ಅವನ್ನನು ಕಳ್ಳಕೃಷ್ಣ, ಭೋಳೇಶಂಕರ, ಟೊಣಪಗಣಪ ಅಂತೆಲ್ಲಾ ಹೆಸರಿಡುತ್ತಾರೆ. Obviously, “ಕಳ್ಳ, ಪುಂಡ, ಪಟಿಂಗ” ಎಂದೆಲ್ಲಾ ಬೈಯುವುದು ಮುದ್ದಿನ ಮಕ್ಕಳನ್ನು ತಾನೆ. “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…” ಎಂದು ಸಮರ್ಪಿತರಾದ ದಾಸರು, “ಆರು ಬದುಕಿದರಯ್ಯಾ ಹರಿನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನು ಕಾಣೆ” ಅಂತಾ ನಿಂದಿಸುತ್ತಾರೆ.

ಭಕ್ತಿಗೀತೆಗಳನ್ನು ಎಲ್ಲರೂ ಶೇರ್ ಮಾಡ್ತಾರೆ. ಆದರೆ ನಾನು ಈ ರೀತಿಯ ಕೆಲ ನಿಂದಾಸ್ತುತಿಗಳನ್ನ ಶೇರ್ ಮಾಡೋಣ ಅಂತಿದ್ದೀನಿ.

ಇವತ್ತಿನ ನಿಂದಾಸ್ತುತಿ:

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ||ಅಪ||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧||

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ || ೨ ||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯನರಿಯೆ
ದೊರೆಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಸಿಗಲೊಲ್ಲದು ಕೇಳೊ ಹರಿಯೇ! ||೩||

ಈ ಉಗಾಭೋಗವನ್ನು ತಪ್ಪಾಗಿ ಅರ್ಥೈಸಿಕೊಂಡು ಪುರಂದರದಾಸರಿಗೆ ವೈಚಾರಿಕ ಪಟ್ಟವನ್ನೂ ನಮ್ಮ ಲಿಬರಲ್ಲುಗಳು ಕೊಡಲು ಪ್ರಯತ್ನಿಸಿದ್ದಿದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ದಾಸರು ಅಧರ್ಮಿಗಳನ್ನು ಕೃಷ್ಣ ಹೇಗೆ ಬೇರೆ ಬೇರೆ ರೀತಿಯಲ್ಲಿ ಮಣಿಸಿದ ಅನ್ನೋದನ್ನೇ ನಿಂದನೆಯ ರೂಪದಲ್ಲಿ ಹೇಳಿದ್ದಾರೆ ಎನ್ನುವುದು ಕಂಡುಬರುತ್ತದೆ.

“ಕರ್ನಾಟಕ ವಾತಾಪಿ, ತಂಜಾವೂರಿನ ಮುತ್ತುಸ್ವಾಮಿ ದೀಕ್ಷಿತರ ಕೃತಿಯಲ್ಲಿ ಸೇರಿ ಅಜರಾಮರವಾಗಿದ್ದು ಹೇಗೆ?”

ಕ್ರಿ.ಶ 597 ರಲ್ಲಿ ಚಾಲುಕ್ಯರಾಜ ಕೀರ್ತಿವರ್ಮನು ನಿಧನನಾದಾಗ, ಅವನ ಮಗ ಎರೆಯ ಇನ್ನೂ ಚಿಕ್ಕ ಹುಡುಗ. ಯುವರಾಜ ಹರೆಯಕ್ಕೆ ಬರುವತನಕ ಪಟ್ಟಾಭಿಷೇಕ ಮಾಡುವಂತಿರಲಿಲ್ಲ. ಆದ್ದರಿಂದ ಎರೆಯನ ಚಿಕ್ಕಪ್ಪ (ಕೀರ್ತಿವರ್ಮನ ತಮ್ಮ) ಮಂಗಳೇಶ, ಎರೆಯ ಆಡಳಿತಯೋಗ್ಯ ವಯಸ್ಸಿಗೆ ಬರುವತನಕ ರಾಜಪ್ರತಿನಿಧಿಯಾಗಿ, ಚಾಲುಕ್ಯ ರಾಜ್ಯದ ಆಡಳಿತವನ್ನು ವಹಿಸಿಕೊಂಡ. ಮಂಗಲೇಶ ಒಳ್ಳೆಯ ರಾಜನೇ ಆಗಿದ್ದರೂ, ಅವನಿಗೆ ರಾಜ್ಯಭಾರವನ್ನು ಎರೆಯನಿಗೆ ವಾಪಾಸು ವಹಿಸಿಕೊಡುವ ಮನಸ್ಸಿರಲಿಲ್ಲ. ಕ್ರಿ.ಶ 603ರಲ್ಲಿ ಎರೆಯನ ಬದಲು, ತನ್ನ ಮಗನನ್ನೇ ಯುವರಾಜನೆಂದು ಘೋಷಿಸಿ ತನ್ನ ವಂಶಕ್ಕೇ ರಾಜ್ಯಭಾರ ಸಿಗುವಂತೆ ತಂತ್ರಮಾಡುತ್ತಾನೆ.

ಇದರಿಂದ ಅತೃಪ್ತನಾದ ಎರೆಯ, ಬಾದಾಮಿಯಿಂದ ಹೊರಬಂದು ಇಂದಿನ ಕೋಲಾರದ ಬಳಿಯಿರುವ ಪ್ರದೇಶದಲ್ಲಿ ಬಲಿಷ್ಟರಾಗಿದ್ದ ‘ಬನ’ರೊಂದಿಗೆ ಸ್ನೇಹಬೆಳೆಸಿ, ಸುತ್ತಮುತ್ತಲ ಪಂಗಡಗಳೊಂದಿಗೆ ಮೈತ್ರಿಮಾಡಿಕೊಂಡು, ಸೈನ್ಯವನ್ನು ಸಂಘಟಿಸುತ್ತಾನೆ. ಹೀಗೆ ಕಟ್ಟಿದ ಸೈನ್ಯದೊಂದಿಗೆ ಎರೆಯ, ಮಂಗಳೇಶನ ಮೇಲೆ ಯುದ್ಧ ಘೋಷಿಸುತ್ತಾನೆ. ಮಂಗಳೇಶನ ಸೈನ್ಯಕ್ಕೂ, ಎರೆಯನ ಸೈನ್ಯಕ್ಕೂ ‘ಎಲಪಟ್ಟು ಸಿಂಬಿಗೆ’ (ಇಂದಿನ ಅನಂತಪುರ) ಎಂಬಲ್ಲಿ ಘೋರಯುದ್ಧ ನಡೆಯುತ್ತದೆ. ಹೀಗೆ ನಡೆದು ಮಂಗಳೇಶನ ಸಾವಿನೊಂದಿಗೆ ಅಂತ್ಯವಾದ ಯುದ್ಧದಲ್ಲಿ, ಎರೆಯ ವಿಜಯಿಶಾಲಿಯಾಗುತ್ತಾನೆ ಎಂದು ಪೆದ್ದವಡಗೂರು ಶಾಸನ ಹೇಳುತ್ತದೆ.

ಯುದ್ದದಲ್ಲಿ ಗೆದ್ದ ಎರೆಯ, ತನ್ನ ಸೈನ್ಯದೊಂದಿಗೆ ಪಟ್ಟದಕಲ್ಲು ತಲುಪುತ್ತಾನೆ. ತನ್ನ ಹೆಸರನ್ನು ಎರಡನೇ ಪುಲಿಕೇಶಿ (ಅಥವಾ ಇಮ್ಮಡಿ ಪುಲಕೇಶಿ) ಎಂದು ಬದಲಾಯಿಸಿಕೊಂಡು, ಕ್ರಿಶ 610ರಲ್ಲಿ, ಚಾಲುಕ್ಯ ರಾಜ್ಯದ ಸಿಂಹಾಸನವನ್ನೇರುತ್ತಾನೆ. ಪಟ್ಟಕ್ಕೆ ಬಂದಕೂಡಲೇ ಇಮ್ಮಡಿ ಪುಲಿಕೇಶಿಗೆ ಕಷ್ಟಕೋಟಲೆಗಳ ಸರಮಾಲೆಯೇ ಕಾದಿರುತ್ತದೆ. ಮಂಗಳೇಶನಿಗೆ ನಿಷ್ಠಾವಂತರಾಗಿದ್ದ ಗೋವಿಂದ ಮತ್ತು ಅಪ್ಪಾಯಿಕ ಎಂಬಿಬ್ಬ ರಾಷ್ಟ್ರಕೂಟರ ಸಾಮಂತರಾಜರು, ಮಂಗಳೇಶನ ಸಾವಿನ ಸುದ್ಧಿ ತಿಳಿದಕೂಡಲೇ ಚಾಲುಕ್ಯರಾಜ್ಯದ ಮೇಲೆ ಯುದ್ಧ ಘೋಷಿಸುತ್ತಾರೆ. ಭೀಮಾನದಿಯ ತಟದಲ್ಲಿ ಎದುರಾಳಿಗಳ ಸೈನ್ಯವನ್ನು ತಡೆದ, ಪುಲಿಕೇಶಿಯ ಸೈನ್ಯದ ಆರ್ಭಟಕ್ಕೆ ಎರಡೇ ವಾರದ ನಂತರ ಯುದ್ಧ ಭೂಮಿಯಲ್ಲಿ ನಿಲ್ಲಲಾಗದೆ ಅಪ್ಪಾಯಿಕ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ಕ್ರಿ.ಶ. 634ರ ಐಹೊಳೆ ಶಾಸನದ ಹೇಳುವಂತೆ, ಈ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿ ಐಹೊಳೆಯಲ್ಲಿ ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.

ಇಲ್ಲಿಂದ ಮುಂದಿನ ಒಂಬತ್ತುವರ್ಷ ಚಾಲುಕ್ಯ ಸಾಮ್ರಾಜ್ಯದ ಸುವರ್ಣಯುಗ. ಇಮ್ಮಡಿ ಪುಲಿಕೇಶಿ ದಖನ್ ಪ್ರಸ್ಥಭೂಮಿಯಲ್ಲಿದ್ದ ಎಲ್ಲಾ ರಾಜರನ್ನೂ ಸೋಲಿಸಿದ್ದಲ್ಲದೇ, ದಕ್ಷಿಣದಲ್ಲಿದಲ್ಲೂ ತನ್ನ ರಾಜ್ಯವನ್ನು ವಿಸ್ತರಿಸಿದ. ಪಶ್ಚಿಮ ಕರಾವಳಿಯಲ್ಲಿ ಆಳುಪರು, ಬನವಾಸಿಯ ಕದಂಬರು, ಕೊಂಕಣದಲ್ಲಿ ಮೌರ್ಯರು, ಇನ್ನೂ ಉತ್ತರಕ್ಕೆ ಮಾಳ್ವದಲ್ಲಿ ಗುರ್ಜರರು, ಪೂರ್ವಕ್ಕೆ ವಿಷ್ಣುಕುಂಡಿನಿಯರು, ಲಾಟರನ್ನೂ ಸಾಮಂತರನ್ನಾಗಿಸಿಕೊಂಡ. ಇಮ್ಮಡಿ ಪುಲಿಕೇಶಿಯ ಅತೀಮುಖ್ಯ ವಿಜಯಗಳಲ್ಲಿ ದಕ್ಷಿಣದ ಪಲ್ಲವರ ಮೇಲಿನ ವಿಜಯ ನೆನಪಿಡುವಂತದ್ದು. ಅಂದಿನ ಕಾಲಕ್ಕೆ, ಸೋಲಿಸಲೇ ಅಸಾಧ್ಯವಾದ ಸೈನ್ಯ ಎಂದು ಹೆಸರು ಪಡೆದಿದ್ದ ಪಲ್ಲವರ ಸೈನ್ಯವನ್ನು, ಅವರ ರಾಜ ‘ಒಂದನೆಯ ಮಹೇಂದ್ರವರ್ಮ’ನನ್ನು ಪಲ್ಲವರ ರಾಜಧಾನಿಗೆ 25 ಕಿ.ಮೀ ದೂರದಲ್ಲಿದ್ದ ‘ಪುಲ್ಲಲೂರ್’ನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದನು. ಪುಲಿಕೇಶಿ ಗಂಗ ವಂಶದ’ದುರ್ವಿನಿತ’ ಹಾಗೂ ‘ಪಾಂಡ್ಯನ್ ಜಯಂತವರಾಮನ್ ರಾಜ’ನ ಸಹಾಯದೊಂದಿಗೆ ಪಲ್ಲವರ ರಾಜಧಾನಿ ‘ಕಂಚೀಪುರ’ಕ್ಕೆ ಮುತ್ತಿಗೆ ಹಾಕುತ್ತಾನೆ. ಮಹೇಂದ್ರವರ್ಮ ತನ್ನ ರಾಜಧಾನಿಯನ್ನು ಉಳಿಸಿಕೊಂಡರೂ ಉತ್ತರದ ಪ್ರಾಂತ್ಯವನ್ನು ಪುಲಿಕೇಶಿಗೆ ಸಮರ್ಪಿಸುತ್ತಾನೆ. ಹೀಗೆ ದಕ್ಷಿಣದ ಅತೀದೊಡ್ಡ ಏಕರಾಜ ಸಾಮ್ರಾಜ್ಯ ಸ್ಥಾಪಿಸಿದ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಚೀನಾದ ಯಾತ್ರಿಕ/ಇತಿಹಾಸಕಾರ ಹ್ಯುಯೆನ್-ತ್ಸಾಂಗ್, ಪರ್ಶಿಯಾದ ಇತಿಹಾಸಕಾರ ತಬರಿ ಮುಂತಾದವರು ಭೇಟಿಕೊಟ್ಟು ರಾಜ್ಯಭಾರದ ಬಗ್ಗೆ ಅಗಾಧ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ.

ಇಮ್ಮಡಿ ಪುಲಿಕೇಶಿಯ ರಾಜ್ಯಭಾರದ ಅತೀಮುಖ್ಯ ಘಟನೆಯೆಂದರೆ ಗುರ್ಜರ, ಮಾಳ್ವರನ್ನು ಸೋಲಿಸಿ ಉತ್ತರಕ್ಕೂ ತನ್ನ ಸಾಮ್ರಾಜ್ಯ ವಿಸ್ತರಣೆಮಾಡುವಾಗ, ಆಗಿನ ಕನ್ನೌಜದ ಮಹಾರಾಜನಾಗಿದ್ದ ಹರ್ಷವರ್ಧನನೊಡನೆ ನಡೆದ ಯುದ್ಧ. ವಿಂಧ್ಯದ ಉತ್ತರದಿಂದ ಹಿಡಿದು ಹಿಮಾಚಲದವರೆಗೂ ರಾಜ್ಯಭಾರ ಮಾಡುತ್ತಿದ್ದ, ಇಡೀ ಜೀವನದಲ್ಲೇ ಒಂದೇ ಒಂದು ಯುದ್ಧ ಸೋಲದ, ‘ಉತ್ತರಪಥೇಶ್ವರ’ ಎಂದೇ ಬಿರುದು ಪಡೆದಿದ್ದ ಹರ್ಷವರ್ಧನ, ಇಮ್ಮಡಿ ಪುಲಿಕೇಶಿಯ ಉತ್ತರದ ಭಾಗದ ಸಾಮ್ರಾಜ್ಯ ವಿಸ್ತರಣೆಗೆ ಕಡಿವಾಣ ಹಾಕಲು ನಿರ್ಧರಿಸುತ್ತಾನೆ. ನರ್ಮದಾ ನದಿಯ ತಟದಲ್ಲಿ ಎರಡೂ ಸೇನೆಗಳು ಮುಖಾಮುಖಿಯಾಗುತ್ತವೆ. ಎಂಟುವಾರಗಳ ಕಾಲ ನಡೆದ ಜಿಗುಟುಯುದ್ಧದ ನಂತರ, ಪುಲಿಕೇಶಿಗಿಂತಾ ಮೂರುಪಟ್ಟು ದೊಡ್ಡ ಸೈನ್ಯವಿದ್ದರೂ, ತನ್ನ ಅತೀಶಕ್ತಿಶಾಲಿ ಗಜಪಡೆಯಲ್ಲೇ ಹೆಚ್ಚು ನಷ್ಟವನ್ನನುಭವಿಸಿದ ಹರ್ಷವರ್ಧನ, ಯುದ್ದದಲ್ಲಿ ಗೆಲ್ಲಲಾಗದೇ ಶಾಂತಿಸಂಧಾನಕ್ಕೆ ಮುಂದಾಗುತ್ತಾನೆ. ಇಮ್ಮಡಿ ಪುಲಿಕೇಶಿಗೆ ‘ಪರಮೇಶ್ವರ’, ‘ಸತ್ಯಾಶ್ರಯ’, ‘ಪೃಥ್ವೀವಲ್ಲಭ’ ಎಂಬ ಬಿರುದುಗಳನ್ನು ಸಮರ್ಪಿಸಿದುದ್ದಲ್ಲದೇ, ಇಮ್ಮಡಿ ಪುಲಿಕೇಶಿಯನ್ನು ತನ್ನ ದಕ್ಷಿಣದ ಸಮಬಲನೆಂದು ಸ್ಚೀಕರಿಸಿ ಆತನಿಗೆ ‘ದಕ್ಷಿಣಪಥೇಶ್ವರ’ ಎಂಬ ಬಿರುದನ್ನು ಕೊಡುತ್ತಾನೆ. ಹಾಗೂ ನರ್ಮದಾ ನದಿಯನ್ನು ಉತ್ತರದ ಹರ್ಷವರ್ಧನನ ಸಾಮ್ರಾಜ್ಯಕ್ಕೂ, ದಕ್ಷಿಣದ ಚಾಲುಕ್ಯ ಸಾಮ್ರಾಜ್ಯಕ್ಕೂ ಗಡಿಯೆಂದು ನಿರ್ಧರಿಸಿ ಹರ್ಷವರ್ಧನ ಕನ್ನೌಜಿಗೆ ಮರಳುತ್ತಾನೆ. ಈ ಯುದ್ಧ, ಇಂಗ್ಳೀಷಿನ “This is what happens when an unstoppable force meets an immovable object” ಎಂಬ ಜಾಣ್ನುಡಿಗೆ ಒಂದೊಳ್ಳೆಯ ಉದಾಹರಣೆ.

Chalukya

ಕಾಂಚೀಪುರವನ್ನು ಗೆಲ್ಲದ, ಚುಕ್ಕಿಯೊಂದು ಇಮ್ಮಡಿ ಪುಲಿಕೇಶಿಯ ಮನಸ್ಸಲ್ಲೇ ಉಳಿದಿತ್ತು. ಹಾಗಾಗಿ ವಯಸ್ಸಾಗಿ ನೇಪಥ್ಯಕ್ಕೆ ಸರಿಯುವ ಮುನ್ನ ಇನ್ನೊಮ್ಮೆ ಪಲ್ಲವರ ಮೇಲೆ ಯುದ್ಧ ಸಾರಲು ನಿರ್ಧರಿಸಿದ ಪುಲಿಕೇಶಿ, ರಥವನ್ನೇರಿಯೇ ಬಿಟ್ಟ. ಆದರೆ ಈ ಬಾರಿ ಪಲ್ಲವರ ರಾಜ ಒಂದನೇ ನರಸಿಂಹವರ್ಮ, ಪುಲಿಕೇಶಿಯ ವಿಜಯಗಳ ಸರಮಾಲೆಗೆ ಕಡಿವಾಣ ಹಾಕುತ್ತಾನೆ. ಇಮ್ಮಡಿ ಪುಲಿಕೇಶಿಯ ಮರಣದೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ. ಯುದ್ದವನ್ನು ಗೆದ್ದ ಉತ್ಸಾಹದಲ್ಲಿ ನರಸಿಂಹವರ್ಮ ಚಾಲುಕ್ಯ್ರರ ರಾಜಧಾನಿ ಬಾದಾಮಿಯವರೆಗೂ ಸೈನ್ಯವನ್ನು ಕೊಂಡೊಯ್ದು, ಸಂಪತ್ತಲ್ಲವನ್ನೂ ಕಂಚಿಗೆ ಸಾಗಿಸುತ್ತಾನೆ. ಚಾಲುಕ್ಯರ ರಾಜಧಾನಿ “ಬಾದಾಮಿ” ಪಲ್ಲವರ ಮುಂದಿನ 13 ವರ್ಷಗಳ ರಾಜ್ಯಭಾರದಲ್ಲಿ “ವಾತಾಪಿಕೊಂಡ”ವಾಯ್ತು. (ಬಾದಾಮಿಯ ಮೂಲಹೆಸರು ವಾತಾಪಿ). ಹೀಗೆ, ಒಬ್ಬ ಮಹಾರಾಜನನ್ನು ಸೋಲಿಸಲು ಒಂದನೆಯ ನರಸಿಂಹವರ್ಮನಂತಹ ಇನ್ನೊಬ್ಬ ಮಹಾಯೋಧನೇ ಬರಬೇಕಾಯ್ತು. ದಕ್ಷಿಣದ ಮಹಾನ್ ಸಾಮ್ರಾಜ್ಯವೊಂದು ಹೀಗೆ ಕೊನೆಗೊಂಡಿತು.

ಇಮ್ಮಡಿ ಪುಲಿಕೇಶಿಗೆ ಚಂದ್ರಾದಿತ್ಯ, ಆದಿತ್ಯವರ್ಮ, ವಿಕ್ರಮಾದಿತ್ಯ, ಜಯಸಿಂಹ, ಅಂಬರ ಎಂಬ ಐದು ಜನ ಮಕ್ಕಳು. ತಮ್ಮ ತಮ್ಮಲ್ಲೇ ಕಚ್ಚಾಡಿ, ರಾಜ್ಯವನ್ನು ವಿಂಗಡಿಸಿಕೊಂಡು, ಪಲ್ಲವರಿಗೆ ಸಾಮಂತರಾಗಿ, ಸಣ್ಣ ಸಣ್ಣ ಭಾಗಗಳನ್ನು ಆಳುತ್ತಿದ್ದರು. ಇವರಲ್ಲಿ ಮೂರನೆಯವನಾದ ಮೊದಲನೇ ವಿಕ್ರಮಾದಿತ್ಯ, ಇವರ ಜಗಳಗಳಿಂದ ರೋಸಿಹೋಗಿ, ತನ್ನದೇ ಸೋದರರ ಮೇಲೆ ಯುದ್ಧಮಾಡಿ ಸೋಲಿಸಿ ಆಮೇಲೆ ಅವರನ್ನು ಮನ್ನಿಸಿ, ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. 642ರಲ್ಲಿ ತನ್ನನ್ನು ರಾಜನೆಂದು ಘೋಷಿಸಿಕೊಂಡು, ಪಲ್ಲವರನ್ನು ಒದ್ದೋಡಿಸಿ ಚಾಲುಕ್ಯ ಸಾಮ್ರಾಜ್ಯವನ್ನು ಪುನರ್ಸ್ಥಾಪಿಸಿದನು. ಆತನ 13 ವರ್ಷದ ಆಡಳಿತದಲ್ಲಿ ಹಾಗೂ ಇವನ ಮಗನಾದ ಎರಡನೆಯ ವಿಕ್ರಮಾದಿತ್ಯ ಆಳ್ವಿಕೆಯಲ್ಲಿ ಚಾಲುಕ್ಯ ಸಾಮ್ರಾಜ್ಯ ಸಂಪೂರ್ಣವಾಗಿ ಪುನರ್ನಿರ್ಮಾಣವಾಗಿ, ಮತ್ತೆ ಇಮ್ಮಡಿ ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ ಮೇರು ಸ್ಥಿತಿಗೆ ತಲುಪಿತು.

ಇಷ್ಟೆಲ್ಲಾ ಕಥೆ ಯಾಕೆ ಹೇಳಿದೆ ಅಂದರೆ, ಒಂದನೆಯ ನರಸಿಂಹವರ್ಮ ವಾತಾಪಿಯಿಂದ ಸಂಪತ್ತನ್ನು ಕಂಚಿಗೆ ಸಾಗಿಸುವಾಗ, ಆ ಯುದ್ದದ ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದ್ದ ತನ್ನ ಸೈನ್ಯಾಧಿಕಾರಿ ಪರಂಜ್ಯೋತಿಗೆ, ಖಜಾನೆಯ ಕಾಲುಭಾಗದಷ್ಟು ದೊಡ್ಡ ಉಡುಗೊರೆಯನ್ನೇ ಕೊಡುತ್ತಾನೆ. ಇದರಲ್ಲಿ ಚಾಲುಕ್ಯರ ಅರಮನೆಯಲ್ಲಿದ್ದ, ಚಾಲುಕ್ಯರಾಜರ ಅತ್ಯಂತ ಪ್ರೀತಿಯ ದೊಡ್ಡದೊಂದು ಗಣಪತಿಯ ಮೂರ್ತಿಯೂ ಇರುತ್ತದೆ. ತನ್ನ ರಾಜ್ಯಕ್ಕೆ ಮರಳಿದ ಪರಂಜ್ಯೋತಿ, ತನ್ನೂರಾದ, ತಿರುಚೆಂಕಾಟಂಕುಡಿಯಲ್ಲಿ ಈ ಗಣಪತಿಗೊಂದು ದೇವಸ್ಥಾನಕಟ್ಟಿ, ಅದನ್ನು ಆದರದಿಂದ ನೋಡಿಕೊಳ್ಳುತ್ತಾನೆ. ಹೀಗೆ ಬಾದಾಮಿಯಿಂದ ಅಂದರೆ ಅಂದಿನ ವಾತಾಪಿಯಿಂದ, ಕಂಚಿಗೆ ತಲುಪಿದ ಈ ಗಣಪತಿಯೇ, ಮುತ್ತುಸ್ವಾಮಿ ದೀಕ್ಷಿತರ ಕೃತಿ “ವಾತಾಪಿ ಗಣಪತಿಂ ಭಜೇ…”ಯಲ್ಲಿ ಮೂಡಿಬಂದಿರುವುದು! 🙂

ಇದನ್ನೇ ಹೇಳಬೇಕು ಅಂತಾ ಈ ಹರಿಕಥೆ. ಈಗ ಎಲ್ಲರೂ “ವಾತಾಪಿ ಗಣಪತಿಂ ಭಜೇ….” ಎಂದು ಹಾಡುತ್ತಾ ಮುಂದಿನ ಕೆಲಸ ನೋಡಿಕೊಳ್ಳಿ 🙂

ಕೆಲ ವಿಶೇಷ ಮಾಹಿತಿಗಳು:

(1) ಈ ವಾತಾಪಿ ಗಣಪತಿ ದೇವಸ್ಥಾನ ಇವತ್ತು ತಮಿಳ್ನಾಡಿನ ನಾಗಪಟ್ಟಿನಂ ಜಿಲ್ಲೆಯ ಉತ್ರಪತೀಸ್ವರಸ್ವಾಮಿ ದೇವಸ್ಥಾನದ ಆವರಣದಲ್ಲೇ ಇದೆ. ಆ ಉತ್ರಪತೀಸ್ವರಸ್ವಾಮಿ ದೇವಸ್ಥನವನ್ನೂ ಪರಂಜ್ಯೋತಿಯೇ ಕಟ್ಟಿಸಿದ್ದು. ಇದು ಈಶ್ವರನ ದೇವಸ್ಥಾನವೇ ಆದರೂ, ಪರಂಜ್ಯೋತಿಯ ಪ್ರೀತಿಯ ದೇವ, ಗಣೇಶನ ಬಿಂಬಗಳಿಗೆ ಪ್ರಸಿದ್ಧ.

ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿರುವ ಗಣೇಶ, ತನ್ನ ಯಥಾಪ್ರಸಿದ್ಧ ಆನೆಯ ಮುಖದಲ್ಲಿರದೆ, ಮಾನವ ಮುಖದಲ್ಲೇ ಇರೋದು ಒಂದು ವಿಶೇಷ.

(2) ಈ ಮಹಾಸೈನ್ಯಾಧಿಪತಿ ಪರಂಜ್ಯೋತಿ, ಮುಂದೆ ತನ್ನ ಕ್ಷತ್ರಿಯಾಭ್ಯಾಸಗಳನ್ನೆಲ್ಲಾ ತ್ಯಜಿಸಿ, ಜೀವನವನ್ನೇ ಬದಲಾಯಿಸಿಕೊಂಡು ‘ಸಿರುತೊಂದಾರ್’ ಎಂಬ ಹೆಸರಿನ ನಾಯನಾರ್ ಸಂತನಾಗಿ, ತನ್ನ ಜೀವನವನ್ನು ಅಲ್ಲೇ ಕಳೆಯುತ್ತಾನೆ. ನಾಯನಾರ್’ಗಳು ಹಾಗೂ ಆಳ್ವಾರ್’ಗಳು, ಎಂಟನೇ ಶತಮಾನದಲ್ಲಿ ದಕ್ಷಿಣಭಾರತದಲ್ಲಿ ‘ಭಕ್ತಿ ಚಳುವಳಿಗೆ’ ನಾಂದಿ ಹಾಡಿದ ಮಹಾಪುರುಷರು. ಆ 63 ನಾಯನಾರ್’ಗಳಲ್ಲಿ ಈ ಪರಂಜ್ಯೋತಿಯೂ ಒಬ್ಬ! ಜೀವನ ಎಷ್ಟು ವಿಚಿತ್ರ ನೋಡಿ!! ಪರಂಜ್ಯೋತಿಯಿಂದ….ಸಿರುತೊಂದಾರ್!!!

(3) ಎರೆಯ ಎಂಬುವವ ಇಮ್ಮಡಿ ಪುಲಿಕೇಶಿಯಾದರೆ, ಮೊದಲನೆಯ ಪುಲಿಕೇಶಿ ಯಾರು ಎಂಬ ಅನುಮಾನ ನಿಮಗಿದ್ದರೆ:

ಮೊದಲನೇ ಪುಲಿಕೇಶಿ ಎರೆಯನ ಅಜ್ಜ. ಅಂದರೆ ಕೀರ್ತಿವರ್ಮನ ಅಪ್ಪ. ಮಂಗಳೇಶನ ಮಹಾಕೂಟ ಶಾಸನ ಹಾಗೂ ರವಿಕೀರ್ತಿಯ ಐಹೊಳೆ ಶಾಸನದ ಪ್ರಕಾರ ಚಾಲುಕ್ಯರ ಮೂಲ ಪುರುಷ ಕ್ರಿ.ಶ 500ರಲ್ಲಿ ರಾಜ್ಯಭಾರ ಆರಂಭಿಸಿದ ಜಯಸಿಂಹನೇ ಆದರೂ, ಕ್ರಿ.ಶ 540ರಲ್ಲಿ ರಾಜನಾದ ಜಯಸಿಂಹನ ಮೊಮ್ಮಗ ಪುಲಿಕೇಶಿಯೇ ಚಾಲುಕ್ಯ ಸಂತತಿಯ ಮೊದಲ ಸ್ವತಂತ್ರ ರಾಜ. ಬಾದಾಮಿಯಿಂದ ರಾಜ್ಯಭಾರ ಮಾಡಿದ ಈತನ ಕೂದಲು ಬಹುಷಃ ಕೆಂಚು ಬಣ್ಣಕ್ಕಿದ್ದಿರಿಂದ (blonde) ಪುಲಿಕೇಶಿ (ಅಂದರೆ ಹುಲಿಯಂತಾ ಕೂದಲಿರುವವನು) ಎಂಬ ಹೆಸರು ಬಂದಿರಬಹುದೇ ಎಂಬುದು ನನ್ನ ಅನುಮಾನ.

ಈ ಲೇಖನದಲ್ಲಿರುವ ಹೆಚ್ಚಿನ ಐತಿಹಾಸಿಕ ಸತ್ಯಗಳ ಬಗ್ಗೆ ನನ್ನ ಗಮನ ಸೆಳೆದದ್ದು, ಪಕ್ಕಾ ಬೆಂಗಳೂರು ಹುಡುಗ, ಟ್ವಿಟರ್ ಗೆಳೆಯ ಆದಿತ್ಯ ಕುಲಕರ್ಣಿ. ಅವರ ಟ್ವೀಟುಗಳ ಸರಮಾಲೆಯನ್ನೇ, ಅಲ್ಪಸ್ವಲ್ಪ ಸೇರ್ಪಡೆಗಳೊಂದಿಗೆ ಲೇಖನಸ್ವರೂಪದಲ್ಲಿ ಬರೆದಿದ್ದೇನೆ. ಈ ಇಡೀ ಲೇಖನ Aditya Kulkarni ಅವರಿಗೆ ಸೇರಬೇಕಾದದ್ದು.

#ರಾಘವಾಂಕಣ

‘ಸೀಬರ್ಡ್ ನೌಕಾನೆಲೆಗೂ, ಹವ್ಯಕ ಬ್ರಾಹ್ಮಣರಿಗೂ ಇರುವ ನಂಟೇನು?’

ಸರಿಸುಮಾರು ಮೂರನೇ ಶತಮಾನದ ನಲತ್ತರ ದಶಕದ ಕಾಲ. ತಾಳಗುಂದ(ಇವತ್ತಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ)ದ ಮಯೂರಶರ್ಮ ಎಂಬ ಬ್ರಾಹ್ಮಣ ಯುವಕನೊಬ್ಬ, ಹೆಚ್ಚಿನ ವೇದಾಧ್ಯಯನಕ್ಕೆ ಕಾಂಚೀಪುರಂಗೆ ತೆರಳುತ್ತಾನೆ. ಆಗ ಪಲ್ಲವರ ಆಳ್ವಿಕೆ ಉತ್ತುಂಗದಲ್ಲಿದ್ದ ಕಾಲ. ಸಹಜವಾಗಿಯೇ ರಾಜ್ಯದ ರಾಜಧಾನಿ, ಮುಖ್ಯ ಘಟಿಕಾಸ್ಥಾನವಾಗಿತ್ತು. ಆಸುಪಾಸಿನಲ್ಲಿ ಹೆಚ್ಚಿನ ವೇದಪಾರಂಗತರು ವಾಸವಾಗಿದ್ದದ್ದು ಮಾತ್ರವಲ್ಲದೇ, ಮಯೂರಶರ್ಮನ ಅಜ್ಜ ವೀರಶರ್ಮ ಹಾಗೂ ಅಪ್ಪ ಬಂಧುಸೇನರ ವಿದ್ಯಾಭ್ಯಾಸವಾದದ್ದೂ ಅಲ್ಲಿಯೇ ಎಂಬ ಕಾರಣಕ್ಕೆ ಮೊಮ್ಮಗನೂ ಕಂಚಿಗೆ ಪ್ರಯಾಣ ಬೆಳೆಸುತ್ತಾನೆ. ಕಂಚಿಯಲ್ಲಿ ವೇದ ಕಲಿಯುತ್ತಿದ್ದ ಈ ಬ್ರಾಹ್ಮಣ ಯುವಕನ ಜೀವನದಲ್ಲಿ ನಡೆದ ಒಂದು ಅತೀ ಸಣ್ಣ ಘಟನೆ, ಅವನ ಜೀವನವನ್ನೇ ಬದಲಿಸುತ್ತದೆ. ಮಾರುಕಟ್ಟೆಯಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಪಲ್ಲವ ಸೈನ್ಯದ ಅಶ್ವಾರೋಹಿಯೊಬ್ಬನ ಜೊತೆ ತೆಗೆದ ಜಗಳ, ಕೈ ಕೈ ಮೀಲಾಯಿಸುವವರೆಗೆ ಹೋಗಿ, ಮಯೂರಶರ್ಮ ಅಪಮಾನಿತನಾಗುತ್ತಾನೆ. ಬ್ರಾಹ್ಮಣನಾದರೂ ಕುದಿರಕ್ತದ ತರುಣ ಮಯೂರಶರ್ಮ ಅವಮಾನ ತಾಳಲಾಗದೇ ಸಿಟ್ಟಾದ. ಅದೂ ಎಂತಾ ಸಿಟ್ಟಂತೀರಿ! ಸಾಮಾನ್ಯ ಮನುಷ್ಯನಾದರೆ ಬರೀ ಅಶ್ವಾರೋಹಿಯ ಮೇಲೆ ಸಿಟ್ಟುತೀರಿಸಿಕೊಳ್ಳುತ್ತಿದ್ದ. ಆದರೆ ಈ ಕಥೆಯ ಮುಖ್ಯಪಾತ್ರಧಾರಿ ಮಯೂರಶರ್ಮ ಅಸಾಮಾನ್ಯನಾಗಿದ್ದೇ ಈ ಕಾರಣಕ್ಕೆ, ಯಾಕೆಂದರೆ ಅವನ ಸಿಟ್ಟೂ ಸಹ ಅಸಾಮಾನ್ಯವಾದದ್ದು. ತನ್ನ ಅವಮಾನಕ್ಕೆ ಇಡೀ ಪಲ್ಲವ ರಾಜ್ಯವೇ ಕಾರಣ ಎಂಬ ನಿರ್ಧಾರಕ್ಕೆ ಬಂದ ಮಯೂರಶರ್ಮ, ಪಲ್ಲವರ ರಾಜ್ಯದ ಮೇಲೇ ಸೇಡು ತೀರಿಸಲು ನಿರ್ಧರಿಸುತ್ತಾನೆ.

ಆದರೆ ಬಡಬ್ರಾಹ್ಮಣನೊಬ್ಬ ಇಡೀ ರಾಜ್ಯವೊಂದರೆ ಮೇಲೆ ಸೇಡು ತೀರಿಸಿಕೊಳ್ಳುವುದು ಹೇಗೆ!? ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಕೊಟ್ಟು ಕಂಚಿಗೆ ಬೆನ್ನು ಹಾಕಿದ ವಟು, ಶಸ್ತ್ರಧಾರಣೆ ಮಾಡಿಯೇ ಬಿಟ್ಟ. ತಾಳಗುಂದಕ್ಕೆ ಮರಳಿ ತನ್ನದೇ ಆದ ಸೈನ್ಯಕಟ್ಟುತ್ತಿದ್ದಾಗ, ಅವನ ಅದೃಷ್ಟವೇನೋ ಎಂಬಂತೆ, ಅದೇ ಸಮಯಕ್ಕೆ ಸಮುದ್ರಗುಪ್ತ ದಕ್ಷಿಣಕ್ಕೆ ದಂಡೆತ್ತಿ ಬಂದಿದ್ದ. ಪಲ್ಲವರ ರಾಜ ‘ಪಲ್ಲವ ವಿಷ್ಣುಗೋಪ’ ಸಮುದ್ರಗುಪ್ತನೆಡೆಗೆ ತನ್ನ ಗಮನ ಹರಿಸಿದ್ದಾಗ, ನಮ್ಮ ಮಯೂರಶರ್ಮ ಶ್ರೀಪರ್ವತದಲ್ಲಿ (ಇಂದಿನ ಶ್ರೀಶೈಲಂ) ಪಲ್ಲವರ ಗಡಿಸೈನಿಕರಾದ ಅಂತ್ರಪಾಲರ ಮೇಲೆ ಹಾಗೂ ಕೋಲಾರದಲ್ಲಿದ್ದ ಪಲ್ಲವ ಸಾಮಂತ ರಾಜಮನೆತನವಾದ ಬಾಣರ ಮೇಲೂ ಆಕ್ರಮಣ ಮಾಡಿ ಇಬ್ಬರನ್ನೂ ಸೋಲಿಸಿದ. ಸಮುದ್ರಗುಪ್ತನ ಮೇಲಿನ ಯುದ್ಧದಿಂದ ಇನ್ನೂ ಚೇತರಿಸಿಕೊಂಡಿರದ ಪಲ್ಲವರು, ಅವರ ಅತೀ ನಂಬುಗೆಯ ಪಡೆಯಾದ, ‘ಯುದ್ಧದುರ್ಜಯರು’ ಎಂದೇ ಹೆಸರು ಪಡೆದಿದ್ದ ಅಂತ್ರಪಾಲರಿಗಾದ ಗತಿನೋಡಿ, ಮಯೂರವರ್ಮನ ತಂಟೆಗೆ ಹೋಗಬಯಸದೆ ಆತನನ್ನು ಪೂರ್ವದ ಶ್ರೀಪರ್ವತದಿಂದ, ಪಶ್ಚಿಮದ ಅಮರಸಮುದ್ರದವರೆಗೂ (ಇಂದಿನ ಅರಬ್ಬೀ ಸಮುದ್ರ), ದಕ್ಷಿಣದಲ್ಲಿ ಬಾಣದ ಅಧೀನದಲ್ಲಿದ್ದ ಕೋಲಾರದಿಂದ, ವಾಯುವ್ಯದಲ್ಲಿ ಪ್ರೇಹಾರದವರೆಗೂ (ಇಂದಿನ ಮಲಪ್ರಭಾ ನದಿ) ರಾಜನೆಂದು ಒಪ್ಪಿಕೊಂಡರು. ಸಮುದ್ರಗುಪ್ತನಿಂದ ಆಗಷ್ಟೇ ಸೋತುಕೂತಿದ್ದ ಪಲ್ಲವರ ಸಾಮಂತನಾಗಬಯಸದ ಮಯೂರಶರ್ಮ ತನ್ನನ್ನು ತಾನೇ ಸ್ವತಂತ್ರ್ಯರಾಜನೆಂದು ಘೋಷಿಸಿಕೊಂಡಾಗ, ಅದನ್ನು ಒಪ್ಪಿಕೊಳ್ಳದೇ ಪಲ್ಲವರಿಗೆ ಬೇರೆ ದಾರಿಯೂ ಇರಲಿಲ್ಲವೆನ್ನಿ.

ಕ್ರಿ.ಶ 345ರಲ್ಲಿ (ಗುಂಡಾಪುರ ಶಾಸನದ ಪ್ರಕಾರ) ಮಯೂರಶರ್ಮ ಧಾರ್ಮಿಕ ವಿಧಿವಿಧಾನದಲ್ಲಿ ಬ್ರಾಹ್ಮಣ್ಯ ತ್ಯಜಿಸಿ, ಕ್ಷತ್ರಿಯಧರ್ಮ ಸ್ವೀಕರಿಸಿ, ಕ್ಷಾತ್ರನಿಯಮಕ್ಕನುಗುಣವಾಗಿ ತನ್ನ ಹೆಸರನ್ನು ‘ಮಯೂರವರ್ಮ’ನೆಂದು ಬದಲಿಸಿಕೊಂಡು, ಇಂದಿನ ಉತ್ತರಕನ್ನಡ ಜಿಲ್ಲೆಯಲ್ಲಿರುವ, ಬನವಾಸಿಯನ್ನು ತನ್ನ ರಾಜಧಾನಿಯೆಂದು ಘೋಷಿಸಿ, ತನ್ನದೇ ಆದ ರಾಜ್ಯವೊಂದನ್ನು ಸ್ಥಾಪಿಸಿದ. ಹೀಗೆ ಪ್ರಾರಂಭವಾದ ಈ ರಾಜವಂಶವೇ ಕರ್ನಾಟಕದ ಮೊತ್ತಮೊದಲ ಸ್ವತಂತ್ರ ರಾಜವಂಶವಾದ ‘ಕದಂಬ ವಂಶ’! ಸಹ್ಯಾದ್ರಿಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ, ಹಾಗೂ ಮಯೂರಶರ್ಮನ ಮನೆಯ ಪಕ್ಕ ಬೆಳೆದಿದ್ದ, ಕದಂಬವೃಕ್ಷದ ಹಿನ್ನೆಲೆಯಲ್ಲಿ, ಕುಟುಂಬಕ್ಕೆ ‘ಕದಂಬ’ ಎಂದು ಹೆಸರಿಸಲಾಯಿತು.

ತನ್ನ ಇಪ್ಪತು ವರ್ಷದ ರಾಜ್ಯಭಾರದಲ್ಲಿ, ಮಯೂರವರ್ಮ ತನ್ನ ರಾಜ್ಯದ ಎಲ್ಲೆಯನ್ನು ಇನ್ನಷ್ಟು ಹಿಗ್ಗಿಸಿದ. ತ್ರಯಕೂಟರು, ಅಭಿಹಾರರು, ಸೇಂದ್ರಕರು, ಪಲ್ಲವರು, ಪರಿಯತ್ರಕರು, ಶಖಸ್ಥಾನರು, ಮೌಖರಿಗಳು ಹಾಗೂ ಪುನ್ನಾಟಕರನ್ನು ಸೋಲಿಸಿ ತನ್ನ ರಾಜ್ಯವನ್ನು ಪಶ್ಚಿಮದಲ್ಲಿ ಇಂದಿನ ಗೋವಾ ರಾಜ್ಯದವರೆಗೂ, ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ. ಇವನ ವಂಶದ ಮುಂದಿನರಾಜರುಗಳಾದ ಕಾಕ್ಷುತವರ್ಮ, ರವಿವರ್ಮ, ವಿಷ್ಣುವರ್ಮರೂ ಕದಂಬ ರಾಜ್ಯವನ್ನು ಸಮರ್ಥವಾಗಿ ನಿರ್ವಹಿಸಿದರು. ದಕ್ಷಿಣಭಾರತದಲ್ಲಿ ಮೂರನೇ ಶತಮಾನದವರೆಗೂ ಕನ್ನಡ ಭಾಷಾವ್ಯವಹಾರ ಬಳಕೆಯಲ್ಲಿಟ್ಟಿದ್ದ ಚುಟುವಂಶದವರೂ, ಬಾಣರು ಆಳಿದ್ದರೂ ಸಹ, ಇವರೆಲ್ಲಾ ಬೇರೆ ಬೇರೆ ಚಕ್ರವರ್ತಿಗಳ ಸಾಮಂತರಾಗಿದ್ದವರು. ಅಂದರೆ ಇವರುಗಳು ಕರ್ನಾಟಕದೊಳಗಿರುವ ಪ್ರದೇಶಗಳನ್ನು ಆಳುತ್ತಿದ್ದರೂ, ಸಾಮ್ಯಾಜ್ಯದ ರಾಜಧಾನಿ ಕರ್ನಾಟಕದಿಂದ ಹೊರಗೆಲ್ಲೋ ಇರುತ್ತಿದ್ದದ್ದು. ಮೊತ್ತಮೊದಲ ಸ್ಥಾನೀಯ ಕನ್ನಡ ಸಾಮ್ಯಾಜ್ಯ ಸ್ಥಾಪನೆಯಾಗಿದ್ದು ಕದಂಬರ ಮಯೂರವರ್ಮನಿಂದಲೇ. ಕನ್ನಡ ಭಾಷೆಯ ದೃಷ್ಟಿಯಿಂದ ನೋಡಿದಾಗ ಇದೊಂದು ಮಹತ್ವದ ಬೆಳವಣಿಗೆ. ಕ್ರಿಶ 340-350ರ ನಡುವೆ ಮಧ್ಯಕರ್ನಾಟಕದಲ್ಲಿ ಕದಂಬರು ಹಾಗೂ ದಕ್ಷಿಣ ಹಾಗೂ ನೈರುತ್ಯದಲ್ಲಿ ನಿಧಾನವಾಗಿ ಶಕ್ತರಾದ ಗಂಗರ ಅಧಿಪತ್ಯದಿಂದ, ಭೌಗೋಳಿಕವಾಗಿ ಕರ್ನಾಟಕ ರೂಪುಗೊಳ್ಳಲು ಪ್ರಾರಂಭವಾಗಿದ್ದೂ ಅಲ್ಲದೇ, ಭಾಷೆಯಾಗಿ ಕನ್ನಡ ಹೆಚ್ಚಿನ ಮಹತ್ವ ಪಡೆಯಿತು. ಕನ್ನಡ ಲಿಪಿ ಅಭಿವೃದ್ಧಿ, ವ್ಯಾಕರಣ ಬೆಳವಣಿಗೆಯ ಪ್ರಯೋಗಗಳೂ ನಡೆದವು. ಪ್ರಜೆಗಳಲ್ಲಿ ಹಾಗೂ ರಾಜಾಧಿಪತ್ಯದಲ್ಲಿ ಕನ್ನಡ ಉನ್ನತಸ್ಥಾನ ಪಡೆಯಿತು. ಇದೇ ಕದಂಬರ ಕಾಲದಲ್ಲಿ ಮೊತ್ತಮೊದಲ ಕನ್ನಡ ಶಾಸನಗಳಾದ ‘ತಾಳಗುಂದ ಶಾಸನ’ ಮತ್ತು ‘ಹಲ್ಮಿಡಿ ಶಾಸನ’ಗಳೂ ಕೆತ್ತಲ್ಪಟ್ಟವು. ಇದೇ ಕಾಲದಲ್ಲಿ ರೂಪುಗೊಂಡ ಕದಂಬ ಲಿಪಿ ಕನ್ನಡ, ಮರಾಠಿ, ಕೊಂಕಣಿ ಹಾಗೂ ಸಂಸ್ಕೃತವನ್ನೂ ಬರೆಯಲು ಬಳೆಸಲಾಯಿತು. ಇಷ್ಟೇ ಅಲ್ಲದೇ ಕದಂಬ ಲಿಪಿಯಿಂದ ವಿಕಸಿತವಾದ ‘ಪ್ಯೂ (ಪಿಯೂ) ಲಿಪಿ’ ಮುಂದೆ ಬರ್ಮಾದಲ್ಲಿ ಬಳಕೆಯಲ್ಲಿದ್ದ (ಈಗ ಅಳಿದುಹೋಗಿರುವ) ‘ಪ್ಯೂ’ ಭಾಷೆಗೂ ಬಳಕೆಯಾಯ್ತು ಎಂಬುದು ಗಮನಾರ್ಹ. ಹೀಗೆ ಕದಂಬರ ಕಾಣಿಕೆ ಕನ್ನಡಕ್ಕೆ ಮಾತ್ರವಲ್ಲ, ಹೊರದೇಶಕ್ಕೂ ತಲುಪಿದೆ ಎಂಬ ಹೆಮ್ಮೆ ನಮ್ಮದಾಗಬೇಕು.

kadam

ಹೀಗೆ, ಯಾವ ದಂತಕೆಥೆಗೂ ಕಮ್ಮಿಯಿಲ್ಲದ, ಮೊತ್ತಮೊದಲ ಕನ್ನಡ ರಾಜವಂಶಕ್ಕೆ ಮೂಲಪುರುಷನಾದ ಇದೇ ಮಯೂರವರ್ಮನ ಕಥೆಯೇ ಶ್ರೀಯುತ ದೇವುಡು ನರಸಿಂಹಶಾಸ್ತ್ರಿಗಳ ಕಲ್ಪನೆಯ ಮೂಸೆಯಲ್ಲಿ ‘ಮಯೂರ’ ಎಂಬ ಕಾದಂಬರಿಯಾಯ್ತು. ಮುಂದೆ ಇದೇ ಕಾದಂಬರಿ ಇದೇ ಹೆಸರಿನ ಸಿನೆಮಾಗೂ ಸ್ಪೂರ್ತಿಯಾಯಿತು. ‘ಮಯೂರ’ ಚಿತ್ರ ಹಾಗೂ ‘ಮಯೂರಶರ್ಮ’ನ ಪಾತ್ರ ಮಾಡಿದ ಡಾ| ರಾಜ್’ಕುಮಾರ್ ಕನ್ನಡ ಚಿತ್ರರಂಗದ ಅತ್ಯುತೃಷ್ಟ ಅಂಶಗಳಲ್ಲೊಂದು ಎಂದರೆ ಯಾವ ಅತಿಶಯೋಕ್ತಿಯೂ ಇಲ್ಲ.

ಸುಮಾರು ಕ್ರಿ.ಶ 525ರಲ್ಲಿ ಕದಂಬರಾಜ್ಯ ನಿಧಾನವಾಗಿ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಚಾಲುಕ್ಯರ ಮೊದಲನೇ ಪುಲಿಕೇಶಿ ಬಲಾಡ್ಯನಾಗಿ ಬೆಳೆದ ಕಾಲದಲ್ಲಿ ಕದಂಬರು ಚಾಲುಕ್ಯರ, ಹಾಗೇ ಸಮಯ ಕಳೆದಂತೆ ಮುಂದೆ ರಾಷ್ಟ್ರಕೂಟರ ಸಾಮಂತರಾದರು. ಕದಂಬ ರಾಜ್ಯ ಬೇರೆ ಬೇರೆ ರಾಜರ ಆಳ್ವಿಕೆಯಲ್ಲಿ ಬನವಾಸಿ ಮಂಡಲ, ಹಾನಗಲ್ ಮಂಡಲ, ಗೋವಾ ಮಂಡಲವೆಂದು ಹಂಚಿಹೋಯಿತು.

ಈಗ ಸ್ವಲ್ಪ ಮೊದಲಿನ ಕಥೆಗೆ ವಾಪಾಸು ಬರೋಣ. ನಮ್ಮ ಕಥೆಯ ನಾಯಕ ಮಯೂರ(ಶ)ವರ್ಮ, ಕ್ಷತ್ರಿಯನಾಗಿ ರಾಜ್ಯಭಾರ ಮುಂದುವರೆಸಿದರೂ, ತನ್ನ ಪೂರ್ವಾಶ್ರಮಕ್ಕೆ ಮಹತ್ವ ಕೊಟ್ಟೇ ಇದ್ದ. ಪ್ರತಿಯೊಂದು ಯುದ್ಧ ಗೆದ್ದಾಗಲೂ, ರಾಜ್ಯ ವಿಸ್ತಾರವಾದಾಗಲೂ ಪೂಜೆ, ಹೋಮ, ಹವನಗಳನ್ನು ನಡೆಸುತಿದ್ದ. ಹಲವುಬಾರಿ ಅಶ್ವಮೇಧಯಾಗವನ್ನೂ ನಡೆಸಿ ಬ್ರಾಹ್ಮಣರಿಗೆ 144 ಗ್ರಾಮಗಳನ್ನು ‘ಬ್ರಹ್ಮದೇಯ’ವಾಗಿ ದಾನಗೈದ ಎಂಬ ದಾಖಲೆಗಳಿವೆ. ಪೂಜೆ, ಹವ್ವಿಸುಗಳ ಅರ್ಪಣೆಯಿಂದಲೇ ತನಗೆ ದೇವತಾನುಗ್ರಹವಿದೆ ಎಂದು ಬಲವಾಗಿ ನಂಬಿದ್ದ ಮಯೂರವರ್ಮ ಈ ಆಚರಣೆಗಳನ್ನು ಕಾಪಿಡಲು, ಪ್ರಾಚೀನ ಬ್ರಾಹ್ಮಣ ನಂಬಿಕೆಗಳನ್ನು ಪುನರ್ಜೀವಿತಗೊಳಿಸುವ ಮತ್ತು ರಾಜ್ಯಾಚರಣೆಗಳನ್ನು ಮತ್ತು ಸರ್ಕಾರೀ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ನಿರ್ವಹಿಸಲು, ಉತ್ತರ ಭಾರತದ ‘ಅಹಿಚ್ಚಾತ್ರ’ದಿಂದ ಕರೆಸಿಕೊಂಡ ಎನ್ನಲಾದ 32 ಬ್ರಾಹ್ಮಣ ಕುಟುಂಬಗಳೇ ಇಂದು ಉತ್ತರಕನ್ನಡ ಜಿಲ್ಲೆಯ ಹವ್ಯಕ ಬ್ರಾಹ್ಮಣ ಸಮುದಾಯವಾಗಿ ಬೆಳೆದಿದೆ ಎಂಬುದೊಂದು ಬಹಳವಾಗಿ ಚಾಲ್ತಿಯಲ್ಲಿರುವ ಹಾಗೂ ನಿರೂಪಿತವಾದ ಒಂದು ಸಿದ್ಧಾಂತ. ಹವ್ಯಕ ಎಂಬ ಪದದ ಮೂಲ ಹವೀಗ ಅಥವ ಹವೀಕ ಎಂಬ ಪದಗಳು. ಹವ್ಯ ಅಂದರೆ ಹೋಮ/ಹವನ. ಹವ್ಯವನ್ನು ಮಾಡುವವ ಹವ್ಯಕ.

ಕದಂಬರ ನೌಕಾಸಾಮರ್ಥ್ಯ ಅಂದಿನ ಕಾಲಕ್ಕೆ ಬಹಳ ಹೆಸರುವಾಸಿ. ಮುಂದೆ ಕದಂಬರು ಬೇರೆ ಬೇರೆ ರಾಜಮನೆತನಗಳ ಸಾಮಂತರಾದರೂ ಸಹ, ತಮಗಿದ್ದ ನೌಕಾಯುದ್ಧದ ವಿಶಿಷ್ಟ ಪರಿಣತಿಯಿಂದಾಗಿ ಆಯಾ ರಾಜರುಗಳಿಗೆ ಅತ್ಯಂತ ಆಪ್ತವಾಗಿದ್ದವರು. ವಿಜಯನಗರ ಸಾಮ್ರಾಜ್ಯದ ರಾಜರುಗಳು ಸಹ ಕದಂಬವಂಶದವರನ್ನು ಸದಾ ತಮ್ಮ ಆಪ್ತವಲಯದಲ್ಲೇ ಇರಿಸಿಕೊಂಡಿದ್ದರು. ಇದೇ ನೌಕಾಪರಿಣತಿಯ ಕಾರಣಕ್ಕೇ, ಇಂದು ಬನವಾಸಿಯಿಂದ ನೂರು ಕಿಲೋಮೀಟರ್ ದೂರದ ಕಾರವರದಲ್ಲಿ ಪ್ರಾರಂಭಿಸಲಾದ ‘ಪ್ರಾಜೆಕ್ಟ್ ಸೀ-ಬರ್ಡ್’ ಎಂಬ ಕೋಡ್’ನೇಮಿನ ಭಾರತೀಯ ನೌಕಾನೆಲೆಗೆ, ನೌಕಾಪಡೆ INS-ಕದಂಬ ಎಂಬ ಹೆಸರನ್ನೇ ಆಯ್ಕೆ ಮಾಡಿದೆ. ಕದಂಬರ ನೌಕಾಯುದ್ಧ ಸಾಮರ್ಥ್ಯವನ್ನು ನೆನೆಸಿಕೊಳ್ಳುವ ಹಾಗೂ ಕದಂಬರಿದ್ದ ನೆಲಕ್ಕೆ ಗೌರವ ಸೂಚಿಸುವ ಎರಡೂ ಉದ್ದೇಶಗಳನ್ನು ನೆರವೇರಿಸುವ ಈ ಹೆಸರಿಗಿಂತಾ ಹೆಚ್ಚು ಸೂಕ್ತವಾದ ಹೆಸರು ಈ ನೌಕಾನೆಲೆಗೆ ಸಿಗಲಿಕ್ಕಿಲ್ಲ.

ಹೀಗೆ, ಕದಂಬವಂಶದ ಇತಿಹಾಸ ಕರ್ನಾಟಕದ ಹಾಗೂ ಕನ್ನಡದ ಚರಿತ್ರೆಯ ಪುಸ್ತಕದಲ್ಲಿ ಅತೀ ಮುಖ್ಯ ಪುಟ. ಹವ್ಯಕರಿಂದ INS ಕದಂಬದವರೆಗೆ ಮುಖ್ಯಕೊಂಡಿ. ಇಂತಹ ನೆಲದಲ್ಲಿ ಹುಟ್ಟಿದ ನಾವು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಬೇಕು. ಮಯೂರಶರ್ಮನಿಂದ ಮಯೂರವರ್ಮನಾಗಿ, ಕದಂಬವಂಶಕ್ಕೆ ಮೂಲನಾದ ಈ ರಾಜನನ್ನು ನೆನೆಸಿಕೊಳ್ಳಲೇಬೇಕು. ಕನ್ನಡದ ಇಂದಿನ ಬೆಳವಣಿಗೆಗೆ, ಆತನ ಜೀವನವೂ, ಪಲ್ಲವರ ಮೇಲೆ ಆತ ಕೋಪಗೊಂಡ ಕಿಡಿಕಾರಿದ ಆ ಕ್ಷಣವೂ ಮೂಲ. ‘ಕದಂಬ’, ‘ಬನವಾಸಿ’, ‘ಮಯೂರಶರ್ಮ’ ಇವು ಮೂರೂ, ಇತಿಹಾಸದ ಆಸಕ್ತಿಯುಳ್ಳ ಪ್ರತಿಯೊಬ್ಬನ, ಹಾಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಎಂದೂ ಮರೆಯದಂತೆ ಉಳಿಯಬೇಕಾದ ಹೆಸರುಗಳು.

ವಿಷಯಮೂಲ ಹಾಗೂ ಮುಖ್ಯಾಂಶ ಪೂರೈಕೆ: ನಮ್ ಹುಡುಗ ಆದಿತ್ಯ ಕುಲಕರ್ಣಿ. ಇತಿಹಾಸದ ಬಗ್ಗೆ ಆಸಕ್ತಿಯಿರುವವರು ಆದಿತ್ಯರ ಟ್ವಿಟರ್ ಹ್ಯಾಂಡಲ್ (@adikulk) ಅನ್ನು ಫಾಲೋ ಮಾಡಲೇಬೇಕು. ನನ್ನ ಕೀಬೋರ್ಡಿಗೆ ಆದಿತ್ಯ ಇನ್ನೂ ಹೆಚ್ಚಿನ ಕೆಲಸ ಕೊಡುತ್ತಾರೆ ಎಂಬ ನಂಬಿಕೆಯೊಂದಿಗೆ…..ಧನ್ಯವಾದಗಳು.

ಧರ್ಮಮಂಥನ – ೨

ಧರ್ಮ ಎಂದರೇನು? ಹಿಂದೂಗೂ ಧರ್ಮಕ್ಕೂ ಏನು ಸಂಬಂಧ? ಹಿಂದುತ್ವ, ಹಿಂದೂಯಿಸಂ, ಹಿಂದೂಧರ್ಮ ಇವೆಲ್ಲಾ ಒಂದೇನಾ?…..ಎಂಬ ಜಿಜ್ಞಾಸೆ

ಕೆಲತಿಂಗಳ ಹಿಂದೆ, ರಕ್ಷಿತ್ ಪೊನ್ನಾಥಪುರ ಎಂಬ wannabe ಚಿಂತಕನೊಂದಿಗೆ ಯಾವುದೋ ವಿಷಯ ಚರ್ಚಿಸುತ್ತಿದ್ದಾಗ, ಆತ ಹಿಂದುತ್ವ ಬೇರೆ, ಹಿಂದೂಯಿಸಂ ಬೇರೆ. ನಾನು ಹಿಂದೂಯಿಸಂಗೆ ಬೆಂಬಲಿಸ್ತೀನಿ, ಹಿಂದುತ್ವಕ್ಕೆ ನನ್ನ ಬೆಂಬಲವಿಲ್ಲ ಅಂದಾಗ ನಾನು ಚರ್ಚೆ ಅಲ್ಲಿಯೇ ನಿಲ್ಲಿಸಿಬಿಟ್ಟೆ. ನಿಲ್ಲಿಸಲು ಮೊದಲ ಕಾರಣ ನನಗೆ ಉಕ್ಕಿ ಬಂದ ನಗು. ಎರಡನೆಯದು, ಈ ಕೆಲ ಜೊಳ್ಳುಗಳಿಗೆ ಕೆಲ ಇಂಗ್ಳೀಷ್ ಪುಸ್ತಕಗಳನ್ನೋದಿಕೊಂಡು ಅದನ್ನು ಕನ್ನಡೀಕರಿಸುವ ಅಥವಾ ಇಂಡೀಕರಿಸುವ ರೋಗವಿದೆ. ಈ ಹಿಂದೂಯಿಸಂ, ಹಿಂದುತ್ವದ್ದೂ ಇದೇ ತಲೆಹರಟೆ. ಇದಕ್ಕೆ ಮದ್ದು ನಾವು ಅರೆಯುವುದು ಕಷ್ಟ. ಅದು ಇನ್ನೂ ಹೆಚ್ಚಾಗಿ, ಯಾವುದೇ ಪೂರ್ವಗ್ರಹವಿಲ್ಲದೇ ಈ ನೆಲದ ಜ್ಞಾನವನ್ನ ಅಧ್ಯಯನ ಮಾಡಿದಾಗ ಮಾತ್ರ ಗುಣವಾಗಬಲ್ಲಂತದ್ದು. ಈ ರೋಗ ಶಶಿ ತರೂರನಿಗೂ ಬಿಟ್ಟಿಲ್ಲ. Infact, ಈ ರೋಗ ಇಲ್ಲಿಯದನ್ನು ಅರ್ಧ ಓದಿಕೊಂಡು, ಅಲ್ಲಿಯದನ್ನು ಅರ್ಧ ಓದಿಕೊಂಡು ಅದನ್ನು ಸಮ್ಮಿಳಿಸುವ ಪ್ರಯತ್ನದ ಫಲ. ಆಯಾ ಜ್ಞಾನಗಳು ಆಯಾ ಪ್ರದೇಶದಿಂದ, ಅಲ್ಲಿನ ಇತಿಹಾಸದಿಂದ, ಅಲ್ಲಿಗೆ ಅನನ್ಯವಾಗಿ ಹುಟ್ಟಿದಂತವು. ಅವನ್ನು ಇನ್ನೊಂದರೊಂದಿಗೆ ಸಮೀಕರಿಸುವುದು, ಸಮ್ಮಿಳಿಸುವುದು ಎಲ್ಲಾ ಸಮಯದಲ್ಲೂ ಸೂಕ್ತವಲ್ಲ. ವಸಾಹತುಶಾಹಿ ಚಿಂತನೆ ಇಂತಹುದೇ ಒಂದು ಸಮ್ಮಿಳಿತದಿಂದ ಹುಟ್ಟಿದ ವ್ಯಾಧಿ.
ಈಗ ಇದೊಂದು ಹೊಸಾ ಟ್ರೆಂಡ್ ಶುರುವಾಗಿದೆ. ಹಿಂದುತ್ವ ಬೇರೆ, ಹಿಂದೂಯಿಸಂ ಅಂದ್ರೆ ಬೇರೆ, ಹಿಂದೂ ಧರ್ಮ ಅಂದ್ರೆ ಬೇರೆ….ಬ್ಲಾ….ಬ್ಲಾ…ಬ್ಲಾ ಅಂತಾ ಕೂಗಾಡುವುದು. ಇದು ಹಿಂದೂ ಜೀವನರೀತಿಯನ್ನು ಪಾಶ್ಚಾತ್ಯ ರೀತಿಯಲ್ಲೇ ಅರ್ಥಸಿಕೊಳ್ಳುವ ಪ್ರಯತ್ನ ಮಾಡುವ ರಿಲೀಜಿಯನ್ ಮನಸ್ಥಿತಿಗಳು ಹುಟ್ಟುಹಾಕಿರುವ ಹೊಸಾದೊಂದು ತಲೆಕೆರೆತವಷ್ಟೇ. ಮತ್ತೇನೂ ಅಲ್ಲ. ಹಿಂದೂಯಿಸಂ ಎಂಬುದೊಂದು ‘ಇಸಂ’ ಇರಲು ಸಾಧ್ಯವೇ ಇಲ್ಲ ಅಂತಾ ಈ ism ಎಂಬ ಪದದ ಮೂಲಗೊತ್ತಿರುವವರಿಗೆ ತಿಳಿದಿರುತ್ತೆ.
ಈ ಇಸಂ ಎಂಬ ಪ್ರತ್ಯಯದ ಮೂಲ ಪುರಾತನ ಗ್ರೀಕ್ ಭಾಷೆಯ ಇಸ್ಮೋಸ್ (-ismos) ಎಂಬ ಪ್ರತ್ಯಯ. ಇದು ಲ್ಯಾಟಿನ್ನಿನಲ್ಲಿ ಇಸ್ಮಸ್ (-ismus) ಆಗಿ, ಅಲ್ಲಿಂದ ಫ್ರೆಂಚಿನಲ್ಲಿ ಇಸ್ಮೆ (-isme)ಯಾಗಿ ಇಂಗ್ಳಿಷಿನಲ್ಲಿ ಇಸಂ ಆಯ್ತು. 1680ರಲ್ಲಿ ಈ ಇಸಮು ಎಂಬುದನ್ನು ಕ್ರಿಯಾಪದವನ್ನು ನಾಮಪದವಾಗಿ ಬದಲಾಯಿಸಲು ಬಳಸಲಾರಂಭಿಸಲಾಯ್ತು. ಉದಾಹರಣೆಗೆ baptize ಮಾಡುವುದನ್ನು baptism ಎಂದೂ, criticize ಮಾಡುವುದನ್ನು criticism ಎಂದೂ, plagiarize ಮಾಡುವುದನ್ನು plagiarism ಎಂದು ಕರೆಯಲು ಬಳಸಲಾಯ್ತು. 19ನೇ ಶತಮಾನದಲ್ಲಿ ಥಾಮಸ್ ಕಾರ್ಲೈಲ್ ಈ ಪದವನ್ನು ಒಂದು ಪೂರ್ವನಿಯೋಜಿತ ಐಡಿಯಾಲಜಿಗಳನ್ನ ಅಂದರೆ ಸಿದ್ಧಾಂತಗಳನ್ನ ಸೂಚಿಸಲು ಬಳಸಿದ. ನಂತರದ ಚಿಂತಕರಾದ ಜೂಲಿಯನ್ ಹಕ್ಸ್ಲೀ ಮತ್ತು ಜಾರ್ಜ್ ಬರ್ನಾರ್ಡ್ ಷಾ ಕೂಡಾ ಸಾಮಾಜಿಕ ಮೌಲ್ಯಗಳ ತಮ್ಮ ಬರಹಗಳಲ್ಲಿ ಬಳಸಿ ಪ್ರಸಿದ್ಧಿಗೆ ತಂದರು. ಅಮೇರಿಕದಲ್ಲಿ ಹತ್ತೊಂಬತ್ತನೇ ಶತಮಾನದ ಮದ್ಯಭಾಗದಲ್ಲಿ ಈ -ಇಸಂ ಪ್ರತ್ಯಯಗಳನ್ನು ಅಂದಿನಕಾಲದಲ್ಲಿ ನಡೆಯುತ್ತಿದ್ದ ಸಾಮಾಜಿಕ ಚಳುವಳಿಗಳನ್ನು, ಅಂದರೆ ಫೆಮಿನಿಸಂ, ಅಲ್ಕೋಹಾಲ್ ಪ್ರಾಹಿಬಿಷನಿಸಂ, ಪ್ಯಾಸಿಫಿಸಂ, ಅರ್ಲೀ ಸೋಷಿಯಲಿಸಂ ಇತ್ಯಾದಿಗಳನ್ನು ಉದ್ದೇಶಿಸಿ ಬಳಸಲಾಯಿತು. ಹೀಗೆ ಒಂದು ಸಿದ್ಧಾಂತವನ್ನು ವಿವರಿಸುವಾಗ ಬಳಸುವ ಪದ ಇಸಂ. ಹಿಂದುತ್ವ ಅನ್ನೋದು ಒಂದು ಸಿದ್ಧಾಂತ ಅಲ್ಲವೆಂದು ಏಳನೇ ಕ್ಲಾಸಿನ ಮಗುವಿಗೂ ತಿಳಿದಿದೆ. ಇದು ಯಾರೋ ಕಮ್ಯೂನಿಸಂ, ಕ್ಯಾಥೋಲಿಕಿಸಂ, ಸೋಷಿಯಲಿಸಂನ ಸಿದ್ಧಾಂತಗಳನ್ನು ಓದಿ ತಲೆಕೆಡಿಸಿಕೊಂಡ ಅಡ್ಡಕಸಬಿಗಳು ಹುಟ್ಟುಹಾಕಿದ ಪದವಷ್ಟೇ. ಹಿಂದೂಯಿಸಂ ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲ.
ಇನ್ನುಳಿದದ್ದು ಎರಡು ಪದಗಳು, ಹಿಂದುತ್ವ ಹಾಗೂ ಹಿಂದೂಧರ್ಮ. ಇವೆರಡೂ mutually exclusive ಪದಗಳಲ್ಲ. ಒಂದನ್ನು ಬಿಟ್ಟು ಇನ್ನೊಂದನ್ನು ವಿವರಿಸಲು ಸಾಧ್ಯವಿಲ್ಲ. ಹಿಂದೂಧರ್ಮಕ್ಕನುಗುಣವಾಗಿ ಜೀವನ ನಡೆಸುವುದಷ್ಟೇ ಹಿಂದುತ್ವ. ಜೀವನವೆಂದರೆ ಅದು ಯಾರದ್ದೂ ಆಗಬಹುದು. ರಾಜನದ್ದಾಗಬಹುದು, ರೈತನದ್ದಾಗಬಹುದು, ಸೈನಿಕನದ್ದಾಗಬಹುದು, ವೈದ್ಯನದ್ದಾಗಬಹುದು, ಚಮ್ಮಾರ ಕಮ್ಮಾರ ಬಾಣಸಿಗ ಕೂಲಿ ಯಾರದ್ದೂ ಸಹ. ಯಾರ ಜೀವನವೂ, ಅವರ ವರ್ತನೆಗಳೂ, ಜೀವನ ನಿರ್ಧಾರಗಳು ಧರ್ಮಕ್ಕನುಗುಣವಾಗಿರುತ್ತೋ ಅವನ ಜೀವನವೇ ಹಿಂದುತ್ವದ ಉದಾಹರಣೆ, ಅಷ್ಟೇ.
ಹಾಗಾದರೆ ಹಿಂದೂಧರ್ಮವೆಂದರೇನು? ಹಿಂದೂಧರ್ಮಕ್ಕನುಗುಣವಾಗಿ ಬದುಕುವುದು ಎಂದರೇನು? ವೇದಗಳನ್ನು ಪಾಲಿಸುವುದೇ, ಮನುಸ್ಮೃತಿಯ ಪ್ರಕಾರ ಬದುಕುವುದೇ? ವರ್ಷಕ್ಕೊಮ್ಮೆ ಗಣೇಶನ ಹಬ್ಬ ಮಾಡುವುದು ಹಿಂದೂಧರ್ಮವೇ? ಯುಗಾದಿಯನ್ನು ವರ್ಷದ ಮೊದಲ ದಿನ ಅನ್ನೋದು ಹಿಂದುತ್ವವೇ? ಅಲ್ಲ. ಯಾವುದೇ ಒಂದು ಪುಸ್ತಕ, ಪ್ರವಚನ, ವ್ಯಕ್ತಿ ಬರೆದಿಟ್ಟ ಡಾಕ್ಟರಿನ್ ಅಲ್ಲ ಹಿಂದುತ್ವ. “ಎಲ್ಲವೂ ಹೌದು, ಯಾವುದೂ ಅಲ್ಲ” ಅನ್ನುವಂತೆ ಬದುಕುತ್ತದೆ ಹಿಂದೂ ಧರ್ಮ. ಸರಳವಾಗಿ ಹೇಳಬೇಕೆಂದರೆ ಇಡಿಯ ಹಿಂದೂ ಧರ್ಮವನ್ನು ಒಂದು ಹೂವಿಗೆ ಹೋಲಿಸಬಹುದು. ಸಂಪ್ರದಾಯ, ಆಚರಣೆ, ಹಬ್ಬಗಳು, ಜ್ಯೋತಿಷ್ಯ, ವೇದಗಳು, ಅಷ್ಟಾಂಗ ಯೋಗಗಳು, ಸಂಗೀತ, ನಾಟ್ಯ, ಶಾಸ್ತ್ರ, ಸೂತ್ರಗಳೆಲ್ಲವೂ ಹೂವಿನ ಪಕಳೆಗಳಂತೆ. ಆದರೆ ಈ ಎಲ್ಲಾ ಪಕಳೆಗಳನ್ನು ಹಿಡಿದಿಡುವ ಹೂವಿನ ಇದರ ಮಧ್ಯಭಾಗ ಅಂದರೆ ಶಲಾಕೆ ಏನಿದೆ ಅದು ‘ಧರ್ಮ’. ಇಡೀ ಹಿಂದೂ ಜೀವನಪದ್ದತಿಯ ಜೀವಾಳವೇ ಈ ಧರ್ಮವೆನ್ನುವ ಶಲಾಕೆ. ಅದರಿಂದಲೇ ಹೊಮ್ಮಿದ್ದು, ಅದರಿಂದಲೇ ಹಿಡಿದಿಡಲ್ಪಟ್ಟಿದ್ದು ನಮ್ಮ ಹಿಂದೂ ಪದ್ದತಿಗಳು, ಸಂಪ್ರದಾಯ ಹಾಗೂ ನಂಬಿಕೆಗಳು.
ಈಗ ಧರ್ಮ ಎಂದರೇನು? ಎನ್ನುವಲ್ಲಿಗೆ ಬರೋಣ. ಧರ್ಮವೆಂದರೆ ಸ್ಥೂಲವಾಗಿ “ಸರಿಯಾದದ್ದು” ಎನ್ನಬಹುದು. ದಾರಿಯಲ್ಲಿ ಭಿಕ್ಷುಕ ‘ಧರ್ಮ ಮಾಡೀ ಸ್ವಾಮಿ” ಅಂದಾಗ, ಅದರರ್ಥ ಭಿಕ್ಷೆ ಹಾಕಿ ಅಂತಲ್ಲ. “ನನ್ನ ಬಳಿಯಿಲ್ಲದ್ದು ನಿನ್ನ ಬಳಿಯಿದೆ. ಅದರಲ್ಲಿ ಸ್ವಲ್ಪ ನನಗೂ ಕೊಟ್ಟರೆ ನಿನಗೆ ಅಭಾವವುಂಟಾಗುವುದಿಲ್ಲ ಅಂತಾದರೆ, ನನಗೆ ಕೊಡುವುದು ಸರಿಯಲ್ಲವೇ? ನಿನ್ನ ವಿವೇಚನೆಯನ್ನು ಉಪಯೋಗಿಸಿ ಏನು ಕೊಟ್ಟರೆ ಸರಿ ಅಂತನ್ನಿಸುತ್ತದೋ ಅದನ್ನು ಕೊಡು” ಎಂದರ್ಥ. ಧರ್ಮ ಮಾಡಿ ಅಂದಾಗ, ಸರಿಯಾದದ್ದು ಮಾಡಿ ಅಂತಾ ಅರ್ಥ. ನೀವು ಯಾರನ್ನಾದರೂ ಅಧರ್ಮಿ ಅಂತಾ ಯಾವಾಗ ಕರೀತೀರಿ? ಯಾವಾಗ ಕೆಲ ಪ್ರಾಕೃತಿಕ ವರ್ತನೆಗಳನ್ನೂ, ಗುಣಗಳನ್ನೂ ಮನುಷ್ಯ ಮರೆಯುತ್ತಾನೋ ಆಗವನು ಅಧರ್ಮಿಯಾಗ್ತಾನೆ, ಹೌದೋ ಅಲ್ಲವೋ? ಯಾವುದು ಈ ಪ್ರಾಕೃತಿಕ ವರ್ತನೆಗಳು!? ಕೆಲ ತೀರಾ ಸರಳ ಉದಾಹರಣೆಗಳು “ದುರ್ಬಲರನ್ನು ಶೋಷಿಸದಿರುವುದು”, “ಕೊಟ್ಟ ಮಾತನ್ನು ಮರೆಯದಿರುವುದು”, “ಅಭಾವವಿಲ್ಲವೆಂದಾದಲ್ಲಿ ಉಳಿದವರೊಡನೆ ಹಂಚಿಕೊಳ್ಳುವುದು” ಇಂತವು. ಎಲ್ಲರಿಗೂ ಹೊಂದುವಂತಹ ಕೆಲ ನಿಯಮಗಳು. ಒಟ್ಟಿನಲ್ಲಿ ಪ್ರಕೃತಿಯೊಂದಿಗೇ ಬದುಕಿ ಈ ಇಡೀ ಜೀವನ ಹಾಗೂ ಜಗತ್ತನ್ನು ಸಾಧ್ಯವಾಗಿಸುವಂತಾ ಕೆಲ ಕ್ರಮಗಳ ಸಮೂಹವನ್ನೇ ಒಟ್ಟಾಗಿ “ಧರ್ಮ” ಎನ್ನುವುದು. ಯಾವ ಕನಿಷ್ಟ ನಿಯಮಗಳನ್ನು ಮುರಿದರೆ ಒಂದು ಸಮುದಾಯ ಪರಸ್ಪರ ಕಚ್ಚಾಡಿ ಸಾಯುತ್ತದೆಯೋ ಆ ಕನಿಷ್ಟ ನಿಯಮಗಳೇ ಧರ್ಮ. ಸಮುದಾಯಗಳೇ ಸತ್ತಮೇಲೆ ಜಗತ್ತು ಇದ್ದರೂ, ನಮ್ಮಪಾಲಿಗೆ ಅದು ಇಲ್ಲ ಅಲ್ಲವೇ? ನಾವು ಕಣ್ಣುಮುಚ್ಚಿದರೆ ಜಗತ್ತಿದೆ ಹೌದು. ಆದರೇ ನಾವೇ ಇಲ್ಲದಿದ್ದರೆ ಜಗತ್ತೇ ಇಲ್ಲ. ಹೌದು ತಾನೇ? ಅದಕ್ಕೇ ಧರ್ಮವನ್ನು “ಜೀವನ ಹಾಗೂ ಜಗತ್ತನ್ನು ಸಾಧ್ಯವಾಗಿಸುವಂತಾ ಕೆಲ ಕ್ರಮಗಳ ಸಮೂಹ” ಅಂದಿದ್ದು. Dharma doesn’t give life, but it preserves life. ಆ ಕಾರಣಕ್ಕಾಗಿ ಧರ್ಮ ಅಗತ್ಯ.
ಈಗ, ಮೇಲೆ ಹೇಳಿದ ಕೆಲವಷ್ಟೇ ಧರ್ಮಗಳೇ? ಅಲ್ಲ, ಅವು ಕೆಲ ಸರಳ ಉದಾಹರಣೆಗಳಷ್ಟೇ. ಹಾಗೂ ಆ ಸರಳ ಉದಾಹರಣೆಗಳು ಸಮುದಾಯದ ಎಲ್ಲರಿಗೂ ಅನ್ವಯವಾಗುವಂತದ್ದು. ಸಮುದಾಯದ ನಾಯಕನಾದವನಿಗೆ ಧರ್ಮದ ಅರ್ಥ ಹಾಗೂ ಅಗತ್ಯ ಬೇರೆಯೇ ಇರುತ್ತದೆ. “ಎಲ್ಲರನ್ನೂ ಅವರವರ ಸಾಮರ್ಥ್ಯಕ್ಕನುಗುಣವಾಗಿ ನೋಡು ಹಾಗೂ ಸತ್ಕರಿಸು”, “ಸಮುದಾಯ ತೊಂದರೆಯಲ್ಲಿ ಸಿಕ್ಕಿಕೊಂಡಾಗ ಹೆಂಗಸರನ್ನು, ಮಕ್ಕಳನ್ನು ಹಾಗೂ ಹಿರಿಯರನ್ನು ಮೊದಲು ಕಾಪಾಡುವಂತೆ ನೋಡಿಕೋ”, “ಸಾಮಾಜಿಕ ನಿಯಮಗಳು ಎಲ್ಲರಿಗೂ ಒಂದೇ ಇರಲಿ” ಹೀಗೆ ಮುಂತಾದ ನಿಯಮಗಳು ಧರ್ಮವಾಗುತ್ತವೆ. ಮುಂದೆ ಸಮುದಾಯಗಳು ಬೆಳೆದು ದೊಡ್ಡದಾದಂತೆ, ಬುಡಕಟ್ಟುಗಳು ರಾಜ್ಯಗಳಾದಾಗ ಈ ನಿಯಮಗಲೇ ರಾಜಧರ್ಮಗಳಾದವು. ರಾಜ್ಯಭಾರ ಮಾಡುವುದು, ಪಕ್ಕದ ರಾಜ್ಯಗಳೊಂದಿಗೆ ವ್ಯವಹಾರ ಮಾಡುವ ರಾಜಕೀಯವನ್ನೂ ಧರ್ಮದ ಚೌಕಟ್ಟಿನಲ್ಲಿ ನಡೆಸಿದ ಹೆಮ್ಮೆಯ ನಾಗರೀಕ ಜಗತ್ತು ಈ ಭರತಖಂಡ. ಅದನ್ನು ಸಾಧ್ಯವಾಗಿಸಿದ್ದೇ ಹಿಂದೂಧರ್ಮ. ಯಾಕೆಂದರೆ ಆ ರಾಜಕೀಯವೂ ಹಿಂದೂಧರ್ಮದ ನಿಯಮಗಳನ್ನು ಪಾಲಿಸಿಕೊಂಡೇ ಬೆಳೆದದ್ದು. ನಮ್ಮ ರಾಜರುಗಳು ಯುದ್ಧಗೆದ್ದಾಗ ಎದುರಾಳಿ ಸೈನಿಕರ ಸಾಮೂಹಿಕ ತಲೆಕಡಿದ ಒಂದೇ ಒಂದು ಉದಾಹರಣೆಯಿಲ್ಲ. ಸೋತ ರಾಜನ ರಾಜ್ಯದ ಸಂಪತ್ತು ಗೆದ್ದವರದ್ದಾದರೂ, ಸೋತವರ ಮನೆಮನೆಗೆ ನುಗ್ಗಿ ಹೆಂಗಸರನ್ನು ಅತ್ಯಾಚಾರ ಮಾಡಿ, ಮಕ್ಕಳ ತಲೆಕಡಿದ ಉದಾರಣೆಗಳಿಲ್ಲ. ಯಾಕೆಂದರೆ ರಾಜಧರ್ಮ ಅದನ್ನೊಪ್ಪುತ್ತಿರಲಿಲ್ಲ. ಅಂತಹ ವರ್ತನೆ ತೋರಿದವರನ್ನು ನಮ್ಮ ಕಥೆಗಳೂ ಸಹ ಅಧರ್ಮಿಗಳೆಂದೇ ಕಂಡಿವೆ.
(ಇದೇ ಕಾರಣಕ್ಕೆ ಕೆಲವರು ಇವತ್ತಿನ ಕಾಲದಲ್ಲಿ ಬಿಜೆಪಿ ಒಂದು ರಾಜಕೀಯಪಕ್ಷ. ಅವರು ಧರ್ಮದ ವಿಚಾರ ಮಾತನಾಡಬಾರದು ಎಂದಾಗ ನನಗೆ ಆಶ್ಚರ್ಯವಾಗುತ್ತದೆ. ಯಾಕೆಂದರೆ ಹಿಂದೂ ಜೀವನಪದ್ದತಿಯಲ್ಲಿ ಎಲ್ಲದರಲ್ಲೂ ಧರ್ಮದ ಎಳೆ ಇದೆ. ರಾಜಕೀಯದಲ್ಲೂ ಸಹ. ಇದೇ ಕಾರಣಕ್ಕೆ ವೈಯುಕ್ತಿಕವಾಗಿ ಯಾವುದೇ ಪಾರ್ಟಿ ನಾನು ಹಿಂದೂ ಧರ್ಮದ ನಿಯಮಗಳಿಗೆ ಬದ್ಧನಾಗಿ ರಾಜ್ಯನಡೆಸುತ್ತೇನೆ ಎಂದಾಗ ನನಗದು ತಪ್ಪೆನಿಸುವುದಿಲ್ಲ.)
#ಧರ್ಮಮಂಥನ – ೨
[ಮುಂದಿನ ಭಾಗ: ಹಿಂದೂ ಶಾಸ್ತಗಳು, ಚಿಂತನೆಗಳು (ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ, ವೇದಾಂತ, ನಾಟ್ಯ, ಆಯುರ್ವೇದ, ಶಾಸ್ತ್ರೀಯ ಸಂಗೀತ ಇತ್ಯಾದಿ) ಮತ್ತು ಹಿಂದೂ ಧರ್ಮ. ಹೇಗೆ ಯೋಗ, ಸಂಗೀತ ಮತ್ತು ಭಾರತನಾಟ್ಯಗಳು ಹಿಂದೂ?]

ಧರ್ಮಮಂಥನ – ೧

ಧರ್ಮ ಎಂದರೇನು? ಹಿಂದೂಗೂ ಧರ್ಮಕ್ಕೂ ಏನು ಸಂಬಂಧ? ಹಿಂದುತ್ವ, ಹಿಂದೂಯಿಸಂ, ಹಿಂದೂಧರ್ಮ ಇವೆಲ್ಲಾ ಒಂದೇನಾ?…..ಎಂಬ ಜಿಜ್ಞಾಸೆ

ಈ ಸರಣಿ ಯಾಕೆ ಬರೀತಿದ್ದೀನಿ ಅಂತಾ ಮುಂದೆ ಹೇಳ್ತೀನಿ. ಈಗ ಸದ್ಯಕ್ಕೆ ಈ ಸಣ್ಣ ಸಣ್ಣ ತುಣುಕುಗಳನ್ನು ಓದೋಣ.

(*****)

ಪ್ರಕೃತಿಯೊಂದಿಗೆ ಬೆಳೆದು ಬದುಕುವುದೂ ಹಿಂದೂ ಧರ್ಮದ ಮುಖ್ಯ ನಿಯಮಗಳಲ್ಲೊಂದು. ಇದೇ ಕಾರಣಕ್ಕೆ ನಮಗೆ ಕಾಲಿಲ್ಲದೇ ನಡೆಯುವ, ಒಂದೇ ಒಂದು ಹೊಡೆತದಲ್ಲಿ ಮನುಷ್ಯರನ್ನು ಕೊಲ್ಲಬಲ್ಲ ಹಾವಿನಲ್ಲಿ ನಮಗೆ ದೇವರು ಕಂಡಿದ್ದು. ನಮ್ಮಷ್ಟೇ ಬುದ್ಧಿಮತ್ತೆ ಹೊಂದಿದ್ದ ಕೋತಿಗಳಲ್ಲಿ ನಮಗೆ ದೇವರು ಕಂಡಿದ್ದು. ಅಷ್ಟು ದೊಡ್ದದೇಹವಿದ್ದ ಆನೆಯೂ ದೇವರಾಗಿ ಕಂಡಿದ್ದು, ಕರಡಿಯೂ ಪೂಜ್ಯವಾಗಿದ್ದು, ಮನೆಗೆ ಸಾವಿರ ರೀತಿಯಲ್ಲಿ ಸಹಾಯಕವಾಗಿದ್ದ ದನ ಕೂಡಾ ದೇವರ ಸಮಾನವಾಗಿದ್ದು. ನಾನಿಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡುತ್ತಿದ್ದೇನೆಯೇ ಹೊರತು, ಪುರಾಣ ಪುಣ್ಯಕಥೆಗಳ ಕೋನದಿಂದಲ್ಲ. ಅನಾಸ್ತಿಕನಾದ ನನಗೆ, ಈ ಚರ್ಚೆಗೆ, ಹಿರಣ್ಯಕಶಿಪು ಇದ್ದನೋ ಇಲ್ಲವೋ ಎಂಬುದರ ಅಗತ್ಯವಿಲ್ಲ, ಕಾಮಧೇನು ಎಂಬ ಹಸುವಿತ್ತೋ ಅನ್ನೋದೂ ಬೇಡ, ಇಂದ್ರ ವಜ್ರಾಯುಧಗಳ ಕಥೆಯೂ ಬೇಡ. ನಾನು ಕ್ರಿಪೂ 7000ದಿಂದ ಕ್ರಿಶ 100ರವರೆಗೆ ಅಸ್ತಿತ್ವದಲ್ಲಿದ್ದ ಮನುಷ್ಯಕುಲದ ಜೀವನದಲ್ಲಿ ಏನೇನಾಗಿರಬಹುದು ಎಂಬುದರ ಆಧಾರದ ಮೇಲಷ್ಟೇ ಧರ್ಮವನ್ನು ಅವಲೋಕಿಸುತ್ತಿರುವುದು. ನನ್ನ ಪ್ರಕಾರ ಇಂದ್ರನೂ ಇಲ್ಲ, ಅವನಿಗೆ ವಜ್ರಾಯುಧವೂ ಇಲ್ಲ. ಅವೆಲ್ಲಾ (ಹಿರಣ್ಯಕಶಿಪು, ಕಾಮಧೇನು, ಕಲ್ಪವೃಕ್ಷ, ಇಂದ್ರ ಎಲ್ಲವೂ) ಬೇರೆ ಬೇರೆ ಪಾಠಗಳನ್ನು ಕಲಿಯಲು ಬೇಕಾಗುವ ಸಿಂಬಾಲಿಸಂಗಳು.

ಆದರೆ ಶಿಲಾಯುಗದ ಕಾಲದಿಂದಲೂ ಮಿಂಚು ನೆಲಕ್ಕೆ ಬಡಿದಾಗಲೆಲ್ಲಾ ಆದ ಅನಾಹುತಗಳನ್ನೆಲ್ಲಾ ನೋಡಿದ ಮನುಷ್ಯನಿಗೆ ಅಲ್ಲಿ ನಡೆದ ಆ ಹಠಾತ್ ವಿದ್ಯಮಾನಕ್ಕೆ ಒಂದು ಕಾರಣ ಬೇಕಲ್ಲ. ಆಗ ಹುಟ್ಟಿದ್ದೇ ಆ ವಜ್ರಾಯುಧ. ಮಿಂಚೇ ವಜ್ರಾಯುಧ. ಅದನ್ನು ಮುಟ್ಟಿದಾಗಲೆಲ್ಲಾ (ಅಂದರೆ ಸಿಡಿಲು ಮನುಷ್ಯನೊಬ್ಬನಿಗೆ ಬಡಿದಾಗಲೆಲ್ಲಾ) ಜನ ಸತ್ತದ್ದು ನೋಡಿ, ಅದರ ಶಕ್ತಿಯ ಅಗಾಧತೆಯೆಡೆಗೆ ಭಯವೂ, ಗೌರವವೂ ಮೂಡಿತು. ಹೀಗಿದ್ದ ವಜ್ರಾಯುಧವನ್ನು ಬಳಸಲು ಸಾಮಾನ್ಯರಿಗೆ ಸಾಧ್ಯವೇ? ಇದು ದೇವರೇ ಬಳಸುತ್ತಿರುವ ಆಯುಧ. ಅದೂ ಎಂತಾ ದೇವರು!? ಮಿಂಚಿನಿಂದ ಬೆಂಕಿ ಹುಟ್ಟಿದೆ. ಮಿಂಚಿನಿಂದ ಬೆಳಕು ಹುಟ್ಟಿದೆ. ಮಿಂಚಿನಿಂದ ನೀರು ಅಲ್ಲೋಲಕಲ್ಲೋಲವಾಗಿದೆ. ಹಾಗಿದ್ದಮೇಲೆ ಇದನ್ನು ಬಳಸುವವ ಈ ಎಲ್ಲದಕ್ಕೂ ಒಡೆಯ, ಅಂದರೆ ನಮ್ಮ ಬುಡಕಟ್ಟಿನ ನಾಯಕನಿದ್ದಂತೆ ಅವ ದೇವರುಗಳ ನಾಯಕ. ಆ ಒಡೆಯನೇ ಇಂದ್ರನಾದ. (ಇದು ಹಿಂದೂ ಪುರಾಣದಲ್ಲಿ ಮಾತ್ರವಲ್ಲ, ಗ್ರೀಕರ ಝಿಯಸ್’ನ ಆಯುಧವೂ ಈ ಮಿಂಚೇ.) Anyway, ವಿಷಯಾಂತರವಾಯ್ತು. ಏನು ಮಾತಾಡ್ತಿದ್ವಿ!?

ಹಾ! ನಮಗೆ ಎಲ್ಲದರಲ್ಲೂ ದೇವರುಗಳು ಕಂಡರು. ಕಂಡರು ಅನ್ನುವುದಕ್ಕಿಂತಾ, ನಮಗೆ ಎಲ್ಲವೂ ದೇವರೇ ಆಯ್ತು. ಊಟವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಊಟ ದೇವರು (ಅನ್ನಪೂರ್ಣೆ). ನೀರಿಲ್ಲದೇ ಬರಗಾಲ ಬಂದಾಗ ಜನ ಸತ್ತರು, ಅಂದ ಮೇಲೆ ನೀರು ದೇವರು (ವರುಣ). ಬೆಂಕಿಯಿದ್ದರೂ ಕಷ್ಟ, ಇಲ್ಲದಿದ್ದರೇ ಕಷ್ಟ. ಅಂದಮೇಲೆ ಅದೂ ನಮ್ಮ ಅಸ್ತಿತ್ವಕ್ಕೆ ಮುಖ್ಯ. ಅಲ್ಲಿಗೆ ಅದೂ ದೇವರು (ಅಗ್ನಿ). ನೀರಿನಡಿಯಿದ್ದಾಗ ಉಸಿರುಗಟ್ಟಿ ಸತ್ತರು ಅಂದಮೇಲೆ ಗಾಳಿಯಂತೂ ಮಹಾನ್ ಮುಖ್ಯ ದೇವರು (ವಾಯು). ದನವಿಲ್ಲದಿದ್ದರೆ ಸಗಣಿಯಿಲ್ಲ, ಹಾಲಿಲ್ಲ, ಇನ್ನೊಂದಿಲ್ಲ, ಅಂದಮೇಲೆ ದನ ಗೋಮಾತೆಯಾದ್ಲು. ಹೀಗೆ ಬೆಳೆದದ್ದು ನಮ್ಮ ಸಾಮಾನ್ಯ ಜನರ ದೇವರ ಕಲ್ಪನೆ. ಈ ರೀತಿ ನಾವು ಒಂದಕ್ಕಿಂತಾ ಹೆಚ್ಚಿನದರಲ್ಲಿ ದೇವರನ್ನು ಕಂಡೆವು. ಹಾಗೂ ಎಲ್ಲರೂ ನಮಗೆ ಪೂಜ್ಯರಾದರು. ಈ ರೀತಿ ನಾವು ಒಂದಕ್ಕಿಂತಾ ಹೆಚ್ಚು ದೇವರುಗಳನ್ನ ಕಂಡುಕೊಂಡೆವು.

ಈ ಪ್ರಕ್ರಿಯೆಯ ಬೈ-ಪ್ರಾಡಕ್ಟೇ ತಾಳ್ಮೆ, ಸಹನೆ, ಸಹಿಷ್ಣುತೆ ಹಾಗೂ ಸಹಬಾಳ್ವೆ. ಹೇಗೆ ಅಂತೀರಾ? ಅಗ್ನಿಯನ್ನೇ ದೇವರು ಅಂತಾ ಭಾವಿಸಿದ್ದ ಬುಡಕಟ್ಟೊಂದು, ನೀರನ್ನೇ ದೇವರೆಂದು ಭಾವಿಸಿದ್ದ ಬುಡಕಟ್ಟನ್ನು ಸಂಧಿಸಿದ ದಿನವನ್ನು ಊಹಿಸಿಕೊಳ್ಳಿ. ಅವತ್ತು ಖಂಡಿತಾ ಹೊಡೆಬಡಿದಾಟಗಳಾಗಿರಬಹುದು. ಗೆದ್ದವನ ದೇವರೇ ಅಂತಿಮ ಅಂತ ನಿಯಮವೂ ಆಗಿದ್ದರಬಹುದು. (ಹಾಗೆಯೇ ಹೊಡೆದಾಟ ಆಗದೆಯೂ ಇದ್ದಿರಬಹುದು). ಹಾಗೂ ಪರಸ್ಪರ ತಮ್ಮ ತಮ್ಮ ದೇವರ ಬಗ್ಗೆ ಮಾತನಾಡುವಾಗ ನೀರಿನ ಬುಡಕಟ್ಟಿನವರು, ಅಗ್ನಿಯ ಬುಡಕಟ್ಟಿನವರ ದೇವರ ಮೇಲೆ ತಮ್ಮ ದೇವರನ್ನು ಚೆಲ್ಲಿ “ನೋಡಿ ನಿಮ್ಮ ದೇವರನ್ನು ಕೊಂದೆವು” ಎಂದಿದ್ದರಬಹುದು. ಮರುದಿನ ಅಗ್ನಿಯ ಪಾರ್ಟಿಗಳು, ನೀರಿನ ದೇವರನ್ನು ಒಂದು ಪಾತ್ರೆಯಲ್ಲಿಟ್ಟು ಕುದಿಸಿ ಆವಿಯಾಗಿಸಿ “ನೋಡಿ ನಿಮ್ಮ ದೇವರನ್ನು ನಾಪತ್ತೆ ಮಾಡಿದೆವು” ಎಂದಿದ್ದರಬಹುದು. ಇಬ್ಬರಿಗೂ ಆಶ್ಚರ್ಯ!!! ಇಬ್ಬರಿಗೂ “ಓಹೋ ಈ ಎರಡು ದೇವರೂ ಸಮಬಲರು. ಹಾಗೂ ನಮಗೆ ಇಬ್ಬರದ್ದೂ ಅಗತ್ಯವಿದೆ” ಎಂದು ನಂಬಿ ಬುಡಕಟ್ಟುಗಳು ಎರಡೂ ದೇವರನ್ನು ಜೊತೆಜೊತೆಗೆ ಆರಾಧಿಸಿ ಮುಂದುವರಿವೆ. ಈ ಪ್ರಕ್ರಿಯೆ ಒಂದು ದಿನದಲ್ಲೂ ನಡೆದಿರಬಹುದು, ಅಥವಾ ಸಾವಿರ ವರ್ಷಗಳೂ ತೆಗೆದುಕೊಂಡಿರಬಹುದು. ಆದರೆ ಕೊನೆಯಲ್ಲಿ “ಒಂದಕ್ಕಿಂತಾ ಹೆಚ್ಚು ದೇವರನ್ನು ನಂಬುವುದರಿಂದ ತೊಂದರೆಯಂತೂ ಇಲ್ಲ. ಇದ್ದರೆ ಉಪಯೋಗ ಮಾತ್ರವಷ್ಟೇ” ಎಂಬುದೇ ಎಲ್ಲರ ಕೊನೆಯ ಅಭಿಪ್ರಾಯ.

ಹೀಗೆ ಹಿಂದೂ ಧರ್ಮದ ಒಂದು ಮುಖ್ಯ ಗುಣವಾದ ಬಹುಸಂಸ್ಕೃತಿತ್ವ (ನಾನದನ್ನ ಪ್ರಕೃತಿಯ ಆರಾಧನೆ ಅಂತಾ ಕರೆಯಲಿಚ್ಚಿಸುತ್ತೇನೆ) ಚಾಲ್ತಿಗೆ ಬಂತು. ಇಲ್ಲೂ ಕೂಡಾ ಕೆಲ ರಿಲೀಜಿಯನ್ ಮನಸ್ಥಿತಿಗಳು ಇದನ್ನು polytheism, ಅಂದರೆ ಬಹುದೇವೋಪಾಸನೆ, ಅಂತಾ ಬರೆಯುತ್ತಾರೆ. ಅದು ತಪ್ಪು. ನಾವು ಬಹುದೇವರನ್ನು ಉಪಾಸಿಸುತ್ತಿಲ್ಲ. ನಮ್ಮದು pluralistic, ಅಂದರೆ ಬಹುಸಂಸ್ಕೃತಿತ್ವದ ನಾಗರೀಕತೆ. ಅಂದರೆ ಅಂತಿಮ ಸತ್ಯವನ್ನು ಬೇರೆ ಬೇರೆ ರೀತಿಗಳಿಂದಾ ಕಂಡುಕೊಳ್ಳಬಹುದು ಎಂಬುದನ್ನು ಪ್ರತಿಪಾದಿಸಿ, ನಿರೂಪಿಸಿಕೊಂಡ ಬಹುಸಂಸ್ಕೃತಿಗಳ ಆಗರ ಭಾರತ.

ಜನಪದರು, ಅಂದರೆ ಸಾಮಾನ್ಯಜನರು, ಈ ರೀತಿಕಂಡುಕೊಂಡಿದ್ದನ್ನ, ಆಧ್ಯಾತ್ಮಿಕ ಶೋಧಕರು ಒಂದು ಚೌಕಟ್ಟಿನಲ್ಲಿ ಬರೆದರು. ಅದನ್ನು ಚರ್ಚಿಸಿ, ಹಲವಾರು ತಲೆಮಾರುಗಳ ಕಾಲ ಮಂಥಿಸಿ ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಎಂದರು.

ಅಲ್ಲಿಗೆ,
(೧) ನಾವು ಬಹುದೇವೋಪಾಸಕರಲ್ಲ. ಬಹುಸಂಸ್ಕೃತಿತ್ವರು. We are not polytheists. We are pluralists.
(೨) ಈ ಬಹುಸಂಸ್ಕೃತಿತ್ವ ನಮಗೆ ಸಹಸ್ರ ವರ್ಷಗಳ ಹಿಂದೆ ನಮ್ಮತರದಲ್ಲದ ನಂಬಿಕೆಗಳೆಡೆಗೆ ಸಹಿಷ್ಣುತೆಯನ್ನ ಕಲಿಸಿಯಾಗಿದೆ. ಹಾಗೂ ಆ ಬೇರೆ ಬೇರೆ ನಂಬಿಕೆಗಳನ್ನು ಚರ್ಚೆ ಹಾಗೂ ಮಂಥನಗಳ ಮೂಲಕ ಪರಿಹರಿಸಿಕೊಳ್ಳಬಹುದೆಂಬ ಸತ್ಯವನ್ನೂ ಪ್ರತಿಪಾದಿಸಿ, ನಿರೂಪಿಸಿ ತೋರಿಸಿಯಾಗಿದೆ.

Social media manipulation and trend management of Kathua incident

I have no soft corner for any heinous criminals. Nor do I support the heinous crimes of journalists of crying wolf, at a time that suits them. But, this guy @WrongDoc on Twitter just spent 30 minutes and was able to call the bluff around this crime and the media/political propaganda, which is being spun to make fools out of common citizens. Read on!

See how the Kathua twitter activity started trending – how this is a social media manipulation and trend management.

I checked the Twitter Trend statistics for and found that it peaked interest late on 9th April 2018. The day ‘s farce of a fast was ridiculed. The Kathua case happened in January 2018.

This is the last three months twitter activity of Kathua hashtag. The crime was discovered and first arrest made on 19th January- so it takes in account the whole timeline. See when the interest peaked?

DaqjXfyU0AA7LIm

The Twitter activity started with This tweet according to analysis. The handle belongs to a journalist who works for – which is run by . This was the kindling.

Next influential tweet about Kathua comes from Barkha. Then and then you can see the following order.

These are the handles that chronologically followed tweeting in synchronicity about Kathua, after this dog whistle was sent out from Print Journo of Shekhar Gupta and Barkha of Quint.

Tweet activity started as clockwork with synchronised timing at 2:30 pm (time zone reference may change actual time) on 12th and 13th April. On 12th April by 7:30 pm the activity was dead but by 13th it grew into real people outraging- the manipulation was successful.

I again checked the chronicity of tweets for last 3 months- to include the full timeline of the crime’s course. No significant interest in twitter outrage before trigger on 9th and 10th.

This is the world-map of influence about Kathua tweets in last 3 months. Interestingly, Russia features here!

DaqrWgKVwAA2EAW

As I give it some time, Turkey, Kazakhstan, Ukraine, Senegal, Nigeria, Saudi Arabia, Iran, Pakistan (naturally!) Phillipines also start lighting up on the tracker.

DaqtLZVU8AAQIdZ

I’m not discrediting or denying your emotions and rage about the Kathua case. You are right to feel angry, I feel much the same. But what exactly are you angry about? Who are you letting use your anger?

Blood and bones of Asifa Bano are being ground up to fertilize your anger, your emotions. Your anger and emotions are being harvested to feed the political hunger of people who go on symbolic fast. Don’t feed their greed now, or they sure will sacrifice another one another day.

This emotional manipulation and outrage harvest are the tools of social media propaganda. This is what Zuckerberg admitted to selling. This is what Twitter is doing, knowingly or otherwise. This is why there was a Hand on the wall of the Cambridge Analytica office.

Don’t you feel fucking stupid, outraging about Cambridge Analytica one day and falling victim to engineered social media outrage harvesting your emotions over the carcass of a child the very next day? Did you think the data harvesters wanted to see your selfies??

All credits of this write-up go to Be’Havin!‏ @WrongDoc.